ನಾಲ್ಕು ವರ್ಷಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಿಕ್ಕಹಳ್ಳಿಯಾದ ಭಕ್ತನಹಳ್ಳಿಗೆ ವಿಜ್ಞಾನ ಪದವೀಧರರಾಗಿರುವ ಬಸವರಾಜ್ ಮರಳಿ ಬಂದು ತಮ್ಮೂರಿನ ಶಾಲೆಯಲ್ಲಿ ಪಾಠ ಮಾಡಲು ನಿಂತುಕೊಳ್ಳುತ್ತಾರೆ. ಅವರ ಹಿಂದಿನ ಪೀಳಿಗೆಯವರು ಪ್ರೌಢಶಾಲಾ ಶಿಕ್ಷಣವನ್ನು ಪಡೆಯಲು ಕಿಲೋಮೋಟರ್ಗಟ್ಟಲೆ ನಡೆಯಬೇಕಿತ್ತು. ಆದರೆ ಬಸವರಾಜ್ ಮತ್ತು ಸುತ್ತಮುತ್ತಲಿನ ಹಳ್ಳಿಯ ಸುಮಾರು ಆರು ನೂರು ಮಂದಿ BMV ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮೂಲಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿತ್ತು. BMV ಶಿಕ್ಷಣ ಟ್ರಸ್ಟ್ನಿಂದ ನಡೆಸಲ್ಪಡುವ ಅದೇ ಶಾಲೆ 2008ರಲ್ಲಿ ನಿಧಿಯ ಕೊರತೆಯಿದಾಗಿ ಮುಚ್ಚುವ ಭೀತಿಯನ್ನು ಎದುರಿಸಿತ್ತು.
1980ರ ದಶಕದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರಲ್ಲಿ ಕಲ್ಲಪ್ಪ ಲಕ್ಷ್ಮಯ್ಯ ಮತ್ತು ಅವರ ಸ್ನೇಹಿತರು ಸೇರಿ ಈ ಶಾಲೆಯನ್ನು ಸ್ಥಾಪಿಸಿದ್ದರು. ಹಳ್ಳಿ ಮಕ್ಕಳು ಶಾಲೆಗಾಗಿ ಕನಿಷ್ಠ ಹತ್ತು ಕಿ.ಮೀ ನಡೆಯಬೇಕಿರುವುದನ್ನು ಮನಗಂಡ ಅವರು ಈ ಶಾಲೆಯನ್ನು ಸ್ಥಾಪಿಸಿದ್ದರು. ಸೀಮಿತ ಸಂಪನ್ಮೂಲಗಳೊಂದಿಗೆ ಆರಂಭವಾದ ಈ ಶಾಲೆ ಹಳ್ಳಿಯ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಪ್ರಾಥಮಿಕ ಶಾಲೆಗೆ ಸರ್ಕಾರ ಧನ ಸಹಾಯ ನೀಡುತ್ತಿತ್ತು ಆದರೆ ಪ್ರೌಢಶಾಲೆಯನ್ನು ಅತ್ಯಂತ ಕಷ್ಟದ ಸ್ಥಿತಿಯಲ್ಲಿಯೇ ಟ್ರಸ್ಟ್ ನಡೆಸುತ್ತಿತ್ತು.
ಲಕ್ಷ್ಮಯ್ಯ, ಈಗ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದು ಆವತ್ತಿನ ಕಠಿಣ ಸಮಯವನ್ನು ನೆನಪಿಸಿಕೊಳ್ಳುತ್ತಾ “ವೇತನಗಳನ್ನು ಪಾವತಿಸಲು ನಮಲ್ಲಿ ಸಾಕಷ್ಟು ಹಣವಿರಲಿಲ್ಲ, ನಾವು ಶಾಲೆಯನ್ನು ಮುಚ್ಚಲು ಹೊರಟಿದ್ದೆವು” ಎನ್ನುತ್ತಾರೆ. ಶಾಲೆಯು ಇನ್ನೇನು ಮುಚ್ಚಲಿದೆ ಎಂದಾದಾಗ ಸ್ಮೈಲ್ ಫೌಂಡೇಶನ್ನ ‘ಚೇಂಜ್ ದಿ ಗೇಮ್ ಇಂಡಿಯಾ’ ಜೊತೆ ಸಹಯೋಗ ಮಾಡಿಕೊಂಡು ಹೇಗೆ ಹಣ ಸಂಗ್ರಹಿಸಬೇಕು, ಕಾರ್ಯಕ್ರಮ ಆಯೋಜಿಸಬೇಕು ಮತ್ತು ಹೇಗೆ ಇತರರನ್ನು ಸಂಘಟಿಸಬೇಕು ಎಂಬುವುದರ ಬಗ್ಗೆ ತರಬೇತಿ ಪಡೆದರು. “ಈಗ ನಮ್ಮಲ್ಲಿ 15 ಶಿಕ್ಷಕರು ಸೇರಿದಂತೆ 18 ಸಿಬ್ಬಂದಿಗಳಿದ್ದಾರೆ “ಎನ್ನುತ್ತಾರೆ ಲಕ್ಷ್ಮಯ್ಯ.
ಹಳ್ಳಿಗರ ಮೇಲೆ ಶಾಲೆಯು ಮಹತ್ತರವಾದ ಪ್ರಭಾವ ಬೀರಿದ್ದು ಅಲ್ಲಿನ ಹೆಚ್ಚಿನ ಪದವೀಧರರು ಮಹಿಳೆಯರು ಎಂದು ಹಮ್ಮೆಯಿಂದ ಲಕ್ಷ್ಮಯ್ಯ ಹೇಳುತ್ತಾರೆ. ಬಾಲ್ಯ ವಿವಾಹದಂತಹ ಸಮಾಜಿಕ ಪಿಡುಗನ್ನು ನಿಗ್ರಹಿಸಲು ಶಿಕ್ಷಣವು ಯಶಸ್ವಿಯಾಗಿದೆ. “ಈಗ 4-5 ಗ್ರಾಮಗಳಿಂದ 300 ವಿದ್ಯಾರ್ಥಿಗಳು ನಮ್ಮಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ನಾವು ಇನ್ನಷ್ಟು ಬೆಳೆಯಬೇಕು “ಎಂದು ಅವರು ಹೇಳುತ್ತಾರೆ..
‘ಚೇಂಜ್ ದಿ ಗೇಮ್ ಇಂಡಿಯಾ’ ಮೂಲಕ ಸಮುದಾಯ ಆಧಾರಿತ ಸಂಸ್ಥೆಗಳು ಮತ್ತು ಸಾಮಾಜಿಕ ಕಾಳಜಿ ಇರುವ ಉದ್ಯಮಿಗಳೊಂದಿಗೆ ಕೆಲಸ ಮಾಡುವುದು ಫೌಂಡೇಶನ್ನ ಮೂಲ ಕಲ್ಪನೆಯಾಗಿದ್ದು “ಜನಸಾಮಾನ್ಯರ ಬದುಕಲ್ಲಿ ಮೂಲಭೂತ ಬದಲಾವಣೆ ತರಲು ಇದು ಉತ್ತಮಮಾರ್ಗವಾಗಿದೆ ಎಂದು ನಾನು ನಂಬಿದ್ದು ಇಂತಹ ಸಂಘಟನೆಗಳು ಕಲ್ಯಾಣ ಕಾರ್ಯಕ್ರಮಗಳು ಮತ್ತು ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುತ್ತವೆ” ಎನ್ನುತ್ತಾರೆ ಸ್ಮೈಲ್ ಫೌಂಡೇಶನ್ ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಟ್ರಸ್ಟಿಯಾಗಿರುವ ಸಂತನು ಮಿಶ್ರಾ. “ಕಳೆದ ಎರಡು ದಶಕಗಳಲ್ಲಿ, ನಾವು ಹೆಚ್ಚಿನ ಸಂಖ್ಯೆಯ CBOS ಗಳೊಂದಿಗೆ ಕೆಲಸ ಮಾಡಿದ್ದೇವೆ. ಅವುಗಳಿಗೆ ತರಬೇತಿ ನೀಡುವುದು ಮಾತ್ರವಲ್ಲದೆ ಪ್ರತಿ ಹಂತದಲ್ಲಿಯೂ ಅವುಗಳಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ” ಎನ್ನುತ್ತಾರೆ ಅವರು.