ಪೋಸ್ಟರ್, ಫರ್ಸ್ಟ್ ಲುಕ್ ಮೂಲಕ ಈಗಾಗಲೇ ಜನಮನ ಗೆದ್ದಿರುವ ಸ್ಪೂಕಿ ಕಾಲೇಜ್ ಈಗಾಗಲೇ ಸಿನಿ ರಸಿಕರ ಕುತೂಹಲವನ್ನ ಹೆಚ್ಚಿಸಿದೆ. ಇನ್ನು ಚಿತ್ರತಂಡ ನವೆಂಬರ್ 14ರಂದು ಚಿತ್ತತಂಡವು ಮೆಲ್ಲುಸಿರೆ ಸವಿಗಾನ ಹಾಡನ್ನು ಬಿಡುಗಡೆ ಮಾಡಿದೆ.
ಪದ್ಮವಿಭೂಷಣ ಡಾ || ರಾಜ್ಕುಮಾರ್ ಅಭಿನಯ್ ವೀರ ಕೇಸರಿ ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು ಹಿರಿಯ ನಿರ್ದೇಶಕ ಭಗವಾನ್, ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ ಹಾಗೂ ಪತ್ರಕರ್ತ ಬಿ.ಗಣಪತಿ ಅವರು ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಡು ವೈರಲ್ ಆಗಿದ್ದು ಸಿನಿರಸಿಕರು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.
ನಿರ್ದೇಶಕ ಭಗವಾನ್ ಮಾತನಾಡಿ ಆ ಕಾಲದಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭ ಇರಲಿಲ್ಲ. ಈಗ ಹಾಗಲ್ಲ ತಂತ್ರಜ್ಞಾನ ಮುಂದುವರೆದಿದೆ. “ಮೆಲ್ಲುಸಿರೆ ಸವಿಗಾನ” ಹಾಡಿಗೆ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ರೀಷ್ಮಾ ನಾಣಯ್ಯ ಅಭಿನಯ, ಭೂಷಣ್ ನೃತ್ಯ ನಿರ್ದೇಶನ ಎಲ್ಲವೂ ಚೆನ್ನಾಗಿದೆ. ನಿರ್ದೇಶಕ ಭರತ್ ನನ್ನ ಶಿಷ್ಯ. ಚಿತ್ರಕ್ಕೆ ಒಳ್ಳೆಯ ನಾಯಕಿ ಎಂದಿದ್ದಾರೆ.
ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ ಅರವತ್ತರ ದಶಕದ ಈ ಹಾಡನ್ನು ಈಗಿನ ರೀತಿಗೆ ಚಿತ್ರೀಕರಿಸುವುದು ಕಷ್ಟಸಾಧ್ಯ. ಅದರೆ ಅದನ್ನು ನಿರ್ದೇಶಕ ಭರತ್ ಸಾಧ್ಯವಾಗಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ನಿರ್ದೇಶಕ ಭರತ್ ಮಾತನಾಡಿ ಈ ಹಾಡನ್ನು ದಾಂಡೇಲಿಯಲ್ಲಿ ಸುಮಾರು 250ಕ್ಕೂ ಅಧಿಕ ತಂತ್ರಜ್ಞರ ಪಾಲ್ಗೊಳ್ಳುವಿಕೆಯಲ್ಲಿ ಚಿತ್ರಿಸಿಕೊಳ್ಳಲಾಯಿತು. ಭೂಷಣ್ ನೃತ್ಯ ನಿರ್ದೇಶನದಲ್ಲಿ ರೀಷ್ಮಾ ನಾಣಯ್ಯ ಈ ಹಾಡುಗೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಐಶ್ವರ್ಯ ರಂಗರಾಜನ್ ಗಾಯನ ಹಾಗೂ ಮನೋಹರ್ ಜೋಷಿ ಅವರ ಛಾಯಾಗ್ರಹಣ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ವಿಶ್ವಾಸ್ ಕಲಾ ನಿರ್ದೇಶನ ಕೂಡ ಕಣ್ಮನ ಸೆಳೆಯುತ್ತದೆ. ಹಾಡು ಹಾಗೂ ಚಿತ್ರ ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರ ಸಹಕಾರ ಹಾಗೂ ನನ್ನ ಚಿತ್ರತಂಡದ ಶ್ರಮ ಕಾರಣ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹಿಸಿ ಎಂದು ವಿನಂತಿಸಿದ್ದಾರೆ.