ಸಿದ್ದರಾಮಯ್ಯ ಓರ್ವ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿಗಳ ಪೋಷಕ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಹೌದು, ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಜಮೀರ್ ಅಹಮದ್ ಅಂತಹ ವ್ಯಕ್ತಿಯನ್ನು ಸಿದ್ದರಾಮಯ್ಯ ಪೋಷಿಸುತ್ತಿದ್ದಾರೆ. ಜಮೀರ್ ಅಹಮದ್ ಚಾಮರಾಜಪೇಟೆಯ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಡಲ್ಲ, ಗಣೇಶೋತ್ಸವ ಮಾಡಲು ಬಿಡಲ್ಲ ಅಂತಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು. ಆವತ್ತೆ ನಿಮಗೆ ಪ್ರತ್ಯೇಕ ದೇಶ ಕೊಟ್ಟಿದ್ದೇವೆ. ಇಲ್ಲಿ ಉಳಿದಿರುವವರು ಸಂವಿಧಾನಕ್ಕೆ ಗೌರವ ಕೊಟ್ಟು ಬದುಕುವುದು ಕಲಿಯಿರಿ.
ಸ್ವಾತಂತ್ರ್ಯಕ್ಕೆ ಆರ್ಎಸ್ಎಸ್, ಬಿಜೆಪಿ ಕೊಡುಗೆ ಏನು ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಚಳವಳಿ ಅಧಿಕೃತವಾಗಿ ಆರಂಭವಾಗಿದ್ದು 1857 ರಲ್ಲಿ. ಅದನ್ನು ಬ್ರಿಟಿಷರು ಸಿಪಾಯಿ ದಂಗೆ ಅಂತಾ ಕರೆದಿದ್ದರು. ಅದನ್ನು ಮೊದಲ ಸ್ವಾತಂತ್ರ್ಯ ಸಂಗ್ರಮ ಅಂತಾ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದು ಸಾವರ್ಕರ್. ಕಾಂಗ್ರೆಸ್ ಹುಟ್ಟೇ ಇರಲಿಲ್ಲ. ಇಂದಿನ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷಕ್ಕೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ಗೂ ಸಂಬಂಧವೆ ಇಲ್ಲ ಎಂದು ಹೇಳಿದ್ದಾರೆ.
ನೆಹರು, ಇಂದಿರಾ ಗಾಂಧಿ ಎಲ್ಲಿ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತರು? ಭಗತ್ ಸಿಂಗ್, ರಾಜಗುರುರಂತ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತರು. ಇವರೇನೂ ಕಾಂಗ್ರೆಸ್ನವರಾ? ಇತಿಹಾಸದ ಕನಿಷ್ಠ ಜ್ಞಾನವೂ ಸಿದ್ದರಾಮಯ್ಯಗೆ ಇಲ್ಲ ಎಂದಿದ್ದಾರೆ. ಕ್ರಾಂತಿಕಾರಿಗಳು ಸ್ವಾತಂತ್ರ್ಯ ತಂದು ಕೊಡುತ್ತಾರೆ ಎಂದು ಗೊತ್ತಿತ್ತು. ಆಗ, 1925ರಲ್ಲಿ ಸ್ವಾತಂತ್ರ್ಯ ಕಾಪಾಡಿ ಕೊಳ್ಳಲು ಆರ್ಎಸ್ಎಸ್ ಹುಟ್ಟಿತು. ಕನಿಷ್ಠ ವ್ಯತ್ಯಾಸವೂ ಸಿದ್ದರಾಮಯ್ಯಗೆ ಗೊತ್ತಿಲ್ಲ ಎಂದು ಅವರು ಕಿಡಿಕಾರಿದರು.