ವಿಷಯ: ವಿರೋಧ ಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರಿಗೆ ಕೊಲೆ ಬೆದರಿಕೆ ಹಾಕಿದ ವೀರಣ್ಣ ಮತ್ತು ಪ್ರಚೋದನಕಾರಿ ಹೇಳಿಕೆಯನ್ನು ಪ್ರೋತ್ಸಾಹಿಸಿದ ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕುರಿತು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದ್ ರಾಜ್ ದೂರು ಸಲ್ಲಿಸಿದ್ದು, ದಿನಾಂಕ 30 6 2022 ರಂದು ಕೋಮು ಭಾವನೆಯನ್ನು ಪ್ರಚೋದಿಸುವಂತೆ ಪಬ್ಲಿಕ್ ಟಿವಿ ವಾಹಿನಿಯಲ್ಲಿ ಸಾರ್ವಜನಿಕರ ಫೋನ್ ಇನ್ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ದಾವಣಗೆರೆಯಿಂದ ಕರೆ ಮಾಡಿದ ವೀರಣ್ಣ ಎಂಬಾತ ನೇರಪ್ರಸಾರದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರನ್ನು ಗುಂಡಿಟ್ಟು ಸಾಯಿಸಿದರೆ ಎಲ್ಲಾ ಸರಿಹೋಗುತ್ತದೆ ಎಂದು ಹತ್ಯೆ ಮಾಡಲು ಪ್ರಚೋದನೆ ನೀಡಿರುತ್ತಾನೆ. ಆತನ ಹೇಳಿಕೆಯನ್ನು ಕಾರ್ಯಕ್ರಮ ನಿರೂಪಕ ಅರುಣ್ ಬಡಿಗೇರ್ ತೀಕ್ಷ್ಣವಾಗಿ ಖಂಡಿಸುವುದನ್ನು ಬಿಟ್ಟು ಮತ್ತಷ್ಟು ಪ್ರಚೋದನಕಾರಿ ಮಾತನ್ನು ಹೇಳಲು ಪ್ರೋತ್ಸಾಹದಿಂದ ಮಾತನಾಡಿದ್ದಾರೆ.
ದೇಶದಾದ್ಯಂತ ಈಗಾಗಲೇ ಪರಿಸ್ಥಿತಿ ಉದ್ವಿಗ್ನವಾಗಿದ್ದು ಗೌರವಾನ್ವಿತ ಸುಪ್ರೀಂಕೋರ್ಟ್ ಕೂಡ ಇದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತೆ ಪಬ್ಲಿಕ್ ಟಿವಿಯಲ್ಲಿ ಪ್ರಚೋದನಕಾರಿ ಕಾರ್ಯಕ್ರಮ ಪ್ರಸಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರನ್ನು ಕೊಲೆ ಮಾಡುವಂತೆ ಪ್ರಚೋದನೆ ನೀಡಿರುವ ದಾವಣಗೆರೆ ಮೂಲದ ವೀರಣ್ಣ ಮತ್ತು ಆತನಿಗೆ ಪ್ರೋತ್ಸಾಹಿಸುವಂತೆ ವರ್ತಿಸಿರುವ ನಿರೂಪಕ ಅರುಣ್ ಬಡಿಗೇರ್ ಹಾಗೂ ಪ್ರಚೋದನಕಾರಿ ಪೋಸ್ಟ್ ಮಾಡಿರುವ ಪಬ್ಲಿಕ್ ಟಿವಿ ಫೇಸ್ಬುಕ್ ಖಾತೆ ಅಡ್ಮಿನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ದೂರಿನಲ್ಲಿ ಹೇಲಲಾಗಿದೆ.