ಬಿಜೆಪಿ ವಿರುದ್ಧ ಸಮರ ಸಾರಲು ಡಿಜಿಟಲ್ ಜಗತ್ತಿನ ಮೇಲೆ ಹಿಡಿತ ಸಾಧಿಸಲೇಬೇಕು ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷ ಇನ್ನೂ ಬಂದಿಲ್ಲ ಎಂಬುದು ಅವರ ಕಾರ್ಯವೈಖರಿ ನೋಡಿದರೆ ತಿಳಿಯುತ್ತದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮ!
ಹೌದು, ಸತತ ಎರಡು ಲೋಕಸಭಾ ಚುನಾವಣೆ, ಕಳೆದ ಬಾರಿ ನಡೆದ ಕರ್ನಾಟಕ ವಿಧಾಸಭಾ ಚುನಾವಣೆಯ ನಂತರವೂ ಸಾಮಾಜಿಕ ಜಾಲತಾಣದ ಆಳ ಅಗಲದ ಬಗ್ಗೆ ಅರಿಯುವಲ್ಲಿ ಪಕ್ಷ ಕಾಂಗ್ರೆಸ್ ಸೋತಿದೆ. 2004ರಿಂದ 2014 ರವರೆಗೆ ಕೇಂದ್ರದಲ್ಲಿ ಆಡಳಿತ ನಡೆಸಿದ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್, ಆರ್ಥಿಕ ಸುಧಾರಣೆಯಿಂದಿಡಿದು ನರೇಗಾ ಮತ್ತು ಆಹಾರ ಭದ್ರತಾ ಕಾಯ್ದೆಯಂತಹ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದವು. ಆದರೆ ಈ ಕುರಿತು ಪ್ರಚಾರ ಮಾಡಿಕೊಳ್ಳುವುದರಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಸೋತಿತ್ತು. 2014 ಲೋಕಸಭಾ ಚುನಾವಣೆಯಲ್ಲಿ ಸಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ವಿರುದ್ಧ ಹರಡಿದ ಸಾವಿರಾರು ಸುಳ್ಳುಗಳು ಟ್ಯಾಕಲ್ ಮಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಯ್ತು. ಇದೇ ತಪ್ಪನ್ನು ಕರ್ನಾಟಕ ವಿಧಾನಸಭಾ ಚುನಾವಣೆ 2018ರಲ್ಲೂ ಮಾಡಿದ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿತು. ಸಿದ್ದರಾಮಯ್ಯ ಅವರ ಸಾಲು ಸಾಲು ಜನಪರ ಕಾರ್ಯಕ್ರಮ, ಯೋಜನೆ, ಸಾಲಮನ್ನ ದಂತಹ ದೊಡ್ಡ ಯೋಜನೆಗಳನ್ನು ಚುನಾವಣಾ ಪ್ರಚಾರ ಮಾಡದೇ ಚುನಾವಣೆಯಲ್ಲಿ ಮುಗ್ಗರಿಸಿತು.
ಈಗ ಮತ್ತೆ ಕರ್ನಾಟಕದ ಕಾಂಗ್ರೆಸ್ ಅದೇ ತಪ್ಪನ್ನು ಮುಂದುವರೆಸಿರುವಂತೆ ಕಾಣುತ್ತಿದೆ. ಹೌದು, ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರಿಗೆ ನೆರವಾಗುವುದಕ್ಕಿಂತ ರಾಜಕೀಯವಾಗಿ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಲಿದೆ ಎಂದು ಹೇಳಲಾಗುತ್ತಿದೆ. ಇದು ಮುಂದಿನ ಚುನಾವಣೆಯ ದಿಕ್ಸೂಚಿ ಎಂಬ ಮಾತನ್ನು ಅನೇಕ ರಾಜಕೀಯ ವಿಮರ್ಶಕರು ಹೇಳುತ್ತಿದ್ದಾರೆ. ಆದರೆ ಮಾಧ್ಯಮಗಳ ಬೆಂಬಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಿಗಬೇಕಾದ ದೊಡ್ಡ ಪ್ರಚಾರ ಇಲ್ಲದೇ ಈ ಅವಕಾಶವನ್ನು ಕಾಂಗ್ರೆಸ್ ಕೈ ಚೆಲ್ಲುತ್ತಿದೆಯೇ ಎಂಬ ಅನುಮಾನ ಕಾಡಲು ಶುರುವಾಗಿದೆ.
ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲೇ ಮಲತಾಯಿ ಧೋರಣೆ
ಬಹುತೇಕ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಲ್ಲಾ ಕ್ಷೇತ್ರದಲ್ಲೂ ಆಕ್ಟೀವ್ ಇದ್ದರೂ ಸಹ ಮಲತಾಯಿ ಧೋರಣೆ ತೋರುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಪತ್ರಿಕಾಗೋಷ್ಠಿಯಿಂದ ಹಿಡಿದು ಪ್ರತಿಭಟನೆವರೆಗೂ ಎಲ್ಲವನ್ನೂ ಪಕ್ಷದ ಅಧಿಕೃತ ಸಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಆದರೆ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಸೇರಿ ಇನ್ನಿತರ ಪ್ರಮುಖ ಹಿರಿಯ ನಾಯಕರ ಸುದ್ದಿಗೋಷ್ಠಿಯಾಗಲಿ, ಪ್ರತಿಭಟನೆಯಾಗಲಿ ಪಕ್ಷದ ಅಧಿಕೃತ ಸೈಟ್ ಗಳಲ್ಲಿ ದಾಖಲಾಗದೇ ಇರುವುದು ಕಾಂಗ್ರೆಸ್ ಆಂತರಿಕ ಭಿನ್ನಾಭಿಪ್ರಾಯ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಲೇಕನಿ ಪ್ರಕಟವಾದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ತಮ್ಮ ಅಧಿಕೃತ ಪೇಸ್ ಬುಕ್ ಪೇಜ್ನಲ್ಲಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದ ಲೈವ್ ಅನ್ನು ಯಾವುದೋ ಖಾಸಗಿ ಚಾನೆಲ್ ನಲ್ಲಿ ತೆಗೆದುಕೊಂಡಿದೆ. ಇದು ಕಾಂಗ್ರೆಸ್ ಸಮಾಜಿಕ ಜಾಲತಾಣದ ಸ್ಥಿತಿ.
ಒಗ್ಗಟ್ಟಿನ ಹೋರಾಟವಿಲ್ಲದ ಕರ್ನಾಟಕ ಕಾಂಗ್ರೆಸ್ :
ಒಟ್ಟಾಗಿ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದು ನಂತರ ಶಾಸಕರು ಅಭಿಪ್ರಾಯವನ್ನು ಕ್ರೂಢೀಕರಿಸಿ ಹೈಕಮಾಂಡ್ ಸಿಎಂ ಯಾರು ಎಂಬುದನ್ನು ಹೇಳು ಸಂಪ್ರದಾಯ. ಇದು ಕಾಂಗ್ರೆಸ್ ಪಕ್ಷದಲ್ಲಿ ಹಿಂದಿನಿಂದಲೂ ಇದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ವಿಚಾರಕ್ಕೆ ಡಿ.ಕೆ ಶಿವಕುಮಾರ್ ಮುಗಿಬಿದ್ದಿದ್ದಾರೆ. ಇತ್ತ ಸಿದ್ದರಾಮಯ್ಯನ ಅಭಿಮಾನಿಗಳು ಮತ್ತು ಶಾಸಕರು ಮುಂದಿನ ಸಿಎಂ ಸಿದ್ದುವೇ ಎಂಬ ಹೇಳಿಯಿಂದಾಗಿ ಹೈರಾಣಗಿರುವ ಡಿಕೆಶಿ ಹೈಕಮಾಂಡ್ ಗೆ ದೂರು ನೀಡಿದ್ದಾರೆ. ಮತ್ತು ಈತರ ಹೇಳಿಕೆ ನೀಡಿದವರ ವಿರುದ್ದ ಕಿಡಿಕಾರಿದ್ದಾರೆ ಸಹ. ಮಾತಿಗೆ ಪಕ್ಷವನ್ನು ಅಧಿಕಾರಕ್ಕೆ ತರೋಣ ನಂತರ ಸಿಎಂ ಯಾರು ಎಂಬುದನ್ನು ಗಾಂಧಿ ಪರಿವಾರ ನಿರ್ಧರಿಸುತ್ತದೆ ಎಂದು ಡಿಕೆಶಿ ಹೇಳುತ್ತಾರೆ. ಆದರೆ ತಮಗೇ ಸಿಎಂ ಸ್ಥಾನ ಸಿಗಬೇಕು ಎಂಬ ಬೇಡಿಕೆಯನ್ನು ಕೇಂದ್ರ ಹೈಕಮಾಂಡ್ ನಿಂದ ಹಿಡಿದು ರಾಜ್ಯದ ಶಾಸಕರವರೆಗೆ ಪ್ರಸ್ತಾಪಿಸಿದ್ದಾರೆ. ಈ ಕುರಿತು ಡಿಕೆಶಿ ಒಕ್ಕಲಿಗರ ಬೆಂಬಲವನ್ನು ಕೋರಿರುವುದು ಗೊತ್ತಿರುವ ವಿಷಯವೇ ಆಗಿದೆ.
ಇತ್ತ ಸಿದ್ದರಾಮಯ್ಯ ಅವರಿಗೆ 75 ವರ್ಷ ಆಗಿದ್ದು ಇದೇ ನನ್ನ ಕೊನೆ ಚುನಾವಣೆ ನಿಮ್ಮ ಅಭಿಮಾನ ಬೆಂಬಲ ಇದ್ದರೆ ಮತ್ತೆ ಸಿಎಂ ಆಗಿ ಜನ ಸೇವೆ ಮಾಡುತ್ತೇನೆ ಎಂದು ಮೈಸೂರಿನ ಸಭೆಯವೇಳೆ ಹೇಳಿಕೊಂಡಿದ್ದಾರೆ. ಇವರಿಬ್ಬರ ನಿಲುವನ್ನು ಅಥಾವಾ ಹೇಳಿಕೆಯನ್ನು ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಷಯವೇ. ಆದರೂ ಕಾಂಗ್ರೆಸ್ ಸಮಾಜಿಕ ಜಾಲತಾಣದಲ್ಲಿ ಇದನ್ನು ಟ್ಯಾಕಲ್ ಮಾಡಲು, ಕೌಂಟರ್ ನೀಡಲು ಸಾಧ್ಯವಾಗಿಲ್ಲ ಎಂಬುದು ಸತ್ಯ.