ಆರ್ಥಿಕವಾಗಿ ದುರ್ಬಲವಾಗಿ ಹಿಂದುಳಿದಿರುವ ವರ್ಗದವರಿಗೆ(EWS) ಉದ್ಯೋಗದಲ್ಲಿ ಶೇ 10 ಮೀಸಲಾತಿ ಒದಗಿಸುವ ಸಂವಿಧಾನದ 103 ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ(CJI) ಯು.ಯು.ಲಲಿತ್, ದಿನೇಶ್ ಮಾಹೇಶ್ವರಿ, ಎಸ್.ರವೀಂದ್ರ ಭಟ್, ಬೇಲಾ.ಎಂ.ತ್ರಿವೇದಿ ಹಾಗೂ ಜ.ಬಿ.ಪಾರ್ದಿವಾಲಾ ನೇತೃತ್ವದ ಐವರು ಸದಸ್ಯರನ್ನು ಒಳಗೊಂಡ ಸಾಂವಿಧಾನಿಕ ಪೀಠವು ವಾದ-ಪ್ರತಿವಾದವನ್ನು ಸುಧೀರ್ಘವಾಗಿ ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿದೆ.
ತಿದ್ದುಪಡಿಯ ಸಿಂಧುತ್ವವನ್ನ ಪ್ರಶ್ನಿಸಿ 40ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿದ್ದವು. ಹಿರಿಯ ವಕೀಲರಾದ ರವಿವರ್ಮ ಕುಮಾರ್, ವಿಲ್ಸನ್, ಮೀನಾಕ್ಷಿ ಅರೋರಾ, ಸಂಜಯ್ ಪಾರೀಖ್ ಸೇರಿದಂತೆ ಇತರ ಹಿರಿಯ ವಕೀಲರು ಅರ್ಜಿದಾರರ ಪರ ವಾದ ಮಂಡಿಸಿದ್ದರು.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸರ್ಕಾರದ ಪರ ವಾದ ಮಂಡಿಸಿದ್ದರು.