ಮಹತ್ವದ ಬೆಳವಣಿಗೆಯಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ಕರ್ನಾಟಕದ 3 ಜಿಲ್ಲೆಗಳ ಗಣಿಗಾರಿಕೆ ಮಿತಿಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆಯ ಮಿತಿ ಸುಪ್ರೀಂ ಕೋರ್ಟ್ ಹೆಚ್ಚಿಸಿದ್ದು, ಗಣಿಗಾರಿಕೆ ಮತ್ತು ಪರಿಸರ ಸಂರಕ್ಷಣೆ ಎರಡೂ ಜೊತೆಯಾಗಿಯೇ ನಡೆಯಬೇಕೆಂದು ಅದು ಸೂಚಿಸಿದೆ.
ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನಾ ಮಿತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೆಚ್ಚಿಸಿದ್ದು, ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನೆ ಮಿತಿಯನ್ನು 7 ಎಂಎಂಟಿಯಿಂದ 15 ಎಂಎಂಟಿಗೆ ಏರಿಸಿದೆ.
ಬಳ್ಳಾರಿಗೆ ಸಂಬಂಧಿಸಿ ವರ್ಷಕ್ಕೆ 28 MMT ನಿಂದ 35 MMT ಗೆ ಮಿತಿಯನ್ನು ಹೆಚ್ಚಿಸಿದೆ. ಬಳ್ಳಾರಿ ಗಣಿಗಳಲ್ಲಿ ಅನುಮತಿಸಲಾದ 28 ಮಿಲಿಯನ್ ಮೆಟ್ರಿಕ್ ಟನ್ಗಳ ಮಿತಿಯನ್ನು ಈಗ 35 ಮಿಲಿಯನ್ ಮೆಟ್ರಿಕ್ ಟನ್ಗಳಿಗೆ ಹೆಚ್ಚಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಈ ವರ್ಷದ ಮೇ ತಿಂಗಳಿನಲ್ಲಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿನ ಗಣಿಗಳಿಂದ ಕಬ್ಬಿಣದ ಅದಿರು ರಫ್ತು ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿತ್ತು. ಈ ಹಿಂದೆ ಇ-ಹರಾಜಿನ ಮೂಲಕ ಕಟ್ಟುನಿಟ್ಟಾಗಿ ಮಾರಾಟ ಮಾಡುತ್ತಿರುವುದಕ್ಕೆ ವಿರುದ್ಧವಾಗಿ ಗಣಿಗಾರರಿಗೆ ನ್ಯಾಯಾಲಯವು ಅಗೆದ ಗಣಿಗಳನ್ನು ನೇರ ಮಾರಾಟದ ಮೂಲಕ ಮಾರಾಟ ಮಾಡಲು ಅವಕಾಶ ನೀಡಿತ್ತು. ಪರಿಸರ ನಾಶದ ಕಾರಣದಿಂದ 2011ರಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಗಣಿಗಾರಿಕೆಗೆ ನಿಷೇಧ ವಿಧಿಸಿತ್ತು. ಇದಲ್ಲದೆ, ಗಣಿಗಳ ರಫ್ತಿನ ಮೇಲೆ ಕೂಡ ನಿಷೇಧ ಹೇರಲಾಗಿತ್ತು.