ಮಾರ್ಚ್ 2020ರ ತಬ್ಲಿಘಿ ಜಮಾಅತ್ ಗುರಿಯಾಗಿಸಿಕೊಂಡು ವರದಿ ಮಾಡಿದ್ದಕ್ಕಾಗಿ ಕನ್ನಡ ನ್ಯೂಸ್ ಚಾನೆಲ್ ಆದ ಸುವರ್ಣ ನ್ಯೂಸ್ ಕನ್ನಡ, ನ್ಯೂಸ್18 ಸೇರಿದಂತೆ ಇನ್ನೂ ಒಂದು ಇಂಗ್ಲಿಷ್ ಮಾಧ್ಯಮಕ್ಕೆ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBSA) ದಂಡವನ್ನು ವಿಧಿಸಿದೆ.
ಮಾರ್ಚ್ 30 2020ರಂದು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹಲವಾರು ಜನರು ತಬ್ಲೀಘಿ ಜಮಾಅತ್ ಎಂಬ ಮುಸ್ಲಿಂ ಸಂಘಟನೆಯಿಂದ ಬಂದವರು, ಇವರಿಂದಲೇ ಭಾರತದಲ್ಲಿ ಕರೋನ ಹರಡುವಿಕೆಯಾಗಿರೋದು ಎಂಬ ಸಂಪೂರ್ಣ ಆಪಾದನೆಗಳನ್ನು ಮಾಧ್ಯಮಗಳು ತಬ್ಲಿಘಿ ಜಮಾಆತ್ ಮೇಲೆ ಹಾಕಲಾಗಿತ್ತು.
ಮಾರ್ಚ್ 13 ಮತ್ತು 24 ರ ನಡುವೆ ಕನಿಷ್ಠ 16,500 ಜನರು ನಿಜಾಮುದ್ದೀನ್ನಲ್ಲಿರುವ ತಬ್ಲಿಘಿ ಜಮಾಅತ್ನ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಇದು ಕರೋನ ಹರಡಲು ಮುಸ್ಲಿಂ ಸಮುದಾಯದ ಮೇಲೆ ಆರೋಪ ಹೊರಿಸಲು ಮತ್ತು ವಿವಿಧ ಸುದ್ದಿ ವರದಿಗಳಿಗೆ ಕಾರಣವಾಯಿತು.
ನ್ಯೂಸ್ 18 ಕನ್ನಡಕ್ಕೆ ಸಂಬಂಧಿಸಿದಂತೆ, ತಬ್ಲಿಘಿ ಜಮಾಆತ್ ಕುರಿತು ಕೆಲ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ವಿಧಾನವು ಹೆಚ್ಚು ಆಕ್ಷೇಪಾರ್ಹ ಮತ್ತು ಆಧಾರ ರಹಿತ ಎಂದು NBSA ತೀರ್ಪು ನೀಡಿತು.
ಏಪ್ರಿಲ್ 1 2020 ರಂದು ‘ದೆಹಲಿಯ ನಿಜಾಮುದ್ದೀನ್ ಮಾರ್ಕಾಜ್ ಕೊರೋನ ವೈರಸ್ ಅನ್ನು ಹೇಗೆ ರಾಷ್ಟ್ರಕ್ಕೆ ಹರಡಿದೆ’? ಮತ್ತು ‘ಕರ್ನಾಟಕದಿಂದ ದೆಹಲಿಯ ಜಮಾಅತ್ ಸಭೆಗೆ ಎಷ್ಟು ಮಂದಿ ಹೋಗಿದ್ದಾರೆ’? ಎಂಬ ಶೀರ್ಷಿಕೆಯಡಿಯಲ್ಲಿ ಪ್ರಸಾರವಾದ ನಂತರ ಹಲವು ಆಕ್ಷೇಪಣೆ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣಾವಾಯಿತು.
“ಈ ಕಾರ್ಯಕ್ರಮವು ಸಂಪೂರ್ಣ ಪೂರ್ವಗ್ರಹ ಪೀಡಿತವಾಗಿದ್ದು, ಭಾಷೆ ಹಿಡಿತ, ವಸ್ತುನಿಷ್ಠ ಇಲ್ಲದ, ಧಾರ್ಮಿಕ ಭಾವನೆಗಳಿಗೆ ಅಗೌರವ ತರುವಂತದ್ದು, ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಪ್ರಚೋದಿಸುವ ಗುರಿಯನ್ನು ಹೊಂದಿದೆ”ಎಂದು ಎನ್ಬಿಎಸ್ಎ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಂದು ಲಕ್ಷ ರುಪಾಯಿ ದಂಡ ಮತ್ತು ಜೂನ್ 23 ರಂದು ರಾತ್ರಿ 9 ಗಂಟೆಯ ಸುದ್ದಿಗೆ ಮುಂಚಿತವಾಗಿ ಕ್ಷಮೆಯಾಚಿಸುವುದನ್ನು ಪ್ರಸಾರ ಮಾಡಬೇಕು ಎಂದು ಚಾನೆಲ್ಗೆ ನಿರ್ದೇಶನ ನೀಡಿದೆ. ಜೊತೆಗೆ ಎಲ್ಲಾ ವೆಬ್ ಪೋರ್ಟಲ್ಗಳಿಂದ ಎರಡು ಕಾರ್ಯಕ್ರಮಗಳ ವೀಡಿಯೊಗಳನ್ನು ತೆಗೆಯುವಂತೆ ಪ್ರಾಧಿಕಾರವು ಪ್ರಸಾರಕರನ್ನು ಕೇಳಿದೆ.
ಸುವರ್ಣ ನ್ಯೂಸ್ಗೆ ಸಂಬಂಧಿಸಿದಂತೆ, ಮಾರ್ಚ್ 31, 2020 ಮತ್ತು ಏಪ್ರಿಲ್ 4, 2020 ರ ನಡುವೆ ಪ್ರಸಾರವಾದ ಆರು ಕಾರ್ಯಕ್ರಮಗಳು ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆ ಕೊರತೆ ಇದ್ದು ಮತ್ತು ನಿರ್ದಿಷ್ಟ ಧರ್ಮದ ವಿರುದ್ಧ ಪೂರ್ವಾಗ್ರಹ ಪೀಡಿತವಾಗಿದೆ ಎಂದು NBSA ಹೇಳಿದೆ. ಪ್ರಸಾರ ಮಾನದಂಡ ಉಲ್ಲಂಘನೆ ಮಾಡಿದ ಸುವರ್ಣ ನ್ಯೂಸ್ ಕನ್ನಡಕ್ಕೆ 50 ಸಾವಿರ ದಂಡವನ್ನು ವಿಧಿಸಿರುವ NBSA, ಸಮಾಜಿಕ ಜಾಲತಾಣದಲ್ಲಿನ ವಿಡಿಯೊಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ.
ಏಪ್ರಿಲ್ 2, 2020 ರಂದು ಟೈಮ್ಸ್ ನೌ ಚಾನೆಲ್ನಲ್ಲಿ ಪ್ರಸಾರವಾದ, “ತಬ್ಲೀಘಿ ಜಮಾಅತ್ ಉದ್ದೇಶಪೂರ್ವಕವಾಗಿ ಭಾರತವನ್ನು ಹಾಳುಮಾಡುತ್ತಿದೆಯೇ?” ಎಂಬ ಪ್ಯಾನೆಲ್ ಚರ್ಚೆಯ ವಿರುದ್ಧದ ದೂರಿನ ಮೇರೆಗೆ, “ಸಮುದಾಯಗಳ ನಡುವೆ ಕೋಮು ಭಿನ್ನಾಭಿಪ್ರಾಯವನ್ನು ಉಂಟುಮಾಡುವ ಸೂಕ್ಷ್ಮ ವಿಷಯದ ಬಗ್ಗೆ ಇಂತಹ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ” ಎಂದು NBSA ಯು ಚಾನೆಲ್ಗೆ ಖಂಡನೆಯನ್ನು ಹೊರಡಿಸಿದೆ.
NBSA ಗೆ ಬೆಂಗಳೂರು ಮೂಲದ campaign against hate speech ದೂರು ಸಲ್ಲಿಸಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ NBSA ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು ಈ ತೀರ್ಪನ್ನು ಪ್ರಕಟಿಸಿದ್ದಾರೆ.