ADVERTISEMENT
  • Home
  • About Us
  • ಕರ್ನಾಟಕ
Friday, May 16, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಪರಾಧಿಕ ಪ್ರಪಂಚವೂ ಸಾರ್ವಜನಿಕ ಪ್ರಜ್ಞೆಯೂ

ನಾ ದಿವಾಕರ by ನಾ ದಿವಾಕರ
May 8, 2025
in Top Story, ಕರ್ನಾಟಕ, ರಾಜಕೀಯ, ಶೋಧ
0
ಅಪರಾಧಿಕ ಪ್ರಪಂಚವೂ ಸಾರ್ವಜನಿಕ ಪ್ರಜ್ಞೆಯೂ
Share on WhatsAppShare on FacebookShare on Telegram

—-ನಾ ದಿವಾಕರ—–

ADVERTISEMENT

ಕರಾವಳಿಯಿಂದಾಚೆಗೂ ಕರ್ನಾಟಕ ಹಿಂಸಾತ್ಮಕ ಅಪರಾಧಗಳಿಂದ ಮುಕ್ತವಾಗಿಲ್ಲ – ಇದು ವಾಸ್ತವ

ಯಾವುದೇ ಭೂಪ್ರದೇಶವಾದರೂ, ಆಧುನಿಕ ನಾಗರಿಕತೆಯಲ್ಲಿ, ಸಾಮಾಜಿಕ ಜೀವನದಲ್ಲಿ ಸಹಜವಾಗಿ ತಲೆದೋರುವ ಸಮಾಜಘಾತುಕ ಚಟುವಟಿಕೆಗಳು ಮತ್ತು ಘಟನೆಗಳನ್ನು ಆದಷ್ಟೂ ಕಡಿಮೆ ಮಾಡುವ ಬೌದ್ಧಿಕ-ಭೌತಿಕ ಪ್ರಯತ್ನಗಳು ನಡೆಯದೆ ಹೋದಲ್ಲಿ, ಅಂತಹ ಪ್ರದೇಶಗಳು ಕ್ರಮೇಣವಾಗಿ ಅರಾಜಕತೆಯೆಡೆಗೆ ಸಾಗಿಬಿಡುತ್ತವೆ. ವಿಶಾಲ ನೆಲೆಯಲ್ಲಿ ಇದನ್ನು ಕಾನೂನು ಸುವ್ಯವಸ್ಥೆ ಎಂಬ ಆಳ್ವಿಕೆಯ ಪರಿಭಾಷೆಯಲ್ಲಿ ನಿರ್ವಚಿಸಬಹುದಾದರೂ, ಇದು ಇಡೀ ಸಮಾಜವನ್ನು ಕಾಡಬೇಕಾದ ಜಿಜ್ಞಾಸೆ ಮತ್ತು ಎಚ್ಚರಿಸಬೇಕಾದ ಅಂಶ. ಹಿಂಸೆ-ಪ್ರತಿಹಿಂಸೆ ಎನ್ನುವುದು ರಾಜಕೀಯ ಸಿದ್ಧಾಂತವಾದಾಗ, ಒಂದು ಕಣ್ಣಿಗೆ ಒಂದು ಕಣ್ಣು (An eye for An eye) ಎಂಬ ಪ್ರಾಚೀನ ಬರ್ಬರ ಆಲೋಚನೆ ಪ್ರಧಾನವಾದಾಗ, ಈ ಅರಾಜಕತೆಯೂ ಸಹ ಸಾಂಸ್ಥಿಕ ಸ್ವರೂಪವನ್ನೂ, ಸಾಂಘಿಕ ಚೌಕಟ್ಟುಗಳನ್ನೂ ಪಡೆದುಬಿಡುತ್ತದೆ.

ಕರ್ನಾಟಕದ ಕರಾವಳಿ ಪ್ರದೇಶ ಬಹುಶಃ ಈ ಹಂತವನ್ನು ತಲುಪಿದಂತೆ ಕಾಣುತ್ತದೆ.  ಮೂಲತಃ ಶಿಕ್ಷಣ-ಆರೋಗ್ಯ-ವಾಣಿಜ್ಯ ವಲಯಗಳ ಸೌಲಭ್ಯಗಳು ಮತ್ತು ಉನ್ನತ ಸಾಂಸ್ಕೃತಿಕ ಚಿಂತನೆಗಳಿಗಾಗಿ ಪ್ರಸಿದ್ಧಿಯಾಗಿದ್ದ ಒಂದು ಪ್ರದೇಶ ಕರಾವಳಿ-ದಕ್ಷಿಣ ಕನ್ನಡ. ಬಂಡವಾಳಶಾಹಿ ಆರ್ಥಿಕತೆ ಹೆಚ್ಚು ಆವರಿಸಿಕೊಂಡಂತೆಲ್ಲಾ ಸಮಾಜವೂ ಸಹ ಮನ್ವಂತರದ ಹಾದಿಯಲ್ಲಿ, ಮಾನವೀಯ ಅಂತಃಕರಣದ ವಾತಾವರಣಕ್ಕೆ ವ್ಯತಿರಿಕ್ತವಾದ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಂದು ಸಮಾಜ ತನ್ನ ಸಮಗ್ರ ಏಳಿಗೆಯ ಬಗ್ಗೆ ಸಮಷ್ಟಿ ಪ್ರಜ್ಞೆಯೊಂದಿಗೆ, ಸದಾ ಜಾಗೃತಿಯಿಂದ ಇರುವುದೇ ಆದಲ್ಲಿ, ರಾಜಕೀಯ ಭಿನ್ನಮತ, ತಾತ್ವಿಕ ವೈರುಧ್ಯ, ಸೈದ್ಧಾಂತಿಕ ವೈವಿಧ್ಯತೆಗಳ ನಡುವೆಯೂ ಈ ಔನ್ನತ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯ. ಈ ಜಾಗೃತಿ ಮೂಡಿಸುವುದು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿಯುವುದೇ ಹೆಚ್ಚು.

Mangalore, India – October 25, 2015 – Airial of Mangalore, South IndiaMangalore, India – October 25, 2015 – Airial of Mangalore, South India

ಕರಾವಳಿಯ ಕರಾಳ ವಾತಾವರಣ

ಬಹುಶಃ ಕರ್ನಾಟಕದ ಕರಾವಳಿ ಇಂತಹ ಒಂದು ಸಂದಿಗ್ಧತೆಯನ್ನು ಎದುರಿಸುತ್ತಿದೆ. ಇತ್ತೀಚೆಗೆ ಕೊಲೆಯಾದ ಸುಹಾಸ್‌ ಶೆಟ್ಟಿಯ ತಂದೆ ಆಡಿರುವ  ಮನದಾಳದ ಮಾತುಗಳನ್ನು ಆಲಿಸಿದಾಗ, ಕಾನೂನಿನ ದೃಷ್ಟಿಯಲ್ಲಿ ರೌಡಿ ಷೀಟರ್‌ ಆಗಿ ಕಾಣುವ, ಬಿಜೆಪಿ-ಸಂಘಪರಿವಾರದ ದೃಷ್ಟಿಯಲ್ಲಿ ಹಿಂದುತ್ವ ಕಾರ್ಯಕರ್ತನಾಗಿ ಕಾಣುವ, ಸಮಾಜದ ಒಂದು ವರ್ಗದ ದೃಷ್ಟಿಯಲ್ಲಿ ಸಾಮಾಜಿಕ ಪೀಡಕನಾಗಿ ಕಾಣುವ ಸುಹಾಸ್‌ ಶೆಟ್ಟಿ ಮತ್ತು ಆತನಂತೆಯೇ ಕೋಮು ದ್ವೇಷಕ್ಕೆ, ಮತದ್ವೇಷಕ್ಕೆ ಹತ್ಯೆಗೊಳಗಾದ ಅನೇಕ ಯುವಕರು, ಈ ಅರಾಜಕತೆಯ ಭೌತಿಕ ಸಂಕೇತಗಳಾಗಿ ಕಾಣುತ್ತಾರೆ. “ ಎಲ್ಲರಂತೆ ಬದುಕುತ್ತಾನೆಂಬ ಆಸೆ ಈಡೇರಲಿಲ್ಲ ” ಎಂಬ ಸುಹಾಸ್‌ ತಂದೆಯ ಮಾತುಗಳು ಹೀಗೆ ದ್ವೇಷದ ಅಲೆಗೆ ಬಲಿಯಾದ ಪ್ರತಿ ವ್ಯಕ್ತಿಯ ಪೋಷಕರ ಮಾತೂ ಆಗಿರಲು ಸಾಧ್ಯ ?

ಸುಹಾಸ್‌ ಆಗಲೀ, ಫಾಝಿಲ್‌ ಆಗಲೀ ಅಥವಾ ತನ್ನ ನಿತ್ಯ ಬದುಕಿಗಾಗಿ ದುಡಿಯಲು ವಲಸೆ ಬಂದು ಗುಂಪು ಹತ್ಯೆಗೀಡಾದ ಅಶ್ರಫ್‌ ಆಗಲೀ, ಇಂತಹ ಅಂತಃಕರಣದ ಒಡಲ ಮಾತುಗಳ ಹಿಂದಿನ ಅಮಾಯಕ ಯುವಕರಾಗಿಯೇ ಕಾಣುತ್ತಾರೆ. ಸೈದ್ಧಾಂತಿಕ ನೆಲೆಗಳಲ್ಲಿ ನಿಂತು ಹಿಂಸೆ-ಪ್ರತಿಹಿಂಸೆಗೆ ಬಲಿಯಾದ ಅಥವಾ ಮತ್ತಾರದೋ ದ್ವೇ಼ಷಕ್ಕೆ ಬಲಿಯಾದ ಇಂತಹ ಜೀವಗಳನ್ನು ವಿಂಗಡಿಸಿ ನೋಡುವುದರ ಬದಲು, ವರ್ತಮಾನ ಭಾರತದ ಯುವ ಸಮೂಹದ ಒಂದು ಭಾಗವಾಗಿ ನೋಡಿದಾಗ, ನಮ್ಮ ಇಡೀ ಸಮಾಜ ಮತ್ತು ಸಂಸ್ಕೃತಿಯೇ ಎಲ್ಲೋ ಎಡವುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಒಂದು ಜಿಂದಾಬಾದ್‌, ಒಂದು ಜೈಕಾರ, ಒಂದು ಧಿಕ್ಕಾರ ಮನುಷ್ಯನ ಜೀವ ಹರಣಕ್ಕೆ ಸಕಾರಣವಾಗುವುದೇ ಆದರೆ ಅಂತಹ ಸಮಾಜವನ್ನು ಹೇಗೆ ಬಣ್ಣಿಸಬಹುದು ? ಇಲ್ಲಿ ಸಾಂವಿಧಾನಿಕ ವ್ಯಕ್ತಿ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿ ಗುರುತಿಸಬೇಕಿರುವುದು, ಒಂದು ಸಮಾಜವಾಗಿ ನಾವು ಕಳೆದುಕೊಳ್ಳುತ್ತಿರುವ ಮೌಲ್ಯಗಳನ್ನು ಹಾಗೂ ಹಲವು ಕಾರಣಗಳಿಗಾಗಿ ನಿಶ್ಶೇಷವಾಗುತ್ತಿರುವ ಮನುಜಸೂಕ್ಷ್ಮ ಕಾಳಜಿಗಳನ್ನು.

ಕಳೆದ ಮೂರ್ನಾಲ್ಕು ದಶಕಗಳ ಸಾಂಸ್ಕೃತಿಕ ರಾಜಕಾರಣ, ತನ್ನದೇ ಆದ ಸೈದ್ಧಾಂತಿಕ ನೆಲೆಗಳನ್ನು ನಿರ್ವಚಿಸಿಕೊಂಡು ಅದನ್ನೇ ಸಾರ್ವತ್ರೀಕರಿಸುತ್ತಾ, 21ನೇ ಶತಮಾನದ ಯುವ ತಲೆಮಾರಿನ ನಡುವೆ ಸೃಷ್ಟಿಸಿರುವ ಕಂದಕಗಳು, ಕಟ್ಟಿರುವ ಗೋಡೆಗಳು, ಕೆಡವಿ ಹಾಕಿರುವ ಚರಿತ್ರೆಯ ಸ್ಮಾರಕಗಳು, ಇಂದು ಕೇವಲ ಐವತ್ತು ವರ್ಷಗಳ ಹಿಂದೇ ನಾವೇ ಕಂಡ, ಬದುಕಿ ಬಾಳಿದ ಸುಂದರ ಸಮಾಜದ ಅವಶೇಷಗಳ ಸಂಕೇತವಾಗಿ ಕಾಣುತ್ತದೆ. ಹತ್ಯೆಯಾದ ಯುವಕ ರೌಡಿ ಷೀಟರ್‌, ಮತಾಂಧ, ಕೋಮುದ್ವೇಷಿ, ಸಮಾಜಘಾತುಕ, ಅತ್ಯಾಚಾರಿ ಹೀಗೆ ನಿರ್ವಚಿಸುವಾಗ, ಪ್ರಬುದ್ಧ ಸಮಾಜವೊಂದು, ಈ ಅವಲಕ್ಷಣಗಳನ್ನು ಯುವ ಸಮೂಹದ ಕೆಲವೇ ಗುಂಪುಗಳು ರೂಢಿಸಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆಗೆ ಎದುರಾಗಬೇಕಲ್ಲವೇ ?  ಈ ಕಳಂಕ ಹೊತ್ತ ಮಾತ್ರಕ್ಕೆ ಹತ್ಯೆಗೆ ಅರ್ಹವಾಗುವುದಿಲ್ಲ ಅಲ್ಲವೇ

ಮತೀಯ ದ್ವೇಷದ ವಾತಾವರಣದಲ್ಲಿ

ಇದಕ್ಕೆ ಉತ್ತರವನ್ನು ಕಳೆದ ದಶಕಗಳ ದ್ವೇಷ ರಾಜಕಾರಣದಲ್ಲಿ, ಮತೀಯವಾದ-ಕೋಮುವಾದದ ಸಾಂಘಿಕ ನೆಲೆಗಳಲ್ಲಿ, ಈ ಚೌಕಟ್ಟಿನೊಳಗೇ ಪೋಷಿಸಿ ಸಲಹಲ್ಪಡುವ ಮತಾಂಧತೆಯ ವಾತಾವರಣದಲ್ಲಿ ಹಾಗೂ ಸಾಮಾಜಿಕ-ಆರ್ಥಿಕ ನೆಲೆಯ ಅಭದ್ರತೆಯಲ್ಲಿ ಗುರುತಿಸಬಹುದು. ಸಾಮಾನ್ಯವಾಗಿ ಹಿಂದುತ್ವ ಕಾರ್ಯಕರ್ತರು ಹತ್ಯೆಯಾದಾಗಲೆಲ್ಲಾ, ಸಾಮಾಜಿಕ ತಾಣಗಳಲ್ಲಿ ಹಿತವಲಯದಲ್ಲಿರುವ  ಹಿಂದುತ್ವ ನಾಯಕರ ಮಕ್ಕಳೊಂದಿಗೆ ತುಲನಾತ್ಮಕವಾಗಿ ನೋಡಲಾಗುತ್ತದೆ. ಒಂದು ಹಂತದವರೆಗೆ ಇದನ್ನು ಒಪ್ಪಬಹುದು. ಏಕೆಂದರೆ ತಮ್ಮ ರಾಜಕೀಯ ಅಧಿಕಾರಕ್ಕಾಗಿ ಸಮಾಜದ ಮಾನವೀಯ ಬೇರುಗಳನ್ನೂ ಸಡಿಲಗೊಳಿಸಿ, ಅದರೊಳಗಿನ ಸಹಮಾನವರೊಡಗಿನ ಸಹಾನುಭೂತಿಯನ್ನೂ ನಾಶಪಡಿಸುವ ಒಂದು ರಾಜಕೀಯ ಪರಂಪರೆ, ಭಾರತದಲ್ಲಷ್ಟೆ ಅಲ್ಲ, ವಿಶ್ವದಾದ್ಯಂತ ಕಾಣುವ ವಿದ್ಯಮಾನ.

Siddaramaiahವಿರುದ್ಧ ಅವಹೇಳನಕಾರಿ ಮಾತು.. ಕೂಡಲೇ ಆತನ ಅರೆಸ್ಟ್ ಮಾಡಬೇಕು ಎಂದು M Lakshmana ಆಕ್ರೋಶ#pratidhvani

ಇಂತಹ ವಿಷಮ ವಾತಾವರಣದಲ್ಲಿ ಕೇರಳದ ವಲಸೆ ಕಾರ್ಮಿಕ ಅಶ್ರಫ್‌ ವಿನಾಕಾರಣ ಕೊಲೆಗೀಡಾಗುತ್ತಾನೆ. ಸುಹಾಸ್‌ ಶೆಟ್ಟಿ ವೈಯುಕ್ತಿಕ ವೈಷಮ್ಯಗಳಿಗೆ ತುತ್ತಾಗುತ್ತಾನೆ. ಫಾಝಿಲ್‌ ಪ್ರವೀಣ್‌ ನೆಟ್ಟಾರು ಹಂತಕನಾಗಿ, ಪ್ರತೀಕಾರಕ್ಕೆ ಬಲಿಯಾಗುತ್ತಾನೆ. ಮೈಸೂರಿನ ಕಾರ್ತಿಕ್‌ ವ್ಯವಹಾರಗಳ ಕದನಕ್ಕೆ ಬಲಿಯಾಗುತ್ತಾನೆ. ಈತನೂ ರೌಡಿಶೀಟರ್‌ ಎಂದು ಗುರುತಿಸಲ್ಪಟ್ಟವನು ಆದರೆ ʼ ಹಿಂದೂ ʼ ಅಸ್ಮಿತೆ ಪಡೆಯುವುದಿಲ್ಲ. ಫಾಝಿಲ್‌ ಹತ್ಯೆಯ ಪ್ರಕರಣದಲ್ಲಿ ಸುಹಾಸ್‌ ಪ್ರಮುಖ ಆರೋಪಿಯೂ ಆಗಿದ್ದ. ಜಾನುವಾರು ಅಥವಾ ವಿಶೇಷವಾಗಿ ಗೋವು ಸಾಗಾಣಿಕೆಯ ಆರೋಪದ ಮೇಲೆ,  ಗೋವನ್ನು ಪ್ರೀತಿಸುವವರು ಮನುಷ್ಯರನ್ನು ಕೊಲೆ ಮಾಡುವುದು ನವ ಭಾರತದ ವಿಶಿಷ್ಟ ಬೆಳವಣಿಗೆ. ಇದಕ್ಕೆ 2016ರಲ್ಲಿ ಬಿಜೆಪಿ ಮುಖಂಡ ಪ್ರವೀಣ್‌ ಪೂಜಾರಿ ಎಂಬ ಯುವಕನೂ ಹತ್ಯೆಗೀಡಾಗಿದ್ದ. ಮತ್ತೊಂದು ನೆಲೆಯಲ್ಲಿ ಮೀನು ಕದ್ದ ಆರೋಪದ ಮೇಲೆ ಒಂದು ಗುಂಪು ವ್ಯಾಪಾರಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸುತ್ತದೆ. ದಾವಣಗೆರೆ ಜಿಲ್ಲೆಯ ತಾವರೆಕೆರೆಯಲ್ಲಿ ಮುಸ್ಲಿಂ ಮಹಿಳೆಯ ಮೇಲೆ ಅಕ್ರಮ ಸಂಬಂಧದ ಆರೋಪದ ಮೇಲೆ ಅಕೆಯ ಕುಟುಂಬ ಸದಸ್ಯರೇ ಹಲ್ಲೆ ನಡೆಸುತ್ತಾರೆ. ಇಂತಹುದೇ ಘಟನೆಯಲ್ಲಿ, ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ, ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ.

ಇಂತಹ ಘಟನೆಗಳು ಹೆಚ್ಚಾಗುತ್ತಿರುವಂತೆಲ್ಲಾ ಸಾರ್ವಜನಿಕ-ಸಾಮಾಜಿಕ ತಾಣದ ಚರ್ಚೆಗಳಲ್ಲಿ ಕರ್ನಾಟಕ ಬಿಹಾರ ಆಗುತ್ತಿದೆ, ಉತ್ತರಪ್ರದೇಶ ಆಗುತ್ತಿದೆ ಎಂಬ ಕೂಗು ಸಹ ಕೇಳಿಬರುತ್ತದೆ. ಇದು ನಮ್ಮನ್ನು ನಾವೇ ಮೌಲಿಕವಾಗಿ ಪ್ರತ್ಯೇಕಿಸಿಕೊಳ್ಳುವ ಒಂದು ಪ್ರವೃತ್ತಿಯಷ್ಟೆ ಮೊದಲು ನಾವು ಹೀಗಿರಲಿಲ್ಲವೇ ಅಥವಾ ಅಥವಾ ಆ ಎರಡೂ ರಾಜ್ಯಗಳು ಹುಟ್ಟುತ್ತಲೇ ಈ ಅವಲಕ್ಷಣಗಳನ್ನು ಪಡೆದಿದ್ದವೇ ಎಂಬ ಪ್ರಶ್ನೆಗೆ ನಾವು ನಿರುತ್ತರರಾಗುತ್ತೇವೆ. ಅಂದರೆ ನಾವು ನಮ್ಮ ಸಮಾಜ ಸಾಗುತ್ತಿರುವ ಹಾದಿಯನ್ನು ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ವಸ್ತುನಿಷ್ಠವಾಗಿ ವಿಶ್ಲೇಷಿಸಲು ವಿಫಲರಾಗಿದ್ದೇವೆ. ಹತ್ಯೆಗೊಳಗಾದ ಅಥವಾ ಹತ್ಯೆ ಮಾಡಿದ, ಹಲ್ಲೆ ಮಾಡಿದ  ವ್ಯಕ್ತಿಯ/ಗುಂಪಿನ ಜಾತಿ ಅಥವಾ ಮತದ ಅಸ್ಮಿತೆಗಳ ಆಧಾರದಲ್ಲೇ ಈ ಸಮಾಜಘಾತುಕ ಬೆಳವಣಿಗೆಗಳನ್ನು ನೋಡುವ ಒಂದು ವಿಧಾನವನ್ನೂ ಆಧುನಿಕ ಭಾರತ ಅಳವಡಿಸಿಕೊಂಡಿದೆ. ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ  ಜನಸಮೂಹಗಳನ್ನು ಪ್ರತಿನಿಧಿಸುವ ಸಾಂಸ್ಥಿಕ ನೆಲೆಗಳಲ್ಲೂ ಇಂತಹ ಘಟನೆಗಳನ್ನು ನೇರವಾಗಿ ಖಂಡಿಸಲಾಗುವುದಿಲ್ಲ.

ಸಮಾಜ ಪರಿವರ್ತನೆಯ ಹಾದಿಗಳು

ಒಂದು ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಮೂರು ವಲಯಗಳು ಸಕ್ರಿಯವಾಗಿರುತ್ತವೆ. ರಾಜಕೀಯ ಮತ್ತು ಅಧಿಕಾರ ರಾಜಕಾರಣದ ನೆಲೆಗಳು ಸಮಾಜಕ್ಕೆ ಒಂದು ಆರೋಗ್ಯಕರ ಸಂದೇಶವನ್ನು ರವಾನಿಸುವ ನೈತಿಕ-ಸಾಂವಿಧಾನಿಕ ಜವಾಬ್ದಾರಿ ಹೊಂದಿರುತ್ತವೆ. ವಿಶಾಲ ಸಮಾಜವನ್ನು, ತಳಮಟ್ಟದಲ್ಲೂ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ ಶಕ್ತಿ ಮತ್ತು ಸಂಪನ್ಮೂಲಗಳು ಇಲ್ಲಿರುತ್ತವೆ. ಹಾಗಾಗಿ ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳು,  ವಿಶೇಷವಾಗಿ ಚುನಾಯಿತ ಪ್ರತಿನಿಧಿಗಳು ಬಳಸುವ ಭಾಷೆ, ರಾಜಕೀಯ ಪರಿಭಾಷೆ ಮತ್ತು ಅನುಸರಿಸುವ ಮಾರ್ಗಗಳು ಸಮಾಜವನ್ನು ನಿರ್ದೇಶಿಸುತ್ತವೆ. ನವ ಭಾರತದ ಸಮಸ್ಯೆ ಎಂದರೆ ಈ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯಿಂದ ವಿಮುಖರಾಗಿದ್ದಾರೆ. ಸೂಕ್ಷ್ಮ ಸಂವೇದನೆಯಿಲ್ಲದ ಭಾಷೆಯನ್ನು ಬಳಸುವುದರಲ್ಲಿ ಹಿರಿಯ ತಲೆಮಾರಿನ ನಾಯಕರೂ ಕಾಣುವುದು ಅಪೇಕ್ಷಣೀಯವಲ್ಲ.

ಉದಾಹರಣೆಗೆ ʼ ಗುಂಡಿಟ್ಟು ಕೊಲ್ಲಿ ʼ ಎಂಬ ಸಂದೇಶ. ಎಂತಹುದೇ ಅಪರಾಧ ಮಾಡಿದ್ದರೂ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲುವ ಅಧಿಕಾರವನ್ನು ಸಂವಿಧಾನ ಯಾರಿಗೂ ಕೊಟ್ಟಿಲ್ಲ. ಕಾನೂನು ಚೌಕಟ್ಟಿನೊಳಗೆ ಅತ್ಯುಗ್ರ ಶಿಕ್ಷೆ ಎಂದರೆ ಮರಣದಂಡನೆ. ಇದೂ ಸಹ ಉನ್ನತ ನ್ಯಾಯಾಂಗವು ನಿರ್ಧರಿಸಬೇಕಾದ ವಿಷಯ. ಹೀಗಿರುವಾಗ ಭಾವಾವೇಶದಿಂದ ವಿರೋಧಿಗಳನ್ನು, ಆರೋಪಿಗಳನ್ನು, ಸಮಾಜಘಾತುಕರನ್ನು ʼ ಗುಂಡಿಟ್ಟು ಕೊಲ್ಲಬೇಕು ʼ ಎಂದು ಹೇಳುವುದು, ಸಮಾಜವನ್ನು ದಿಕ್ಕುತಪ್ಪಿಸುತ್ತದೆ. ವಿಪರ್ಯಾಸ ಎಂದರೆ ಇತ್ತೀಚಿನ ರಾಜಕೀಯ ಚರ್ಚೆ-ಸಂಕಥಗಳಲ್ಲಿ ಈ ರೀತಿ ಹಿಂಸೆಯನ್ನು ವೈಭವೀಕರಿಸುವ ಮಾತುಗಳು ಹೆಚ್ಚಾಗಿರುವುದಷ್ಟೇ ಅಲ್ಲದೆ, ಸಮಾಜದ ಒಂದು ವರ್ಗದ ಸಮ್ಮತಿಯನ್ನೂ ಪಡೆದುಕೊಂಡಿದೆ. ಇದು ಸಮಾಜಕ್ಕೆ, ವಿಶೇಷವಾಗಿ ಭಾವನಾತ್ಮಕ ರಾಜಕಾರಣದಲ್ಲಿ ಉನ್ಮತ್ತರಾಗಿರುವ ಯುವ ತಲೆಮಾರಿಗೆ, ಯಾವ ಸಂದೇಶ ನೀಡಲು ಸಾಧ್ಯ ? “ ನಿಮ್ಮ ವಿರೋಧಿಗಳನ್ನು ಅಥವಾ ನೀವು ಒಪ್ಪದವರನ್ನು ಹತ್ಯೆ ಮಾಡುವುದೂ ತಪ್ಪಲ್ಲ ” ಎಂಬ ವಿಕೃತ ಸಂದೇಶ ರವಾನಿಸುವುದಿಲ್ಲವೇ ? ಸಮಾಜಘಾತುಕ ಪ್ರವೃತ್ತಿಯ ಉಗಮವಾಗುವುದು ಇಲ್ಲಿ.

ಈ ಪ್ರಜ್ಞೆ ಮತ್ತು ಅರಿವು ರಾಜಕೀಯ ನಾಯಕರಲ್ಲಿ ಇಲ್ಲದೆ ಹೋದಾಗ ಸಮಾಜಘಾತುಕತೆಯೂ ಸಹ ಸಾಂಸ್ಥಿಕ ರೂಪ ಪಡೆದುಕೊಳ್ಳುತ್ತದೆ. ಕಳೆದ ಹಲವು ದಶಕಗಳಲ್ಲಿ ತಳಮಟ್ಟದ ಸಮಾಜವನ್ನೂ ಆವರಿಸಿರುವ          ʼ ಗುಂಪು ಥಳಿತ ʼ ಎಂಬ ವಿದ್ಯಮಾನವನ್ನು ಈ ನೆಲೆಯಲ್ಲಿ ನೋಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಇದು ರಾಜಕೀಯ ಚೌಕಟ್ಟುಗಳನ್ನೂ ದಾಟಿ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜಾತೀಯ-ಧಾರ್ಮಿಕ ನೆಲೆಗಳಲ್ಲೂ ಸಾಂಸ್ಥೀಕರಣಕ್ಕೊಳಗಾಗಿರುವುದು ಸಮಾಜದಲ್ಲಿ ಅಪರಾಧಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ. ಇದೊಂದು ಸಾಮಾಜಿಕ ಪಿಡುಗು (Menace) ̤ ಈ ಪಿಡುಗನ್ನು ಹೋಗಲಾಡಿಸುವ ಜವಾಬ್ದಾರಿ ಪ್ರಜಾಪ್ರಭುತ್ವ ಆಳ್ವಿಕೆಯ ವಾರಸುದಾರರಾದ ರಾಜಕಾರಣಿಗಳಿಗಲ್ಲವೇ ? ಈ ಅಂಶವನ್ನು ಪರಿಶೀಲಿಸುವ ಕನಿಷ್ಠ ವ್ಯವಧಾನವನ್ನೂ ಸಹ ರಾಜಕೀಯ ಪಕ್ಷಗಳಲ್ಲಿ ಕಾಣಲಾಗುವುದಿಲ್ಲ.

ಸಮಾಜ ಸಂಸ್ಕೃತಿ ಮತ್ತು ಔನ್ನತ್ಯ

ಸಮಾಜವನ್ನು ನಿರ್ದೇಶಿಸುವ ಮತ್ತೊಂದು ಕ್ಷೇತ್ರ ಎಂದರೆ ನಾಗರಿಕ ಸಮಾಜ (Civil Society) ಮತ್ತು ಅದನ್ನು ಪ್ರತಿನಿಧಿಸುವ ಸಂಘಟನೆಗಳು, ಸಂಸ್ಥೆಗಳು, ಸಾಂಸ್ಕೃತಿಕ ವೇದಿಕೆಗಳು. ವಿಶೇಷವಾಗಿ ಸಾಂಸ್ಕೃತಿಕ-ಧಾರ್ಮಿಕ ನೆಲೆಯಲ್ಲಿ ಸಮಾಜವನ್ನು ತಿದ್ದುವಂತಹ ಬೌದ್ಧಿಕ ಶಕ್ತಿ ಮತ್ತು ಸಂಪನ್ಮೂಲಗಳು ಇರುತ್ತವೆ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ ವ್ಯಾಪ್ತಿಯನ್ನು ಹೊಂದಿರುತ್ತದೆ. ಆದರೆ ಸಮಕಾಲೀನ ಭಾರತದಲ್ಲಿ ಈ ಸಾಂಸ್ಕೃತಿಕ ನೆಲೆಗಳಲ್ಲೇ, ಹಿಂಸೆ-ಪ್ರತಿ ಹಿಂಸೆಯನ್ನು ಪ್ರಚೋದಿಸುವ ಶಕ್ತಿಗಳು ಅನಿರ್ಬಂಧಿತವಾಗಿ ಹುಟ್ಟಿಕೊಳ್ಳುತ್ತಿವೆ, ಬೆಳೆಯುತ್ತಿವೆ. ಮತೀಯ ದ್ವೇಷ, ಜಾತಿ ಅಹಮಿಕೆ ಮತ್ತು ಮೇಲರಿಮೆಯ ಮನಸ್ಥಿತಿ ನಿರಂತರವಾಗಿ ಪ್ರತಿಯೊಂದು ಹಂತದಲ್ಲೂ ʼ ಅನ್ಯರನ್ನು ʼ ಸೃಷ್ಟಿಸುತ್ತಲೇ ಇದ್ದು, ಈ   ʼ ಅನ್ಯ ʼರು ದಾಳಿಗೊಳಗಾಗುತ್ತಲೇ ಇರುತ್ತಾರೆ. ಮತದ್ವೇಷ ಮತ್ತು ಮತಾಂಧತೆ ಎಲ್ಲ ಮತಗಳಲ್ಲೂ-ಧಾರ್ಮಿಕ ನೆಲೆಗಳಲ್ಲೂ ಸಾಂಸ್ಥೀಕರಣಕ್ಕೊಳಗಾಗಿರುವುದು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಈ ಸಾಂಸ್ಕೃತಿಕ-ಧಾರ್ಮಿಕ ನೆಲೆಗಳಲ್ಲಿ ತಮ್ಮ ಅಸ್ತಿತ್ವ, ಅಸ್ಮಿತೆ ಮತ್ತು ಸಾಂತ್ವನದ ನೆಲೆಗಳನ್ನು ಕಂಡುಕೊಳ್ಳುವ ಸಾಮಾನ್ಯ ಜನತೆ ಎಷ್ಟೇ ಶಾಂತಿಪ್ರಿಯರಾಗಿದ್ದರೂ, ಹಿಂಸೆ-ಪ್ರತಿಹಿಂಸೆಯ ಮನೋಭಾವವನ್ನು ಸಮಾಜದಿಂದ ತೊಡೆದುಹಾಕುವ ಮಾರ್ಗದರ್ಶನ ಪಡೆಯುತ್ತಿಲ್ಲ. ಇಲ್ಲಿ ಸೃಷ್ಟಿಯಾಗುವ ಸಮಾಜಘಾತುಕತೆಗೆ ನಿರ್ದಿಷ್ಟ ಮತದ ಅಥವಾ ಧರ್ಮ-ಜಾತಿ ಹೊದಿಕೆಯನ್ನು ಹೊದಿಸಿ, ಸ್ವೀಕೃತಗೊಳಿಸಲಾಗುತ್ತದೆ. ಜೀವ ಹಂತಕ ಚಟುವಟಿಕೆಗಳನ್ನೂ ಸಮ್ಮತಿಸುವ ಒಂದು ಸಮಾಜ ನಮ್ಮೊಳಗೇ ಸೃಷ್ಟಿಯಾಗಿದೆ ಎಂದರೆ ಅದರ ಹಿಂದೆ ಈ ಸಾಂಸ್ಥೀಕರಣ ಮತ್ತು ಸಾಂಸ್ಥಿಕ ರಾಜಕೀಯೀಕರಣವನ್ನು ಮುಖ್ಯವಾಗಿ ಗಮನಿಸಬೇಕಿದೆ. ಎಲ್ಲ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವ ಆಧ್ಯಾತ್ಮಿಕ ನೆಲೆಗಳು ಸಮಾಜದ ಉದ್ದಗಲವನ್ನೂ ಆವರಿಸಿದ್ದರೂ, ಈ ಸಮಾಜಘಾತುಕ ಮನಸ್ಥಿತಿಯನ್ನು ಯುವ ಮನಸ್ಸುಗಳಿಂದ ದೂರಮಾಡುವುದರಲ್ಲಿ ವಿಫಲವಾಗುತ್ತಿವೆ. ಇಲ್ಲಿ ಸ್ವಹಿತಾಸಕ್ತಿ ಒಂದು ಕಾರಣವಾದರೆ, ಇಚ್ಛಾಶಕ್ತಿಯ ಕೊರತೆ ಮತ್ತೊಂದು ಕಾರಣವಾಗುತ್ತದೆ. ಅಥವಾ ತಟಸ್ಥ ಧೋರಣೆ ಮುಖ್ಯವಾಗುತ್ತದೆ.

ಸಮಾಜವನ್ನು ನಿರ್ದೇಶಿಸುವ ಮೂರನೆಯ ವಲಯ ಎಂದರೆ ಇದೇ ನಾಗರಿಕ ಸಮಾಜದ ಗಣ್ಯ ವರ್ಗ ( Elite Class). ಆಧುನಿಕ ಬಂಡವಾಳಶಾಹಿ ಅಭಿವೃದ್ಧಿಯ ಪ್ರಧಾನ ಫಲಾನುಭವಿಗಳಾಗಿ, ಹಿತವಲಯಗಳಲ್ಲಿರುವ ಈ ಬೃಹತ್‌ ಸಮಾಜ ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಂಡಿರುವುದಷ್ಟೇ ಅಲ್ಲದೆ, ನಿರ್ಲಿಪ್ತ ಮೌನದ ಮೂಲಕ, ಸಮಾಜದ ಎಲ್ಲ ಸ್ತರಗಳಲ್ಲೂ ವ್ಯಾಪಿಸುತ್ತಿರುವ ಸಮಾಜಘಾತುಕತೆ ಮತ್ತು ಹಿಂಸೆ-ಪ್ರತಿಹಿಂಸೆಯ ಮನಸ್ಥಿತಿಯನ್ನು ಸಮ್ಮತಿಸುತ್ತಿದೆ. ಈ ವರ್ಗದ ʼ ಮೌನ ಸಂಸ್ಕೃತಿ ʼ ಹೇಗೆ ಸಾಮಾಜಿಕ-ಸಾಂಸ್ಕೃತಿಕ  ಉನ್ನತಿಯ ಹಾದಿಗೆ ತೊಡಕಗಾಗುತ್ತದೆ ಎನ್ನುವುದನ್ನು ಪಾಲೋ ಫ್ರೇರಿ ತಮ್ಮ Pedagogy of the Oppressed ಕೃತಿಯಲ್ಲಿ                    “ ದಮನಿತ ಜನರ ಅಭಿವ್ಯಕ್ತಿಯನ್ನು ತಡೆಗಟ್ಟುವುದು, ತನ್ಮೂಲಕ ಯಥಾಸ್ಥಿತಿಯನ್ನು ಪ್ರಶ್ನಿಸುವ ಅವಕಾಶಗಳನ್ನು ಕಸಿದುಕೊಳ್ಳುವುದರಿಂದ, ಸಮಾಜದ ಪ್ರಬಲ ಶಕ್ತಿಗಳು ದಮನಿತರು ಏನೂ ಅರಿಯದವರು, ಹಾಗಾಗಿ ಅಧಿಕಾರಸ್ಥರನ್ನು ಪ್ರಶ್ನಿಸುವಂತಿಲ್ಲ  ಎಂಬ ಅಭಿಪ್ರಾಯವನ್ನು ಸೃಷ್ಟಿಸುತ್ತವೆ. ಸಾಮಾಜಿಕ ಪರಿವರ್ತನೆ ಮತ್ತು ವಿಮೋಚನೆಗೆ ಈ ಸಂಸ್ಕೃತಿಯನ್ನು ಭಂಜಿಸುವುದು ಮುಖ್ಯವಾಗುತ್ತದೆ ” ಎಂದು ವಿವರಿಸುತ್ತಾರೆ.

ಸಾಮಾಜಿಕವಾಗಿ-ಸಾಂಸ್ಕೃತಿಕವಾಗಿ ಉನ್ನತಿ ಪಡೆದಿರುವ ಸಮಾಜವೊಂದು ಇದೇ ಮೌನ ಸಂಸ್ಕೃತಿಯನ್ನು ತನ್ನದೇ ನಿಯಮವನ್ನಾಗಿಸಿಕೊಂಡಾಗಲೂ ಇದೇ ಪರಿಣಾಮ ಉಂಟಾಗುತ್ತದೆ.  “ಅಪರಾಧಿಗಳು ಹುಟ್ಟುವುದಿಲ್ಲ ಅವರನ್ನು ರೂಪಿಸಲಾಗುತ್ತದೆ” ಎಂಬ ನಾಣ್ಣುಡಿಯನ್ನು ಮರುನಿರ್ವಚನೆಗೊಳಪಡಿಸಿದಾಗ ಭಾರತದಲ್ಲಿ, ಇತ್ತೀಚೆಗೆ ಕರ್ನಾಟಕದಲ್ಲೂ ಸಹ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗುರುತಿಸಲು ಸಾಧ್ಯ. ನಾಗರಿಕತೆಯನ್ನು ಪ್ರತಿನಿಧಿಸುವ ನಾಗರಿಕ ಸಮಾಜದ (Civil Society) ಅಕ್ಷರಲೋಕ, ಅಭಿವ್ಯಕ್ತಿ ಮಾಧ್ಯಮಗಳು ಈ ರೀತಿಯ ಮೌನ ಸಂಸ್ಕೃತಿಯನ್ನು ತನ್ನದಾಗಿಸಿಕೊಂಡಾಗ, ಸಮಾಜಘಾತುಕತೆ ಸುಲಭವಾಗಿ ಯುವ ಸಮೂಹವನ್ನು ಆವರಿಸುತ್ತದೆ. ಇದಕ್ಕೆ ಬಲಿಯಾಗುವವರು ಸುಹಾಸ್‌ ಶೆಟ್ಟಿ, ಫಾಝಿಲ್‌, ನೆಟ್ಟಾರು ಮುಂತಾದ ಯುವಕರು. ಈ ವಿಷವರ್ತುಲದಿಂದ ಯುವ ಸಮೂಹವನ್ನು ಹೊರತರುವ ಪ್ರಯತ್ನಗಳನ್ನು ಯಾರು                        ಮಾಡಬೇಕು ?

ಸಮಾಜದ ಉತ್ತರದಾಯಿತ್ವ-ಜವಾಬ್ದಾರಿ

ನಮ್ಮ ಇಡೀ ಸಮಾಜವೇ ಈ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳು, ಸುದ್ದಿಮನೆಗಳು, ಸಾಮಾಜಿಕ ತಾಣಗಳು, ಸಿನೆಮಾಗಳು ಮತ್ತು ಐಪಿಎಲ್‌ನಂತಹ ಮನರಂಜನೆಯ ಕ್ರೀಡೆಗಳಲ್ಲೂ ಬಳಸಲಾಗುತ್ತಿರುವ ಪರಿಭಾಷೆ ಹಿಂಸೆ ಮತ್ತು ಕ್ರೌರ್ಯವನ್ನು ವೈಭವೀಕರಿಸುವಂತೆಯೇ ಇರುವುದು ವರ್ತಮಾನದ ದುರಂತಗಳಲ್ಲೊಂದು. ಹಾಗಾಗಿಯೇ ಹೊಡಿ-ಬಡಿ ಸಂಸ್ಕೃತಿ, ಸಾಂಸ್ಥೀಕರಣಗೊಂಡು ʼ ಗುಂಪುಥಳಿತ ʼ ಮತ್ತು ವ್ಯಕ್ತಿ ದ್ವೇಷದ ಹತ್ಯೆಗಳು ಹೆಚ್ಚಾಗುತ್ತಿವೆ. ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿ ಈ ಪಿಡುಗನ್ನು ಹೋಗಲಾಡಿಸಲು ಅಡ್ಡಿಯಾಗುತ್ತದೆ. ಜಾತಿ-ಮತಗಳ ಅಸ್ಮಿತೆಗಳನ್ನೇ ಸಾಮಾಜಿಕ ಅಸ್ತಿತ್ವವನ್ನಾಗಿ ಪರಿವರ್ತಿಸಿರುವ ಸಾಂಸ್ಕೃತಿಕ ನೆಲೆಗಳು ಅದರೊಳಗೇ ಸೃಷ್ಟಿಯಾಗುವ ಸಮಾಜಘಾತುಕತೆಯನ್ನು ಸಹನೀಯಗೊಳಿಸಿಬಿಡುತ್ತವೆ. ಹಾಗಾದರೆ ಇದನ್ನು ಸರಿಪಡಿಸುವ ಜವಾಬ್ದಾರಿ ಯಾರದು ? ತಮ್ಮದಲ್ಲದ ಗುರಿಯನ್ನು ಸಾಧಿಸಲು ಜೀವ ತೆರಲು ಮುಂದಾಗುವ ಯುವ ತಲೆಮಾರಿಗೆ ಶಾಂತಿ-ಅಹಿಂಸೆ-ಸಹಬಾಳ್ವೆ-ಸಹನಶೀಲತೆ ಮತ್ತು ಸೂಕ್ಷ್ಮ ಸಂವೇದನೆಗಳನ್ನು ಪರಿಚಯಿಸುವ ಜವಾಬ್ದಾರಿ ಯಾರದು ?

ಈ ಪ್ರಶ್ನೆ ಕೇವಲ ಅಧಿಕಾರ ರಾಜಕಾರಣವನ್ನಷ್ಟೇ ಅಲ್ಲದೆ, ಇಡೀ ಸಮಾಜವನ್ನು ಕಾಡಬೇಕಿದೆ. ಇದಕ್ಕೆ ಉತ್ತರವನ್ನೂ ಕಂಡುಕೊಳ್ಳಬೇಕಿದೆ. ಕರ್ನಾಟಕ ಬಿಹಾರ/ಉತ್ತರ ಪ್ರದೇಶವಾಗುತ್ತಿದೆ ಎಂದು ಹಲುಬುವ ಮೂಲಕ ಆ ರಾಜ್ಯದಲ್ಲಿರುವ ಮಾನವೀಯ ನೆಲೆಗಳನ್ನು ಅಪಮಾನಗೊಳಿಸುವ ಬದಲು, ನಮ್ಮ ಸಮಾಜವೇ ವ್ಯತಿರಿಕ್ತ ಹಾದಿಯಲ್ಲಿ ಸಾಗುತ್ತಿರುವುದೇಕೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ವರ್ತಮಾನದ ತುರ್ತು ಮತ್ತು ಜವಾಬ್ದಾರಿ. ಸಾಂಘಿಕವಾಗಿ ಪ್ರಗತಿಪರ-ಎಡಪಂಥೀಯ ಸಂಘಟನೆಗಳು, ಸಾಂಸ್ಥಿಕವಾಗಿ ಸಾಂಸ್ಕೃತಿಕ ವೇದಿಕೆ ಮತ್ತು ಸಂವಹನ ಮಾಧ್ಯಮಗಳು ಈ ನೊಗವನ್ನು ಹೊರಬೇಕಿದೆ. ಬದಲಾವಣೆ ಅನಿವಾರ್ಯ ಆದರೆ ನಕಾರಾತ್ಮಕ ಬದಲಾವಣೆ ವಿನಾಶದತ್ತ ಕೊಂಡೊಯ್ಯುತ್ತದೆ. ಈ ಅರಿವು ಮತ್ತು ಪ್ರಜ್ಞೆ ಸಾಮಾಜಿಕ-ರಾಜಕೀಯ ನೆಲೆಗಳಲ್ಲಿ ಮೂಡಿದರೆ ಸಾರ್ಥಕವಾದೀತು.

-೦-೦-೦-

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ರಾಜ್ಯದ 17 ಡ್ಯಾಂಗಳಿಗೆ ಭದ್ರತೆ.. ಬೆಳಗ್ಗೆ ಎಲ್ಲಾ ದೇಗುಲಗಳಲ್ಲೂ ಪೂಜೆ..

Next Post

ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ

Related Posts

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 
Top Story

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 

by Chetan
May 16, 2025
0

ಇಸ್ರೇಲ್ (Israel) ಮತ್ತು ಹಮಾಸ್ (Hamas ) ನಡುವಿನ ಯುದ್ಧ ನಿಲ್ಲುವ ಯಾವುದೇ ಸೂಚನೆ ಕಾಣುತ್ತಿಲ್ಲ. ಇಂದು (ಮೇ 16) ಗಾಜಾ (Gaza) ಮೇಲೆ ಇಸ್ರೇಲ್ (Israel)...

Read moreDetails
ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 

ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 

May 16, 2025
ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ: ಡಿಸಿಎಂ ಡಿ.ಕೆ.ಶಿವಕುಮಾರ್

ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ: ಡಿಸಿಎಂ ಡಿ.ಕೆ.ಶಿವಕುಮಾರ್

May 16, 2025
ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

May 16, 2025
ಮನುಜ ಪ್ರಜ್ಞೆಯ ಅವಸಾನ ಮತ್ತು ಸಾಮಾಜಿಕ ಅವನತಿ

ಮನುಜ ಪ್ರಜ್ಞೆಯ ಅವಸಾನ ಮತ್ತು ಸಾಮಾಜಿಕ ಅವನತಿ

May 16, 2025
Next Post
ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ

ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ

Recent News

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 
Top Story

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 

by Chetan
May 16, 2025
ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 
Top Story

ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 

by Chetan
May 16, 2025
ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ: ಡಿಸಿಎಂ ಡಿ.ಕೆ.ಶಿವಕುಮಾರ್
Top Story

ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ: ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
May 16, 2025
ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Top Story

ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
May 16, 2025
ಮನುಜ ಪ್ರಜ್ಞೆಯ ಅವಸಾನ ಮತ್ತು ಸಾಮಾಜಿಕ ಅವನತಿ
Top Story

ಮನುಜ ಪ್ರಜ್ಞೆಯ ಅವಸಾನ ಮತ್ತು ಸಾಮಾಜಿಕ ಅವನತಿ

by ಪ್ರತಿಧ್ವನಿ
May 16, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 

May 16, 2025
ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 

ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 

May 16, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada