ಮಹಾನಗರಗಳಲ್ಲಿ ಕೌಶಲ್ಯ ರಹಿತರು ಹೆಚ್ಚಾಗಿಮನೆಗೆಲಸ ಮಾಡಿ ಜೀವನೋಪಾಯ ಕಂಡುಕೊಳ್ಳುವುದು ಸಾಮಾನ್ಯ. ಆದರೆ ಕೌಶಲ್ಯ ರಾಹಿತ್ಯ ಸ್ಥಿತಿಯೊಂದಿಗೆ ಅಂಗವೈಕಲ್ಯವೂ ಜೊತೆಗೂಡಿದರೆ ಏನು ಮಾಡಬಹುದು? ಬೆಂಗಳೂರಿನ ರಾಜಾಜಿನಗರದ ವಾಣಿ ಹುಟ್ಟುತ್ತಲೇ ಅಂಗವೈಕಲ್ಯ ಜೊತೆಯಾಗಿತ್ತು. ಮನೆಗೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳಲು ಸಾಧ್ಯವಿಲ್ಲದ ವಾಣಿ ರಾಜಾಜಿನಗರದಲ್ಲಿ ಪಾನಿಪುರಿ ಗಾಡಿ ಇಡುವ ನಿರ್ಧಾರಕ್ಕೆ ಬಂದರು.
ಹಲವು ಕಾಲೇಜುಗಳಿರುವ ರಾಜಾಜಿನಗರದ ರಸ್ತೆಯೊಂದರಲ್ಲಿ ಅವರ ಮೊಬೈಲ್ ಕ್ಯಾಂಟೀನ್ ಕೆಲವೇ ದಿನಗಳಲ್ಲಿ ಜನಪ್ರಿಯತೆ ಗಳಿಸಿತು. ಅದರಲ್ಲೂ ಕಡಿಮೆ ವೆಚ್ಚದ ಟೇಸ್ಟೀ ಆಹಾರ ವಿದ್ಯಾರ್ಥಿಗಳು ಮತ್ತು ಯುವಜನತೆಯೆಡೆಯಲ್ಲಿ ಬಲುಬೇಗ ಜನಪ್ರಿಯವಾಯಿತು. ಬೆಳಗ್ಗೆ ತೆರೆಯುವ ಅವರ ಕ್ಯಾಂಟೀನ್ ರಾತ್ರಿ 9.30ರವರೆಗೂ ತೆರೆದಿರುತ್ತದೆ.
ಆದರೂ ಅವರು ಬೆಂಗಳೂರು ನಗರಪಾಲಿಕೆಯಿಂದ ನೀಡಲ್ಪಡುವ ಬೀದಿ ಮಾರಾಟಗಾರರ ಪ್ರಮಾಣಪತ್ರವನ್ನು ಹೊಂದಿಲ್ಲ. ಹಾಗಾಗಿ ಅಲ್ಲಿಂದ ತೆರವಾಗುವ ಭೀತಿಯಲ್ಲಿ ಪ್ರತಿದಿನ ಒಂದಿಷ್ಟು ಜನರಿಗೆ ಮೂವತ್ತು ರೂಪಾಯಿಯಂತೆ ನೀಡುವಂತಾಗಿದೆ. “ಬೀದಿ ಬದಿ ವ್ಯಾಪಾರಿಯಾಗಿ ನೋಂದಾಯಿಸಲು ಅಥವಾ ಅಂಗವೈಕಲ್ಯ ಪ್ರಮಾಣಪತ್ರವನ್ನು ಪಡೆಯುವುದು ಹೇಗೆಂದು ನನಗೆ ಗೊತ್ತಿಲ್ಲ” ಎಂದು ಅವರು ಹೇಳುತ್ತಾರೆ. ವಾಣಿಯಂತೆ ತಮ್ಮ ಜೀವನೋಪಾಯಕ್ಕೆ ನ್ಯಾಯಸಮ್ಮತ ಮಾರ್ಗವನ್ನು ಆಯ್ದುಕೊಂಡಿರುವ ದೇಶದಾದ್ಯಂತ ಇರುವ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳ ಬದುಕಿನ ಕಟು ಸತ್ಯ ಇದು.
ಒಂದೆಡೆ ಹೆಗಲೇರಿರುವ ಜವಾಬ್ದಾರಿ, ಇನ್ನೊಂದೆಡೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲೂ ಗೊತ್ತಿರದಂತಹಾ ಅನಕ್ಷರತೆ, ಕೌಶಲ್ಯದ ಕೊರತೆ ಮುಂತಾದ ಕಾರಣಗಳಿಂದ ಬೀದಿ ಬದಿ ವ್ಯಾಪಾರಿಗಳಾಗುವ ಅನಿವಾರ್ಯತೆಗೆ ಒಳಗಾಗುವ ವಾಣಿಯಂತಹ ಲಕ್ಷಾಂತರ ಮಂದಿ ಆಯಕಟ್ಟಿನ ಸ್ಥಳಗಳಲ್ಲಿರುವ ಅಧಿಕಾರಿಗಳಿಂದ, ಸರ್ಕಾರದ ಬೊಕ್ಕಸದಿಂದ ತಿಂಗಳಿಗೆ ಸಾವಿರಾರು ರೂ ಸಂಬಳ ಪಡೆಯುವವರಿಂದಲೇ ಕಿರುಕುಳಕ್ಕೆ, ಅವರ ಲೋಭಕ್ಕೆ ಬಲಿಯಾಗುತ್ತಾರೆ. ಕಷ್ಟಪಟ್ಟು ದುಡಿದ ದುಡ್ಡಿಂದ ಒಂದಿಷ್ಟನ್ನು ಲಂಚಕ್ಕಾಗಿ ಎತ್ತಿಡಲೇಬೇಕಾಗುತ್ತದೆ.
ರಸ್ತೆ ಬದಿ ವ್ಯಾಪಾರಿಗಳ ಕಾಯಿದೆ, 2014, (ಎಸ್.ವಿ. ಆಕ್ಟ್) ಸ್ಥಳೀಯ ಸಂಸ್ಥೆಗಳು (ULB) ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಗುರುತಿನ ಕಾರ್ಡ್ ನೀಡಬೇಕೆಂದು ಕಡ್ಡಾಯಗೊಳಿಸಿದೆ. ಈ ಕಾಯ್ದೆಯು ನಗರದ ಜನಸಂಖ್ಯೆಯ 2.5% ರಷ್ಟು ಮಾತ್ರ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಬೇಕೆಂದೂ ಹೇಳುತ್ತದೆ. ಅದರೆ ಭಾರತದ ಯಾವ ಸ್ಥಳೀಯ ಸಂಸ್ಥೆಯ ಬಳಿಯೂ ಬೀದಿ ಬದಿ ವ್ಯಾಪಾರಿಗಳ ಅಧಿಕೃತ ಅಂಕಿ ಅಂಶ ಇಲ್ಲ.
ಈ ಬಗ್ಗೆ ಮಾತನಾಡಿದ National Association of Street Vendors in Indiaದ ಪ್ರೋಗ್ರಾಂ ಸಂಯೋಜಕರಾದ ವಜ್ಹಿಯಾ ಅಜೀಜ್ ರಿಜ್ವಿ, ದೆಹಲಿ ಸರ್ಕಾರದ ಉದಾಹರಣೆಯನ್ನು ನೀಡುತ್ತಾ” ಕೇವಲ 73,457 ಬೀದಿಬದಿ ವ್ಯಾಪಾರಿಗಳನ್ನು ದೆಹಲಿ ಸರ್ಕಾರ ಗುರುತಿಸಿದೆ. ಆದರೆ ವಾಸ್ತವದಲ್ಲಿ, ದೆಹಲಿಯಲ್ಲಿ 2 ಲಕ್ಷಕ್ಕಿಂತ ಹೆಚ್ಚು ಇಂತಹ ವ್ಯಾಪಾರಿಗಳಿದ್ದಾರೆ” ಎಂದಿದ್ದಾರೆ. ಬೆಂಗಳೂರಿನಲ್ಲಿ, 2017 ರಲ್ಲಿ ಕರ್ನಾಟಕದ ಉನ್ನತ ನ್ಯಾಯಾಲಯದಿಂದ ನಿರ್ದೇಶನಗಳ ಪ್ರಕಾರ ಸಮೀಕ್ಷೆಯನ್ನು ನಡೆಸಲಾಗಿತ್ತು. ಅದಾದನಂತರ, ನಗರಸಭೆ ಗುರುತಿನ ಕಾರ್ಡ್ಗಳನ್ನು ವಿತರಿಸಲಾರಂಭಿಸಿತು. ಈ ಕಾರ್ಡ್ಗಳನ್ನು ಐದು ವರ್ಷಗಳ ನಂತರ ನವೀಕರಿಸಬೇಕಾಗಿದೆ.
ಸ್ಟ್ರೀಟ್ ಮಾರಾಟಗಾರರ ಸಂಖ್ಯೆಯಲ್ಲಿನ ಸ್ಪಷ್ಟತೆಯ ಕೊರತೆ, ಸಮೀಕ್ಷೆಗಳು ಮತ್ತು ನೋಂದಣಿ ಕೈಗೊಳ್ಳಲು ಸರ್ಕಾರಗಳು ವಿಫಲವಾಗಿರುವುದು ಭಾರತ ಆರ್ಥಿಕತೆಯಲ್ಲಿ ಅವರ ಬೃಹತ್ ಪಾತ್ರದ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ. ದಿನಕ್ಕೆ ರೂ 500 ಮತ್ತು ರೂ 10,000 ರ ವರೆಗಿನ ವಹಿವಾಟು ನಡೆಸುತ್ತಾರೆ ರಸ್ತೆ ಬದಿಯ ಮಾರಾಟಗಾರರು. ದೇಶದ 28 ರಾಜ್ಯಗಳ 1,200 ಸ್ಟ್ರೀಟ್ ಮಾರಾಟಗಾರರ ಸಂಘಗಳನ್ನು ಪ್ರತಿನಿಧಿಸುವ ನ್ಯಾಷನಲ್ ಹಾಕರ್ ಫೆಡರೇಶನ್ (ಎನ್ಎಚ್ಎಫ್) ನ ಶಕ್ತಮನ್ ಘೋಷ್ ಅವರು “ಈ ಮಾರಾಟಗಾರರು 80% ರಷ್ಟು ಜನಸಂಖ್ಯೆಯ ಹಸಿವನ್ನು ತಣಿಸುತ್ತಾರೆ ಮತ್ತು ಸಣ್ಣ-ಪ್ರಮಾಣದ ಕೈಗಾರಿಕೆಗಳ ಮಾರಾಟವನ್ನು ಹೆಚ್ವಿಸುತ್ತಾರೆ” ಎಂದು ಹೇಳುತ್ತಾರೆ . ಈ ದೇಶದಲ್ಲಿ ನಾಲ್ಕು ಕೋಟಿ ಬೀದಿ ಬದಿ ವ್ಯಾಪಾರಿಗಳಿರಬಹುದು ಎಂದು ಅಂದಾಜಿಸುವ ಘೋಷ್ ದಿನಕವೊಂದಕ್ಕೆ ಪ್ರತಿ ಮಾರಾಟಗಾರರ ಸರಾಸರಿ ವಹಿವಾಟು ಎರಡು ಸಾವಿರ ರೂಪಾಯಿಗಳಿರುತ್ತವೆ ಎನ್ನುತ್ತಾರೆ. ಇದರರ್ಥ ದಿನವೊಂದಕ್ಕೆ 8,000 ಕೋಟಿ ರೂ. ಆರ್ಥಿಕ ವಹಿವಾಟನ್ನು ಬೀದಿ ಬದಿ ವ್ಯಾಪಾರಿಗಳು ನಡೆಸುತ್ತಾರೆ.
ವ್ಯಾಪಾರಿಗಳ ಮೇಲೆ ಹೇರಲ್ಪಡುವ ಶುಲ್ಕಗಳು
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ನ ವಾಹನಗಳು ಕೆಲಸದ ಮೇಲಿದ್ದಾಗ ಬೀದಿ ಬದಿ ವ್ಯಾಪಾರಿಗಳು “ಗಾಡಿ ಆಯಿ ಗಾಡಿ ಆಯಿ” ಎನ್ನುತ್ತಾ ಓಡುವ ದೃಶ್ಯ ಮುಂಬೈಯಲ್ಲಿ ಅತಿ ಸಾಮಾನ್ಯ. ಅಲ್ಲಿ ಬೀದಿ ಬದಿ ವ್ಯಾಪಾರಿಗಳು ಪ್ರತಿ ದಿನವೂ ಹೊರ ದಬ್ಬಲ್ಪಡುವ ಬೆದರಿಕೆಗಳನ್ನು ಎದುರಿಸುತ್ತಾರೆ.
ಷೋರೂಮ್ಗಳ ಹೊರಗೆ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿಗಳು ಸಹ ‘ಬಾಡಿಗೆ’ ಪಾವತಿಸಬೇಕಾಗುತ್ತದೆ. “ದೊಡ್ಡ ಮಳಿಗೆಗಳ ಹೊರಗೆ ಅಂಗಡಿ ಇಟ್ಟರೂ ನಾವು ಪಾವತಿಸಬೇಕಾಗುತ್ತದೆ. ಪೋಲಿಸ್ ಮತ್ತು ಕಾರ್ಪೊರೇಷನ್ ಸಿಬ್ಬಂದಿಗೆ ‘ಹಫ್ತಾ’ವನ್ನು ಅನ್ನು ಪಾವತಿಸಲೇಬೇಕಾಗಿದೆ” ಎನ್ನುತ್ತಾರೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಸಮೀಪವ ಬಟ್ಟೆ ಅಂಗಡಿಯನ್ನು ನಡೆಸುತ್ತಿರುವ ಉತ್ತರಪ್ರದೇಶದ ಸತೀಶ್ .
ಕೇರಳದ ತಿರುವನಂತಪುರಂನಲ್ಲಿನ ಬೀದಿ ವ್ಯಾಪಾರಿ ಆಗಿರುವ ಶೈಲಜಾ ಇತ್ತೀಚೆಗೆ ರಸ್ತೆ ಅಗಲೀಕರಣ ಮತ್ತು ಹೊಸ ಶೋ ರೂಂ ತೆರೆದ ಕಾರಣದಿಂದಾಗಿ ತಮ್ಮ ಹಳೆಯ ಸ್ಥಳವನ್ನು ಬದಲಿಸಬೇಕಾಗಿ ಬಂತು. “ಸರ್ಕಾರವು ನಾವು ನಿಮನ್ನು ರಕ್ಷಿಸುತ್ತೇವೆ ಎಂದು ಹೇಳಿಕೊಂಡರೂ ನಾವು ಸದಾ ಸ್ಥಳಾಂತರದ ಭೀತಿಯಲ್ಲೇ ಇರುತ್ತೇವೆ” ಎನ್ನುತ್ತಾರೆ ಅವರು. ಜೊತೆಗೆ ಕೆಲವು ಪುರಸಭೆಯ ಮೂಲಕ ರಚಿಸಲಾದ ರಸ್ತೆ ವಿತರಣಾ ವಲಯಗಳು ಸಹ ಸಾಕಷ್ಟು ಸ್ಥಳಾವಕಾಶ ಹೊಂದಿಲ್ಲ. ಉದಾಹರಣೆಗೆ ಕೊಚ್ಚಿ ಕಾರ್ಪೊರೇಶನ್ನ 74 ರಸ್ತೆ ವಿತರಣಾ ವಲಯಗಳು ಕೇವಲ 1,500 ಮಾರಾಟಗಾರರಿಗೆ ಮಾತ್ರ ಅವಕಾಶ ಕಲ್ಪಿಸುವಂತಿದೆ. ಆದರೆ ಕೊಚ್ಚಿ ಯಲ್ಲಿ 3,520 ಬೀದಿ ಬದಿ ವ್ಯಾಪಾರಿಗಳಿದ್ದಾರೆ.
Also read : ಸದಾ ಭೀತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳು ಮತ್ತು ಭಾರತದ ಆರ್ಥಿಕತೆಯಲ್ಲಿ ಅವರ ಪಾತ್ರ- ಭಾಗ 2
“ನಮ್ಮ ವ್ಯಾಪಾರಿಗಳು ಸಾಮಾಜಿಕ ಭದ್ರತೆ, ಕಾನೂನಿನ ಅನುಷ್ಠಾನ, ಶಾಶ್ವತ ಪರಿಹಾರ ಮತ್ತು ಮಾನಿಟರಿಂಗ್ ಅನ್ನು ಬಯಸುತ್ತಾರೆ. ಕಿರುಕುಳ ಮತ್ತು ಹೊರದಬ್ಬಲ್ಪಡುವಿಕೆ ನಿಲ್ಲಬೇಕು ಎಂದು ನಾವು ಬಯಸುತ್ತೇವೆ” ಎನ್ನುವ ಶಕ್ತಮನ್ ಘೋಷ್ ಜುಲೈ 1 ರಂದು ಜಾರಿಗೆ ಬಂದ ಪ್ಲಾಸ್ಟಿಕ್ ನಿಷೇಧವು ಬೀದಿ ಬದಿ ವ್ಯಾಪಾರಿಗಳನ್ನು ಮತ್ತಷ್ಟು ಹೈರಾಣಾಗಿಸಿದೆ ಎನ್ನುತ್ತಾರೆ. ಈ ಬಗ್ಗೆ ಮಾತಾಡುತ್ತಾ ಬೆಂಗಳೂರು ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್ ಬಾಬು “ನಿಷೇಧವು ಒಳ್ಳೆಯದೇ, ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ ಬಟ್ಟೆಯ ಚೀಲಗಳು ಅಥವಾ ಪರ್ಯಾಯಗಳನ್ನು ಸಬ್ಸಿಡಿ ನಮಗೆ ಸರ್ಕಾರವು ನೀಡಬೇಕಾಗಿದೆ ” ಎಂದು ಹೇಳುತ್ತಾರೆ.