ಪುರೋಹಿತಶಾಹಿಗಳ ಹಿತಾಸಕ್ತಿಗಾಗಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗು ಅದರ ರಾಜಕೀಯ ವೇದಿಕೆ ಬಿಜೆಪಿ ಇವು ಭಾರತವನ್ನು ಭಾದಿಸುತ್ತಿರುವ ಎರಡು ಜ್ವಲಂತ ಸಮಸ್ಯೆಗಳು ಎಂದು ನಮ್ಮಲ್ಲಿ ಅನೇಕ ಜನರಿಗೆ ಅರ್ಥವಾಗದಿರುವುದರಿಂದ ಇಂದು ದೇಶ ಬಹಳ ದೊಡ್ಡ ಬೆಲೆ ತೆರುತ್ತಿದೆ. ಈ ನೆಲ ಬಹುತ್ವ ಸಿದ್ದಾಂತ ಒಪ್ಪಿದ ಹಾಗು ಅಸಂಖ್ಯಾತ ಜನಪದೀಯ ಸಮುದಾಯ ಧರ್ಮಗಳ ಆಗರ ಎನ್ನುವುದು ನಾವೆಲ್ಲರೂ ಬಲ್ಲೆವು. ಆದರೆ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಸಂಘ ಇಂದು ಈ ದೇಶದ ಮೇಲೆ ತಮ್ಮ ಸಂಪೂರ್ಣ ಯಜಮಾನಿಕೆ ಸ್ಥಾಪಿಸಲು ಹಾಗು ಇಲ್ಲಿ ತಮ್ಮ ವೈದಿಕಶಾಹಿ ಏಕ ಸಂಸ್ಕೃತಿ ಹೇರಲು ಹವಣಿಸುತ್ತಿವೆ. ದೇಶದ ಪ್ರತಿಯೊಂದು ಸಮಸ್ಯೆಗಳ ಹಿಂದೆ ಇವುಗಳ ಗುರುತರವಾದ ಪಾತ್ರವಿದೆ. ಕಾಶ್ಮೀರದ ಸಮಸ್ಯೆಯನ್ನು ಕೇವಲ ಪಂಡಿತರ ಸಮಸ್ಯೆ ಎನ್ನುವಂತೆ ಬಿಂಬಿಸುವಲ್ಲಿ ಬಿಜೆಪಿ ಮತ್ತು ಸಂಘದ ಪಾತ್ರ ಬಹಳ ಪ್ರಮುಖವಾಗಿದೆ. ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಕುರಿತು ಚಲನಚಿತ್ರ ನಿರ್ಮಿಸಿ ಈಗ ದೇಶಾದ್ಯಂತ ದ್ವೇಷವನ್ನು ಹಂಚುವ ಕೆಲಸದಲ್ಲಾ ಬಿಜೆಪಿ ಹಾಗು ಸಂಘ ಮುಂಚೂಣಿಯಲ್ಲಿ ನಿಂತಿವೆ.
ಬ್ರಿಟೀಷರಿಂದ ಅಧಿಕಾರ ಪಡೆಯುವ ಸಂದರ್ಭದಲ್ಲಿ ಕಾಶ್ಮೀರ ವಿಷಯ ಮತ್ತು ಅದಕ್ಕೆ ಸಂಬಂಧಿಸಿದ ರಾಜನೈತಿಕ ನಿರ್ಧಾರಗಳು ಆ ಕಾಲಘಟ್ಟದ ಅನಿವಾರ್ಯತೆಯಿಂದ ತೆಗೆದುಕೊಂಡಂತವು. ಆದರೆ ಆನಂತರದಲ್ಲಿ ಕಾಶ್ಮೀರವೆನ್ನುವ ಭೂಲೋಕದ ಸ್ವರ್ಗದಂತಿರುವ ನೆಲ ಶಾಂತಿಯನ್ನು ಕಾಣಲೇಯಿಲ್ಲ. ೧೯೪೭ ರ ಸ್ವಾತಂತ್ರದ ತರುವಾಯದಿಂದ ಇಂದಿನ ವರೆಗೆ ನಮ್ಮ ನೆರೆಯ ಧಾರ್ಮಿಕ ಮೂಲಭೂತವಾದಿ ದೇಶ ಪಾಕಿಸ್ತಾನ ಕಾಶ್ಮೀರದಲ್ಲಿ ಸದಾ ಅಶಾಂತಿಯನ್ನು ನೆಲೆಗೊಳ್ಳುವಂತೆ ಮಾಡಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನಗಳನ್ನು ಅಲ್ಲಿನ ಬಹುಸಂಖ್ಯಾತ ಮುಸ್ಲಿಮರೊಂದಿಗೆ ಅಲ್ಪಸಂಖ್ಯಾತ ಹಿಂದೂಗಳು ಕೂಡ ಅನುಭವಿಸಿದ್ದಾರೆನ್ನುವುದು ಮರೆಯದಿರೋಣ. ಆದರೆ ಬಿಜೆಪಿಯ ಪುರೋಹಿತಶಾಹಿಗಳು ಆ ಸೌಲಭ್ಯ ಕೇವಲ ಮುಸಲ್ಮಾನರಿಗೆ ಮಾತ್ರ ಮೀಸಲು ಎನ್ನುವಂತೆ ಬಿಂಬಿಸುತ್ತ ಬಂದಿವೆ. ಮುಸ್ಲಿಮ್ ಬಾಹುಳ್ಯವಿರುವ ಕಣಿವೆ ರಾಜ್ಯದ ಉನ್ನತ ಸ್ಥಾನಗಳಲ್ಲೆಲ್ಲಾ ಅಂದಿನಿಂದ ಇಂದಿನವರೆಗೆ ಪಂಡಿತರದ್ದೇ ಪ್ರಾಬಲ್ಯವಿದ್ದದ್ದನ್ನು ಬಿಜೆಪಿ ಮತ್ತು ಸಂಘ ಮರೆಮಾಚಿವೆ.
೧೯೯೦ ರ ವರ್ಷ ಕಾಶ್ಮೀರದಲ್ಲಿ ಐತಿಹಾಸಿಕˌ ಭಯಾನಕ ಹಾಗು ಅಚ್ಚಳಿಯದೆ ಉಳಿಯಬಲ್ಲ ಘಟನೆಯೊಂದು ನಡೆದುಹೋಯಿತು. ಕಾಶ್ಮೀರದಲ್ಲಿ ನೆಲೆಸಿದ್ದ ಪಂಡಿತರನ್ನೂ ಒಳಗೊಂಡಂತೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ಹಾಗು ಬಹುಸಂಖ್ಯಾತ ಮುಸಲ್ಮಾನರ ಮೇಲೆ ಭಯೋತ್ಪಾದಕರ ಅಮಾನುಷ ದಾಳಿ ನಡೆದುಹೋಯಿತು. ಪಾಕ್ ಪ್ರಾಯೋಜಿತ ಭಯೋತ್ಪಾದನಾ ಚಟುವಟಿಕೆಗಳಿಂದ ಅಲ್ಲಿ ಕೇವಲ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಮರು ಕೂಡ ತೊಂದರೆ ಅನುಭವಿಸಿದ್ದಾರೆ. ಆದರೆ ಬಿಜೆಪಿ ಅದನ್ನು ಸದಾ ತನ್ನ ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿಕೊಂಡು ಬಂದಿದೆ. ಹಿಂದಿನ ಸರಕಾರಗಳು ದುರ್ಬಲ ಹಾಗು ಹಿಂದೂ ವಿರೋಧಿಗಳು ಎನ್ನುವಂತೆ ಬಿಂಬಿಸುವುದಷ್ಟೇ ಅಲ್ಲದೆ ಅಲ್ಲಿನ ಹಿಂದೂಗಳ ಮೇಲಿನ ಭಯೋತ್ಪಾದಕರ ದಾಳಿಯನ್ನು ದೇಶದ ಹಿಂದೂ-ಮುಸ್ಲಿಮ್ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಬಿಜೆಪಿ ಬಳಸಿಕೊಳ್ಳುತ್ತ ಬಂದಿದೆ.
೧೯೯೦ ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ಕೇಂದ್ರದಲ್ಲಿದ್ದದ್ದು ಬಿಜೆಪಿ ಬೆಂಬಲಿತ ನ್ಯಾಷನಲ್ ಫ್ರಂಟ್ ಸರಕಾರ. ಕಾಶ್ಮೀರ ಅಶಾಂತಿಗೆ ಸದಾ ಕಾಂಗ್ರೆಸ್ ಪಕ್ಷವನ್ನು ಹೊಣೆಯಾಗಿಸುವ ಹಾಗು ಕಾಶ್ಮೀರಿ ಪಂಡಿತರ ಬಗ್ಗೆ ಅತ್ಯಂತ ಕಾಳಜಿ ಹೊಂದಿದಂತೆ ನಟಿಸುವ ಬಿಜೆಪಿ ಆಗ ತುಟಿ ಪಿಟಕ್ ಅನ್ನಲಿಲ್ಲ. ಆಗ ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯಬಹುದಾಗಿತ್ತಾದರೂ ಅದು ಹಾಗೆ ಮಾಡಲಿಲ್ಲ. ಆದರೆ ಪಂಡಿತರ ವಲಸೆಗೆ ಬಿಜೆಪಿ ಮಾಡಿದ ಷಡ್ಯಂತ್ರಗಳು ಗುಟ್ಟಾಗಿ ಉಳಿಯಲಿಲ್ಲ. ಕಾಶ್ಮೀರ ವಿಷಯವನ್ನು ಸೂಕ್ಷ್ಮವಾಗಿ ನಿರ್ವಹಿಸುವಲ್ಲಿ ಅನುಭವಹೀನ ವಿ ಪಿ ಸಿಂಗ್ ಸರಕಾರ ವಿಫವಾಗಿತ್ತು. ಕಾಂಗ್ರೆಸ್ ಪಕ್ಷದ ಮೇಲಿನ ವೈಯಕ್ತಿಕ ಸೇಡಿಗಾಗಿ ವಿ ಪಿ ಸಿಂಗ್ ಚಡಪಡಿಸುತ್ತಿದ್ದರು. ಅದರ ಭಾಗವಾಗಿ ಮುಫ್ತಿ ಮೊಹಮದ್ ಸೈಯಿದ್ ಅವರನ್ನು ದೇಶದ ಗೃಹಮಂತ್ರಿಯನ್ನಾಗಿ ಮಾಡಲಾಗಿತ್ತು.
ಮುಫ್ತಿ ಗೃಹಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ ನಾಲ್ಕು ದಿನಗಳಲ್ಲಿ ಅವರ ಮಗಳು ಡಾ. ರುಬಿಯಾ ಸೈಯಿದ್ ಅವರನ್ನು ಭಯೋತ್ಪಾದಕರು ಅಪಹರಿಸಿದರು. ಮೊದಲು ಮೂರು ಹಾಗು ಆನಂತರ ಐದು ಜನ ಭಯೋತ್ಪಾದಕರ ಬಿಡುಗಡೆಯ ಬೇಡಿಕೆಯನ್ನು ಭಯೋತ್ಪಾದಕರು ಇಟ್ಟಿದ್ದರು. ಭಯೋತ್ಪಾದಕರ ಬಿಡುಗಡೆಯನ್ನು ಅಂದಿನ ಕಾಶ್ಮೀರದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬಲವಾಗಿ ವಿರೋಧಿಸಿದ್ದರು. ಆದರೆ ಅಬ್ದುಲ್ಲಾ ಅವರ ಮೇಲೆ ಕೇಂದ್ರ ಸರಕಾರ ಒತ್ತಡ ಹೇರುವ ಮೂಲಕ ಕೊನೆಗೆ ಐದು ಜನ ಭಯೋತ್ಪಾದಕರನ್ನು ಬಿಡುಗಡೆ ಮಾಡಿಸಲಾಯಿತು. ರಾಜ್ಯ ಸರಕಾರದ ಮೇಲೆ ಕೇಂದ್ರ ಹಾಕಿದ ಒತ್ತಡ ಅಂದು ಅದು ದೇಶದ ಹಿತದಲ್ಲಿರಲಿಲ್ಲ. ಈ ಎಲ್ಲ ಘಟನಾವಳಿಗಳನ್ನು ಸರಕಾರದ ಪಾಲುದಾರ ಪಕ್ಷವಾಗಿದ್ದ ಬಿಜೆಪಿ ಕೂಡ ಬೆಂಬಲಿತ್ತು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಘಟನೆಯಿಂದ ಭಯೋತ್ಪಾದಕರ ಮನೋಬಲ ಹೆಚ್ಚಿ ಮುಂದೆ ಅಪಹರಣ ಮತ್ತು ಭಯೋತ್ಪಾದಕರ ಬಿಡುಗಡೆಯ ಮತ್ತಷ್ಟು ಪ್ರಕರಣಗಳು ನಡೆದುಹೋದವು. ಆನಂತರ ವಾಜಪೇಯಿ ಸರಕಾರದ ಸಂದರ್ಭದಲ್ಲೂ ಕಂದಹಾರ ವಿಮಾನ ಅಪಹರಣ ಪ್ರಕರಣದಲ್ಲಿ ಕುಖ್ಯಾತ ಭಯೋತ್ಪಾದಕರನ್ನು ಬಿಡುಗಡೆ ಮಾಡಲಾಯಿತು.
ಅಂದಿನ ಐಬಿಯ ಸಂಚಾಲಕ ಹಾಗು RAW ಸಂಸ್ಥೆಯ ನಿರ್ದೇಶಕರಾಗಿದ್ದ ಎ ಎಸ್ ದುಲತ್ ಅವರು ತಮ್ಮ ಪುಸ್ತಕ “ಕಾಶ್ಮೀರ್ ದಿ ವಾಜಪೇಯಿ ಇಯರ್ಯ್” ನಲ್ಲಿ ಹೀಗೆ ಬರೆಯುತ್ತಾರೆ: “೧೯೮೯-೯೦ ರಲ್ಲಿ ಕಾಶ್ಮೀರವು ಒಂದು ಯುದ್ಧಗ್ರಸ್ಥ ನೆಲವಾಗಿ ಮಾರ್ಪಟ್ಟಿತ್ತು. ಡಾ. ರುಬಿಯಾ ಅಪಹರಣ ಹಾಗು ಅದಕ್ಕೆ ಪ್ರತಿಯಾಗಿ ಭಯೋತ್ಪಾದಕರ ಬಿಡುಗಡೆಯ ತರುವಾಯ ಹಿಂಸೆˌ ರಕ್ತಪಾತˌ ಗೋಲಿಬಾರ್ˌ ಬಾಂಬ್ ಸ್ಪೋಟ್ˌ ಸಾವು-ನೋವುಗಳುˌ ಗಲಭೆಗಳು ಮಿತಿ ಮೀರಿದವು. ರಸ್ತೆಗಳಲ್ಲಿ ಯುವಕರು ಬಹಿರಂಗವಾಗಿಯೇ ಶಸ್ತ್ರಾಸ್ತ್ರಗಳನ್ನು ಹಿಡಿದು ತಿರುಗುತ್ತಿದ್ದರು. ಮುಖ್ಯಮಂತ್ರಿ ಬಂಗ್ಲೆ ಇರುವ ಸುರಕ್ಷಿತ ಸ್ಥಳಗಳಲ್ಲೂ ಕೂಡ ಭಯೋತ್ಪಾದಕ ಚಟುವಟಿಕೆಗಳು ಯಾವ ನಿಯತ್ರಣವಿಲ್ಲದೆ ನಡೆಯುತ್ತಿದ್ದವು. ದಂಡು ಪ್ರದೇಶದಲ್ಲಿ ಮಿಲಿಟರಿ ಪರೇಡ್ ನಡೆಯುತ್ತಿತ್ತು.” ಆದರೆ ಇಂಥ ವಿಷಮ ಪರಿಸ್ಥಿತಿಯಲ್ಲಿ ಬಿಜೆಪಿಗೆ ಕಾಶ್ಮೀರದ ಜನರ ಹಿತಾಸಕ್ತಿ ಮುಖ್ಯವಾಗಲೇಯಿಲ್ಲ. ಅದು ರಾಮಮಂದಿರಕ್ಕಾಗಿ ದೇಶಾದ್ಯಂತ ರಥಯಾತ್ರೆ ಆರಂಭಿಸಿ ಬಿಟ್ಟಿತ್ತು.
ಒಂದು ವೇಳೆ ಬಿಜೆಪಿ ಮತ್ತು ಸಂಘಕ್ಕೆ ಕಾಶ್ಮೀರದ ಜನರ ಹಿತಾಸಕ್ತಿ ಮುಖ್ಯವಾಗಿದ್ದರೆ ತಾವೇ ಬೆಂಬಲಿಸುತ್ತಿದ್ದ ಸರಕಾರದ ಮೂಲಕ ಅದರ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿದ್ದವು. ಆದರೆ ಅವರ ಗೇಮ್-ಪ್ಲ್ಯಾನ್ ಬೇರೆಯದೇ ಆಗಿತ್ತು. ದೇಶಾದ್ಯಂತ ರಥಯಾತ್ರೆ ನಡೆಸುವ ಮೂಲಕ ಮುಸ್ಲಿಮರ ವಿರುದ್ಧ ಹಿಂದೂಗಳಲ್ಲಿ ದ್ವೇಷ ಹುಟ್ಟಿಸುವ ಕಾರ್ಯಕ್ಕೆ ಬಿಜೆಪಿ ಮತ್ತು ಸಂಘ ಕೈಹಾಕಿದವು. ಬಿಜೆಪಿ ಮತ್ತು ಸಂಘದ ಗೇಮ-ಪ್ಲ್ಯಾನ್ ನ ಮೊದಲ ಹೆಜ್ಜೆಯಾಗಿ ಕಾಶ್ಮೀರದ ಆಡಳಿತವನ್ನು ತಮ್ಮ ಹಿಡಿತಕ್ಕೆ ಪಡೆಯುವುದಾಗಿತ್ತು. ಅಂದಿನ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ಜಮ್ಮು-ಕಾಶ್ಮೀರದ ಚುನಾಯಿತ ರಾಜ್ಯ ಸರಕಾರವನ್ನು ವಜಾಗೊಳಿಸಿˌ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ತನ್ನ ಸ್ಪಯಂಸೇವಕ ಜಗ್ಮೋಹನ್ ರನ್ನು ರಾಜ್ಯಪಾಲರನ್ನಾಗಿ ಮಾಡುವಲ್ಲಿ ಸಂಘ ಹಾಗು ಬಿಜೆಪಿ ಸಫಲವಾದವು. ಬಿಜೆಪಿ ಮತ್ತು ಸಂಘದ ಗೇಮ-ಪ್ಲ್ಯಾನನ ಮುಂದಿನ ಹೆಜ್ಜೆ ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ನೋಡಿಕೊಳ್ಳುವುದಾಗಿತ್ತು.
ಜಗ್ಮೋಹನ್ ರಾಜ್ಯಪಾಲರಾಗಿ ಬಂದದ್ದೇ ತಡ ಬಿಜೆಪಿ ಹಾಗು ಸಂಘ ಯೋಜಿಸಿದ್ದ ಆಟವನ್ನು ಆರಂಭಿಸಿಬಿಟ್ಟರು. ಅವರು ಬಂದದ್ದೇ ತಡ ಅಲ್ಲಿನ ಹಿಂದೂ ಮೂಸ್ಲಿಮರ ನಡುವೆ ಕಂದಕ ಸೃಷ್ಠಿಸುವ ಕೆಸಲ ವ್ಯವಸ್ಥಿತವಾಗಿ ಸುರುಮಾಡಿದರು. ಕಾಶ್ಮೀರದ ಪ್ರತಿಯೊಬ್ಬ ಮುಸಲ್ಮಾನ ಭಯೋತ್ಪಾದಕನಾಗಿದ್ದಾನೆ. ಆ ಎಲ್ಲ ಭಯೋತ್ಪಾದಕರನ್ನು ಮುಗಿಸದ ಹೊರತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಲ್ಲವು ಹಾಗು ಅಲ್ಲಿ ಶಾಂತಿ ನೆಲೆಸದು ಎಂದು ಭಾಷಣ ಮಾಡಲಾರಂಭಿಸಿದರು. ರಾಜ್ಯದ ನಾಗರಿಕರ ಮೇಲೆ ಅನಿಯಂತ್ರಿತ ಗೋಲಿಬಾರ್ ನಡೆಸಲಾಯಿತು. ಸರಕಾರಿ ಪ್ರಾಯೋಚಿತ ನಾಗರಿಕ ಹತ್ಯೆಯ ಪ್ರಕರಣಗಳು ವಿಪರೀತವಾಗಿ ಹೆಚ್ಚಿದವು. ಇದರಿಂದ ಜನತೆಗೆ ಸರಕಾರ ವಿರೋಧಿ ಅಷ್ಟೇ ಅಲ್ಲದೆ ಭಾರತ ವಿರೋಧಿ ಮನೋಭಾವ ಬೆಳೆಯಲಾರಂಭಿಸಿತು. ಜನರು ಬಹಿರಂಗವಾಗಿ ಭಾರತ ವಿರೋಧಿ ಘೋಷಣೆಗಳನ್ನು ಕೂಗುವ ಮಟ್ಟಕ್ಕೆ ತಲುಪಿದರು. ರಾಜ್ಯಪಾಲರು ಅಲ್ಲಿ ಶಾಂತಿ ಸ್ಥಾಪಿಸುವ ಬದಲಿಗೆ ಅರಾಜಕತೆ ಸೃಷ್ಟಿಸಲು ಸತತವಾಗಿ ಪ್ರಯತ್ನಿಸಿದರು.
ಇದನ್ನು ಪುಷ್ಟಿಕರಿಸುವಂತೆ ೧೯೯೦ ರಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ನ್ಯಾಯಮೂರ್ತಿ ತಾರ್ಕುಂಡೆ ಹಾಗು ನ್ಯಾಯಮೂರ್ತಿ ಸಾಚ್ಚರರನ್ನೊಳಗೊಂಡ ತಜ್ಞರ ಸಮಿತಿ ತನ್ನ ವರದಿಯಲ್ಲಿ ಹೀಗೆ ಬರೆಯುತ್ತದೆ: “ಜನೆವರಿ ೧೯೯೦ ರ ನಂತರ ಜಗ್ಮೋಹನ್ ರಾಜ್ಯಪಾಲರಾಗಿ ಬಂದ ಮೇಲೆ ಕಾಶ್ಮೀರದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಮುಗ್ಧ ನಾಗರಿಕರ ಮೇಲಿನ ರಾಜ್ಯಪಾಲರ ದಮನಕಾರಿ ಹಾಗು ಭಯ ಸೃಷ್ಟಿಸುವ ಕಾರ್ಯವೈಖರಿ ಅಲ್ಲಿನ ನಾಗರಿಕರನ್ನು ಮಾನಸಿಕವಾಗಿ ಭಾರತದಿಂದ ದೂರ ಸರಿಯುವಂತೆ ಮಾಡಿದೆ. ರಾಜ್ಯಪಾಲರ ದಮನಕಾರಿ ನೀತಿಯು ಅಲ್ಲಿನ ನಾಗರಿಕರಲ್ಲಿ ಭಯ ಮಿಶ್ರಿತ ಸಿಟ್ಟು ಹುಟ್ಟುಹಾಕಿ ಅವರನ್ನು ಭಾರತ ವಿರೋಧಿಗಳನ್ನಾಗಿಸಲು ಪ್ರಚೋದಿಸಿದೆ.” ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿಯಾಗಿದ್ದ ಅಶೋಕ ಜೇಟ್ಲಿಯವರು ಜಗ್ಮೋಹನ್ ಕುರಿತು ಹೀಗೆ ಹೇಳುತ್ತಾರೆ: “ಜಗ್ಮೋಹನ್ ಅವರು ರಾಜ್ಯಪಾಲರಾಗಿ ಬಂದ ಮೇಲೆ ಐದು ತಿಂಗಳ ಅವಧಿಯಲ್ಲಿ ಈ ಕಣಿವೆ ಪ್ರದೇಶದಲ್ಲಿ ಭಯೋತ್ಪಾದಕರು ಐದು ವರ್ಷಗಳಲ್ಲಿ ಮಾಡದಷ್ಟು ಕೆಡುಕನ್ನು ರಾಜ್ಯಪಾಲರು ಮಾಡಿದ್ದಾರೆ.”
ಅಂತಹ ವಿಷಮ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಸ್ಥಳಿಯ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸುವ ಹಾಗು ಮತ್ತೊಂದು ಕಡೆ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಸೂಕ್ತ ಹಾಗು ಕಠಿಣ ಕ್ರಮಗಳ ಕುರಿತು ಹೆಜ್ಜೆ ಹಾಕುವ ಕಾರ್ಯ ಮಾಡಬೇಕಾಗಿತ್ತು. ಆದರೆ ರಾಜ್ಯಪಾಲರು ಭಯೋತ್ಪಾದಕರಿಂದ ನಡೆದ ರಾಜಕೀಯ ಕಾರ್ಯಕರ್ತರ ಹತ್ಯೆಗಳನ್ನು ಕಾಶ್ಮೀರಿ ಮುಸಲ್ಮಾನರು ನಡೆಸಿದ ಪಂಡಿತರ ಹತ್ಯೆ ಎನ್ನುವಂತೆ ಬಿಂಬಿಸಿದರು. ಅಸಲಿಗೆ ಅಲ್ಲಿ ನಡೆದ ಸರಕಾರಿ ಪ್ರಾಯೋಜಿತ ರಾಜಕೀಯ ಹತ್ಯೆಗಳನ್ನು ಭಯೋತ್ಪಾದಕ ಚಟುವಟಿಕೆ ಎಂದು ತೋರಿಸಲಾಯಿತು. ಬಿಜೆಪಿ-ಸಂಘದ ಗೇಮ್-ಪ್ಲ್ಯಾನ್ ನ ಮುಂದುವರೆದ ಭಾಗವೆಂದರೆ ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಓಡಿಸುವುದಾಗಿತ್ತು. ಕಾಶ್ಮೀರ ಸಮಸ್ಯೆಯ ಅದ್ಯಯನಕಾರ ಹಾಗು ನಾಯಕ ಬಲರಾಜ್ ಪುರಿ ಅವರು ಹೀಗೆ ಹೇಳುತ್ತಾರೆ: “ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆಯನ್ನು ತಡೆಯಲು ನ್ಯಾಯಮೂರ್ತಿ ಮುಫ್ತಿ ಬಾಹುಲೂದ್ದೀನ್ ಫಾರೂಕಿˌ ನ್ಯಾಯಮೂರ್ತಿ ಹೆಚ್ ಎನ್ ಜಟ್ಟು ಹಾಗು ಇನ್ನೂ ಅನೇಕ ಜನ ಹಿಂದೂ-ಮುಸ್ಲಿಮ್ ನಾಗರಿಕರನ್ನೊಳಗೊಂಡ ಹಿಂದೂ-ಮುಸ್ಲಿಮ್ ಸಂಯುಕ್ತ ಸಮಿತಿಯೊಂದನ್ನು ಸ್ಥಾಪಿಸಲಾಗಿತ್ತು. ಮುಸಲ್ಮಾನರೂ ಸೇರಿದಂತೆ ಕಾಶ್ಮೀರದ ಸಮಸ್ತ ನಾಗರಿಕರು ಹಾಗು ಈ ಸಮಿತಿಯ ಪ್ರತಿಯೊಬ್ಬ ಸದಸ್ಯರು ಪಂಡಿತರಿಗೆ ವಲಸೆ ಹೋಗದಂತೆ ಮನವಿ ಮಾಡಿಕೊಂಡಿದ್ದರು. ಆದರೆ ಸಂಯುಕ್ತ ಸಮಿತಿಯ ಪ್ರಯತ್ನಗಳಿಗೆ ರಾಜ್ಯಪಾಲ ಜಗ್ಮೋಹನ್ ತಡೆಯೊಡ್ಡಿದರು.”
ಅದೇ ಸಮಯದಲ್ಲಿ ಕಾಶ್ಮೀರಿ ಪಂಡಿತರ ನಾಯಕ ಸಂಜಯ್ ಟಿಪ್ಪು ಅವರು ಅಂದು ಕಾಶ್ಮೀರಿ ಪಂಡಿತರ ಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ರಾಜ್ಯಪಾಲರನ್ನು ಭೇಟಿ ಮಾಡಿ ಪಂಡಿತರ ಸುರಕ್ಷತೆ ಮತ್ತು ರಕ್ಷಣೆಗಾಗಿ ಮನವಿ ಮಾಡುತ್ತಾರೆ. ಆದರೆ ರಾಜ್ಯಪಾಲರು ಹಿಂದೂ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆಯಾಗಿ ನೀವೆಲ್ಲರೂ ಕಾಶ್ಮೀರ ಬಿಟ್ಟು ವಲಸೆ ಹೋಗಬೇಕೆಂದು ಅವರನ್ನು ಪ್ರಚೋದಿಸುತ್ತಾರೆ. ತಬ್ಲಿನ್ ಸಿಂಗ್ ಹೇಳಿಕೆಯ ಪ್ರಕಾರ ಜಗ್ಮೋಹನ್ ಅಧಿಕಾರ ವಹಿಸಿಕೊಂಡ ಮೇಲೆ ಕಾಶ್ಮೀರಿ ಪಂಡಿತರ ವಲಸೆ ತೀವ್ರತೆ ಪಡೆಯಿತು ಹಾಗು ಪಂಡಿತರ ವಲಸೆಗೆ ಸರಕಾರವೇ ಸಂಪನ್ಮೂಲಗಳ ನೆರವು ನೀಡಿತ್ತು. ಸೆಪ್ಟೆಂಬರ್ ೧೮ˌ ೧೯೯೦ ರ ಸ್ಥಳಿಯ ಉರ್ದು ಪತ್ರಿಕೆ ಅಪ್ಸಾನಾದಲ್ಲಿ ಕೆ ಎಲ್ ಕೌರ್ ಅವರು ಬರೆದ ಪತ್ರದಲ್ಲಿ ಹೀಗೆ ಹೇಳಲಾಗಿತ್ತು: “ಸರಕಾರ ಕಾಶ್ಮೀರದಲ್ಲಿ ೧ ಲಕ್ಷ ಮುಸ್ಮಿಮರ ಹತ್ಯೆ ಮಾಡಲು ಯೋಜಿಸಿದೆ. ಅದರಿಂದ ಭವಿಷ್ಯದಲ್ಲಿ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆ ನಿಂತುಹೋಗುತ್ತದೆ. ಆನಂತರ ಪಂಡಿತರು ಮರಳಿ ಕಾಶ್ಮೀರಕ್ಕೆ ಬರಬಹುದು. ಅಲ್ಲಿಯ ವರೆಗೆ ನೀವೆಲ್ಲರು ಜಮ್ಮುವಿಗೆ ವಲಸೆ ಹೋಗಬೇಕು. ಮರಳಿ ಬಂದ ಮೇಲೆ ನಿಮಗೆ ಮನೆˌ ಪಡಿತರ ಮತ್ತಿತರ ಎಲ್ಲ ಬಗೆಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ರಾಜ್ಯಪಾಲರ ಮುಖೇನ ಬಿಜೆಪಿ ಹಾಗು ಸಂಘ ಭರವಸೆ ನೀಡಿದ್ದವು.”
ಇದರಿಂದ ಸ್ಪಷ್ಟವಾಗುವ ಸಂಗತಿ ಏನೆಂದರೆ ಬಿಜೆಪಿ ಹಾಗು ಸಂಘ ಅಂದಿನ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಜಮ್ಮು-ಕಾಶ್ಮೀರದ ಚುನಾಯಿತ ಸರಕಾರವನ್ನು ವಜಾಗೊಳಿಸಿ ಸಂಘಿ ಸಿಂದ್ಧಾಂತಗಳ ಪ್ರತಿಪಾದಕ ಹಾಗು ತನ್ನ ಸ್ವಯಂ ಸೇವಕ ಜಗ್ಮೋಹನ್ ಅವರನ್ನು ರಾಜ್ಯಪಾಲರನ್ನಾಗಿ ಕಾಶ್ಮೀರಕ್ಕೆ ಕಳಿಸಿದ್ದು ಪಂಡಿತರ ರಕ್ಷಣೆಗಾಗಿ ಅಲ್ಲ ˌ ಬದಲಾಗಿ ಅವರನ್ನು ಅಲ್ಲಿಂದ ಓಡಿಸಲು ಎನ್ನುವುದು. ಅದಕ್ಕೆ ಪುಷ್ಟಿ ನೀಡುವಂತೆ ಮುಂದೆ ಜಗ್ಮೋಹನ್ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಸರಕಾರದ ಸಂಪುಟದಲ್ಲಿ ಮಂತ್ರಿ ಮಾಡುವ ಮೂಲಕ ಬಿಜೆಪಿ ಮತ್ತು ಸಂಘ ಜಗ್ಮೋಹನ್ ಅವರಿಗೆ ಬಹುದೊಡ್ಡ ಉಡುಗೊರೆ ನೀಡಿದ್ದು ಈಗ ಇತಿಹಾಸ. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಸಮರ್ಥನೀಯವೇನಲ್ಲ. ಆದರೆ ಬಿಜೆಪಿ ಮತ್ತು ಸಂಘˌ ಪಂಡಿತರ ಹತ್ಯೆಯನ್ನು ಅತಿಯಾಗಿ ವೈಭವೀಕರಿಸುತ್ತಿವೆ. ಎಂದೊ ನಡೆದು ಹೋದ ಘಟನೆಯಲ್ಲಿ ಮಡಿದ ಪಂಡಿತರ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಭಾರತಿಯ ದಲಿತರ ಮೇಲೆ ನಮ್ಮವರಿಂದಲೇ ನಡೆಯುವ ನಿರಂತರ ದೌರ್ಜನ್ಯಗಳ ಕುರಿತು ಬಿಜೆಪಿ ಹಾಗು ಸಂಘ ಮಾತನಾಡುತ್ತಿಲ್ಲವೇಕೆ?
ಈ ದೇಶದಲ್ಲಿ ನಡೆದ ಹಾಗು ನಡೆಯುವ ಪ್ರತಿಯೊಂದು ಘಟನೆಗಳಿಗೆ ಕಾಂಗ್ರೆಸ್ ಪಕ್ಷವನ್ನು ಹೊಣೆಯಾಗಿಸುವ ಬಿಜೆಪಿ ತಮ್ಮದೆ ಪಕ್ಷದ ವಾಜಪೇಯಿ ಆಡಳಿತದಲ್ಲಿ ಏನೇನು ನಡೆದಿದೆ ಎನ್ನುವುದಕ್ಕೆ ಈ ಕೆಳಗಿನ ಘಟನೆಗಳೇ ಸಾಕ್ಷಿಯಾಗಿವೆ.
ಆಗಸ್ಟ್ ೩, ೧೯೯೮ ರಲ್ಲಿ ನಡೆದ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಕೃತ್ಯದಿಂದ ಹಿಮಾಚಲ ಪ್ರದೇಶದ ಚಂಬಾದಲ್ಲಿ ೩೫ ಹಿಂದೂಗಳ ಹತ್ಯೆ.
ಜನವರಿ ೨೫, ೧೯೯೮ ರಲ್ಲಿ ಐ ಕೆ ಗುಜ್ರಾಲ್ ಆಡಳಿತದಲ್ಲಿ ಜಮ್ಮು-ಕಾಶ್ಮೀರದ ವಂಧಾಮದಲ್ಲಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ ಉಗ್ರವಾದಿಗಳಿಂದ ೨೫ ಜನ ಹಿಂದೂಗಳ ಹತ್ಯೆ.
ಜೂನ್ ೧೯, ೧೯೯೮ ರಲ್ಲಿ ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯ ಛಪ್ನಾರಿಯಲ್ಲಿ ಮದುವೆ ದಿಬ್ಬಣದ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ೨೫ ಹಿಂದೂಗಳ ಹತ್ಯೆ.
ಎಪ್ರಿಲ್ ೧೭, ೧೯೯೮ ರಲ್ಲಿ ಜಮ್ಮು-ಕಾಶ್ಮೀರದ ಉಧಮ್ಪುರ್ ಜಿಲ್ಲೆಯ ಪ್ರಾಣ್ಕೋಟ್ ಹಾಗೂ ದಾಕಿಕೋಟ್ ಎಂಬ ಗ್ರಾಮೀಣ ಪ್ರದೇಶದಲ್ಲಿ ಉಗ್ರರಿಂದ ೨೬ ಹಿಂದೂಗಳ ಕತ್ತು ಸೀಳಿ ಕೊಲೆ.
ಮಾರ್ಚ್ ೨೦ ೨೦೦೦ ರಲ್ಲಿ ಅನಂತ್ನಾಗ್ ಜಿಲ್ಲೆಯ ಚಿತ್ತಿಸಿಂಗ್ಪುರದಲ್ಲಿ ಭಯೋತ್ಪಾದಕರಿಂದ ೩೫ ಸಿಖ್ಖರ ಕಗ್ಗೊಲೆ.
ಜುಲೈ ೨೦, ೨೦೦೧ ರಲ್ಲಿ ಅಮರನಾಥ್ ಯಾತ್ರಾರ್ಥಿಗಳ ಮೇಲಿನ ಉಗ್ರರ ದಾಳಿಯಲ್ಲಿ ೮ ಜನ ಹಿಂದೂಗಳು, ಮೂವರು ಮುಸಲ್ಮಾನರು ಹಾಗೂ ಇಬ್ಬರು ಸೈನಿಕರುˌ ಹೀಗೆ ಒಟ್ಟು ೧೩ ಜನರ ಹತ್ಯೆ.
ಆಗಸ್ಟ್ ೩, ೨೦೦೧ ರಲ್ಲಿ ದೋಡಾ ಜಿಲ್ಲೆಯ ಕಿಶ್ತ್ವಾರದಲ್ಲಿ ಉಗ್ರರಿಂದ ೧೭ ಜನ ಹಿಂದೂಗಳ ಕೊಲೆ.
ಡಿಸೆಂಬರ್ ೧೩, ೨೦೦೧ ರಂದು ದಿಲ್ಲಿಯ ಸಂಸತ್ ಭವನದ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಒಟ್ಟು ೯ ಜನರ ಸಾವು.
ಜುಲೈ ೧೩ˌ ೨೦೦೨ ರಲ್ಲಿ ಜಮ್ಮುವಿನ ಹೊರಭಾಗ ಖಾಸೀಮ್ ನಗರದಲ್ಲಿ ಉಗ್ರರಿಂದ ೨೯ ಹಿಂದೂ ಕಾರ್ಮಿಕರ ಕೊಲೆ.
ಜುಲೈ ೩೦ ಹಾಗೂ ಆಗಸ್ಟ್ ೬, ೨೦೦೨ ರಂದು ಅಮರನಾಥ್ ಯಾತ್ರಿಗಳ ಮೇಲಿನ ದಾಳಿಯಲ್ಲಿ ೧೧ ಜನರ ಸಾವು.
ಮಾರ್ಚ್ ೨೩, ೨೦೦೩ ರಂದು ಪುಲ್ವಾಮದ ನಂದಿಮಾರ್ಗದಲ್ಲಿ ೨೪ ಕಾಶ್ಮೀರಿ ಪಂಡಿತರ ಕಗ್ಗೊಲೆ.
ಸಪ್ಟೆಂಬರ್ ೨೪, ೨೦೦೨ ರಲ್ಲಿ ಅಕ್ಷರಧಾಮ ದೇಗುಲದ ಮೇಲಿನ ದಾಳಿಯಲ್ಲಿ ೩೩ ಹಿಂದೂಗಳ ಹತ್ಯೆ.
ಮಾರ್ಚ್ ಹಾಗೂ ನವೆಂಬರ್ ೨೦೦೨ ರಲ್ಲಿ ಜಮ್ಮುವಿನ ರಘುನಾಥ್ ದೇವಸ್ಥಾನದ ಮೇಲಿನ ಉಗ್ರರ ದಾಳಿಯಲ್ಲಿ ಒಟ್ಟು ೨೫ ಜನರ ಸಾವು.
ಅದರ ಮುಂದುವರೆದ ಭಾಗವೆನ್ನುವಂತೆ ಮೋದಿ ಆಡಳಿತದಲ್ಲಿ ಈ ಜನಾಂಗೀಯ ಕಲಹˌ ಗುಂಪು ಹಲ್ಲೆಗಳುˌ ಬುದ್ದಿಜೀವಿಗಳ ಹತ್ಯೆಗಳ ಸರಮಾಲೆ ಹಾಗು ಭಯೋತ್ಪಾದಕ ಚಟುವಟಿಗೆಗಳು ನಿರಂತರವಾಗಿ ನಡೆಯುತ್ತಲೆಯಿವೆ. ೨೦೧೯ ರಲ್ಲಿ ದೇಶದ ಸಂಸತ್ತಿಗೆ ಚುನಾವಣೆ ನಡೆಯುವ ಸ್ವಲ್ಪ ದಿನಗಳ ಮುಂಚೆ ಆಶ್ಚರ್ಯಕರವೆನ್ನುವಂತೆ ಪುಲ್ವಾಮಾದಲ್ಲಿ ದೇಶದ ೪೦ ಕ್ಕೂ ಹೆಚ್ಚು ಸೈನಿಕರ ಮಾರಣ ಹೋಮ ನಡೆದದ್ದು ನಾವೆಂದಿಗೂ ಮರೆಯದ ಘಟನೆ. ದೇಶ ಸುರಕ್ಷಿತ ಕೈಯೊಳಗಿದೆ ಎಂಬ ಅತಿರಂಜಿತ ಪ್ರಚಾರದ ನಡುವೆಯೂ ಅಘಾದ ಪ್ರಮಾಣದ ಸ್ಪೋಟಕ ವಸ್ತು ಗಡಿದಾಟಿ ಒಳನುಸುಳಿದ್ದು ಹಾಗು ಸೋಜಿಗವೆನ್ನುವಂತೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಸಮಯಕ್ಕೆ ಮುನ್ನ ಪುಲ್ವಾಮದಲ್ಲಿ ಭಯೋತ್ಪಾದಕರು ನಮ್ಮ ೪೦ ಕ್ಕೂ ಹೆಚ್ಚು ಜನ ಸೈನಿಕರ ಅಮೂಲ್ಯ ಜೀವ ತೆಗೆದುಕೊಂಡದ್ದು ಇಂದಿಗೂ ಒಂದು ನಿಘೂಡ ಘಟನೆಯಾಗಿ ಉಳಿದಿದೆ.
ಆ ಕುರಿತು ಮೋದಿ ನೇತೃತ್ವದ ಆಳುವ ಪಕ್ಷ ಹೊಣೆ ಹೊರಲಿಲ್ಲ ಮತ್ತು ಅದಕ್ಕೆ ಕಾರಣವಾದ ಸುರಕ್ಷತಾ ವೈಫಲ್ಯದ ತನಿಖೆಗೆ ಮುಂದಾಗಲಿಲ್ಲ. ಹೀಗೆ ಬಿಜೆಪಿ ಮತ್ತು ಸಂಘ ದೇಶದ ಹಿತಾಸಕ್ತಿಗೆ ವಿರುಧ್ಧವಾದುದನ್ನೇ ಮಾಡುತ್ತ ಬಂದಿವೆ. ಈಗ ಮೋದಿ ಆಡಳಿತ ಕ್ರಮೇಣ ತನ್ನ ಜನವಿರೋಧಿ ಆಡಳಿತದಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವುದರಿಂದ ಮತ್ತೆ ಮತೀಯವಾದದ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯದ ಕುರಿತ ಚಲನಚಿತ್ರ ಪ್ರದರ್ಶನದ ಮೂಲಕ ದೇಶಾದ್ಯಂತ ಹಿಂದೂ-ಮುಸ್ಲಿಮರ ನಡುವೆ ದ್ವೇಷವನ್ನು ಹಂಚುತ್ತಿದೆ. ಸ್ವತಃ ಪ್ರಧಾನಿಗಳೇ ಮುಂಚೂಣಿಯಲ್ಲಿ ನಿಂತು ಚಲನಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದರೆಲ್ಲದರ ಮಧ್ಯೆ ೧೯೯೦ ರಲ್ಲಿ ಬಿಜೆಪಿ ಮತ್ತು ಸಂಘ ಕಾಶ್ಮೀರ ಪಂಡಿತರ ವಲಸೆಯ ವಿಷಯದಲ್ಲಿ ಬಹಳ ಮಹತ್ವದ ಪಾತ್ರ ವಹಿಸಿತ್ತು ಎನ್ನುವುದನ್ನು ನಾವೆಲ್ಲ ಮರೆಯದಿರೋಣ.
~ ಡಾ. ಜೆ ಎಸ್ ಪಾಟೀಲ.