ಸಿಗಂದೂರು ದೇವಾಲಯದ ವಿವಾದಿತ ಅಭಯಾರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ಮುಂದುವರಿಸಿರುವ ರಾಜ್ಯ ಹೈಕೋರ್ಟ್, ತೆರವುಗೊಂಡ ಪ್ರದೇಶವನ್ನು ಹೊರತುಪಡಿಸಿ, ದೇವಾಲಯದ ಸುಪರ್ದಿಯಲ್ಲಿರುವ ಜಾಗದಲ್ಲಿರುವ ಕಟ್ಟಡಗಳ ಲೈಸೆನ್ಸ್, ಡಿಮ್ಯಾಂಡ್ ವಿಷಯದಲ್ಲಿ ಪಂಚಾಯ್ತಿ ಮತ್ತು ಸ್ಥಳೀಯ ಅಧಿಕಾರಿಗಳ ಪಾತ್ರದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಸಿಗಂದೂರು ಚೌಡೇಶ್ವರಿ ದೇವಾಲಯದ ಹೆಸರಿನಲ್ಲಿ ದೇವಾಲಯದ ಧರ್ಮದರ್ಶಿ ರಾಮಪ್ಪ ಮತ್ತು ಅವರ ಕುಟುಂಬ ಶರಾವತಿ ಅಭಯಾರಣ್ಯವೂ ಸೇರಿದಂತೆ ಕಳಸವಳ್ಳಿ ಗ್ರಾಮದ ಸರ್ವೆ ನಂಬರ್ 65, 56, 55 ಮತ್ತು 54ರ ವ್ಯಾಪ್ತಿಯ ಅಪಾರ ಭೂಮಿಯನ್ನು ಕಬಳಿಸಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ.ಸೂರಜ್ ಗೋವಿಂದ್ ರಾಜು ಅವರನ್ನೊಳಗೊಂಡ ಪೀಠ, ಈ ಆದೇಶ ನೀಡಿದೆ.

ಸಿಗಂದೂರು ದೇವಾಲಯದ ಧರ್ಮದರ್ಶಿ ನಡೆಸಿದ್ದಾರೆ ಎನ್ನಲಾದ ಭಾರೀ ಭೂ ಕಬಳಿಕೆ ಕುರಿತು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 22ರಂದು ತಾನು ನೀಡಿದ್ದ ಆದೇಶದಲ್ಲಿ ಪ್ರಸ್ತಾಪಿಸಿದ್ದ ಕಟ್ಟಡಗಳ ಪರವಾನಗಿ ಸಂಬಂಧಿಸಿದ ವಿಷಯದಲ್ಲಿ ಕೂಲಂಕಷ ತನಿಖೆ ನಡೆಸಿ ವರದಿ ನೀಡುವಂತೆ ಪೀಠ ಸೂಚಿಸಿದೆ.
ಹಿಂದಿನ ವಿಚಾರಣೆ ವೇಳೆ ಧರ್ಮದರ್ಶಿಗಳ ಪರ ವಕೀಲರು, ದೇವಾಲಯದಿಂದ ಒತ್ತುವರಿಯಾಗಿರುವ ಒಟ್ಟು 12.20 ಎಕರೆ ಜಾಗದ ಪೈಕಿ 6.16 ಎಕರೆ ಪ್ರದೇಶ ಖಾಲಿ ಇದ್ದು, ಅದನ್ನು ತಕ್ಷಣವೇ ಸರ್ಕಾರಕ್ಕೆ ವಾಪಸು ಬಿಟ್ಟುಕೊಡಲು ತಮ್ಮ ಕಕ್ಷಿದಾರರು ಸಿದ್ಧವಿದ್ದಾರೆ ಎಂದಿದ್ದರು. ಆದರೆ, ಆ ಬಳಿಕ ಕೋರ್ಟ್ ಸೂಚನೆಯಂತೆ ಸ್ಥಳಪರಿಶೀಲನೆ ನಡೆಸಿದ ಸಾಗರ ತಹಶೀಲ್ದಾರರು, ಆ ಜಾಗದಲ್ಲಿ ಕೆಲವು ಕಟ್ಟಡಗಳನ್ನು ನಿರ್ಮಿಸಿರುವುದನ್ನು ತಾವು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದರು. ಆಗ, ಧರ್ಮದರ್ಶಿ ರಾಮಪ್ಪ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಪೀಠ, ತರಾಟೆಗೆ ತೆಗೆದುಕೊಂಡಿತ್ತು. ಆ ಹಿನ್ನೆಲೆಯಲ್ಲಿ ಆ ಜಾಗದಲ್ಲಿರುವ ಕಟ್ಟಡಗಳನ್ನು ತಾವೇ ಖುದ್ದು ನೆಲಸಮಗೊಳಿಸಿಕೊಡುವುದಾಗಿ ಧರ್ಮದರ್ಶಿ ರಾಮಪ್ಪ ನ್ಯಾಯಾಲಯಕ್ಕೆ ಹೇಳಿದ್ದರು. ಅದರಂತೆ ಕಳೆದ ಮೇನಲ್ಲಿ ಒತ್ತುವರಿ ಜಾಗದಲ್ಲಿದ್ದ ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು.
ಆದರೆ, ತೆರವಾದ 6.16 ಎಕರೆ ಪ್ರದೇಶವನ್ನು ಹೊರತುಪಡಿಸಿ ಇನ್ನುಳಿದ 6 ಎಕರೆ ಜಾಗದಲ್ಲಿ ದೇವಸ್ಥಾನವೂ ಸೇರಿದಂತೆ ಟ್ರಸ್ಟ್ ಮತ್ತು ಆಡಳಿತ ಮಂಡಳಿಯ ಬೇರೆ ಬೇರೆ ಸಂಸ್ಥೆಗಳಿಗೆ ಸೇರಿದ ಕಟ್ಟಡಗಳಿವೆ. ‘ಆ ಕಟ್ಟಡಗಳಿಗೆಲ್ಲಾ ತಾವು ಪಂಚಾಯ್ತಿಯ ಪರವಾನಗಿ ತೆಗೆದುಕೊಂಡಿದ್ದೇವೆ’ ಎಂದು ಧರ್ಮದರ್ಶಿಗಳು ಪೀಠಕ್ಕೆ ಮಾಹಿತಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಪೀಠ, ಏಪ್ರಿಲ್ 22ರ ತನ್ನ ಆದೇಶದಲ್ಲಿ ಸರ್ಕಾರಿ ಜಾಗದಲ್ಲಿ ಯಾವ ದಾಖಲೆ ಇಲ್ಲದೆ ಪಂಚಾಯ್ತಿಯು ಹೇಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಮತ್ತು ಪರವಾನಗಿ ನೀಡಿತು ಎಂಬ ಬಗ್ಗೆ ತನಿಖೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಆದರೆ, ಹೈಕೋರ್ಟ್ ಆದೇಶಿಸಿ ಎರಡು ತಿಂಗಳು ಕಳೆದರೂ, ಜಿಲ್ಲಾಡಳಿತವಾಗಲೀ, ರಾಜ್ಯ ಸರ್ಕಾರವಾಗಲೀ ಆ ಬಗ್ಗೆ ಯಾವುದೇ ತನಿಖೆ ನಡೆಸಿ ವರದಿ ನೀಡಿರಲಿಲ್ಲ. ಆ ಹಿನ್ನೆಲೆಯಲ್ಲಿ ಈ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಬುಧವಾರ ಖಡಕ್ ಆದೇಶ ನೀಡಿದ್ದು, ಸರ್ಕಾರಿ ಜಾಗದಲ್ಲಿ ಭಾರೀ ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ ನೀಡಿದ ತುಮರಿ ಗ್ರಾಮ ಪಂಚಾಯ್ತಿಯ ಕ್ರಮದ ಕುರಿತು ತನಿಖೆ ನಡೆಸಿ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಹಿಂದೆ ಸಿಗಂದೂರು ಚೌಡೇಶ್ವರಿ ದೇವಾಲಯ ಟ್ರಸ್ಟ್ ಮತ್ತು ಧರ್ಮದರ್ಶಿ ರಾಮಪ್ಪ ಅವರಿಂದ ತುಮರಿ ಪಂಚಾಯ್ತಿ ವ್ಯಾಪ್ತಿಯ ಕಳಸವಳ್ಳಿಯಲ್ಲಿ ಶರಾವತಿ ಅಭಯಾರಣ್ಯ ಪ್ರದೇಶ ಸೇರಿದಂತೆ ನೂರಾರು ಎಕರೆ ಅರಣ್ಯಭೂಮಿ ಒತ್ತುವರಿಯಾಗಿರುವ ಬಗ್ಗೆ ‘ಪ್ರತಿಧ್ವನಿ’ ದಾಖಲೆ ಸಹಿತ ಸಾಕ್ಷಾತ್ ವರದಿ ಮಾಡಿತ್ತು. ಆ ವರದಿಯ ಹಿನ್ನೆಲೆಯಲ್ಲಿ ಸ್ಥಳೀಯ ಕೆಲವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಪೀಠ, ಕಳೆದ ನವೆಂಬರ್ ನಿಂದ ಹಲವು ಆದೇಶಗಳನ್ನು ನೀಡಿದ್ದು, ಆ ಆದೇಶಗಳನುಸಾರ ಈಗಾಗಲೇ ಒತ್ತುವರಿಯಾಗಿದ್ದ ಜಾಗದ ಪೈಕಿ 6.16 ಎಕರೆ ಜಾಗವನ್ನು ಅಲ್ಲಿದ್ದ ವಿವಿಧ ಕಟ್ಟಡಗಳ ಸಹಿತ ಸಂಪೂರ್ಣ ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ಪಡೆಯಲಾಗಿದೆ.
ದೇವಸ್ಥಾನ ಮತ್ತು ದೇವಸ್ಥಾನದ ಟ್ರಸ್ಟಿಗೆ ಸಂಬಂಧಿಸಿದ ಹಲವು ಕಟ್ಟಡಗಳಿರುವ ಸುಮಾರು 6 ಎಕರೆ ಪ್ರದೇಶದ ಬಹುತೇಕ ಜಾಗವನ್ನು ಆಕ್ರಮಿಸಿರುವ ವಿಶಾಲ ಸಭಾಂಗಣ, ಭೋಜನಶಾಲೆ, ಯಾಗಶಾಲೆ, ಹೋಟೆಲ್, ಲಾಡ್ಜ್, ಕಚೇರಿ ಸೇರಿದಂತೆ ಹತ್ತಾರು ಕಟ್ಟಡಗಳಿಗೆ ಪಂಚಾಯ್ತಿಯಿಂದ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಪಂಚಾಯ್ತಿಯಲ್ಲಿ ದೇವಾಲಯದ ಟ್ರಸ್ಟ್ ಹೆಸರಿನಲ್ಲಿ, ಅಕ್ರಮ ಕಟ್ಟಡಗಳಿಗೆ ಈವರೆಗೆ ಒಟ್ಟು 17 ಡಿಮ್ಯಾಂಡ್ ಪಡೆಯಲಾಗಿದ್ದರೂ ಅವು ಯಾವುವೂ ಕಟ್ಟಡ ನಿರ್ಮಾಣಕ್ಕೆ ಪೂರ್ವದಲ್ಲಿ ಕಾನೂನು ರೀತಿಯಲ್ಲಿ ಪರವಾನಗಿ(ಲೈಸೆನ್ಸ್) ಪಡೆದು ನಿರ್ಮಾಣದ ಮಾಡಿದ ಕಟ್ಟಡಗಳಲ್ಲ. ಜೊತೆಗೆ ದೇವಾಲಯ ಸೇರಿದಂತೆ ನಾಲ್ಕು ಮೂಲ ಕಟ್ಟಡಗಳಿಗೆ 80ರ ದಶಕಕ್ಕೆ ಹಿಂದೆ ಡಿಮ್ಯಾಂಡ್ ಪಡೆಯಲಾಗಿದ್ದರೆ, ಇನ್ನುಳಿದ 13 ಡಿಮ್ಯಾಂಡುಗಳನ್ನು ಕಳೆದ 10-12 ವರ್ಷದಲ್ಲಿ ಒಟ್ಟಿಗೇ ಪಡೆಯಲಾಗಿದೆ. ಆದರೆ,”ಕಟ್ಟಡ ನಿರ್ಮಾಣ ಪರವಾನಗಿ ಪಡೆದಿರುವ ಬಗ್ಗೆಯಾಗಲೀ, ಆ ಕುರಿತು ಅರ್ಜಿ ಸಲ್ಲಿಸಿದ ಬಗ್ಗೆಯಾಗಲೀ ಪಂಚಾಯ್ತಿಯಲ್ಲಿ ಯಾವುದೇ ದಾಖಲೆಗಳು ಲಭ್ಯವಿಲ್ಲ” ಎಂದು ಪ್ರತಿಧ್ವನಿಗೆ, ತುಮರಿ ಪಂಚಾಯ್ತಿಯ ಅಧಿಕಾರಿಗಳು ಈ ಹಿಂದೆಯೇ ಮಾಹಿತಿ ನೀಡಿದ್ದರು!
ಅಲ್ಲದೆ, ಸಿಗಂದೂರು ದೇವಾಲಯವೂ ಸೇರಿದಂತೆ ಕಳಸವಳ್ಳಿ ಸರ್ವೆನಂಬರ್ 65 ಮತ್ತು ಇತರೆ ಪ್ರದೇಶದಲ್ಲಿ ದೇವಾಲಯ ಟ್ರಸ್ಟ್ ಮಾಡಿರುವ ಒತ್ತುವರಿ ತೆರವು ಮಾಡುವಂತೆ 2015ರಲ್ಲಿಯೇ ಸಾಗರ ಉಪ ವಿಭಾಗಾಧಿಕಾರಿಗಳು ಆದೇಶಿಸಿದ್ದರು. ಆದರೆ, ಆ ಆದೇಶಕ್ಕೆ ಬಗರ್ ಹುಕುಂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿರುವ ನೆಪವೊಡ್ಡಿ ತಡೆಯಾಜ್ಞೆ ತರಲಾಗಿತ್ತು. ಆದಾಗ್ಯೂ, ತುಮರಿ ಪಂಚಾಯ್ತಿ ಅಲ್ಲಿನ ಕಟ್ಟಡಗಳಿಗೆ ಡಿಮ್ಯಾಂಡ್ ನೀಡಿ, ಕಂದಾಯ ವಸೂಲಿ ಮಾಡುತ್ತಿದೆ ಎಂಬುದು ಹಲವು ಪ್ರಶ್ನೆಗಳಿಗೆ ಎಡೆ ಮಾಡಿತ್ತು.

ಆ ಹಿನ್ನೆಲೆಯಲ್ಲಿ, ಇದೀಗ ನ್ಯಾಯಾಲಯ ಸರ್ಕಾರಿ ಜಾಗದಲ್ಲಿ, ಅದರಲ್ಲೂ ಶರಾವತಿ ಅಭಯಾರಣ್ಯ ವ್ಯಾಪ್ತಿಯ ಕಾಡು ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳಿಗೆ ಪಂಚಾಯ್ತಿ ಅಧಿಕಾರಿಗಳು ಹೇಗೆ ಪರವಾನಗಿ ನೀಡಿದರು ಮತ್ತು ಅದರಲ್ಲಿ ಅನುಸರಿಸಿದ ಕಾನೂನು ಕ್ರಮಗಳು ಯಾವುವು ಎಂಬ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.





