ಕೋವಿಡ್ ನಡುವೆಯೂ ದಕ್ಷಿಣ ಏಷ್ಯಾದ ನೆರೆ ರಾಷ್ಟ್ರಗಳು ಜನಗಣತಿ ನಡೆಸಿವೆ. ನಮ್ಮಲ್ಲಿ ನಡೆಯದಿರುವುದು ಕಳವಳಕಾರಿಯಾಗಿದೆ .
ಮೂಲ : ಅಜಿತ್ ರಾನಡೆ
ಭಾರತದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಸುವ ಪರಂಪರೆಯನ್ನು ನೂರು ವರ್ಷಗಳಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಕೇವಲ ಅಭಿವೃದ್ಧಿ ದೇಶಗಳ ಪೈಕಿಯಷ್ಟೇ ಅಲ್ಲದೆ ಜಗತ್ತಿನ ಇತರ ದೇಶಗಳ ಪೈಕಿ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವುದು ಭಾರತದ ಹಿರಿಮೆ. ಗಣತಿಯಲ್ಲಿ ಸಂಗ್ರಹಿಸಲಾಗುವ ದತ್ತಾಂಶವು ಬಹುಮಟ್ಟಿಗೆ ವಿಶ್ವಾಸಾರ್ಹವಾಗಿರುವುದೇ ಅಲ್ಲದೆ ಇಡೀ ಚಟುವಟಿಕೆಯನ್ನು ಬದ್ಧತೆಯೊಂದಿಗೆ, ಶ್ರದ್ಧೆಯಿಂದ ನಡೆಸಲಾಗುತ್ತದೆ. ಭಾರತದ ಜನಗಣತಿಯ ದತ್ತಾಂಶಗಳನ್ನು ಬಳಸಿಕೊಂಡು ನಡೆಸಿರುವ ಹಲವು ಸಂಶೋಧನೆಗಳಿಗೆ ಡಾಕ್ಟರೇಟ್ ಲಭಿಸಿದ್ದು ಚಾರಿತ್ರಿಕ ಆಡಳಿತ ನೀತಿಗಳ ಬಗ್ಗೆ ( ಪ್ರಮಾದಗಳು ಮತ್ತು ಯಶಸ್ಸುಗಳನ್ನೂ ಸೇರಿದಂತೆ) ಸಾಕಷ್ಟು ಒಳನೋಟಗಳನ್ನು ಒದಗಿಸಿವೆ. ಜನಗಣತಿಯ ದತ್ತಾಂಶಗಳು ಹಲವಾರು ಕ್ಷೇತ್ರಗಳಲ್ಲಿ ಉಪಯುಕ್ತವಾಗಿರುವುದೇ ಅಲ್ಲದೆ ದೇಶದ ಆರ್ಥಿಕ ಚರಿತ್ರೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನೂ ಒದಗಿಸುತ್ತಾ ಬಂದಿವೆ. ಈ ದಶವಾರ್ಷಿಕ ಜನಗಣತಿಯು ಜನಸಂಖ್ಯಾ ಹೆಚ್ಚಳವನ್ನಷ್ಟೇ ಅಲ್ಲದೆ, ಕುಟುಂಬ ಘಟಕಗಳು, ಕುಟುಂಬ ಸದಸ್ಯರ ಬಗ್ಗೆಯೂ ದಾಖಲಿಸುವುದೇ ಅಲ್ಲದೆ ವಯಸ್ಸು, ಫಲವತ್ತತೆ, ಸಾಕ್ಷರತೆ ಮತ್ತು ವಲಸೆಯ ಪ್ರಮಾಣಗಳನ್ನು ಕಣಕಣವೂ ಸಂಗ್ರಹಿಸುತ್ತದೆ.
ಜನಗಣತಿಯು ಆರ್ಥಿಕ ಸ್ಥಿತಿಯ ಸೂಚಿಯನ್ನು ನಿರ್ಧರಿಸಲು ನೆರವಾಗುವ ಉದ್ಯೋಗ ಮತ್ತು ಆದಾಯದ ವಿವರಗಳನ್ನೂ ಒದಗಿಸುತ್ತದೆ. ಈ ವಿವರಗಳನ್ನು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್ಎಸಒ) ಸಂಗ್ರಹಿಸುವುದಾದರೂ ಸಹ ಜನಗಣತಿಯಲ್ಲೂ ದಾಖಲಾಗುತ್ತದೆ. ಜನಗಣತಿಯನ್ನು ಕೇಂದ್ರ ಗೃಹ ಸಚಿವಾಲಯದ ಸುಪರ್ದಿಯಲ್ಲಿರುವ ಭಾರತೀಯ ರಿಜಿಸ್ಟ್ರಾರ್ ಜನರಲ್ ಮುಂದಾಳತ್ವದಲ್ಲಿ ನಡೆಸಲಾಗುತ್ತದೆ. ಎನ್ಎಸ್ಎಸ್ಒ ಸಮೀಕ್ಷೆಯು ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಯೋಜನೆಯ ಸಚಿವಾಲಯದ (MSOPI) ಸುಪರ್ದಿಯಲ್ಲಿ ನಡೆಯುತ್ತದೆ.
2021ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಬೇಕಿತ್ತು. ಮೊದಲನೆಯ ಹಂತದಲ್ಲಿ ವಾಸದ ಮನೆಗಳು, ಗೃಹಗಳ ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತದೆ. ಎರಡನೆ ಹಂತದಲ್ಲಿ ಜನಸಂಖ್ಯೆಯನ್ನು ಸಂಗ್ರಹಿಸಲಾಗುತ್ತದೆ. 2019ರ ಮಾರ್ಚ್ನಲ್ಲಿ ಕೇಂದ್ರ ಸರ್ಕಾರವು ತನ್ನ ಗೆಸೆಟ್ ಮೂಲಕ ಹತ್ತು ವರ್ಷಕ್ಕೊಮ್ಮೆ ನಡೆಸುವ ಜನಗಣತಿಯ ಅಧಿಸೂಚನೆಯನ್ನು ಹೊರಡಿಸಿತ್ತು. ಜನಗಣತಿಯ ಕಾರ್ಯಾಚರಣೆ ಆರಂಭವಾಗುವ ಮುನ್ನ ಪಟ್ಟಣ, ಗ್ರಾಮ, ಜಿಲ್ಲೆ ಮತ್ತು ಜನಗಣತಿಯ ಪಟ್ಟಣಗಳ ವ್ಯಾಪ್ತಿ ಮಿತಿಗಳನ್ನು ನಿರ್ಧರಿಸಿ ನಿರ್ಬಂಧ ಹೇರಬೇಕಾಗುತ್ತದೆ. ಜನಗಣತಿಯ ಮೊದಲನೆಯ ಹಂತವನ್ನು 2020ರ ಏಪ್ರಿಲ್ನಿಂದ ಸೆಪ್ಟಂಬರ್ ಅವಧಿಯಲ್ಲಿ ಕೈಗೊಳ್ಳಬೇಕಿತ್ತು. ಆನಂತರ ಎರಡನೆ ಹಂತವನ್ನು ಆರಂಭಿಸಬೇಕಿತ್ತು. ಹಾಗಾಗಿದ್ದಲ್ಲಿ 2021ರ ಏಪ್ರಿಲ್ ವೇಳೆಗೆ ಪ್ರಾಥಮಿಕ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಬಹುದಿತ್ತು.
ಈ ವೇಳಾಪಟ್ಟಿಯನ್ನು ಕೋವಿದ್ ಸಾಂಕ್ರಾಮಿಕವು ಭಂಗಗೊಳಿಸಿತ್ತು. ಆರಂಭದಲ್ಲಿ ಗಡಿಗಳನ್ನು ನಿಗದಿಪಡಿಸುವ ಪ್ರಕ್ರಿಯೆಯನ್ನು 2020ರ ಅಂತ್ಯದವರೆಗೆ ವಿಸ್ತರಿಸಲಾಯಿತು. ಪುನಃ ಇದನ್ನು 2021ರ ಅಂತ್ಯದವರೆಗೆ ವಿಸ್ತರಿಸಲಾಯಿತು. ಆಗಿನಿಂದಲೂ ಮೂರು ಬಾರಿ ಮುಂದೂಡಲಾಗಿದ್ದು ಇತ್ತೀಚೆಗೆ ಹೊರಡಿಸಲಾದ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ಅಧಿಸೂಚನೆಯಲ್ಲಿ( ಇದು ಗೃಹಸಚಿವಾಲಯದ ಸುಪರ್ದಿಯಲ್ಲಿರುತ್ತದೆ) ಗಡಿಗಳನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಜೂನ್ 2023ರವರೆಗೂ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ. ಈ ಪ್ರಕ್ರಿಯೆಯನ್ನು ಕರಾರುವಾಕ್ಕಾಗಿ ನಡೆಸಲು ಕನಿಷ್ಠ 10-11 ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎನ್ನುವ ಅಂಶವನ್ನು ಪರಿಗಣಿಸಿದರೆ, ಈ ಪ್ರಕ್ರಿಯೆಯು 2024ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಬಹುದಾದ ಸಂಭಾವ್ಯ ಲೋಕಸಭಾ ಚುನಾವಣೆಗಳಿಂದ ಮತ್ತೊಮ್ಮೆ ಬಾಧಿತವಾಗುತ್ತದೆ. ಅಂದರೆ 2021ರ ಜನಗಣತಿಯನ್ನು , ಕೋವಿದ್ ಸಾಂಕ್ರಾಮಿಕ ಮತ್ತು ಲಸಿಕಾ ಕಾರ್ಯಾಚರಣೆಯ ನೆಪದಲ್ಲಿ ನಾಲ್ಕು ವರ್ಷಗಳ ಕಾಲ ಮುಂದೂಡಿದಂತಾಗುತ್ತದೆ. ಜುಲೈ 2023ರಿಂದ ಮಾರ್ಚ್ 2024ರ ನಡುವೆ, ಅಪಕ್ವವಾದರೂ ಅಲ್ಪಕಾಲಿಕವಾದ ಮಾದರಿಯನ್ನು ಅನುಸರಿಸಿ ಜನಗಣತಿ ಪ್ರಕ್ರಿಯೆಯನ್ನು ಕೈಗೊಳ್ಳಬಹುದಾಗಿದೆ. ಆದರೆ ಹೀಗಾಗುವ ಸಂಭವ ಕಂಡುಬರುತ್ತಿಲ್ಲ.
ಇದರಿಂದ ಭಾರಿ ಪರಿಣಾಮಗಳುಂಟಾಗುತ್ತವೆ. ಮೊದಲನೆಯದಾಗಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಎನ್ಎಫ್ಎಸ್ಎ) ಅನ್ವಯ ಈ ಕಾಯ್ದೆಯ ವ್ಯಾಪ್ತಿಗೆ ಗ್ರಾಮೀಣ ಭಾಗದ ಶೇ 75ರಷ್ಟು ಮತ್ತು ನಗರಗಳ ಶೇ 50ರಷ್ಟು ಜನಸಂಖ್ಯೆಯನ್ನು ಕಡ್ಡಾಯವಾಗಿ ಒಳಪಡಿಸಬೇಕಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಎನ್ಎಫ್ಎಸ್ಎ ಕಾಯ್ದೆಯಡಿ 81 ಕೋಟಿ ಜನರಿಗೆ ಉಚಿತ ಪಡಿತರ ನೀಡುವುದಾಗಿ ಘೋಷಿಸಿದೆ. ಆದರೆ ಈ ಸಂಖ್ಯೆಗೆ ಆಧಾರವಾಗಿರುವುದು 2011ರ ಜನಗಣತಿ. 2022ರವರೆಗಿನ ಜನಸಂಖ್ಯಾ ಅಂದಾಜಿನ ಪ್ರಕಾರ ಈ ಸಂಖ್ಯೆ ಕನಿಷ್ಠ 10 ಕೋಟಿಯಷ್ಟಾದರೂ ಕಡಿಮೆ ಕಾಣುತ್ತದೆ. ಇದು ಅಪಾರ ಸಂಖ್ಯೆಯ ಕುಟುಂಬಗಳಿಗೆ, ವಿಶೇಷವಾಗಿ ಮಕ್ಕಳಲ್ಲಿ, ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಸ್ಥಿತ್ಯಂತರಗಳನ್ನು ನಿರ್ಧರಿಸುವಲ್ಲಿ ತೊಡಕುಂಟುಮಾಡುತ್ತದೆ.
ಎರಡನೆಯದಾಗಿ, ವಿವಿಧ ಸರ್ಕಾರಿ ಯೋಜನೆಗಳು ಬಾಧಿತವಾಗುತ್ತವೆ. ಉದಾಹರಣೆಗೆ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ (National Social Assistance Program) ಯಡಿ ಹಿರಿಯ ನಾಗರಿಕರಿಗೆ ನೀಡಲಾಗುವ ಪಿಂಚಣಿಯನ್ನು ನೀಡುವಲ್ಲಿ, ನಿಖರ ಜನಗಣತಿಯ ಸಂಖ್ಯೆ ಲಭ್ಯವಿಲ್ಲದಿರುವುದರಿಂದ, ಗುರಿ ಮುಟ್ಟುವುದು ಅಸಾಧ್ಯವಾಗುತ್ತದೆ. ಈ ಯೋಜನೆಗಳಿಗೆ ಬಜೆಟ್ ಹಣವನ್ನು ಮೀಸಲಿಡಬೇಕಾದರೆ, ಫಲಾನುಭವಿಗಳ ಸಂಖ್ಯೆಯ ನಿಖರ ಅಂದಾಜನ್ನು ನಿರ್ಧರಿಸಬೇಕಿರುತ್ತದೆ. ಮೂರನೆಯದಾಗಿ ಭಾರತದಲ್ಲಿ ವಲಸೆಗಾರರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿಯ ಅವಶ್ಯಕತೆ ಇದೆ. ಜನಗಣತಿಯಲ್ಲಿ ವಲಸೆಗಾರರು ಎಂದರೆ ತಾವು ಹುಟ್ಟಿದ ಊರಿನಿಂದ ಹೊರಗೆ ಬೇರೆ ಪ್ರದೇಶಗಳಲ್ಲಿ ದುಡಿಮೆಮ ಮಾಡುವವರೆಂದು ವ್ಯಾಖ್ಯಾನಿಸಲಾಗಿದೆ. ಎಷ್ಟು ಜನ ವಲಸೆಗಾರರಿದ್ದಾರೆ ? ಅವರ ಪೈಕಿ ಎಷ್ಟು ಜನ ಕಾಲಿಕ ವಲಸೆಗಾರರು, ಎಷ್ಟು ದೀರ್ಘಕಾಲಿಕ ವಲಸೆಗಾರರಿದ್ದಾರೆ ? ಕೋವಿದ್ ಲಾಕ್ ಡೌನ್ ಸಂದಬ್ಭದಲ್ಲಿ ನಗರಗಳಲ್ಲಿದ್ದ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಸಾವಿರಾರು ಕಿಲೋಮೀಟರ್ ನಡೆದುಹೋಗಿರುವುದನ್ನು ಕಂಡಿದ್ದೇವೆ. ವಲಸೆಗಾರರ ಚಿತ್ರಣವನ್ನು ನಿಖರವಾಗಿ ನೀಡಬೇಕೆಂದರೆ ಜನಗಣತಿಯ ಅಂಕಿಸಂಖ್ಯೆಗಳು ಅತ್ಯವಶ್ಯವಾಗಿರುತ್ತದೆ.
ನಾಲ್ಕನೆಯದಾಗಿ, ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ನಿರ್ಧಾರಣೆ ಮಾಡುವಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸ್ಥಿತಿ ಏನಾಗಿದೆ ? ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಿದ ಶೌಚಾಲಯಗಳಲ್ಲಿ ಎಷ್ಟು ಬಳಕೆಯಾಗುತ್ತಿವೆ ? ಮನೆಗಳಿಗೆ ನಲ್ಲಿನೀರಿನ ಸಂಪರ್ಕವನ್ನು ಒದಗಿಸುವ ಯೋಜನೆಯ ವಸ್ತುಸ್ಥಿತಿ ಏನಿದೆ ? ಜನಗಣತಿಯಲ್ಲಿ ಲಭ್ಯವಾಗುವ ಸೂಕ್ಷ್ಮ ಅಂಕಿಅಂಶಗಳ ವಿಶ್ಲೇಷಣೆಯ ಮೂಲಕ ನಾವು ಇಂತಹ ಸಾವಿರಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಜನಗಣತಿ ಎನ್ನುವುದು ಸರ್ಕಾರದ ಲೆಕ್ಕಪರಿಶೋಧನೆ ಅಥವಾ ಸಾಮಾಜಿಕ ಲೆಕ್ಕಪರಿಶೋಧನೆಗೆ ಪರ್ಯಾಯ ಆಗುವುದಿಲ್ಲ. ಆದರೆ ಈ ಮಾಹಿತಿಯು ನಿಖರವಾಗಿರುವುದರಿಂದ ಮತ್ತು ಅಧಿಕೃತವಾಗಿರುವುದರಿಂದ ಸರ್ಕಾರದ ಉತ್ತರದಾಯಿತ್ವವನ್ನು ಅಳೆಯಲು ಇವು ಸಹಾಯಕವಾಗುತ್ತವೆ.
ಈ ದೃಷ್ಟಿಯಿಂದಲೇ ಭಾರತದ ಸಂಖ್ಯಾಶಾಸ್ತ್ರದ ಪದ್ಧತಿಯನ್ನು ಪುನರ್ ಪರಿಷ್ಕರಣೆಗೊಳಪಡಿಸಲು ಶಿಫಾರಸು ಮಾಡಿದ್ದ 2001ರ ರಂಗರಾಜನ್ ಆಯೋಗದ ವರದಿಯು ಮುಖ್ಯವಾಗುತ್ತದೆ. ಈ ಆಯೋಗದ ವರದಿಯಲ್ಲಿ, ಅಂಕಿಅಂಶಗಳ ಶಾಶ್ವತ ಆಯೋಗವನ್ನು ರಚಿಸುವಂತೆ ಶಿಫಾರಸು ಮಾಡಲಾಗಿದ್ದು, ಈ ಆಯೋಗವು ಅಧಿಕಾರಯುತ ಕೇಂದ್ರ ಸಂಸ್ಥೆಯ ರೂಪದಲ್ಲಿ, ಸರ್ಕಾರಕ್ಕೆ ಅಲ್ಲದಿದ್ದರೂ, ಸಂಸತ್ತಿಗೆ ಉತ್ತರದಾಯಿಯಾಗಿರಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ ತಾತ್ವಿಕ ನೆಲೆಯಲ್ಲಿ ಈ ಹೆಜ್ಜೆ ಅಪೂರ್ಣವಾಗಿಯೇ ಉಳಿದಿದೆ. ಅಧಿಕಾರಯುಕ್ತ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಆಯೋಗವು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತದೆ. ರಿಜಿಸ್ಟ್ರಾರ್ ಜನರಲ್ ಸಂಸ್ಥೆಯು ಕೇಂದ್ರ ಗೃಹ ಸಚಿವಾಲಯದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ವಿಶ್ವಾಸಾರ್ಹ, ಅಧಿಕೃತ ದತ್ತಾಂಶಗಳು ಸಾರ್ವಜನಿಕ ಒಳಿತಿಗೆ ಉಪಯುಕ್ತ. ಹಾಗಾಗಿ ಈ ದತ್ತಾಂಶಗಳ ಸಂಗ್ರಹಣೆಯನ್ನು ನಿಯತಕಾಲಿಕವಾಗಿ, ಪ್ರಾಮಾಣಿಕತೆಯಿಂದ, ಭವಿಷ್ಯವನ್ನು ಗ್ರಹಿಸಲು ಶಕ್ಯವಾಗುವ ರೀತಿಯಲ್ಲಿ ಮಾಡಬೇಕೀದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಅನೇಕ ಯೋಜನೆಗಳಿಗೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ , ಜನಸಂಖ್ಯೆ, ಜಿಡಿಪಿ, ಬಳಕೆಯ ಪ್ರಮಾಣ, ವಲಸೆಗಾರರ ಚಲನೆ, ಆದಾಯ ಮತ್ತು ಸಂಪತ್ತಿನ ವಿತರಣೆ ಇವೆಲ್ಲದಕ್ಕೂ , ಈ ದತ್ತಾಂಶಗಳೇ ಆಧಾರವಾಗಿರುತ್ತವೆ. ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಆಯೋಗದ ಅಧಿಕಾರ ವ್ಯಾಪ್ತಿಯಲ್ಲಿ ನಡೆಸಲಾಗಿದ್ದ ಗ್ರಾಹಕ ವೆಚ್ಚವನ್ನು ಆಧರಿಸಿದ ಸಮೀಕ್ಷೆಯೊಂದನ್ನು ಬಹಿರಂಗಪಡಿಸದೆ ಮುಚ್ಚಿಡಲಾಗಿದೆ. ಇದನ್ನು ಪ್ರತಿಭಟಿಸಿ ಮತ್ತಿತರ ಕಾರಣಗಳಿಗಾಗಿ ಆಯೋಗದ ಎಲ್ಲ ಸದಸ್ಯರೂ ರಾಜೀನಾಮೆ ನೀಡಿದ್ದರು. ಈಗ ಈ ಸಂಸ್ಥೆಯ ಪುನಾರಚನೆ ಮಾಡಲಾಗಿದೆ. ಆದರೂ ಆತಂಕ ಪಡಲು ಕಾರಣಗಳಿವೆ. ಜನಗಣತಿಯಾಗಲೀ, ಅರ್ಥವ್ಯವಸ್ಥೆಯಾಗಲೀ, ಸಾರ್ವಜನಿಕ ದತ್ತಾಂಶದ ವಿಶ್ವಾಸಾರ್ಹತೆ ಮತ್ತು ಉತ್ತರದಾಯಿತ್ವಕ್ಕೆ ಮೂಲ ಆಧಾರ ಇರುವುದು ಈ ದತ್ತಾಂಶ ಸಂಗ್ರಹಣೆ ಮಾಡುವ ಸಂಸ್ಥೆಗಳ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆ ಮತ್ತು ವಿಶ್ವಾಸ. ಯಾವುದೇ ರೀತಿಯ ವಿಳಂಬ ಅಥವಾ ಏಕಾಏಕಿ ನಿಗ್ರಹ ಅಪನಂಬಿಕೆಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ವರದಿಯಲ್ಲಿ ಲೋಪದೋಷಗಳು ಇದ್ದರೂ ಸಹ ಅದನ್ನು ಬಿಡುಗಡೆ ಮಾಡುವ ಮೂಲಕ ಸಾರ್ವಜನಿಕರಿಗೆ, ತಜ್ಞರಿಗ್ ವಿಶ್ಲೇಷಣೆ ಮಾಡಲು ಅವಕಾಶ ಕಲ್ಪಿಸಬಹುದು.
ಕೋವಿದ್ ಸಾಂಕ್ರಾಮಿಕದ ನಡುವೆಯೂ ನಮ್ಮ ದಕ್ಷಿಣ ಏಷಿಯಾದ ನೆರೆ ರಾಷ್ಟ್ರಗಳಲ್ಲೂ ಜನಗಣತಿಯನ್ನು ಪೂರೈಸಿರುವ ಸಂದರ್ಭದಲ್ಲಿ ಭಾರತದಲ್ಲಿ ರಾಷ್ಟ್ರೀಯ ಜನಗಣತಿಯನ್ನು ನಡೆಸುವಲ್ಲಿ ಆಗುತ್ತಿರುವ ವಿಳಂಬವು ಕಳವಳಕ್ಕೆ ಕಾರಣವಾಗಿದೆ. ಸರ್ಕಾರವು ಆಧುನಿಕ ತಂತ್ರಜ್ಞಾನವನ್ನು ಬಳಸಿ ಇಡೀ ಪ್ರಕ್ರಿಯೆಯನ್ನು ಕಡಿಮೆ ಮಾಡುವುದರ ಮೂಲಕ ಶೀಘ್ರಗತಿಯಲ್ಲಿ ದತ್ತಾಂಶಗಳನ್ನು ಪ್ರಮಾಣೀಕರಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ದತ್ತಾಂಶಗಳನ್ನು ಒದಗಿಸುವುದು ಒಳಿತು.
ಅನುವಾದ : ನಾ ದಿವಾಕರ
(ಲೇಖಕರು ಪ್ರಸಿದ್ಧ ಅರ್ಥಶಾಸ್ತ್ರಜ್ಞರು – ಮೂಲ : ಸಿಂಡಿಕೇಟ್- ದ ಬಿಲಿಯನ್ ಪ್ರೆಸ್ )