ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರಾದ ಡಾ || ಶಿವಮೂರ್ತಿ ಮುರುಘಾ ಶರಣರ ವಿರುದ್ದ ಮಾಡಿರುವ ಆರೋಪ ಶುದ್ದ ಸುಳ್ಳಾಗಿದ್ದು ಅವರಿಗೆ ಮಾನಸಿಕ ಕಿರುಕುಳ ನೀಡಲು ಈ ರೀತಿಯ ಪಿತೂರಿ ಮಾಡಲಾಗಿದೆ ಎಂದು ಮಠದ ಸಲಹಾ ಸಮಿತಿ ಸದಸ್ಯ ಎನ್.ಬಿ.ವಿಶ್ವನಾಥ್ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯದ ವಿಚಾರ ಹೊರಬರುತ್ತಿದ್ದಂತೆ ಸಭೆ ನಡೆಸಿದ ಸಲಹಾ ಸಮಿತಿ ಸದಸ್ಯರು ಮುರುಘಾ ಶರಣರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಲಹಾ ಸಮಿತಿ ಸದಸ್ಯರು ಶರಣರು ಈ ಆರೋಪವನ್ನ ತಳ್ಳಿಹಾಕಿದ್ದು ಇದು ಮಠ ಹಾಗೂ ಸ್ವಾಮೀಜಿಗಳ ಮೇಲಿನ ದ್ವೇಷಕ್ಕಾಗಿ ಯಾರೋ ಮಾಡಿರುವ ಪಿತೂರಿ ಎಂದು ಸಲಹಾ ಸಮಿತಿ ಕಿಡಿಕಾರಿದೆ.
ಬಾಲಕಿಯರು ದೂರು ನೀಡಿರುವ ಹಿಂದೆ ಮಠದ ಆಡಳಿತಾಧಿಕಾರಿ ಬಸವರಾಜನ್ ಅವರ ಷಡ್ಯಂತ್ರವಿದೆ ಮಠ ಆಡಳಿತಕ್ಕೆ ಮರಳಿದ ಅವರು ಪರಮಾಧಿಕಾರ ನಡೆಸಲು ಕನಸು ಕಾಣುತ್ತಿದ್ದರು. ಅವರನ್ನು ಮಠಕ್ಕೆ ವಾಪಸ್ ಕರೆತರುವ ಸಮಯದಲ್ಲಿ ಹಲವಾರು ಷರತ್ತುಗಳನ್ನು ವಿಧಿಸಿ ಕರೆತರಲಾಗಿತ್ತು. ಮಠದ ವಿರುದ್ದ ನ್ಯಾಯಾಲಯದಲ್ಲಿ ಹೂಡಲಾಗಿದ್ದ ದಾವೆಯನ್ನು ಹಿಂಪಡೆಯುವುದಾಗಿಯೂ ಹೇಳಿದ್ದರು ಆದರೆ, ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಸಲಹಾ ಸಮಿತಿ ಸದಸ್ಯರು ದೂರಿದ್ದಾರೆ.
ಶರಣರ ವಿರುದ್ದ ಇಂತಹ ಆರೋಪಗಳು ಕೇಳಿ ಬಂದಿಲ್ಲ. ಮಹಿಳೆಯರ ಹಾಗೂ ಮಕ್ಕಳ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ವಕೀಲರ ತಂಡವೊಂದು ಸ್ವಾಮೀಜಿಯವರ ಜೊತೆ ಮಾತನಾಡಿದ್ದು ನಿರೀಕ್ಷಣಾ ಜಾಮೀನು ಪಡೆಯಲಾಗುವುದು. ಪೊಲೀಸರು ಘಟನೆಯ ಕುರಿತು ತನಿಖೆ ನಡೆಸಿ ಅದರಲ್ಲಿ ಶರಣರ ಪಾತ್ರ ಕಂಡು ಬಂದರೆ ಬಂಧಿಸಲಿ ಇಲ್ಲವಾದಲ್ಲಿ ಭಕ್ತರ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದಿದ್ದಾರೆ.
ಇತ್ತ ಮುರುಘಾ ಶರಣರ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಠದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಮಠಕ್ಕೆ ಭಕ್ತಾಧಿಗಳ ಹಾಗು ಹಿತೈಷಿಗಳು ಬೇಟಿ ನೀಡುತ್ತಿದ್ದು ಮುರುಘಾ ಶರಣರೊಂದಿಗೆ ಮಾತುಜತೆ ನಡೆಸುತ್ತಿದ್ದಾರೆ.