ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ, ಬಳ್ಳಾರಿಯಲ್ಲಿ JSW Steel ಸಂಸ್ಥೆಗೆ 3667 ಎಕರೆ ಭೂಮಿ ಪರಭಾರೆ ಮಾಡುವ ತನ್ನ ಹಿಂದಿನ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆ ತಡೆ ಹಿಡಿದಿದೆ.
ಭೂಮಿ ಮಾರಾಟ ಮಾಡುವ ನಮ್ಮ ಹಿಂದಿನ ನಿರ್ಧಾರವನ್ನು ನಾವು ತಡೆ ಹಿಡಿದಿದ್ದೇವೆ, ಈ ಬಾರಿಯ ಸಭೆಯಲ್ಲಿ ಮಾರಾಟ ಮಾಡುವ ಕುರಿತು ಧೃಡೀಕರಣಕ್ಕೆ ಬಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಏಪ್ರಿಲ್ 26 ರಂದು ಸಜ್ಜನ್ ಜಿಂದಾಲ್ ನೇತೃತ್ವದ ಜೆಎಸ್ಡಬ್ಲ್ಯೂ ಸ್ಟೀಲ್ ಲಿಮಿಟೆಡ್ಗೆ ಬಳ್ಳಾರಿಯಲ್ಲಿ ಮಂಜೂರು ಮಾಡಿದ 3,667 ಎಕರೆ ಭೂಮಿಯನ್ನು ಮಾರಾಟ ಮಾಡಲು ಸಂಪುಟ ಒಪ್ಪಿಗೆ ನೀಡಿತ್ತು. ಬಿಜೆಪಿಯು ವಿರೋಧ ಪಕ್ಷದಲ್ಲಿದ್ದಾಗ ಅದನ್ನು ವಿರೋಧಿಸಿ, ತಾನು ಅಧಿಕಾರಕ್ಕೆ ಬಂದಾಗ ಮಾರಾಟಕ್ಕೆ ಒಪ್ಪಿಗೆ ನೀಡಿರುವುದನ್ನು ಪ್ರತಿಪಕ್ಷಗಳು ಟೀಕೆ ಮಾಡಿತ್ತು. ಸ್ವತಃ ಬಿಜೆಪಿ ಪಕ್ಷದ ಶಾಸಕರೇ ತಮ್ಮ ಸರ್ಕಾರದ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು.
ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿ ಬಿಜೆಪಿ ಶಾಸಕರು ಕೇಂದ್ರ ನಾಯಕತ್ವಕ್ಕೆ ಹಾಗೂ ಬಿ ಎಸ್ ಯಡಿಯೂರಪ್ಪ ಅವರಿಗೆ ಈ ತಿಂಗಳಾರಂಭದಲ್ಲಿ ಪತ್ರವನ್ನೂ ಬರೆದಿದ್ದರು. ಸಾಮಾಜಿಕ ಕಾರ್ಯಕರ್ತ ಕೆ ಪೌಲ್ ಅರುಣಗಿರಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು. ಹೈಕೋರ್ಟ್ ನಿರ್ದೇಶನದ ಆಧಾರದ ಮೇಲೆ ಎಲ್ಲಾ ಕ್ಯಾಬಿನೆಟ್ ಮಂತ್ರಿಗಳಿಗೆ ನೋಟಿಸ್ ನೀಡಲಾಗಿದೆ. ಇದಾದ ಬೆನ್ನಿಗೆ ಸಚಿವ ಸಂಪುಟದ ಈ ನಿರ್ಧಾರ ಹೊರ ಬಂದಿದೆ.
ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಬಾಕಿ ಇರುವುದರಿಂದ ಸಚಿವ ಸಂಪುಟ ಈ ನಿರ್ಧಾರಕ್ಕೆ ಬಂದಿದೆ. ಈ ಪ್ರಕರಣಗಳ ಇತ್ಯರ್ಥದ ಆಧಾರದ ಮೇಲೆ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.
ಕರೋನಾ ನಿರ್ವಹಣೆಯಲ್ಲಿ ವಿಫಲತೆ, ವಿಜಯೇಂದ್ರ ಹಸ್ತಕ್ಷೇಪ ಸೇರಿದಂತೆ ಯಡಿಯೂರಪ್ಪ ವಿರೋಧೀ ಬಣಕ್ಕೆ ಯಡಿಯೂರಪ್ಪ ವಿರುದ್ಧ ಇದ್ದ ದೂರಿಗೆ ಜಿಂದಾಲ್ ಭೂಮಿ ಪರಭಾರೆ ಪ್ರಕರಣವೂ ಸೇರಿಕೊಂಡಿತ್ತು. ಬಿಜೆಪಿ ಶಾಸಕರ ಸಭೆಯಲ್ಲಿ ವಿರೋಧಿ ಬಣದ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸಿ ಅಸಮ್ಮತಿ ವ್ಯಕ್ತಪಡಿಸುವುದಾಗಿಯೂ ಮಾತು ಕೇಳಿ ಬಂದಿತ್ತು.