ದೇಸಿ ಲಸಿಕೆ ಕೊವ್ಯಾಕ್ಸಿನ್ ಹೆಸರಲ್ಲಿ ಸರ್ಕಾರ ಮತ್ತು ಭಾರತ್ ಬಯೋಟೆಕ್ ನಡುವಿನ ಒಪ್ಪಂದದಲ್ಲಿ ದೊಡ್ಡ ಕಿಕ್ಬ್ಯಾಕ್ ವ್ಯವಹಾರ ನಡೆದಿದ್ದು, ಈ ಕಿಕ್ವ್ಯಾಕ್ ಫಲಾನುಭವಿಗಳು ಯಾರೆಂದು ಊಹಿಸುವುದುಕಷ್ಟವೇನಲ್ಲ.
ಆರ್ಟಿಕಲ್14 ಡಾಟ್ ಕಾಂ ಪ್ರಕಟಿಸಿದ ವರದಿಯಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತ್ ಬಯೋಟೆಕ್ನ ಅಪರಾತಪರಾಗಳನ್ನು ಬಿಚ್ಚಿಡಲಾಗಿದೆ.
ಈ ವರ್ಷಾಂತ್ಯದಲ್ಲಿ ಲಸಿಕಾ ಕಾರ್ಯಕ್ರಮವನ್ನು ಸಂಪೂರ್ಣ ಸಾಧಿಸುವ ಕೇಂದ್ರ ಸರ್ಕಾರದ ಹೇಳಿಕೆ ಹುಸಿಯಾಗಲಿದೆ. ಭಾರತ್ ಬಯೋಟೆಕ್ ಮತ್ತು ಕೇಂದ್ರ ಸರ್ಕಾರದ ನಡುವಿನ ಹಣಕಾಸು ಒಪ್ಪಂದಗಳನ್ನು ರಹಸ್ಯವಾಗಿ ಇಡಲಾಗಿದೆ. ಹೂಡಿಕೆ ದೃಷ್ಟಿಯಿಂದ ಕೊವ್ಯಾಕ್ಸಿನ್ ಅತ್ಯಂತ ಕಡಿಮೆ ವೆಚ್ಚದ್ದು, ಆದರೆ ಮಾರುಕಟ್ಟೆಯಲ್ಲಿ ಅದರ ಬೆಲೆ ಅತಿ ದುಬಾರಿ. ಇದರ ನಡುವೆ ಭಾರತ್ ಬಯೋಟೆಕ್ನ ಉತ್ಪಾದನಾ ಸಾಮರ್ಥ್ಯದ ವಿವರಗಳನ್ನು ಮುಚ್ಚಿಡಲಾಗಿದೆ. ಅಗತ್ಯವಿರುವ ಲಸಿಕೆಗಳನ್ನು ಸರಬರಾಜು ಮಾಡಲು ಅದು ಅಸಮರ್ಥವಾಗಿದೆ. ಹೀಗಾಗಿ ಲಸಿಕಾ ಕಾರ್ಯಕ್ರಮಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಇದಕ್ಕೂ ಮುಖ್ಯವಾಗಿ ಸರ್ಕಾರದಿಂದ ಹೂಡಿಕೆ ನೆರವು ಪಡೆದ ಭಾರತ್ ಬಯೋಟೆಕ್ ಸರ್ಕಾರಕ್ಕೆ ಸಲ್ಲಿಸಬೇಕಾದ ರಾಯಲ್ಟಿಯನ್ನು ಸರಿಯಾಗಿ ಸಲ್ಲಿಸುತ್ತಿಲ್ಲ. ಇದರಿಂದಾಗಿ ತೆರಿಗೆದಾರನ ಹಣ ಪೋಲಾಗುತ್ತಿದೆ.
ಕೋವಿಡ್ ಎರಡನೆ ಅಲೆ ತೀವ್ರವಾಗಿದ್ದ ಸಮಯದಲ್ಲಿ , ಮೇ 28 2021ರಂದು ಕೇಂದ್ರ ಸರ್ಕಾರವು, ವರ್ಷಾಂತ್ಯದಲ್ಲಿ ದೇಶದ ಎಲ್ಲ ವಯಸ್ಕರಿಗೂ ಸಂಪೂರ್ನ ಲಸಿಕೆ (ಎರಡು ಡೋಸ್) ನೀಡುವುದಾಗಿ ಘೋಷಿಸಿತು. ಈ ಘೋಷಣೆಯಾಗಿ 6 ತಿಂಗಳು ಕಳೆದಿದೆ. ಈಗ ದೇಶದಲ್ಲಿ ಶೇ.39.7 ವಯಸ್ಕರು ಮಾತ್ರ ಎರಡೂ ಡೋಸ್ ಪಡೆದಿದ್ದಾರೆ. ಇದರರ್ಥ, ಈ ವರ್ಷಾಂತ್ಯದಲ್ಲಿ ಸರ್ಕಾರ ಗುರಿ ತಲುಪುವುದು ಅಸಾಧ್ಯ. ಇದಕ್ಕೆ ಕಾರಣ ಸರ್ಕಾರವು ಹೈದರಾಬಾದ್ ಮೂಲದ ಚಿಕ್ಕ ಕಂಪನಿ ಭಾರತ್ ಬಯೋಟೆಕ್ ಮೇಲೆ ಅವಲಂಬಿತವಾಗಿದ್ದು. ಅದರ ಸಾಮರ್ಥ್ಯದ ಬಗ್ಗೆ ಗೊತ್ತಿದ್ದೂ, ದೇಸಿ ಲಸಿಕೆ ಮಾಡಿ ಪ್ರಚಾರ ಪಡೆಯುವ ಸ್ವಹಿತಾಸಕ್ತಿಯಲ್ಲಿ ಸರ್ಕಾರ ಭಾರತ್ ಬಯೋಟೆಕ್ಗೆ ಸಾರ್ವಜನಿಕ ಹಣವನ್ನು ಹೂಡಿಕೆ ರೂಪದಲ್ಲಿ ನೀಡಿತು. ಹೀಗೆ ಸಾರ್ವಜನಿಕ ಸಂಪನ್ಮೂಲದಲ್ಲಿ ತಯಾರಾದ ಕೊವ್ಯಾಕ್ಸಿನ್ ವಿಶ್ವದಲ್ಲೇ ಅತಿ ದುಬಾರಿ ಲಸಿಕೆ ಎನಿಸಿದೆ. ಭಾರತದಲ್ಲೇ ಸೀರಂ ಕಂಪನಿ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ಗಿಂತ ಸರಾಸರಿ ಲೆಕ್ಕದಲ್ಲಿ ದುಬಾರಿಯಾಗಿದೆ.
ಜನೆವರಿ 21, 2021ರಂದು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಅನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಾಗಿತು. ಇಲ್ಲಿವರೆಗೆ ನೀಡಕಾದ ಲಸಿಕೆಗಳಲ್ಲಿ ಕೊವ್ಯಾಕ್ಸಿನ್ ಪ್ರಮಾಣ ಶೇ. 11 ಮಾತ್ರ. ಉತ್ಪಾದನೆ ಹೆಚ್ಚಿಸುವಂತೆ ಸರ್ಕಾರ ನಿರ್ಬಂಧ ಹೇರದಿರುವುದೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಭಾರತ್ ಬಯೋಟೆಕ್ಗೆ ರಿಯಾಯಿತಿ
ಸಾರ್ವಜನಿಕ ಸಂಪನ್ಮೂಲದಲ್ಲಿ ಕೊವ್ಯಾಕ್ಸಿನ್ ಉತ್ಪಾದಿಸುವ ಭಾರತ್ ಬಯೋಟೆಕ್ಗೆ ಕೇಂದ್ರ ಸರ್ಕಾರ ಹಲವಾರು ರಿಯಾಯಿತಿಗಳನ್ನು ನೀಡಿದೆ. ಕೊವ್ಯಾಕ್ಸಿನ್ ಮಾರಾಟದ ಒಟ್ಟು ಮಾರಾಟದಲ್ಲಿ ಕೇವಲ ಶೇ. 5ರಷ್ಟು ರಾಯಲ್ಟಿಯನ್ನು ಸರ್ಕಾರಕ್ಕೆ ನೀಡಬೇಕು, ಒಂದು ಬಾರಿಗೆ 5 ಲಕ್ಷ ರೂ. ನೀಡಬೇಕು ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಬಹಿರಂಗಪಡಿಸಲಾಗಿದೆ. ಅಂದರೆ, ಒಂದು ಖಾಸಗಿ ಕಂಪನಿ ಸಾರ್ವಜನಿಕ ಸಂಪನ್ಮೂಲ ಬಳಸಿಕೊಂಡು ಅಗಾಧ ಲಾಭ ಮಾಡಿಕೊಳ್ಳುತ್ತಿದೆ.
ಒಪ್ಪಂದದ ಇತರ ವಿವರಗಳನ್ನುಕೋರಿ ಸಲ್ಲಿಕೆಯಾದ ಆರ್ಟಿಐ ಅರ್ಜಿಗಳಿಗೆ ಕೇಂದ್ರ ಸ್ಪಂದಿಸುತ್ತಿಲ್ಲ, ಕೆಲವೊಮ್ಮೆ ವೈರುಧ್ಯದ ವಿವರಗಳನ್ನು ನೀಡಿದೆ. ಬೇರೆ ಎಲ್ಲ ಸಂದರ್ಭಗಳಲ್ಲಿ ಮಾಡಿದಂತೆ ಈ ವಿಷಯದಲ್ಲೂ ಕೇಂದ್ರ ಸರ್ಕಾರ ಆರ್ಟಿಐ ಕಾಯ್ದೆಯ ಮೂಲ ಆಶಯಗಳನ್ನು ಹತ್ತಿಕ್ಕುತ್ತಿದೆ.
ರಾಯಲ್ಟಿಯಲ್ಲೂ ಖೋತಾ
ಕೊವ್ಯಾಕ್ಸಿನ್ ಲಸಿಕೆಯ ಒಟ್ಟು ಮಾರಾಟದಲ್ಲಿ ಶೇ. 5ರಷ್ಟು ಹಣವನ್ನು ರಾಯಲ್ಟಿಯಾಗಿ ನೀಡಬೇಕು. ಆದರೆ ಅಗಸ್ಟ್ 31, 2021ರವರೆಗೆ ಸರ್ಕಾರಕ್ಕೆ ಸಲ್ಲಿಸಿದ ಒಟ್ಟು ರಾಯಲ್ಟಿ ಕೇವಲ 33.67 ಕೋಟಿ ರೂ. ಮಾತ್ರ. ಕೊವ್ಯಾಕ್ಸಿನ್ ಮಾರಾಟ ಮಾತ್ತು ಆರ್ಡರ್ಗಳ ಕುರಿತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಪ್ರಕಾರ ಈ ರಾಯಲ್ಟಿ ಮೊತ್ತ ತುಂಬ ತುಂಬ ಕಡಿಮೆ.
ರಾಯಲ್ಟಿ ನೀಡುವಿಕೆ, ಉತ್ಪಾದನೆ ಹೆಚ್ಚಿಸುವಿಕೆ ಮತ್ತು ಲಸಿಕೆ ದರ ಮಿರ್ಣಯಿಸುವಿಕೆ-ಹೀಗೆ ಪ್ರತಿ ಘಟ್ಟದಲ್ಲೂ ಭಾರತ್ ಬಯೋಟೆಕ್ ಎಡವಿದೆ ಅಥವಾ ಸರ್ಕಾರದಿಂದ ರಿಯಾಯಿತಿ ಪಡೆದಿದೆ. ಭಾರತ್ ಬಯೋಟೆಕ್ ಮತ್ತು ಸರ್ಕಾರದ ನಡುವೆ ಮಧ್ಯವರ್ತಿ ಕೆಲಸ ಮಾಡಿದವರಿಗೆ ದೊಡ್ಡ ಕಿಕ್ಬ್ಯಾಕ್ ಸಿಕ್ಕಿರುತ್ತದೆ. ಅಂತಿಮವಾಗಿ ಇದರಲ್ಲಿ ದೊಡ್ಡ ಪಾಲು ಯಾರಿಗೆ ಸಲ್ಲುತ್ತದೆ ಎಂಬುದು ರಹಸ್ಯವೇನಲ್ಲ.
ಉಚಿತ ಲಸಿಕೆ ಕೊಟ್ಟಿದ್ದಾರೆಯೇ
ಅಕ್ಟೋಬರ್ 21ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ದೇಶದಲ್ಲಿ 100 ಕೋಟಿ ಡೋಸ್ಗಳನ್ನು ಹಾಕಲಾಗಿದೆ. ಈ ಕುರಿತು ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರಿಗೆ ಉಚಿತವಾಗಿ ಲಸಿಕೆ ನೀಡಿದ್ದೇವೆ ಎಂದು ಘೋಷಿಸಿದರು.
ಆದರೆ ಇದು ಸತ್ಯವಲ್ಲ. ಜನರು ತಾವು ಪಾವತಸಿದ ತೆರಿಗೆ ಹಣದಲ್ಲಿ ಮತ್ತು ಇನ್ನೂ ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ಹಣ ಕೊಟ್ಟು ಲಸಿಕೆ ಪಡೆದಿದ್ದಾರೆ. ಝಾಸಗಿ ಆಸ್ಪತ್ರೆಗಳಲ್ಲಿ ಕೊವ್ಯಾಕ್ಸಿನ್ ಬೆಲೆ 1200 ರಿಂದ 1410 ರೂ. ಇದೆ.
ಐಸಿಎಂಆರ್ ನಡೆ ಸಂಶಯಾತ್ಮಕ
ಮಾರ್ಚ್ 2020ರಲ್ಲಿ ಸರ್ಕಾರಿ ಸಂಸ್ಥೆಯಾದ ಪೂನಾದ ದಿ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಕೊರೋನಾ ವೈರಸ್ನ ಒಂದು ತಂತು ಅನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಯಿತು. ಲಸಿಕೆ ತಯಾರಿಕೆಗೆ ಇದು ಅಗತ್ಯ. ಈ ವೈರಾಲಜಿ ಸಂಸ್ಥೆ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ) ಸಂಸ್ಥೆಯ ಭಾಗ. ಮೇ 2020ರಲ್ಲಿ ಐಸಿಎಂಆರ್ ಲಸಿಕೆ ಸಂಶೋಧನೆ ಮತ್ತು ಇತ್ಪಾದನೆ ಜವಾಬ್ದಾರಿಯನ್ನು ಸಾರ್ವಜನಿಕ ವಲಯದ ಕಂಪನಿಗೆ ನೀಡುವ ಬದಲು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಎಂಬ ಖಾಸಗಿ ಕಂಪನಿಗೆ ನೀಡಿತು. ಪೂನಾದ ವೈರಾಲಜಿ ಸಂಸ್ಥೆ ನಿಷ್ಕ್ರಿಯಗೊಳಿಸಿದ್ದ ಕೊರೋನಾ ವೈರಸ್ ತಂತನ್ನು ಭಾರತ್ ಬಯೋಟೆಕ್ಗೆ ನೀಡಿತು. ಐಸಿಎಂಆರ್ ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತ ಬಂದಿದೆ ನೆನಪಿರಲಿ.
ಸುಪ್ರೀಂಕೋರ್ಟ್ ಸು-ಮೊಟೊ ಆಧಾರದಲ್ಲಿ ಐಸಿಎಂಆರ್ ಅನ್ನು ಪ್ರಶ್ನಿಸುವವರೆಗೂ ಐಸಿಎಂಆರ್ ಭಾರತ್ ಬಯೋಟೆರಕ್ಗೆ ನೀಡಿದ ಹಣದ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಸದ್ಯ 35 ಕೋಟಿ ರೂ. ನೀಡಲಾಗಿದೆ ಎಂದು ಅಗಸ್ಟ್ನಲ್ಲಿ ಹೇಳಿತು.
2021ರ ಜುಲೈನಲ್ಲಿ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಲಸಿಕೆಯ ಬೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್) ಇಬ್ಬರಿಗೂ ಅಂದರೆ ಭಾರತ್ ಬಯೋಟರೆಕ್ ಮತ್ತು ಐಸಿಎಂಆರ್ (ಸರ್ಕಾರ)ಗಳಿವೆ ಸೇರಿವೆ ಎಂದು ಹೇಳಿತು.
ಟಾಟಾ ಇನಸ್ಟಿಟ್ಯೂಟ್ ಆಫ್ ಸೊಷಿಯಲ್ ಸೈನ್ಸ್ನ ಆರ್ಥಿಕ ತಜ್ಞ ಪ್ರೊ. ಎನ್ ರಾಮಕುಮಾರ್ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿದ್ದಾರೆ. ಬೌದ್ಧಿಕ ಆಸ್ತಿ ಹಕ್ಕುಗಳು ಇಬ್ಬರಿಗೂ ಸಮಾನವಾಗಿರುವಾಗ, ಖಾಸಗಿ ಸಂಸ್ಥೆ ಭಾರತ್ ಬಯೋಟೆಕ್ ಶೇ. 95 ಮತ್ತು ಸರ್ಕಾರಿ ಸಂಸ್ಥೆ ಐಸಿಎಂಆರ್ (ಅಂದರೆ ಸರ್ಕಾರ)ಕೇವಲ ಶೇ. 5 ರಾಯಲ್ಟಿ ಪಡೆಯುವುದು ವಿಚುತ್ರವಾಗಿದೆ ಎನ್ನುತ್ತಾರೆ ಅವರು.
ಸರ್ಕಾರ ಮತ್ತು ಭಾರತ್ ಬಯೋಟೆಕ್ ನಡುವಿನ ಒಪ್ಪಂದದ ಅಂಶಗಳು ಬಯಲಾದಾಗ ಮಾತ್ರ ಸಂಪೂರ್ಣ ಸತ್ಯ ಹೊರಬರುತ್ತದೆ. ಸರ್ಕಾರಕ್ಕೆ ಅದು ಬೇಕಾಗಿಲ್ಲ.
ಕೊವ್ಯಾಕ್ಸಿನ್ ಮೇಲೆ ಹೀಗೆ ಕುರುಡಾಗಿ ವಿಶ್ವಾಸವಿಟ್ಟ ಸರ್ಕಾರ ಈ ವರ್ಷಾಂತ್ಯದಲ್ಲಿ ಎಲ್ಲರಿಗೂ ಲಸಿಕೆ ಎಂಬ ಗುರಿ ತಲುಪುವುದು ಅಸಾಧ್ಯ.
ಸಾರ್ವಜನಿಕ ಸಂಪನ್ಮೂಲ, ಸರ್ಕಾರಿ ವೈಜ್ಞಾನಿಕ ಸಂಸ್ಥೆಗಳ ನೆರವು ಪಡೆದ ಭಾರತ್ ಬಯೋಟೆಕ್ ಈಗ ಲಸಿಕೆಗಳನ್ನು ರಫ್ತು ಮಾಡಲು ಸಿದ್ಧವಾಗಿದೆ. ಈಗಾಗಲೇ ಅದು ಕೆನಡಾ ಕಂಪನಿಯಿಂದ 109 ಕೋಟಿ ರೂ. ಹಣ ಪಡೆದಿದೆ.
ಇದು ಮೋದಿ ಸರ್ಕರದ ಲಸಿಕಾ ಬ್ಯುಸಿನೆಸ್.