ಈ ಜಗತ್ತಿನಲ್ಲಿ ಸಾಕಷ್ಟು ಕೆಲಸಗಳು ಜೀವನ ಪಣಕ್ಕಿಟ್ಟು ಮಾಡಬೇಕಾಗಿರುತ್ತದೆ ಅಂತಹ ಕೆಲಸಗಳು ಬಹುಪಾಲು ಸಮಾಜ ಸೇವೆಯದ್ದೇ ಆಗಿರುತ್ತೆ, ಆದರೆ ಹೀಗೆ ಪ್ರಾಣವನ್ನ ಪಣಕ್ಕಿಟ್ಟು ಕೆಲಸ ಮಾಡುವವರ ಪ್ರಾಣವನ್ನ ರಕ್ಷಿಸಬೇಕಾದದ್ದು ಸರ್ಕಾರ ಮತ್ತು ಆಯಾ ಇಲಾಖೆಯ ಕೆಲಸ ಆದರೆ ಕೆಲವೊಮ್ಮೆ ಆಯಾ ಇಲಾಖೆಗಳ ಮತ್ತು ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಹಲವು ಕಾರ್ಮಿಕರು ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತವೆ.
ಅದರಲ್ಲೂ ಯಾವ ಕ್ಷಣದಲ್ಲಿ ಬೇಕಾದರೂ ಪ್ರಾಣಕ್ಕೆ ಆಪತ್ತು ಬರಬಹುದು ಎನ್ನುವ ಕೆಲಸ ಇದ್ರೆ ಅದು ವಿದ್ಯುತ್ ಇಲಾಖೆಯ ಲೈನ್ ಮ್ಯಾನ್ ಕೆಲಸ.. ಈ ಕೆಲಸದಲ್ಲಿ ಪ್ರಾಣಕ್ಕೆ ಗ್ಯಾರಂಟಿ ಇಲ್ಲ ಅಂತ ತಿಳಿದಿದ್ರು ಸಾಕಷ್ಟು ಮಂದಿ ಕಾರ್ಮಿಕರು ತಮ್ಮ ಪ್ರಾಣದ ಹಂಗು ತೊರೆದು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಲೈನ್ ಮ್ಯಾನ್ ಕೆಲಸಗಳಿಗೆ ಸೇರಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಇಲಾಖೆಗಳ ನಿರ್ಲಕ್ಷಕ್ಕೆ ಮತ್ತು ಸರಕಾರಗಳ ಉಡಾಫೆ ಧೋರಣೆಗೆ ಕೆಲ ಲೈನ್ ಮ್ಯಾನ್ ಗಳು ಕರ್ತವ್ಯವನ್ನು ನಿರ್ವಹಿಸಬೇಕಾದರೆ ಪ್ರಾಣವನ್ನ ತೆತ್ತ ಉದಾಹರಣೆಗಳಿವೆ
ಇದೀಗ ಅಂತಾದೆ ಒಂದು ದುರ್ಘಟನೆ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲದಮರ ತಾಂಡದಲ್ಲಿ ಭಾನುವಾರ ನಡೆದಿದೆ. ಹೌದು.. ವಿದ್ಯುತ್ ಕಂಬವನ್ನು ಹತ್ತಿ ದುರಸ್ತಿ ಕಾರ್ಯವನ್ನು ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಉಂಟಾಗಿ ಜೆಸ್ಕಾಂ ಲೈನ್ ಮ್ಯಾನ್ ವಿರೂಪಾಕ್ಷಿ (28 ) ಕಂಬದ ಮೇಲೆಯೇ ಸಾವನ್ನಪ್ಪಿದ್ದಾರೆ. ಹೀಗೆ ಕರ್ತವ್ಯದಲ್ಲಿ ನಿರತರಾಗಿರುವಾಗಲೇ ಹೇಗೆ ವಿದ್ಯುತ್ ಹರಿದಿದೆ ಅನ್ನೋದು ಗೊತ್ತಾಗಿಲ್ಲ ಅಂತ ಪ್ರತ್ಯಕ್ಷದರ್ಶಿಗಳು ಹೇಳ್ತಾ ಇದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ವಿದ್ಯುತ್ ಲೈನ್ ದುರಸ್ತಿಗಾಗಿ ಏಣಿಯನ್ನು ಇಟ್ಟುಕೊಂಡು ಕಂಬವನ್ನು ಹತ್ತಿ, ಲೈನ್ ಮ್ಯಾನ್ ದುರಸ್ತಿ ಕಾರ್ಯವನ್ನು ಮಾಡ್ತಾ ಇದ್ರು. ಕಂಬವನ್ನು ಹತ್ತುವ ವೇಳೆ ವಿದ್ಯುತ್ ಸರಬರಾಜು ಸ್ಥಗಿತ ಮಾಡಲಾಗಿತ್ತು. ಆದ್ರೆ, ದುರಸ್ತಿ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಸರಬರಾಜು ಮಾಡಲಾಗಿದ್ದು, ಕಂಬದ ಮೇಲೆಯೇ ಶಾಕ್ ಹೊಡೆದು ಲೈನ್ಮ್ಯಾನ್ ಸಾವನ್ನಪ್ಪಿದ್ದಾರೆ. ಇನ್ನು ಲೈನ್ ಮ್ಯಾನ್ ಸಾವನ್ನಪ್ಪಿರುವ ವಿಷಯವನ್ನ ಸ್ಥಳೀಯರು ಜೆಸ್ಕಾಂ ಇಂಜಿನಿಯರ್ ಗೆ (GESCOM Engineer) ಫೋನ್ ಮಾಡಿ ತಿಳಿಸಿದ್ದಾರೆ. ಸುಮಾರು ಗಂಟೆಗಳಾದರೂ ಜೆಸ್ಕಾಂ ಸಿಬ್ಬಂದಿ ಬಾರದೆ ಬಳಿಕ ಸಾರ್ವಜನಿಕರ ಒತ್ತಡಕ್ಕೆ ಮಣಿದು ಲೈನ್ಮ್ಯಾನ್ ಮೃತದೇಹವನ್ನೂ ಕೆಳಗಿಳಸಿದ್ದಾರೆ ಎನ್ನಲಾಗಿದೆ.
ಇನ್ನು ರಜೆಯ ಮೂಡ್ನಲ್ಲಿದ್ದ ಜೆಸ್ಕಾಂ ಇಂಜಿನಿಯರ್ ಘಟನಾ ಸ್ಥಳಕ್ಕೆ ಬರಲು 3-4 ತಾಸು ತಡಮಾಡಿದ್ದಾರೆ. ಸ್ಥಳಕ್ಕೆ ಬಂದ ಇಂಜಿನಿಯರ್ ತಮ್ಮ ಇಲಾಖೆಯ ಲೈನ್ಮ್ಯಾನ್ ಸಾವನ್ನಪ್ಪಿದ್ದರೂ ಉಡಾಫೆ ಮಾತುಗಳನ್ನ ಆಡಿದ್ದಾರೆ. ಇದರಿಂದ ಸ್ಥಳೀಯರು ಆಕ್ರೋಶಗೊಂಡು ಇಂಜಿನಿಯರ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಇನ್ನು ಘಟನೆ ಕೈ ಮೀರಿ ಹೋಗೋದನ್ನ ಅರ್ಥ ಮಾಡಿಕೊಂಡ ದೇವದುರ್ಗ ಠಾಣೆ ಪೊಲೀಸರು ಕೂಡಲೇ ಮಧ್ಯೆ ಪ್ರವೇಶ ಮಾಡಿ ಜೆಸ್ಕಾಂ ಇಂಜಿನಿಯರ್ ನನ್ನ ಬಚಾವ್ ಮಾಡಿದ್ದಾರೆ.
ಒಟ್ಟಾರೆಯಾಗಿ ಜೆಸ್ಕಾಂ ಇಲಾಖೆಯ ಇಂಜಿನಿಯರ್ ದುರ್ವರ್ತನೆಗೆ ಸಾರ್ವಜನಿಕರು ಆಕ್ರೋಶವನ್ನ ವ್ಯಕ್ತಪಡಿಸಿದ್ದು ಈತನ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಸ್ಥಳೀಯರು ಮನವಿಯನ್ನು ಮಾಡಿಕೊಂಡಿದ್ದಾರೆ