ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ನೂತನ ಸರಕಾರ ವಿಶ್ವಾಸಮತ ಯಾಚನೆಗೆ ಕ್ಷಣಗಣನೆಗೂ ಮುನ್ನ ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯ ಶಾಸಕ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಮೈತ್ರಿ ಕಡಿದುಕೊಂಡ ನಿತೀಶ್ ಕುಮಾರ್, ಆರ್ ಜೆಡಿ ಪಕ್ಷದ ಮುಖಂಡ ತೇಜಸ್ವಿ ಯಾದವ್ ನೇತೃತ್ವದ ಲಾಲೂ ಪ್ರಸಾದ್ ಯಾದವ್ ಅವರ ಆರ್ ಜೆಡಿ ಪಕ್ಷದ ಜೊತೆಗೂಡಿ ಹೊಸ ಸರಕಾರ ರಚಿಸಿದ್ದರು. ನೂತನ ಸರಕಾರದ ವಿಶ್ವಾಸಮತ ಯಾಚನೆ ಬುಧವಾರ ನಡೆಯಲಿದೆ.
ಏಕಸದಸ್ಯ ಎಐಎಂಐಎಂ ತನ್ನ ಬೆಂಬಲವನ್ನು ನೀಡಲು ನಿರ್ಧರಿಸಿದ ನಂತರ 243 ಸದಸ್ಯರ ವಿಧಾನಸಭೆಯಲ್ಲಿ ಸರ್ಕಾರವನ್ನು ಬೆಂಬಲಿಸುವ ಶಾಸಕರ ಸಂಖ್ಯೆ 165ಕ್ಕೆ ಏರಿಕೆಯಾಗಿದೆ.
2 ಸ್ಥಾನಗಳು ಖಾಲಿ ಇರುವುದರಿಂದ ಸದನದ ಒಟ್ಟು ಬಲ 241 ಆಗಿದೆ. 7 ಪಕ್ಷಗಳ ಒಟ್ಟು 163 ಶಾಸಕರು ಮತ್ತು ಒಬ್ಬ ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ಆರ್ಜೆಡಿಯೊಂದಿಗೆ ಮತ್ತೆ ಕೈಜೋಡಿಸಲು ಬಿಜೆಪಿಯಿಂದ ಹೊರಬಂದಿದ್ದರು.
ಇದರ ಬೆನ್ನಲ್ಲೇ ಆಗಸ್ಟ್ 9ರಂದು ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಗೆ ತಮ್ಮ ಬೆಂಬಲವನ್ನು ನೀಡಿದ್ದರು. 165 ಶಾಸಕರು ಮಹಾಮೈತ್ರಿ ಸರ್ಕಾರವನ್ನು ಬೆಂಬಲಿಸುವ ಮೂಲಕ ಅಗತ್ಯವಿರುವ 121ಕ್ಕಿಂತ ಹೆಚ್ಚು ಶಾಸಕರ ಬಲ ನಿತೀಶ್ ಕುಮಾರ್ ಸರ್ಕಾರಕ್ಕೆ ಸಿಕ್ಕಿದಂತಾಗಿದೆ.
ಎಲ್ಲಾ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ್ ಸರ್ಕಾರವನ್ನು ಬೆಂಬಲಿಸಿರುವುದರಿಂದ ಬಿಜೆಪಿ ಕೇವಲ 76 ಶಾಸಕರ ಬಲ ಹೊಂದಿದೆ. ಈ ಮೂಲಕ ಬಿಜೆಪಿ ಬಿಹಾರದ ಏಕೈಕ ವಿರೋಧ ಪಕ್ಷವಾಗಲಿದೆ.