
ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಏರ್ ಸ್ಟ್ರೈಕ್ ಮಾಡಿ ನೂರಕ್ಕೂ ಅಧಿಕ ಉಗ್ರರ ಹತ್ಯೆ ಮಾಡಲಾಗಿದೆ. ಈ ವಿಚಾರವಾಗಿ ನಾಡಿನಾದ್ಯಂತ ಸಂಭ್ರಮಾಚರಣೆ ಮಾಡಲಾಗ್ತಿದೆ. ಬೆಂಗಳೂರಿನ ಬನ್ನೇರುಘಟ್ಟ ಸರ್ಕಲ್ನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಪಟಾಕಿ ಸಿಡಿಸಿ ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ. ಪಹಲ್ಗಾಮ್ ನರಮೇಧಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ಕೊಟ್ಟಿದೆ. ಜಿಹಾದಿ ಭಯೋತ್ಪಾದಕರ ಕ್ಯಾಂಪ್ಗಳ ಧ್ವಂಸ ಮಾಡಲಾಗಿದೆ. ಭಾರತೀಯ ಸೇನೆಯ ಪ್ರತೀಕಾರ ಸಂತಸ ತಂದಿದೆ ಎಂದು ಭಜರಂಗದಳ ಮುಖಂಡ ಗೋವರ್ಧನ್ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಎಲ್ಲೆಡೆ ಹರ್ಷೋದ್ಘಾರ ಮುಗಿಲು ಮುಟ್ಟಿದ್ದು, ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಸಂಭ್ರಮಾಚರಣೆ ಏರ್ಪಟ್ಟಿದೆ. ಏಟಿಗೆ ಎದಿರೇಟು ಅಂತ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಜ್ಞಾನಭಾರತಿ ಆವರಣದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪುಲ್ವಾಮ ದಾಳಿಯಾದಾಗಲೇ ಪಾಕ್ಗೆ ಬುದ್ದಿ ಕಲಿಸಬೇಕಿತ್ತು. ಆಗ ಬುದ್ದಿ ಕಲಿಸಿದ್ರೆ ಪಾಕ್ ಈ ರೀತಿ ಚೇಷ್ಟೆ ಮಾಡುತ್ತಿರಲಿಲ್ಲ. ನಿರ್ಧಾರ ತೆಗೆದುಕೊಳ್ಳುವುದನ್ನ ನಮ್ಮ ಸೈನಿಕರಿಗೆ ಬಿಡಬೇಕು. ನೆಹರು, ಇಂದಿರಾಗಾಂಧಿ ಅವಧಿಯಲ್ಲೂ ಸೈನ್ಯ ಪರಾಕ್ರಮ ತೋರಿಸಿತ್ತು. ನಾವು, ಕಾಂಗ್ರೆಸ್ ಪಕ್ಷ ಸೈನಿಕರ ಜೊತೆ ನಿಲ್ತೇವೆ. ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ.

ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಆಪರೇಷನ್ ಸಿಂಧೂರ ಮೂಲಕ ಪಾಕ್ ಗೆ ಭಾರತ ದಿಟ್ಟ ಉತ್ತರ ಕೊಟ್ಟಿದೆ. ಇನ್ಮೇಲೆ ಭಾರತದ ಕಡೆ ಪಾಕಿಸ್ತಾನ ಮುಖ ಮಾಡಬಾರದು ಹಾಗೆ ಮಾಡಿದ್ದಾರೆ. ಆದರೂ ಇಷ್ಟು ಪಾಕಿಸ್ತಾನಕ್ಕೆ ಸಾಕಾಗಲ್ಲ, ಇನ್ನೂ ದೊಡ್ಡ ಪಾಠವನ್ನು ಪಾಕ್ ಗೆ ಭಾರತ ಕಲಿಸಬೇಕು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಂತಿಯ ಜಪ ಮಾಡ್ತಿದ್ದಾರೆ. ನಾಚಿಕೆಯಾಗಬೇಕು ಕಾಂಗ್ರೆಸ್ ನಾಯಕರಿಗೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಎಕ್ಸ್ ಪೋಸ್ಟ್ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಸ್ಪಷ್ಟನೆ ಕೊಡಬೇಕು, ನಮ್ಮವರು 26 ಜನ ಬಲಿಯಾಗಿದ್ದಾರೆ, ನಾವು ತಕ್ಕ ಉತ್ತರ ಕೊಡಬಾರದಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಪಹಲ್ಗಾಮ್ಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ದಾಳಿ ನಡೆಸಿದೆ. ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ನಮ್ಮ ಸೈನಿಕರಿಗೆ ಅಭಿನಂದನೆ. ಮುಂದೆ ಯಾವುದೇ ಉಗ್ರ ಚಟುವಟಿಕೆಗೆ ಪಾಕ್ ಬೆಂಬಲಿಸದಂತೆ ಪಾಠ ಕಲಿಸಬೇಕು. ಭಾರತೀಯ ಸೇನೆಗೆ ಶಕ್ತಿ ತುಂಬಲು ವಿಶೇಷ ಪೂಜೆಗೆ ಬಿಜೆಪಿ ಕರೆ ನೀಡಿದೆ. ವಿವಿಧ ದೇವಸ್ಥಾನಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಪೂಜೆ ಸಲ್ಲಿಸಲಾಗಿದೆ. ಕೋಲಾರದ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಪಹಲ್ಗಾಮ್ನಲ್ಲಿ 26 ಜನರ ಬಲಿದಾನ ಆಗಿತ್ತು. ಉಗ್ರಗಾಮಿಗಳ ಅಟ್ಟಹಾಸಕ್ಕೆ ಭಾರತೀಯರು ಪ್ರಾಣ ಕಳೆದುಕೊಂಡಿದ್ರು. ತದ ನಂತರ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಬಳಿಕ ಒಂದು ಪ್ರತಿಕಾರ ತೆಗೆದುಕೊಳ್ಳಬೇಕು. ಉಗ್ರಗಾಮಿಗಳ ಪಾಕಿಸ್ತಾನಕ್ಕೂ ಬುದ್ದಿ ಕಲಿಸಬೇಕಿತ್ತು ಎಂಬ ಅಪೇಕ್ಚೆ ಇತ್ತು. ಅದಕ್ಕೆ ಪೂರಕವಾಗಿ ಪ್ರಧಾನಿ ಗಳು ಹಲವು ಬಾರಿ ಹೇಳಿದ್ರು. ತಕ್ಕ ಶಾಸ್ತ್ಯ ಮಾಡುವ ಬಗ್ಗೆ ಹೇಳಿದ್ರು. ನಿನ್ನೆ ಮಧ್ಯ ರಾತ್ರಿ ಉಗ್ರಗಾಮಿ ಗಳ ತಾಣದ ಮೇಲೆ ಕಾರ್ಯಾಚರಣೆ ನಡೀತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರು ಸಂಭ್ರಮ ಪಡುತ್ತಿದ್ದಾರೆ. ನಾವು ಕೂಡ ಭಾರತಿಯ ಸೇನೆಯ ಜೊತೆ ನಿಲ್ಲಬೇಕು ಎಂದಿದ್ದಾರೆ.