ಇತ್ತೀಚೆಗಷ್ಟೇ ಸುನಿಲ್ ಕುಮಾರ್ ನಾಥ್ (45) ಮತ್ತು ಅವರ ಸಹೋದರ ಪಿಂಟೂ ಕುಮಾರ್ ಅವರು ಕಾಶ್ಮೀರದ ಶಾಪಿಯಾನ್ ಜಿಲ್ಲೆಯ ಚೋಟಿಗಾಮ್ ಗ್ರಾಮದ ಹಣ್ಣಿನ ತೋಟವೊಂದರಲ್ಲಿ ಕೆಲಸ ಮಾಡುತ್ತಿರುವಾಗ ಮೋಟಾರ್ ಸೈಕಲ್ನಲ್ಲಿ ಬಂದ ಉಗ್ರಗಾಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಸುನಿಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರೆ ಪಿಂಟೂ ಕುಮಾರ್ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿದ್ದಾರೆ. ಇದೇ ವರ್ಷ ಏಪ್ರಿಲ್ 4 ರಂದು ಮತ್ತೊಬ್ಬ ಪಂಡಿತ್ ಸೋನು ಕುಮಾರ್ ಅವರು ಅದೇ ಹಳ್ಳಿಯಲ್ಲಿನ ತನ್ನ ಅಂಗಡಿಯಲ್ಲಿರುವಾಗ ಉಗ್ರರು ಗುಂಡಿನ ದಾಳಿ ಮಾಡಿದ್ದರು. ಆದರೆ ಸೋನು ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರೂ ಸಹ ಅದೃಷ್ಟವಶಾತ್ ಬದುಕುಳಿದಿದ್ದರು. ದಕ್ಷಿಣ ಕಾಶ್ಮೀರದ ಶಾಪಿಯಾನ್ ಜಿಲ್ಲೆಯಲ್ಲಿ ಮತ್ತೆ ಭುಗಿಲೆದ್ದಿರುವ ಈ ಪಂಡಿತರ ಹತ್ಯೆಯು ಕಾಶ್ಮೀರಿ ಪಂಡಿತ ಸಮುದಾಯದಲ್ಲಿ ಭಯದ ಹೊಸ ಅಲೆಯನ್ನು ಹುಟ್ಟುಹಾಕಿದೆ.
1990ರಲ್ಲಿ ಪಂಡಿತರ ಸಾಮೂಹಿಕ ವಲಸೆ ನಡೆದಾಗಲೂ ಹದಿನಾರು ಸದಸ್ಯರನ್ನು ಹೊಂದಿರುವ ಮೂರು ಪಂಡಿತ್ ಕುಟುಂಬಗಳು ಆ ಹಳ್ಳಿಯಲ್ಲೇ ಉಳಿದುಕೊಂಡಿದ್ದವು. ಈಗ ಆ ಹಳ್ಳಿಯಲ್ಲೇ ಗುಂಡಿನ ದಾಳಿ,ಚಕಮಕಿಗಳು ನಡೆಯುತ್ತಿರುವುದು ಪಂಡಿತರ ಆತಂಕಕ್ಕೆ ಕಾರಣವಾಗಿದೆ.
ಸೋನು ಅವರ ಸಹೋದರ ಅನಿಲ್ ಕುಮಾರ್ ಅವರು ತಮ್ಮ ಸಹೋದರನ ಮೇಲೆ ಹಲ್ಲೆ ಮಾಡಿದ ನಂತರ, ವಿಭಾಗೀಯ ಕಮಿಷನರ್, ಪಿ ಕೆ ಪೋಲ್ ಸೇರಿದಂತೆ ಹಲವು ಅಧಿಕಾರಿಗಳ ಬಳಿಗೆ ಹೋಗಿ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದರು. ಆದರೆ ಅವರು “ನೀವು ಅದೇ ಗ್ರಾಮದಲ್ಲಿ ಇರಿ ಮತ್ತು ಅಲ್ಲೇ ಸಾಯಿರಿ. ನನ್ನ ಕೈಯಲ್ಲಿ ಏನೂ ಇಲ್ಲ ಮತ್ತು ನಾನು ನಿಮಗಾಗಿ ಏನು ಮಾಡಲೂ ಸಾಧ್ಯವಿಲ್ಲ” ಎಂದು ಹೇಳಿರುವುದಾಗಿ ಅವರು ಆರೋಪಿಸುತ್ತಾರೆ.
ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಲು ಪೋಲ್ ಚೋಟಿಗಾಮ್ಗೆ ಭೇಟಿ ನೀಡಿದಾಗ, ಆಕ್ರೋಶವನ್ನು ಹೊರಹಾಕಿದ ಮೃತರ ಸಂಬಂಧಿಕರು ಉಗ್ರಗಾಮಿಗಳ ಕೈಯಲ್ಲಿ ಸಾಯಲು ತಮ್ಮನ್ನು ಬಿಟ್ಟಿದ್ದಾರೆ ಎಂದು ಆರೋಪಿಸುವ ವಿಡಿಯೋ ಸಾಮಾಜಿಕ
ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನ ಮಂತ್ರಿಗಳ ವಿಶೇಷ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಸುಮಾರು 4000 ವಲಸೆ ಪಂಡಿತರು ಕಾಶ್ಮೀರದಲ್ಲಿ ವಿವಿಧ ನೌಕರಿಗಳಿಗೆ ನೇಮಕಕೊಂಡಿದ್ದಾರೆ. ಮತ್ತು ಜಮ್ಮುವಿನಿಂದ ನೂರಾರು ಹಿಂದೂ ಉದ್ಯೋಗಿಗಳು ಪರಿಶಿಷ್ಟ ಜಾತಿ (SC) ಕೋಟಾದ ಅಡಿಯಲ್ಲಿ ನೇಮಕಗೊಂಡಿದ್ದಾರೆ ಹಾಗೂ ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ವರ್ಷದ ಮೇ ತಿಂಗಳಲ್ಲಿ ಕೇಂದ್ರ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ರಾಹುಲ್ ಭಟ್ ಎಂಬ ಪಂಡಿತ್ ಉಗ್ರರ ದಾಳಿಯಲ್ಲಿ ಕೊಲ್ಲಲ್ಪಟ್ಟಾಗ, ಪಂಡಿತ ಸಮುದಾಯದ ನೂರಾರು ಮಂದಿ ಕಣಿವೆಯಿಂದ ಮತ್ತೆ ಪಲಾಯನ ಮಾಡಿದರು.
“ನಾವು ಒಬ್ಬೊಬ್ಬರಾಗಿ ಕೊಲ್ಲಲ್ಪಡಲು ಬಯಸುವುದಿಲ್ಲ. ಇಲ್ಲಿ ಉದ್ದೇಶಿತ ಹತ್ಯೆಗಳು ನಿಲ್ಲುತ್ತಿಲ್ಲ ಮತ್ತು ಅಂತಹ ಪ್ರತಿಯೊಂದು ಘಟನೆಯ ನಂತರವೂ ಸರ್ಕಾರವು ನಮಗೆ ಭದ್ರತೆಯ ಭರವಸೆಯನ್ನು ನೀಡುತ್ತದೆ, ಆದರೆ ಅದು ಮತ್ತೆ ಮತ್ತೆ ಸುಳ್ಳು ಎಂದು ಸಾಬೀತಾಗಿದೆ ” ಎನ್ನುತ್ತಾರೆ 1990 ರಲ್ಲಿ ವಲಸೆ ಹೋದ ಪಂಡಿತ್ ಸಂಜಯ್. “1990 ರಲ್ಲಿ, ಶತ್ರುಗಳು (ಉಗ್ರರು) ಗೋಚರಿಸುತ್ತಿದ್ದರು, ಆದರೆ ಈಗ ಎಲ್ಲವೂ ಮರೆಯಲ್ಲಿ ನಡೆಯುತ್ತಿದೆ. ನಾವು ಅದೃಶ್ಯ ಶತ್ರುಗಳನ್ನು ಎದುರಿಸಲು ಸಾಧ್ಯವಿಲ್ಲ”ಎಂದು ಅವರು ಉದ್ದೇಶಿತ ಹತ್ಯೆಗಳನ್ನು ನಡೆಸುತ್ತಿರುವ ‘ಹೈಬ್ರಿಡ್ ಉಗ್ರಗಾಮಿಗಳನ್ನು’ ಉಲ್ಲೇಖಿಸುತ್ತಾ ಹೇಳಿದ್ದಾರೆ
1990 ರ ದಶಕದಲ್ಲಿ ವಲಸೆ ಹೋಗದಿರಲು ನಿರ್ಧರಿಸಿದ ಪಂಡಿತ್ ಕುಟುಂಬಗಳನ್ನು ಪ್ರತಿನಿಧಿಸುವ ಕಾಶ್ಮೀರಿ ಪಂಡಿತ್ ಸಂಘರ್ಷ್ ಸಮಿತಿ (ಕೆಪಿಎಸ್ಎಸ್) ಈಗಾಗಲೇ ಸಮುದಾಯದ ಸಾಮೂಹಿಕ ವಲಸೆಗೆ ಕರೆ ನೀಡಿದೆ.
“ಕಾಶ್ಮೀರಿ ಪಂಡಿತರ ಮೇಲೆ ಮತ್ತೊಂದು ಮಾರಣಾಂತಿಕ ದಾಳಿಯೊಂದಿಗೆ, ಕಣಿವೆಯಲ್ಲಿ ಎಲ್ಲಾ ಪಂಡಿತರನ್ನು ಕೊಲ್ಲಲಿದ್ದೇವೆ ಎಂದು ಭಯೋತ್ಪಾದಕರು ಸ್ಪಷ್ಟಪಡಿಸಿದ್ದಾರೆ. ವಿಪರ್ಯಾಸವೆಂದರೆ ಸ್ಥಳೀಯ ಕೆಲವರು ಉಗ್ರರೊಂದಿಗೆ ಸೇರಿಕೊಂಡು ತಮ್ಮ ನೆರೆಹೊರೆಯವರನ್ನು ಕೊಲ್ಲಲು ಹಿಂದೆ ಮುಂದೆ ನೋಡುತ್ತಿಲ್ಲ” ಎಂದು ಇತ್ತೀಚಿನ ದಾಳಿಯ ನಂತರ ಹೇಳಿಕೆ ಬಿಡುಗಡೆಗೊಳಿಸಿದ ಕೆಪಿಎಸ್ಎಸ್ ತಿಳಿಸಿದೆ.