53 ನೇ ಅಂತರಾಷ್ಟ್ರೀ ಚಲನಚಿತ್ರೋತ್ಸವದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ವಿಮರ್ಶಾತ್ಮಕ ಟೀಕೆಗಳನ್ನು ನೀಡಿ ಬಲಪಂಥೀಯರ ತೀವ್ರ ವಿರೋಧ ಎದುರಿಸಿರುವ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಚಿತ್ರವು ʼಕೊಳಕು ಮತ್ತು ಅಜೆಂಡಾದ ಭಾಗʼ ಎಂದು ಗೋವಾದಲ್ಲಿ ನಡೆದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಲ್ಯಾಪಿಡ್ ಹೇಳಿದ್ದರು. ಅಂತರರಾಷ್ಟ್ರೀಯ ತೀರ್ಪುಗಾರರ ಮುಖ್ಯಸ್ಥರಾದ ಲ್ಯಾಪಿಡ್ ಅವರ ಈ ಹೇಳಿಕೆಯು ದೇಶದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಚಿತ್ರ ನೋಡಿ “ವಿಚಲಿತರಾಗಿದ್ದೇವೆ ಮತ್ತು ಆಘಾತಕ್ಕೊಳಗಾಗಿದ್ದೇವೆ” ಎಂದು ಲ್ಯಾಪಿಡ್ ಹೇಳಿದ್ದರು.
“ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಅಜೆಂಡಾ ಪ್ರಚಾರದ ಚಲನಚಿತ್ರದಂತೆ ನಮಗೆ ತೋರುತ್ತಿದೆ” ಎಂದು ಅವರು ಹೇಳಿದ್ದರು.
ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾದ ಚಿತ್ರವನ್ನು ಸಂವೇದನಾರಹಿತರಾಗಿ ಲ್ಯಾಪಿಡ್ ಟೀಕಿಸಿದ್ದಾರೆಂದು ಬಲಪಂಥೀಯರು ಮುಗಿಬಿದ್ದಿದ್ದರು. ಇದರ ನಂತರ ಇಸ್ರೇಲಿ ಸುದ್ದಿ ವೆಬ್ಸೈಟ್ Ynet ನೊಂದಿಗೆ ಫೋನ್ ಮೂಲಕ ಮಾತನಾಡಿದ ಲ್ಯಾಪಿಡ್, “ಇಲ್ಲಿ ಏನು ನಡೆಯುತ್ತಿದೆ ಇದು ವಿಚಿತ್ರ. ಇದು ಭಾರತದಲ್ಲಿ ನಡೆಯುವ ದೊಡ್ಡ ಸರ್ಕಾರಿ ಉತ್ಸವ. ಈ ಚಿತ್ರವು ಕಾಶ್ಮೀರ ಕುರಿತು ಭಾರತದ ನೀತಿಯನ್ನು ಸಮರ್ಥಿಸುತ್ತದೆ ಮತ್ತು ಅದು ಫ್ಯಾಸಿಸ್ಟ್ ಲಕ್ಷಣಗಳನ್ನು ಹೊಂದಿದೆ ” ಎಂದು ಅವರು ಹೇಳಿದ್ದಾರೆ.
‘ದಿ ಕಾಶ್ಮೀರ ಫೈಲ್ಸ್ ’ಕುರಿತು ಸರಕಾರದ ನಿಲುವಿನ ಬಗ್ಗೆ ತನಗೆ ಚೆನ್ನಾಗಿ ಅರಿವಿತ್ತು ಎಂದು ತಿಳಿಸಿದ ಲ್ಯಾಪಿಡ್, ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗುತ್ತಿತ್ತು. ಅದು ಸರಕಾರದ ಕಾರ್ಯಕ್ರಮವಾಗಿದ್ದು, ಭಾರತದಲ್ಲಿ ಅತ್ಯಂತ ದೊಡ್ಡ ಚಲನಚಿತ್ರೋತ್ಸವವಾಗಿತ್ತು. ಸರಕಾರವು ಚಿತ್ರವನ್ನು ಅಸಾಧಾರಣ ರೀತಿಯಲ್ಲಿ ಉತ್ತೇಜಿಸಿತ್ತು ಎಂದು ಅವರು ಹೇಳಿದ್ದಾರೆ.
ಶೀಘ್ರವೇ ‘ದಿ ಕಾಶ್ಮೀರ ಫೈಲ್ಸ್’ರೀತಿಯ ಇಸ್ರೇಲಿ ಚಿತ್ರವನ್ನು ಸುಲಭವಾಗಿ ಕಲ್ಪಿಸಿಕೊಳ್ಳಬಹುದು ಎಂದ ಲ್ಯಾಪಿಡ್, ‘ನಾನು ಚಿತ್ರವನ್ನು ವೀಕ್ಷಿಸಿದಾಗ ಅದರಲ್ಲಿಯ ಅಪಪ್ರಚಾರ ಮತ್ತು ಫ್ಯಾಸಿಸಂ ಸಂಯೋಜನೆಯು ನನಗೆ ಆಘಾತವುಂಟು ಮಾಡಿತ್ತು ಎಂಬ ವಾಸ್ತವವನ್ನು ಮೀರಿ ಇನ್ನೊಂದೆರಡು ವರ್ಷಗಳಲ್ಲಿ ಇಂತಹುದೇ ಇಸ್ರೇಲಿ ಚಿತ್ರವು ಬರಬಹುದು ಎನ್ನುವುದನ್ನು ಊಹಿಸಿಕೊಳ್ಳದೇ ಇರಲು ನನಗೆ ಸಾಧ್ಯವಾಗಲಿಲ್ಲ ’ಎಂದರು.
ಚಲನಚಿತ್ರೋತ್ಸವವು ‘ಸರಕಾರವನ್ನು ಹೊಗಳುವ ಕಾರ್ಯಕ್ರಮವಾಗಿ ಉಳಿದಿದೆ, ಹೀಗಾಗಿ ಅದನ್ನು ಖಂಡಿಸುವುದರಲ್ಲಿ ಅಪಾಯಗಳಿವೆ ಎನ್ನುವುದು ತನಗೆ ತಿಳಿದಿತ್ತುʼ ಎಂದು ಲ್ಯಾಪಿಡ್ ಹೇಳಿದರು.
“ಇದು ಯಾವಾಗಲೂ ಒಂದೇ ವಿಧಾನವಾಗಿದೆ – ದೇಶದಲ್ಲಿ ವಿದೇಶಿ ಶತ್ರು ಇದ್ದಾನೆ ಮತ್ತು ದೇಶದ ಒಳಗಿನಿಂದ ದೇಶದ್ರೋಹಿಗಳಿದ್ದಾರೆ.” ಎಂಬ ಅಪಪ್ರಚಾರವನ್ನು ಪ್ರತಿಪಾದಿಸುತ್ತದೆ. ಆಡಳಿತಾರೂಢ ಬಿಜೆಪಿಯ ನಾಯಕರು ಪ್ರಚಾರ ಮಾಡಿದ ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಗಿದೆ, ಆದರೆ ಕೋಮು ಭಾವನೆಗಳನ್ನು ಕೆರಳಿಸುವ ಆರೋಪವನ್ನೂ ಎದುರಿಸಿದೆ.
ಚಲನಚಿತ್ರ ನಿರ್ಮಾಪಕರ ಹೇಳಿಕೆಗಳು ಭಾರತದಲ್ಲಿ ಇಸ್ರೇಲ್ನ ರಾಜತಾಂತ್ರಿಕರಿಂದ ತೀವ್ರ ಟೀಕೆಗೆ ಒಳಗಾಗಿವೆ, ರಾಯಭಾರಿ ನೌರ್ ಗಿಲೋನ್ ಅವರು ಲ್ಯಾಪಿಡ್ “ನಾಚಿಕೆಪಡಬೇಕು” ಎಂದಿದ್ದರು ಮಾತ್ರವಲ್ಲ ಲ್ಯಾಪಿಡ್ ಕ್ಷಮೆಯಾಚನೆಗೆ ಒತ್ತಾಯಿಸಿದ್ದರು.