ದಕ್ಷಿಣ ಆಫ್ರಿಕಾದ ಕೆಲವು ಭಾಗಗಳಲ್ಲಿ ಭಾರತೀಯ ಸಮುದಾಯಗಳ ಮೇಲೆ(ಇತರ ಸಮುದಾಯಗಳ ಮೇಲೂ ಸಹ) ನಡೆಯುತ್ತಿರುವ ಅಮಾನುಷ ದಾಳಿಗಳು ಮತ್ತು ಲೂಟಿಗಳು ಕ್ವಾಝುಲು-ನಟಾಲ್ ಪ್ರಾಂತ್ಯದ ಡರ್ಬನ್ನ ಫೀನಿಕ್ಸ್ ಪಟ್ಟಣ ಮತ್ತು ಗೌಟೆಂಗ್ ಪ್ರಾಂತ್ಯದ ರಾಜಧಾನಿ ಪ್ರಿಟೋರಿಯಾ ನಿವಾಸಿಗಳನ್ನು ಆತಂಕಕ್ಕೆ ತಳ್ಳಿವೆ. ಹೀಗಾಗಿ ಡರ್ಬನ್ ನಾರ್ತ್ನ ಡಫ್ಸ್ ರಸ್ತೆಯ ಉಪನಗರ ನಿವಾಸಿಗಳು ಯಾವುದೇ ಒಳನುಸುಳುವಿಕೆಯನ್ನು ತಡೆಯಲು ರಾತ್ರಿ ಎಚ್ಚರದಿಂದಿದ್ದು ಗಸ್ತು ತಿರುಗಲು ಪ್ರಾರಂಭಿಸಿದ್ದಾರೆ ಎಂದು ಅಲ್ಲಿನ ನಿವಾಸಿ ನರೇಂದ್ ಅವರು ತಿಳಿಸಿರುವುದಾಗಿ ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.
“ಜುಲೈ 14 ರಂದು ಜನರ ಗುಂಪೊಂದು ನಮ್ಮ ನೆರೆಹೊರೆಯವರ ಮೇಲೆ ದಾಳಿ ನಡೆಸಿತು. ನಾವು ಮಹಿಳೆಯರು ಮತ್ತು ಮಕ್ಕಳನ್ನು ಬೇಗನೆ ಸ್ಥಳಾಂತರಿಸಿದೆವು. ನಾವು ಈ ಪ್ರದೇಶದ ಐದರಿಂದ ಆರು ಪೊಲೀಸ್ ಪಡೆಗಳನ್ನು ಎಚ್ಚರಿಸಿದ್ದರೂ, ಅವರು ಆರಂಭದಲ್ಲಿ ಆಯಾ ಕಮಾಂಡರ್ಗಳ ಸೂಚನೆಯಿಲ್ಲದೆ ಉಪನಗರಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಏತನ್ಮಧ್ಯೆ, ಗುಂಪು ಮನೆಗಳಲ್ಲಿ ಒಂದಕ್ಕೆ ಪೆಟ್ರೋಲ್ ಬಾಂಬ್ ಎಸೆದಿದ್ದರಿಂದ ಅನೇಕ ನಿವಾಸಿಗಳು ತಮ್ಮನ್ನು ಮತ್ತು ತಮ್ಮ ಮನೆಗಳನ್ನು ರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರ ತೆಗೆದುಕೊಂಡರು ”ಎಂದು ನಾಗರಿಕ ಸಂಘದ ಅಧ್ಯಕ್ಷರಾಗಿರುವ ನರೇಂದ್ ಹೇಳಿದ್ದಾರೆ. ಐದರಿಂದ ಆರು ಸುತ್ತುಗಳ ಗುಂಡಿನ ಚಕಮಕಿಯನ್ನು ವಿನಿಮಯವಾದ ನಂತರ ಉದ್ವಿಗ್ನತೆ ತಗ್ಗಿತು.
ಈಗ ಎಲ್ಲವೂ ಶಾಂತವಾಗಿದೆ ಎನ್ನುವ ನರೇಂದ್ “ಆದರೆ ಇದು ಎಷ್ಟು ಸಮಯದವರೆಗೆ ಎಂದು ನಮಗೆ ತಿಳಿದಿಲ್ಲ” ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ. “ದಕ್ಷಿಣ ಆಫ್ರಿಕಾದ ರಾಜಕೀಯ ಪರಿಸ್ಥಿತಿಯು ಬಿಗಡಾಯಿಸುತ್ತಿದ್ದಂತೆ ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಹಣದುಬ್ಬರ ಏರಿತು. ಅದರ ಪರಿಣಾಮ ಸ್ಥಳೀಯ ಕಪ್ಪು ನಿವಾಸಿಗಳಲ್ಲಿನ ಕೋಪವು ಭಾರತೀಯರು ಮತ್ತು ಇತರ ಸಮುದಾಯಗಳ ಜನರ ವಿರುದ್ಧ ತಿರುಗಿತು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಬೀದಿಗಳಲ್ಲಿ ಜನಾಂಗೀಯ ಗಲಭೆಗೆ ಕಾರಣವಾಯಿತು. ಇನ್ನೊದು ಹಂತದ ಹಿಂಸಾಚಾರದ ಭಯವಿದ್ದರೂ ಆ ದೇಶದ ಭಾರತೀಯ ಸಮುದಾಯ , ಭಾರತೀಯರು ಮತ್ತು ಭಾರತೀಯ ಮೂಲದ ದಕ್ಷಿಣ ಆಫ್ರಿಕನ್ನರು ಆಹಾರ ಪ್ಯಾಕೆಟ್ಗಳು, ಮಗುವಿನ ಆಹಾರ ಒದಗಿಸುವ ಮೂಲಕ ಪರಸ್ಪರ ಮತ್ತು ಇತರ ಸಮುದಾಯಗಳನ್ನು ಬೆಂಬಲಿಸುವತ್ತ ಗಮನ ಹರಿಸಿದ್ದಾರೆ. ದಿನಸಿ ವಸ್ತುಗಳು, ನೈರ್ಮಲ್ಯ ಕರವಸ್ತ್ರಗಳು, ಅಗತ್ಯ ಆಹಾರ ಪದಾರ್ಥಗಳಿಗಾಗಿ ಹಣವನ್ನು ಸಂಗ್ರಹಿಸುವುದು ಮತ್ತು ರಾತ್ರಿ ಗಸ್ತು ತಿರುಗುವುದರ ಮೂಲಕ ಎಲ್ಲರಲ್ಲೂ ಧೈರ್ಯ ತುಂಬಲು ಪ್ರಯತ್ನಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
ಆಹಾರ ಅಭದ್ರತೆಯು ಅಲ್ಲಿನ ನಿವಾಸಿಗಳಲ್ಲಿ ತಕ್ಷಣದ ಆತಂಕವಾಗಿ ಕಾಡುತ್ತಿರುವ ಈ ಸಮಯದಲ್ಲಿ, ಭಾರತೀಯ ಮತ್ತು ಇತರ ಸಮುದಾಯಗಳು ತಮ್ಮ ಸಹಾಯಕ್ಕಾಗಿ ಮಾತ್ರವಲ್ಲದೆ ಸಹಾಯದ ಅಗತ್ಯವಿರುವ ಎಲ್ಲಾ ಸಮುದಾಯಗಳಿಗೂ ಸಹಾಯ ಹಸ್ತ ಚಾಚಿದ್ದಾರೆ. “ಗಲಭೆಯ ಮೊದಲ ಎರಡು ದಿನಗಳಲ್ಲಿ ಅಂಗಡಿಗಳನ್ನು ಲೂಟಿ ಮಾಡಿದ್ದರಿಂದ ಭಾರಿ ಆಹಾರ ಕೊರತೆ ಉಂಟಾಯಿತು. ಮುಸ್ಲಿಂ ಮತ್ತು ಭಾರತೀಯ ಸಮುದಾಯಗಳ ಹೆಚ್ಚಿನ ಜನರನ್ನು ಹೊಂದಿರುವ ಡರ್ಬನ್ನ ಓವರ್ಪೋರ್ಟ್ನಲ್ಲಿರುವ ಭಾರತೀಯ ದಕ್ಷಿಣ ಆಫ್ರಿಕಾದ ಜನರು ಒಂದು ಚೀಲ ಅಕ್ಕಿ ಮತ್ತು ಹಾಲಿನಂತಹ ಆಹಾರಗಳನ್ನು ಹೇಗೆ ಖರೀದಿಸಬಹುದು ಎಂದು ಭಯಭೀತರಾಗಿದ್ದರು. ಮಳಿಗೆಗಳ ಹೊರಗೆ ಜನರ ಸಾಲುಗಳು ನಿಂತಿದ್ದರಿಂದ, ಕೆಲವು ಅಂಗಡಿಗಳು ಒಂದು ಸಮಯದಲ್ಲಿ ಪ್ರವೇಶಿಸುವ ಜನರ ಸಂಖ್ಯೆಯನ್ನು ಸೀಮಿತಗೊಳಿಸಿದವು. ಕೆಲವು ಅಂಗಡಿಗಳು ಮೂಲಭೂತ ಆಹಾರ ಸರಬರಾಜಿನ ಬೆಲೆಯನ್ನು ಅಗತ್ಯಕ್ಕಿಂತ ಹೆಚ್ಚಿಸಿದರೆ, ಇನ್ನೂ ಕೆಲವು ಅಂಗಡಿಗಳು ಕೊರತೆಯ ಮಧ್ಯೆಯೂ ಮೊದಲಿದ್ದ ಬೆಲೆಗಳನ್ನು ಉಳಿಸಿಕೊಂಡವು” ಎಂದು ಅಲ್ಲಿನ ನಿವಾಸಿ ಅಲಿ ಪತ್ರಿಕೆಯ ಜೊತೆ ಮಾತಾಡುತ್ತಾ ಹೇಳಿದ್ದಾರೆ.
ಗಲಭೆ ಪೀಡಿತ ಪ್ರದೇಶಗಳಲ್ಲಿನ ಆಹಾರದ ಕೊರತೆಯನ್ನು ಪರಿಹರಿಸುವುದು, ದೇಶದ ಇತರ ಭಾಗಗಳಿಂದ ಅಗತ್ಯವಾದ ವಸ್ತುಗಳನ್ನು ಸರಬರಾಜು ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಅಲ್ಲದೆ ಗಲಭೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮುಖ್ಯ ರಸ್ತೆಗಳನ್ನು ಮುಚ್ಚಿದ್ದರಿಂದ ಆಹಾರ ಸರಪಳಿ ಸರಬರಾಜಿನಲ್ಲಿ ಅಡ್ಡಿ ಉಂಟಾಗಿತ್ತು. ಇವೆಲ್ಲವನ್ನೂ ಮೀರಿ ಆಹಾರ ಸಾಮಾಗ್ರಿಗಳನ್ನು ತರಿಸಿ, ವಿತರಿಸಲಾಗಿತ್ತು.
ದಕ್ಷಿಣ ಆಫ್ರಿಕಾದಲ್ಲಿನ ನಾಗರಿಕ ಅಶಾಂತಿಯಲ್ಲಿ ಸಿಕ್ಕಿಬಿದ್ದ ಕೆಲವು ಭಾರತೀಯ ದಕ್ಷಿಣ ಆಫ್ರಿಕನ್ನರೂ ಸೇರಿದಂತೆ 337 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೀಟ್ಸ್ವರ್ತ್ನ ಹೊರತಾಗಿ ಡರ್ಬನ್ನ ಅತಿದೊಡ್ಡ ಭಾರತೀಯ ಪಟ್ಟಣಗಳಲ್ಲಿ ಒಂದಾದ ಫೀನಿಕ್ಸ್ನ ಅನೇಕ ಭಾರತೀಯ ನಿವಾಸಿಗಳು ತಮ್ಮ ಮನೆಗಳಿಗೆ ಗುಂಡು ಹಾರಿದ್ದರಿಂದ ಹತಾಶೆಗೊಂಡು ಸಹಾಯಕ್ಕಾಗಿ ಸಹಾಯವಾಣಿಗೆ ಕರೆ ಮಾಡಿದ್ದಾರೆ ಎನ್ನುವ ಅಲಿ, “ನಾಗರಿಕ ಅಶಾಂತಿಯ ದೊಡ್ಡ ಹಾನಿ ಭಾರತೀಯ ಸಮುದಾಯಗಳಲ್ಲಿ ಉಂಟುಮಾಡಿದ ಆತಂಕ ಮತ್ತು ಭಯ” ಎನ್ನುತ್ತಾರೆ.
ಜುಲೈ 23 ರ ಶುಕ್ರವಾರದ ಮತ್ತೊಂದು ಪ್ರತಿಭಟನೆಯ ನಡೆಯಲಿದೆ ಮತ್ತು ಅದು ಇನ್ನೊಂದು ಗಲಭೆಗೆ ಕಾರಣವಾಗಲಿದೆ ಎಂದು ವರದಿಯಾಗಿದ್ದರಿಂದ ದೇಶಾದ್ಯಂತದ ಭಾರತೀಯ ಸಮುದಾಯಗಳು ರಾತ್ರಿ ಗಸ್ತು ನಡೆಸಲು ತಂಡಗಳಾಗಿ ತಮ್ಮನ್ನು ತಾವು ಸಂಘಟಿಸಿಕೊಂಡವು. “ಜುಲೈ 18 ರಂದು, ಗಲಭೆಕೋರರ ಗುಂಪು ನೆರೆಹೊರೆಗಳನ್ನು, ಅಂಗಡಿಗಳನ್ನು, ಕಟ್ಟಡಗಳನ್ನು ಮತ್ತು ಪೆಟ್ರೋಲ್ ಕೇಂದ್ರಗಳನ್ನು ದರೋಡೆ ಮತ್ತು ಲೂಟಿ ಮಾಡುತ್ತಿದ್ದಂತೆ ಬಹಳಷ್ಟು ನೆರೆಹೊರೆಯ ಗುಂಪುಗಳು ಸಹಾಯಕ್ಕಾಗಿ ಒಗ್ಗೂಡಿದವು. ಬೀದಿಗಳ ಪ್ರವೇಶದ್ವಾರದ ಬಳಿ ನಾವು ರಸ್ತೆ ತಡೆಗಳನ್ನು ಸ್ಥಾಪಿಸಿ ಮತ್ತು ಸಮುದಾಯಗಳಲ್ಲಿ ಮತ್ತು ಹೊರಗಿನ ದಟ್ಟಣೆಯನ್ನು ನಿಯಂತ್ರಿಸಿದೆವು. ಗುಂಪು ತಮ್ಮ ಮನೆಗಳನ್ನು ಸುಟ್ಟುಹಾಕುತ್ತದೆ ಅಥವಾ ಲೂಟಿ ಮಾಡುತ್ತದೆ ಎಂದು ನಿವಾಸಿಗಳು ಭಯಪಡುತ್ತಿರುವುದರಿಂದ ಈ ಬ್ಯಾರಿಕೇಡ್ಗಳನ್ನು ದ್ವಿಗುಣಗೊಳಿಸುವ ಉದ್ದೇಶವೂ ತಮ್ಮಲ್ಲಿತ್ತು” ಎಂದು ಅಲಿ ‘ದಿ ನ್ಯೂಸ್ ಮಿನಿಟ್’ ಬಳಿ ಮಾತಾಡುತ್ತಾ ಹೇಳಿದ್ದಾರೆ.
ಜುಲೈ 8 ರಂದು ಪ್ರಾರಂಭವಾದ ಈ ದಾಳಿಗಳನ್ನು1994 ರಲ್ಲಿ ವರ್ಣಭೇದ ನೀತಿಯ ನಂತರದ ಅತ್ಯಂತ ಕೆಟ್ಟ ದಾಳಿ ಎಂದು ಪರಿಗಣಿಸಲಾಗಿದೆ. ಗಲಭೆಗಳು ಕ್ವಾಝುಲು ನಟಾಲ್ ಒಂದರಲ್ಲೇ ಸುಮಾರು 20 ಬಿಲಿಯನ್ ರಾಂಡ್ (100 ಬಿಲಿಯನ್ ಭಾರತೀಯ ರೂಪಾಯಿ) ಗಿಂತ ಹೆಚ್ಚು ನಷ್ಟಕ್ಕೀಡು ಮಾಡಿದೆ ಮತ್ತು ಸುಮಾರು 1.50 ಲಕ್ಷ ಉದ್ಯೋಗಗಳನ್ನು ಅಪಾಯಕ್ಕೆ ಗುರಿಯಾಗಿಸಿವೆ ಎಂದು ದಕ್ಷಿಣ ಆಫ್ರಿಕಾದ ಸುದ್ದಿ ವೆಬ್ಸೈಟ್ ‘ಮೇಲ್ & ಗಾರ್ಡಿಯನ್’ ವರದಿ ಮಾಡಿದೆ . ಕೆಲವು ಭಾರತೀಯ ನಿವಾಸಿಗಳ ಪ್ರಕಾರ ನಷ್ಟಕ್ಕೊಳಗಾದ ವ್ಯವಹಾರಗಳು ಎಂದಿಗೂ ಚೇತರಿಸಿಕೊಳ್ಳುವುದಿಲ್ಲ. ದಕ್ಷಿಣ ಆಫ್ರಿಕಾದ ಹೆಚ್ಚಿನ ವ್ಯವಹಾರಗಳು ಭಾರತೀಯರ ಒಡೆತನದಲ್ಲಿದೆ, ಅವರ ಪೂರ್ವಜರು 1800 ರ ದಶಕದ ಉತ್ತರಾರ್ಧದಲ್ಲಿ ಒಪ್ಪಂದ ಮಾಡಿಕೊಂಡ ಕಾರ್ಮಿಕರು ಮತ್ತು ವಲಸಿಗರಾಗಿ ಬ್ರಿಟಿಷ್ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಬಂದವರು.
ಆದರೆ ಆ ದೇಶದ ಸಂದಿಗ್ಧ ಸ್ಥಿತಿಯಲ್ಲಿ ಎಲ್ಲಾ ಭಾರತೀಯ ದಕ್ಷಿಣ ಆಫ್ರಿಕನ್ನರು ಎಲ್ಲಾ ಸಮುದಾಯಗಳಲ್ಲಿ ಒಗ್ಗಟ್ಟಿನ ಪ್ರದರ್ಶನ ಮಾಡಿರುವುದು ಜಗತ್ತಿನ ಗಮನ ಸೆಳೆದಿದೆ. “ಇದು ವಿನಾಶಕಾರಿಯಾಗಿದೆ, ಆದರೆ ಜನರು ತಮ್ಮ ಜನಾಂಗ ಮತ್ತು ಅವರು ಕಳೆದುಕೊಂಡದ್ದನ್ನು ಲೆಕ್ಕಿಸದೆ ಒಟ್ಟಿಗೆ ನಿಂತುಕೊಂಡರು” ಎನ್ನುತ್ತಾರೆ ಅಲ್ಲಿನ ಮತ್ತೊಬ್ಬ ನಿವಾಸಿ ಜಸ್ಲೀನ್. “ಇದೇ ಮೊದಲ ಬಾರಿ ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರು ಒಂದಾಗಿರುವುದನ್ನು ನಾನು ನೋಡಿದೆ. ನಾವು ನಮ್ಮ ಮನೆಗಳನ್ನು ರಕ್ಷಿಸುವುದರ ಜೊತೆಗೆ ನೆರೆಹೊರೆಯವರನ್ನು, ಹಿರಿಯ ನಾಗರಿಕರನ್ನು ರಕ್ಷಿಸಿದೆವು” ಎಂದು ಅವರು ಹೇಳಿರುವುದಾಗಿ ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.
Source: The News Minute