ಮದ್ರಾಸ್ ಹೈಕೋರ್ಟ್ನಲ್ಲಿ ಬಾಣಂತಿ ಹಾಗು ಮಹಿಳೆಯರಿಗೆ ವಿಶೇಷ ಸವಲತ್ತನ್ನು ನೀಡುವ ಮೂಲಕ ನ್ಯಾಯಾಧೀಶರಾದ ಜಿ.ಆರ್.ಸ್ವಾಮಿನಾಥನ್ ಎಲ್ಲರ ಮೆಚ್ಚುಗೆಗೆ ಪಾತ್ರಾರಾಗಿದ್ದಾರೆ.
ಈ ಕುರಿತು ಸೋಮವಾರ ಪತ್ರವೊಂದನ್ನು ಬರೆದಿರುವ ಅವರು, ಬಾಣಂತಣದಲ್ಲಿರುವ ವಕೀಲೆಯರಿಗೆ ವಾದ ಮಂಡಿಸಲು ನಿರ್ದಿಷ್ಟವಾದ ಸಮಯವಾಕಾಶ ನೀಡಬೇಕು ಎಂದು ಬಾರ್ ಸದಸ್ಯರಿಗೆ ಪತ್ರ ಬರೆದಿದ್ದಾರೆ.
ಅಂತಹ ವಕೀಲರು ನ್ಯಾಯಾಲಯಕ್ಕೆ ಒಂದು ದಿನ ಮುಂಚಿತವಾಗಿ ತಮ್ಮ ಪ್ರಕರಣದ ಕುರಿತು ಹಾಗೂ ತಾವು ವಾದ ಮಾಡುವ ಸಮಯದ ಕುರಿತು ಪ್ರತಿಪಾದನೆಯನ್ನು ಸಲ್ಲಿಸಬೇಕು ಮತ್ತು ನ್ಯಾಯಾಲಯದ ಸಮಯವನ್ನ ವ್ಯರ್ಥ ಮಾಡಬಾರದು ಎಂದು ಪತ್ರದಲ್ಲಿ ಷರತ್ತನ್ನು ಸಹ ವಿಧಿಸಲಾಗಿದೆ.
ಅದೇ ಸಮಯದಲ್ಲಿ ಈ ಪ್ರಯೋಜನವನ್ನ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ವಕೀಲರಿಗೆ ಮಾತ್ರ ಅನ್ವಯಿಸುತ್ತದೆ. ಯಾವುದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಅಲ್ಲ ಎಂದು ತಿಳಿಸಲಾಗಿದೆ.
ಇತ್ತೀಚಿಗೆ ನ್ಯಾಯಲಯದಲ್ಲಿ ಪ್ರಕರಣದ ವಿಚಾರಣೆಯ ವೇಳೆ ವಕೀಲರೊಬ್ಬರು ತಮ್ಮ ಪ್ರಕರಣದ ವಿಚಾರಣೆಯನ್ನ ಬೇಗ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು. ಯಾಕೆಂದರೆ ತಮ್ಮ ಮಗುವನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬೇಗ ಹೋಗಲು ಸಹಾಯವಾಗುತ್ತದೆ ಎಂದು ಮನವಿ ಮಾಡಿದ ನಂತರ ಈ ಆದೇಶ ಹೊರಬಿದ್ದಿದೆ.