ಮೂಲ : The Silence of the Lambs- ಗುರುಚರಣ್ ಗೊಲ್ಲೆರ್ಕೆರಿ
ಡೆಕ್ಕನ್ ಹೆರಾಲ್ಡ್ 30-11-2022
ಅನುವಾದ : ನಾ ದಿವಾಕರ
ಶ್ರದ್ಧಾ ವಾಲ್ಕರ್ ಎಂಬ ಮಹಿಳೆಯ ಭಯಾನಕ, ಭೀಭತ್ಸ ಹತ್ಯೆಯು, ನಮ್ಮ ಸಮಾಜದಲ್ಲಿ ತಲೆದೋರುವ ಪ್ರಮುಖ ನೈತಿಕ ಆತಂಕಗಳ ಪೂರ್ವ ಸೂಚನೆಯಾಗಿ ಕಂಡುಬರುತ್ತದೆ. ಶೇಕ್ಸ್ಪಿಯರ್ನ ಮಾಕ್ಬೆತ್ ತನ್ನ ಅಂತ್ಯ ಸಮೀಪಿಸುತ್ತಿರುವ ಗಳಿಗೆಯಲ್ಲಿ “ ನಾಳಿನ ಸಂಖ್ಯೆಗಳೆಲ್ಲವೂ ಸಾಲುಗಟ್ಟಿ ನಿಂತಿವೆ, ಎಲ್ಲವೂ ಭೀಕರವಾಗಿ, ಕ್ರೂರವಾಗಿ ಕಾಣುತ್ತಿವೆ ” ಎಂದು ಹೇಳುತ್ತಾನೆ. ಇದೇ ಭಾವನೆಯನ್ನು ಸಮಾಜದಲ್ಲಿ ಮಹಿಳೆಯೂ ಎದುರಿಸುತ್ತಿದ್ದು ನಿರಾಶಾದಾಯಕ ಸಾತತ್ಯದೊಂದಿಗೆ ಬದುಕುತ್ತಿದ್ದಾಳೆ. ಹಾಗೆಯೇ ತಂತ್ರಜ್ಞಾನ ಕ್ಷೇತ್ರದ ಬದಲಾವಣೆಗಳೊಂದಿಗೆ, ಆನ್ ಲೈನ್ ಡೇಟಿಂಗ್ ತಾಣಗಳ ನಡುವೆ, ವ್ಯಾಪಕ ಡಿಜಿಟಲ್ ಸಾಮಾಜಿಕ ಮಾಧ್ಯಮಗಳ ನಡುವೆ ಬದುಕುತ್ತಿದ್ದಾಳೆ.
ಮಹಿಳೆಯು ಅನುಭವಿಸುವ ನೋವನ್ನು ಆಕೆ ಸಂಪೂರ್ಣವಾಗಿ ವ್ಯಕ್ತಪಡಿಸುವುದಿಲ್ಲ. ಆದರೂ ಈ ನೋವಿನ ಹಿಂದೆ, ಪ್ರಗತಿ ಎನ್ನುವುದು ಎಷ್ಟೇ ವಾಸ್ತವಿಕವಾದರೂ, 21ನೆಯ ಶತಮಾನದ ಮೆಟ್ರೋ ನಗರಗಳಾದ ಮುಂಬೈ ಅಥವಾ ದೆಹಲಿಯಂತಹ ಮೆಟ್ರೋಪಾಲಿಟನ್ ನಗರಗಳಲ್ಲೂ ಸಹ , ಈ ಪ್ರಗತಿಯು ತನ್ನ ಬದುಕಿನಲ್ಲಿ ಯಾವುದೇ ಸುಧಾರಣೆಯನ್ನು ತರುವುದಿಲ್ಲ ಎನ್ನುವ ವಿಷಾದದ ಭಾವನೆ ಮಡುಗಟ್ಟಿರುತ್ತದೆ. ವ್ಯಾಪಕವಾದ, ಕ್ಷಿಪ್ರ ಸಾಮಾಜಿಕ ಬದಲಾವಣೆಗಳು, ಮಹಿಳೆಗೆ ಮುನ್ನಡೆಯ ನೈಜ ಅವಕಾಶಗಳಿಂದ ವಂಚಿಸುತ್ತವೆ. ಅದೇ ವೇಳೆ ಮಹಿಳೆಯು ಆಕೆಯನ್ನು ಓಲೈಸುವ ಪುರುಷನ ಬೇಕು ಬೇಡಗಳಿಗೆ ಶರಣಾಗಿರುತ್ತಾಳೆ. ಈ ಬದಲಾವಣೆಗಳೊಡನೆ ಹೊಂದಿಕೊಳ್ಳಲು ಬೇಕಾಗುವ ಸ್ಪಷ್ಟವಾದ ನೈತಿಕ ಮೌಲ್ಯಗಳನ್ನು ಸಹ ಈ ಸಾಮಾಜಿಕ ಬದಲಾವಣೆಗಳು ಒದಗಿಸುವುದಿಲ್ಲ.
ವಾಲ್ಕರ್ ಅವರ ದುರಂತ ಪ್ರಕರಣವು ನಮ್ಮ ಸಮಾಜವನ್ನು ಕಾಡುತ್ತಿರುವ ನೈತಿಕ ಬಿಕ್ಕಟ್ಟುಗಳ ಎಲ್ಲ ಆಯಾಮಗಳನ್ನೂ ತೆರೆದಿಡುತ್ತದೆ. ಇಲ್ಲಿ ಕೆಲವು ಸಂಗತಿಗಳನ್ನು ಗಮನಿಸಬಹುದು ; ಅವರಿಬ್ಬರೂ ವೈಯಕ್ತಿಕ ಸಂಬಂಧವಿಲ್ಲದ ಡೇಟಿಂಗ್ ತಾಣದ ಮೂಲಕ ಭೇಟಿಯಾಗಿರುತ್ತಾರೆ. ತನ್ನ ಪೋಷಕರ ಉಪದೇಶಗಳನ್ನು ಧಿಕ್ಕರಿಸಿ ಆಕೆ ಮನೆಯಿಂದ ಹೊರನಡೆದಿರುತ್ತಾಳೆ. ಆತನೊಡನೆ ಲಿವ್ ಇನ್ ಸಂಬಂಧವನ್ನು ಹೊಂದಿರುತ್ತಾಳೆ. ಈ ಲಿವ್ ಇನ್ ಸಂಗಾತಿಯು ಕಣ್ಣಿಗೆ ಕಾಣುವಂತೆಯೇ ಮಾದಕ ವ್ಯಸನಿಯಾಗಿರುತ್ತಾನೆ, ಆಕೆಯ ಆಯ್ಕೆಗಳು -ಸಂತ್ರಸ್ತೆಯಾಗಿ ಅನುಭವಿಸುವುದು ಅಥವಾ ಸಂಬಂಧ ತೊರೆಯುವುದು ಇವೆರಡಕ್ಕೇ ಸೀಮಿತವಾಗಿರುತ್ತವೆ. ಆಕೆ ಅಲ್ಲಿಯೇ ನೆಲೆಸಲು ನಿರ್ಧರಿಸುತ್ತಾಳೆ.
ಇಲ್ಲಿ ನೈತಿಕತೆಯ ಪ್ರಶ್ನೆ ಎದುರಾಗುತ್ತದೆ : ನಡೆದ ಘಟನೆಯನ್ನು ಯಾವುದೇ ದೃಷ್ಟಿಯಿಂದ ನೋಡಿದರೂ, ಈ ಭೀಕರ, ಭಯಾನಕ ಹತ್ಯೆಯು ಇನ್ನೂ ಆಳವಾದ ಬೇನೆಯ ಒಂದು ಸಂಕೇತವಾಗಿಯೇ ಕಾಣುತ್ತದೆ. ಸಮಾಜವೊಂದರ ಸಾಂಪ್ರದಾಯಿಕ ನೈತಿಕತೆಗಳು ತಮ್ಮ ಅರ್ಥ ಮತ್ತು ಪ್ರಭಾವವನ್ನು ಕಳೆದುಕೊಂಡಿರುವ ಒಂದು ಆಲೋಚನಾ ಕ್ರಮವನ್ನು ಬಿಂಬಿಸುತ್ತದೆ ಆದರೆ ಮತ್ತೊಂದೆಡೆ, ಈ ನೈತಿಕತೆಯ ನೆಲೆಗಳು ಸಕ್ರಿಯವಾಗಿರುವ ವಲಯಗಳಲ್ಲಿರುವ ವಿಭಿನ್ನ ಆಯಾಮಗಳ ನಡುವಿನ ವ್ಯತ್ಯಾಸವನ್ನೂಅರಿಯದೆ, ಸಾಮಾಜಿಕವಾಗಿ ನ್ಯಾಯಯುತ ಎನಿಸಿಕೊಂಡಿರುವ ಅನೈತಿಕತೆಯ ಆತ್ಮರತಿಯ ಸಮಾಜವನ್ನೂ ಕಾಣುತ್ತಿದ್ದೇವೆ.
ತತ್ಪರಿಣಾಮ, ಯುವ ಸಮೂಹಕ್ಕೆ ಸ್ವಂತ ನೆಲೆಯ, ಕುಟುಂಬದ ಹಾಗೂ ವ್ಯಕ್ತಿಗಳ ನಡುವಣ ಸಂಬಂಧಗಳಿಗೆ ಅನ್ವಯಿಸುವಂತಹ ಅವರ ಚಟುವಟಿಕೆಗಳಿಗೆ ಮಾರ್ಗದರ್ಶಕವಾಗುವ ನೈತಿಕ ಮಾರ್ಗಸೂಚಿಗಳು ಲಭ್ಯವಾಗುತ್ತಿಲ್ಲ. ವ್ಯಾಪಕವಾಗುತ್ತಿರುವ ಮಾದಕ ವ್ಯಸನ ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ. ಇದರಿಂದ ನೈತಿಕತೆ ಪಾತಾಳಕ್ಕೆ ಕುಸಿದಿದ್ದು, ಯುವ ಸಮೂಹವು, ಕಾನೂನಿನ ಭೀತಿಯೂ ಇಲ್ಲದೆ, ತೀವ್ರತೆರನಾದ ಹಿಂಸೆ ಮತ್ತು ಅಪರಾಧಗಳತ್ತ ಹೊರಳುತ್ತಿದೆ.
Silence of the Lambs (ಕುರಿಮರಿಗಳ ಮೌನ) ಎನ್ನುವ ಆಂಗ್ಲ ರೂಪಕವನ್ನು ನಮ್ಮ ಕಾಲಘಟ್ಟದ ಸನ್ನಿವೇಶಗಳಿಗೆ ಸೂಕ್ತವಾಗಿ ಹೊಂದಿಸಬಹುದು. ದೇಶದಲ್ಲಿ ಅಸಂಖ್ಯಾತ ಧ್ವನಿಗಳು, ಲೇಖನಿಗಳು ಬೌದ್ಧಿಕ ವಿಚಾರಗಳನ್ನು ಚರ್ಚಿಸುತ್ತಿವೆ. ಆದರೂ ಒಂದು ಅವಶ್ಯಕತೆ, ಗಂಭೀರ ಲೋಪ ಎಂದರೂ ಸರಿಯೇ, ಎದ್ದು ಕಾಣುತ್ತದೆ. ಯಾವುದೇ ಮನಸ್ಸೂ ಸಹ ಇದನ್ನು ಯೋಚಿಸುತ್ತಿಲ್ಲ ಅಥವಾ ಯಾವುದೇ ಧ್ವನಿಯೂ ಇದನ್ನು ಸುಸಂಬದ್ಧವಾಗಿ ಪ್ರತಿಪಾದಿಸುತ್ತಿಲ್ಲ. ಈ ಲೋಪ ಏನೆಂದರೆ, ನಮ್ಮ ಸಾಮಾಜಿಕ ಸಂಬಂಧಗಳಲ್ಲಿ ಕಳೆದುಹೋಗಿರುವ ನೈತಿಕ ಲಕ್ಷಣಗಳು. ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ನೀತಿ ಭ್ರಷ್ಟತೆ, ಹುಡುಗಾಟಿಕೆ, ನಿರಾಸಕ್ತಿಯುತ ಪ್ರೇಮಸಂಧಾನಗಳು, ದುರ್ಬಲ ಪ್ರಾಮಾಣಿಕತೆ ಮತ್ತು ಭಾರತದಲ್ಲಿ ಒಂದು ಫ್ಯಾಷನಬಲ್-ಯೌವ್ವನದ ಜೀವನಶೈಲಿಯನ್ನು ಪ್ರಚೋದಿಸುವಂತಹ ಸಣ್ಣ ಪುಟ್ಟ ಧ್ಯೇಯಗಳು ಇವೆಲ್ಲವನ್ನೂ ಗಮನಿಸಬೇಕಿದೆ. ಸ್ನೇಹಿತ ವಲಯದ ಒತ್ತಡಗಳು ಎಷ್ಟು ಪ್ರಬಲವಾಗಿರುತ್ತದೆ ಎಂದರೆ ಹರೆಯದ ಯುವ ಸಮೂಹವು ತಮ್ಮ ಪೋಷಕರ ಸಲಹೆ, ಉಪದೇಶಗಳನ್ನೂ ಧಿಕ್ಕರಿಸಿ, ಸ್ನೇಹಿತರ ಸಮ್ಮತಿಯನ್ನು ಪಡೆಯಲು ಹಂಬಲಿಸುತ್ತದೆ. ಹಾಗಾಗಿ ತಮ್ಮ ಹಿತಾಸಕ್ತಿಯನ್ನು ಹೃದಯಪೂರ್ವಕವಾಗಿ ಪ್ರತಿನಿಧಿಸುವ ನೈಜ ಗೆಳೆಯ ಅಥವಾ ಗೆಳತಿ ಕುಟುಂಬವೇ ಎನ್ನುವುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ವಿಫಲವಾಗುತ್ತದೆ. ಸಮಾಜದಲ್ಲಿ ವ್ಯಾಪಕವಾಗಿರುವ ಈ ಬಿಕ್ಕಟ್ಟನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ, ಏಕೆಂದರೆ ಭಾರತದ ಅರ್ಧಕ್ಕಿಂತಲೂ ಹೆಚ್ಚಿನ ಜನಸಂಖ್ಯೆ 25 ವರ್ಷಕ್ಕಿಂತಲೂ ಕಡಿಮೆ ವಯೋಮಾನದ್ದಾಗಿದೆ. ಈ ಯುವ ಸಮೂಹಕ್ಕೆ ಒಂದು ನೈತಿಕ ಮಾರ್ಗಸೂಚಿಯನ್ನು ಒದಗಿಸುವ ಮೂಲಕ ಅವರ ಚಟುವಟಿಕೆಗಳಿಗೆ ದಾರಿ ತೋರಿಸಬೇಕಿದೆ. ಕುಟುಂಬದೊಡನೆ ಆಪ್ತ ಸಂಬಂಧ, ಸ್ವಯಂ ಅರಿವು ಮತ್ತು ಜಾಗೃತಿ, ಅಂತರ್ ವ್ಯಕ್ತಿತ್ವದ ಸಂಬಂಧಗಳನ್ನು ನಿರ್ವಹಿಸುವ ವಿಧಾನ, ಉತ್ತಮ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳುವುದು ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ, ತಮ್ಮ ಖುಷಿ ಮತ್ತು ರಕ್ಷಣೆಯ ದೃಷ್ಟಿಯಿಂದ ಪ್ರಜ್ಞಾಪೂರ್ವಕವಾದ ಆಯ್ಕೆಗಳನ್ನು ಮಾಡುವ ಬಗ್ಗೆ ಯುವ ಸಮೂಹಕ್ಕೆ ನೈತಿಕ ಮಾರ್ಗಸೂಚಿಯನ್ನು ಒದಗಿಸಬೇಕಿದೆ.
ನಮ್ಮ ಆಧುನಿಕ ಸಮಾಜವನ್ನು ನಿರೂಪಿಸುವ ಈ ನೈತಿಕ ಅಪ್ರಾಮಾಣಿಕತೆಗೆ ನಾವು ಹೇಗೆ ಸ್ಪಂದಿಸಲು ಸಾಧ್ಯ ?
ಮೊದಲನೆಯದಾಗಿ, ಒಂದು ರಾಚನಿಕ, ಸುಸ್ಥಿರವಾದ ಮತ್ತು ವ್ಯಾಪಕ ನೆಲೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು, ಡೇಟಿಂಗ್ ಸಂಬಂಧಗಳಲ್ಲಿ ನಡೆಯಬಹುದಾದ ಆಪ್ತ ಸಂಗಾತಿ ದೌರ್ಜನ್ಯ ( Intimate Partner Violence) ತಡೆಗಟ್ಟಬಹುದು. ಈ ದೌರ್ಜನ್ಯವನ್ನು ಎದುರಿಸುತ್ತಿರುವ ಸಂಗಾತಿಗಳೊಡನೆ ಮಾತುಕತೆ ನಡೆಸಬಹುದು. ಹಿಂಸೆಯನ್ನು ಪ್ರಚೋದಿಸುವಲ್ಲಿ ಎರಡೂ ಬದಿಯ ಪರಸ್ಪರ ವರ್ತನೆಯ ಬಗ್ಗೆ ಹೆಚ್ಚು ಗಮನಹರಿಸುವತ್ತ, ಪರಸ್ಪರ ಪ್ರಣಯ ಪ್ರಸಂಗಗಳಲ್ಲಿ ಇಬ್ಬರ ನಡುವೆ ಉಂಟಾಗುವ ಆಪ್ತ ಸಂಗಾತಿ ದೌರ್ಜನ್ಯದ (IPV) ಘಟನೆಗಳಿಂದ ಉದ್ಭವಿಸಬಹುದಾದ ಅಪಾಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವ ಮಹತ್ವವನ್ನು ತಿಳಿಯಪಡಿಸಬೇಕಿದೆ. ನಮ್ಮ ಪ್ರೌಢಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ, ವಿಶೇಷವಾಗಿ ಅಪ್ರಾಪ್ತರನ್ನೇ ಅಂದರೆ ಯುವಕ ಮತ್ತು ಯುವತಿಯರನ್ನು, ಉದ್ದೇಶಿಸಿದಂತಹ, ಬೋಧನಾ ಕಾರ್ಯಕ್ರಮವನ್ನು ರೂಪಿಸಬೇಕಾಗುತ್ತದೆ. ತನ್ಮೂಲಕ ಈ ಯುವಕ ಯುವತಿಯರಲ್ಲಿ ಒಂದು ಆರೋಗ್ಯಪೂರ್ಣ ಪ್ರಣಯ ಸಂಬಂಧ ಎಂದರೇನು ಎಂದು ಅರ್ಥಮಾಡಿಕೊಳ್ಳಲು ನೆರವಾಗಬೇಕಿದೆ.
ಈ ಕಾರ್ಯಕ್ರಮದ ಉದ್ದೇಶ ಅಂತರ್ ವ್ಯಕ್ತಿ ಸಂಭಂಧಗಳಲ್ಲಿ ಇರಬಹುದಾದ ಅಪಾಯಗಳ ಬಗ್ಗೆ ಅರಿವು ಮೂಡಿಸುವುದಾಗಿದ್ದು, ತನ್ಮೂಲಕ ಯುವ ಸಮೂಹದ ಆಯ್ಕೆಗಳ ಮತ್ತು ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಬಹುದು. ಹಾಗೆಯೇ ತಮ್ಮ ಸಂಬಂಧಗಳನ್ನು ಯುವ ಸಮೂಹವು ರಾಜಿಯಾಗದ ತತ್ವಗಳಡಿ ರೂಪಿಸಿಕೊಳ್ಳಲು, ಸಂಘರ್ಷ ಪರಿಹಾರದಲ್ಲಿ ಅಹಿಂಸಾತ್ಮಕ ಮಾರ್ಗದಲ್ಲಿ ನಂಬಿಕೆ ಇರಿಸಲು, ಸಂವಹನ ಕೌಶಲ್ಯವನ್ನು ಪರಿಣಾಮಕಾರಿಯಾಗಿ ರೂಢಿಸಿಕೊಳ್ಳಲು, ಮಾತುಕತೆ ಆಡುವ ಸಾಮರ್ಥ್ಯ ಬೆಳೆಸಿಕೊಂಡು, ಒತ್ತಡಗಳಿಗೆ ಹೊಂದಿಕೊಳ್ಳುವಂತೆ ಮಾಡುವುದು, ಸಂಗಾತಿಯ ಸ್ವಾಯತ್ತತೆಯಲ್ಲಿ ವಿಶ್ವಾಸ ಇಟ್ಟುಕೊಂಡು ಪರಸ್ಪರ ಹಂಚಿಕೆಯ ನಿರ್ಣಯಗಳಿಗೆ ಬದ್ಧರಾಗುವಂತೆ ಮಾಡುವುದು, ಕುಟುಂಬದಲ್ಲಿ ವಿಶ್ವಾಶ ಇರಿಸುವಂತೆ ಮಾಡುವುದು ಈ ಕಾರ್ಯಕ್ರಮದ ಧ್ಯೇಯವಾಗಿರಬೇಕು. ಈ ಎರಡೂ ಬದಿಯ ಸ್ಪಂದನೆಯ ಬಗ್ಗೆ ಹೆಚ್ಚು ಒತ್ತು ನೀಡುವುದೇಕೆಂದರೆ, ಆಪ್ತ ಸಂಗಾತಿ ದೌರ್ಜನ್ಯವು ಆಗಾಗ್ಗೆ ಏಕಮುಖಿ ವರ್ತನೆಯಾಗಿದ್ದರೂ ಬಹುತೇಕ ಸಂದರ್ಭಗಳಲ್ಲಿ ದ್ವಿಮುಖಿಯಾಗಿರುತ್ತದೆ.
ಎರಡನೆಯದಾಗಿ, ನಾವು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಸಂತ್ರಸ್ತರನ್ನು ಪುನಃ ಸುವ್ಯವಸ್ಥೆಗೆ ತರುವ ಕ್ರಿಮಿನಲ್ ನ್ಯಾಯಿಕ ಪರಿವರ್ತನೆಯ ದಾರಿಗಿಂತಲೂ ತಡೆಗಟ್ಟುವಿಕೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಏಕೆಂದರೆ ನ್ಯಾಯಿಕ ಪರಿವರ್ತನೆಯ ದಾರಿಯ ಕ್ರಮಗಳು ಹಿಂಸಾತ್ಮಕ ಸಂಘರ್ಷಗಳ ನಿರ್ವಹಣೆಯ ನಂತರದಲ್ಲಿ, ಕಾಲಕ್ರಮೇಣ ಪ್ರಾಬಲ್ಯದ ತಂತ್ರಗಾರಿಕೆಗಳು ಘನೀಕರಣಗೊಂಡ ನಂತರದಲ್ಲಿ ನಡೆಯುತ್ತವೆ. ಬೇಗನೆ ತಡೆಗಟ್ಟುವುದು ಮತ್ತು ಪರಿವರ್ತನೆಯ ಪ್ರಯತ್ನಗಳನ್ನು ಶಾಲಾ ಶಿಕ್ಷಣದ ಮೂಲಕ, ಜಾಗೃತಿ ಮೂಡಿಸುವ ಮೂಲಕ, ವಕೀಲಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಸಂಯೋಜಿತ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಮಾಡಬಹುದು. ತನ್ಮೂಲಕ ಕುಟುಂಬಗಳಲ್ಲಿನ ಒಟ್ಟಾರೆ ಸ್ಥಿರತೆಯನ್ನೂ ಕಾಪಾಡಲು ಸಾಧ್ಯವಾಗುತ್ತದೆ ಹಾಗೂ ಕುಟುಂಬಗಳ ಒಳಗೆ ಪರಸ್ಪರ ಸಂಬಂಧಗಳನ್ನು, ಸಂವಹನವನ್ನು ಹೆಚ್ಚಿಸುವ ಮಕ್ಕಳ ಯೋಗಕ್ಷೇಮವನ್ನೂ ಕಾಪಾಡಲು ಸಾಧ್ಯವಾಗುತ್ತದೆ.
ತಾತ್ವಿಕವಾಗಿ ನೋಡುವುದಾದರೆ, ಈ ತಡೆಗಟ್ಟುವಿಕೆಯ ಕಾರ್ಯಕ್ರಮವನ್ನು ಎಲ್ಲ ಶಾಲೆಗಳಲ್ಲೂ, 12 ರಿಂದ 16ರ ವಯೋಮಾನದ ಯುವ ಸಮೂಹವನ್ನು ತಲುಪುವ ರೀತಿಯಲ್ಲಿ ಪರಿಚಯಿಸಿ, ಈ ಮಕ್ಕಳು ಸಂಬಂಧಗಳ ಅನುಭವವನ್ನು ಪಡೆದುಕೊಂಡು, ಸಂಭಾವ್ಯ ದೌರ್ಜನ್ಯವನ್ನು ಅನುಭವಿಸುವ ಮುನ್ನವೇ ಅವರಲ್ಲಿ ಕೌಶಲ್ಯವನ್ನು ಬೆಳೆಸಬಹುದಾಗಿದೆ. ಇಲ್ಲಿ ವ್ಯಕ್ತಿಗತವಾದ ಮತ್ತು ಪರಸ್ಪರ ಸಂಬಂಧಗಳ ಅಪಾಯಕಾರಿ ಅಂಶಗಳನ್ನೂ ಸಹ ಪರಿಗಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಮಾನಸಿಕ ದೌರ್ಜನ್ಯವೂ ಬಹಳ ಮುಖ್ಯವಾಗುತ್ತದೆ ಏಕೆಂದರೆ, ಯುವ ಸಮೂಹದ ಪ್ರಣಯ ಸಂಬಂಧಗಳಲ್ಲಿ ಇದು ಅತಿ ಸಾಮಾನ್ಯವಾಗಿರುತ್ತದೆ. ಹಾಗೂ ಭವಿಷ್ಯ ಆಪ್ತ ಸಂಗಾತಿ ದೌರ್ಜನ್ಯಗಳಿಗೆ ದಿಟ್ಟ ಸೂಚಕವಾಗಿರುತ್ತದೆ. ನುರಿತ, ತರಬೇತಿ ಹೊಂದಿದ ಆಪ್ತಸಮಾಲೋಚಕರನ್ನು ಶಾಲೆಗಳಲ್ಲಿ ನೇಮಿಸುವುದು ಅತಿ ಉಪಯುಕ್ತ ಕ್ರಮವಾಗುತ್ತದೆ.
ಮೂರನೆಯದಾಗಿ, ಮದ್ಯ ಸೇವನೆ, ಮಾದಕ ದ್ರವ್ಯ ವ್ಯಸನ, ಆಪ್ತ ಸಂಗಾತಿ ದೌರ್ಜನ್ಯ ಮತ್ತು ಬಲಿಗೊಡುವಿಕೆಯ ನಡುವಿನ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇತ್ತೀಚೆಗೆ ನಡೆದ ಬಹುತೇಕ ಹತ್ಯೆಯ ಪ್ರಕರಣಗಳು ಮಾದಕ ದ್ರವ್ಯ ವ್ಯಸನದತ್ತ ಬೆಟ್ಟುಮಾಡಿ ತೋರಿಸುತ್ತವೆ. ಹಾಗೆಯೇ ಹರೆಯದ ವಯಸ್ಸಿನಲ್ಲಿ ಇದರಿಂದ ಉದ್ಭವಿಸುವ ಡೇಟಿಂಗ್ ದೌರ್ಜನ್ಯಗಳತ್ತ ಗಮನ ಸೆಳೆಯುತ್ತವೆ. ಕೌಟುಂಬಿಕ ಸಂಘರ್ಷಗಳು ಹೆಚ್ಚಾಗುತ್ತಿರುವ ಹಾಗೂ ಡೇಟಿಂಗ್ ದೌರ್ಜನ್ಯಗಳಲ್ಲಿ ಆಪ್ತ ಗೆಳೆಯ/ಗೆಳತಿಯೇ ಪಾಲ್ಗೊಂಡಿರುವ ಪ್ರಕರಣಗಳು ಹೆಚ್ಚಾಗುವುದಕ್ಕೂ ಇದು ಸಂಬಂಧಿಸುತ್ತದೆ.
ನಮ್ಮ ಸಾಮೂಹಿಕ ಸ್ಪಂದನೆಯು ಕಾರ್ಯಕಾರಣವಾದದ ನೆಲೆಯಲ್ಲಿ, ಉದ್ಭವಿಸಿರುವ ಆಪ್ತ ಸಂಗಾತಿ ದೌರ್ಜನ್ಯಗಳ ಮಾದರಿಗಳ ಪ್ರಾಯೋಗಿಕ ಸಾಕ್ಷ್ಯಾಧಾರಗಳನ್ನು ಅವಲಂಬಿಸಿರಬೇಕು. ವಾಲ್ಕರ್ ಪ್ರಕರಣವು ಒಂದು ಎಚ್ಚರಿಕೆಯ ಕತೆಯಂತೆ ಕಾಣಬೇಕಿದೆ ತನ್ಮೂಲಕ ಯುವ ಸಮೂಹವು ತಮ್ಮ ಕೌಟುಂಬಿಕ ಮೌಲ್ಯಗಳಿಗೆ ಮರಳುವಂತೆ ಮಾಡಬೇಕಿದೆ. ಒಂದು ಶುಭಾರಂಭ ಮಾಡುವುದರ ಮೂಲಕ, ಕುಟುಂಬವೇ ನಮ್ಮ ಅತ್ಯುತ್ತಮ ಗೆಳೆಯ, ತತ್ವಜ್ಞಾನಿ ಮತ್ತು ಮಾರ್ಗದರ್ಶಿ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
(ಲೇಖಕರು ಬೆಂಗಳೂರಿನ ಸಾರ್ವಜನಿಕ ವ್ಯವಹಾರಗಳ ಕೇಂದ್ರದ ನಿರ್ದೇಶಕರು).
ಅಡಿ ಟಿಪ್ಪಣಿ : Silence of the Lambs ̧ ಇದು 1991ರಲ್ಲಿ ಬಿಡುಗಡೆಯಾದ ಮನೋವಿಜ್ಞಾನದ ಕಥಾವಸ್ತುವನ್ನೊಳಗೊಂಡ ಅಮೆರಿಕನ್ ಹಾರರ್ ಚಿತ್ರ. 1988ರ ಥಾಮಸ್ ಹ್ಯಾರಿಸ್ ಅವರ ಕಾದಂಬರಿಯನ್ನಾಧರಿಸಿ ಟೆಡ್ ಟ್ಯಾಲಿ ಮತ್ತು ಜೋನಾತನ್ ಡೆಮೆ ನಿರ್ದೇಶಿಸಿದ ಈ ಚಿತ್ರದಲ್ಲಿ ಜೋಡಿ ಫಾಸ್ಟರ್ ಮತ್ತು ಕ್ಲಾರೀಸ್ ಸ್ಟಾರ್ಲಿಂಗ್ ಪ್ರಧಾನ ಕಲಾವಿದರು. ಮಹಿಳೆಯರನ್ನು ಹತ್ಯೆ ಮಾಡಿ ಮೃತ ದೇಹದ ಚರ್ಮ ಸುಲಿಯುವ ವಿಕೃತ ಮನಸ್ಥಿತಿಯುಳ್ಳ ಸರಣಿ ಹಂತಕನನ್ನು ಬೆನ್ನಟ್ಟಿ ಹಿಡಿಯುವ ಈ ಕಥಾನಕದಲ್ಲಿ, , ಮನೋರೋಗ ತಜ್ಞರು ಮತ್ತು ನರಭಕ್ಷಕ ಸರಣಿ ಹಂತಕನೊಬ್ಬನ ನೆರವಿನೊಂದಿಗೆ ಎಫ್ಬಿಐ ಅಧಿಕಾರಿಯು ಸರಣಿ ಹಂತಕನನ್ನು ಹಿಡಿಯುತ್ತಾನೆ. 1991ರಲ್ಲಿ ಇದು ವಿಶ್ವದಾದ್ಯಂತ ಅತಿ ಹೆಚ್ಚು ಹಣ ಗಳಿಸಿದ ಐದನೆಯ ಚಿತ್ರವಾಗಿ ಪ್ರಸಿದ್ಧಿಯಾಗಿತ್ತು. -ಅನುವಾದಕ |