ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಕಣ ದಿನದಿಂದ ರಂಗೇರುತ್ತಿದ್ದು ಈಗಾಗಲೇ ಸಂಸದ ಶಶಿ ತರೂರ್ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ತಮ್ಮ ಉಮೇದುವಾರಿಕೆಗಳನ್ನು ಸಲ್ಲಿಸಿದ್ದಾರೆ.
ಶುಕ್ರವಾರ ನಾಮಪತ್ರ ಸಲ್ಲಿಸಿದ ತರೂರ್ ತಮ್ಮ ಪ್ರಣಾಳಿಕೆಯಲ್ಲಿ ತಪ್ಪಾಗಿ ಪ್ರಕಟವಾಗಿರುವ ಭಾರತದ ಭೂಪಟವನ್ನ ಹಂಚಿಕೊಂಡು ಕೆಂಗಣ್ಣಿಗೆ ಗುರಿಯಾಗಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅತ್ತ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ತೊಡಗಿದ್ದರೆ ಇತ್ತ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವವರು ದೇಶವನ್ನ ಛಿದ್ರಗೊಳಿಸಲು ಯತ್ನಿಸುತ್ತಿದ್ದಾರೆ.
ಬಹುಶಃ ಗಾಂದಿಗಳಿಗೆ ಆಪ್ತರಾಗಲು ಇದು ಸಹಕಾರಿಯಾಗುತ್ತದೆ ಎಂದು ಅವರು ಭಾವಿಸಿರಬಹುದು ಎಂದು ಚಾಟಿ ಬೀಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿ ಕ್ಷಮೆ ಕೋರಿರುವ ಶಶಿ ತರೂರ್ ನನ್ನ ಪ್ರಣಾಳಿಕೆಯಿಂದಾದ ಪ್ರಮಾದದ ಬಗ್ಗೆ ಟ್ರೋಲ್ಗಳ ದೊಡ್ಡ ಬಿರುಗಾಳಿಯೆ ಎದ್ದಿದೆ. ಆದರೆ, ಯಾರೂ ಸಹ ಇಂತಹ ತಪ್ಪನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ.
ಸ್ವಯಂಸೇವಕರ ಸಣ್ಣ ತಂಡವೊಂದು ಈ ತಪ್ಪು ಮಾಡಿದೆ ನನ್ನ ಗಮನಕ್ಕೆ ಬಂದ ಕೂಡಲ್ಲೇ ಸರಿಪಡಿಸಿದ್ದೇನೆ. ಈ ಪ್ರಮಾದಕ್ಕೆ ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿ ಕ್ಷಮೆ ಕೋರಿದ್ದಾರೆ.