ರೈತನ ಕುರಿತಾದ ಬದುಕು, ಬವಣೆಗಳೊಂದಿಗೆ ಹಳ್ಳಿಯ ಸೊಗಡು, ಗ್ರಾಮೀಣ ಕಲೆಗಳು, ಜತೆಗೆ ಸ್ನೇಹ, ಪ್ರೀತಿ, ಬಾಂಧವ್ಯ ಹೀಗೆ ಎಲ್ಲಾ ಅಂಶಗಳನ್ನು ಬೆಸೆದುಕೊಂಡು ತೆರೆಮೇಲೆ ಬರಲು ಸಿದ್ಧವಾಗುತ್ತಿರುವ ಚಿತ್ರವೇ “ಶ್ರೀಮಂತ”.
ಗೋಲ್ಡನ್ ರೈನ್ ಮೂವೀಸ್ ಮೂಲಕ ಜಿ .ನಾರಾಯಣಪ್ಪ ವಿ. ಸಂಜಯ್ ಬಾಬು ಹಾಗೂ ಹಾಸನ್ ರಮೇಶ್ ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿರುವ ಈ ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆಯ ಲಿರಿಕಲ್ ವೀಡಿಯೋ ಹಾಡೊಂದನ್ನ ಬೆಂಗಳೂರಿನ ಕಲಾವಿದರ ಭವನದಲ್ಲಿ ಅದ್ಧೂರಿಯಾಗಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿ ನಾದಬ್ರಹ್ಮ ಡಾ. ಹಂಸಲೇಖ ಹಾಗೂ ಯುವ ರೈತ ಮುಖಂಡರಾದ ಸಂತೋಷ್ ಹಾಗೂ ಚಿರಂತ್ ಆಗಮಿಸಿ ಪೋಸ್ಟರ್ ಲಾಂಚ್ ಮಾಡಿದರು. ಹಾಗೆಯೇ ರೈತನ ಕುರಿತಾದ ಹಾಡು ‘ ಮಳೆ ಮುನಿದರೆ ಸಂತ.. ಜನಪದ ಸಂತ.. ಜನಪದ ಸಂತ… ಎಂಬ ಹಾಡನ್ನು ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಕಂಠಸಿರಿಯಲ್ಲಿ ಹೊರಬಂದಿದ್ದು, ಇದು ಇವರ ಕೊನೆ ಹಾಡಾಗಿದ್ದು ಈ ಹಾಡನ್ನ ನಾದಬ್ರಹ್ಮ ಹಂಸಲೇಖ ಹಾಗೂ ನಿರ್ಮಾಪಕರಾದ ಜಿ. ನಾರಣಪ್ಪನವರು ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ಈ ಹಾಡಿನ ಬಗ್ಗೆ ಚಿತ್ರೋದ್ಯಮದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಹಲವರು ಹಾಡನ್ನು ವೀಕ್ಷಿಸಿ ಮಾತನಾಡಿದ ವಿಡಿಯೋವನ್ನ ಪರದೆ ಮೇಲೆ ಪ್ರದರ್ಶಿಸಲಾಯಿತು.
ರೈತ ಗೀತೆ ಬಿಡುಗಡೆ ಮಾಡಿ ಮಾತನಾಡಿದ ಡಾ. ಹಂಸಲೇಖ, ಈ ಸುಸಂದರ್ಭ ಎಂದೂ ಮರೆಯಲಾಗದ ದಿನ ನನಗೆ. ಈ ರೈತಗೀತೆಯ ಹಾಡು ಬಹಳ ಸೊಗಸಾಗಿ ಬಂದಿದೆ ಹಾಗೂ ಈ ಹಾಡಿನ ಕ್ವಾಲಿಟಿ ಕೂಡ ಅದ್ಭುತವಾಗಿ ಪರದೆಯ ಮೇಲೆ ಮೂಡಿದೆ ಎಂದರು.
ಈ ಸಭಾಂಗಣಕ್ಕೆ ಬರುತ್ತಿದ್ದಂತೆ ನಾನು ನನ್ನ ದೇವರು ಎಸ್ಪಿಬಿಗೆ ಕೈಮುಗಿದೆ. ಹಾಗೆ ಅಪ್ಪು ಗೂ ನಾನು ಕೈಮುಗಿದೆ… ಅವರು ವಯಸ್ಸಿನಲ್ಲಿ ಚಿಕ್ಕವರಾದರೂ ಅವರ ಸಾಧನೆ ಅಪಾರ.ಅಪ್ಪು ಇಲ್ಲದ ಜಾಗ ಇಲ್ಲವೇ ಇಲ್ಲ. ಯಾಕೆಂದರೆ ಯಾವುದೇ ಶುಭ ಸಮಾರಂಭ ಅಥವಾ ಯಾವುದೇ ಕಾರ್ಯ ಎಲ್ಲೇ ಹೋದರೂ ಅಪ್ಪು ಫೋಟೋ ಇಲ್ಲದ ಜಾಗವಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಇಂಥ ಮಹಾನ್ ಸಾಧನೆ ಮಾಡಿ ಎಲ್ಲರ ಮನಸ್ಸಿನ ಭಗವಂತನಾಗಿದ್ದಾನೆ ಅಪ್ಪು ಎಂದು ಗುಣಗಾನ ಮಾಡಿದರು.
ಬಹುತೇಕ ಎಲ್ಲಾ ಭಾಷೆಯಲ್ಲೂ ಹಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ, ಪ್ರೀತಿ, ವಿಶ್ವಾಸವನ್ನು ಗಳಿಸಿದ ನನ್ನ ದೇವರು ಹಾಡಿದ ಕೊನೆಯ ಹಾಡು ಈ ರೈತ ಗೀತೆ. ನನ್ನ ಜೀವನದ ಮರೆಯಲಾಗದ ಹಾಡು ಇದಾಗಲಿದೆ. ಎಸ್.ಪಿ.ಬಿ ೫೦ ವರ್ಷಗಳಲ್ಲಿ ಎಲ್ಲಾ ಭಾಷೆಯಲ್ಲಿ ಹಾಡಿದ್ದಾರೆ. ಅಪ್ಪು ಕೂಡ ೪೫ ವರ್ಷದಲ್ಲೇ ಮನೆ ಮನೆಗೆ ಹೋಗಿದ್ದಾನೆ. ೮೦ ವರ್ಷದ ಕನ್ನಡ ಚಿತ್ರರಂಗವನ್ನು ರೈತ ಸಮುದಾಯ ಕಾಯ್ದಿದೆ. ಇಂದಿನ ಹೀರೋಗಳು ನೀವು ಜನಪದ ಕಥೆ ಇಟ್ಟು ಸಿನಿಮಾ ಮಾಡಿ ಅದರಲ್ಲಿ ರೈತ ಇರತಾನೆ. ನೀವು ಮುಂದಾದರೆ ನಾನು ಕೂಡ ನಿಮ್ಮ ಜೊತೆ ನಿರ್ಮಾಣದಲ್ಲಿ ನಾನು ಸಾಥ್ ನೀಡುತ್ತೇನೆ ಎಂದು ಅವರು ಹೇಳಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಬಾ.ಮಾ. ಹರೀಶ್ ಮಾತನಾಡಿ, ರೈತ ಸಮುದಾಯದ ಬಗ್ಗೆ ಉತ್ತಮ ಚಿತ್ರ ಮಾಡಿದ್ದಾರೆ. ಹಾಡು ತುಂಬ ಸೊಗಸಾಗಿ ಮೂಡಿಬಂದಿದೆ. ಎಲ್ಲರೂ ಈ ಚಿತ್ರವನ್ನು ನೋಡಿ ಯಶಸ್ವಿಗೊಳಿಸಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.
“ಶ್ರೀಮಂತ” ಚಿತ್ರಕ್ಕೆ ಬಾಲಿವುಡ್ ನಟ ಸೋನು ಸೂದ್ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟ್ವರ್ಧನ್ ಹಾಗೂ ವೈಷ್ಣವಿ ಚಂದ್ರನ್ ಮೆನನ್ ಅಭಿನಯಿಸಿದ್ದಾರೆ.
ಇನ್ನು ಉಳಿದಂತೆ ಈ ಚಿತ್ರದಲ್ಲಿ ಹಿರಿಯ ನಟರಾದ ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ, ಕುರಿಬಾಂಡ್ ರಂಗ, ಬ್ಯಾಂಕ್ ಮಂಜಣ್ಣ, ಬಸುರಾಜ್ ಹಾಸನ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ನಾದಬ್ರಹ್ಮಡಾ. ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ನೀಡಿದ್ದು, ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ, ವಿಜಯ್ ಪ್ರಕಾಶ್, ನವೀನ್ ಸಜ್ಜು, ಅಜಯ್ ವಾರಿಯರ್, ರಘು, ಅಂಕಿತಾ ಕುಂಡು, ಅಮ್ರಪಾಲಿ ಮುಂತಾದವರು ಹಾಡಿದ್ದಾರೆ. ರವಿಕುಮಾರ್ ಸನಾ ಹಾಗೂ ಕೆ .ಎಂ. ವಿಷ್ಣುವರ್ಧನ್ , ಛಾಯಾಗ್ರಹಣ , ಕೆ .ಎಂ. ಪ್ರಕಾಶ್ ಸಂಕಲನ, ಪ್ರೊ. ಅರವಿಂದ ಮಾಲಗತ್ತಿ ಸಾಹಿತ್ಯ, ಮಾಸ್ ಮಾದ ಸಾಹಸ, ಮದನ್ ಹರಿಣಿ ಹಾಗೂ ಮೋಹನ್ ನೃತ್ಯ, ಪಳನಿ ಸೌಂಡ್ ಇಂಜನಿಯರ್ ಕೆಲಸ ಮಾಡಿರುವಿರುವ ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಹಾಸನ ರಮೇಶ್ ಮಾಡಿದ್ದಾರೆ.