ಕರೋನಾ ವೈರಸ್ ಭಾರತದ ಸಾಮಾಜಿಕ, ಆರ್ಥಿಕ ರಚನೆಯ ಮೇಲೆ ಬೀರಿದಷ್ಟೇ ಪ್ರತಿಕೂಲ ಪರಿಣಾಮ ಮಾನಸಿಕ ಆರೋಗ್ಯದ ಮೇಲೂ ಬೀರಿದೆ. ಉದ್ಯೋಗ ನಷ್ಟ, ವಸತಿ ಸಮಸ್ಯೆ, ಆತ್ಮೀಯರ ಅಗಲಿಕೆಗಳಂತಹ ನಾನಾ ಕಾರಣಗಳು ಸೃಷ್ಟಿಸಿದ ಒತ್ತಡ ಮತ್ತು ಆತಂಕ ಅಷ್ಟಿಷ್ಟಲ್ಲ. ಒತ್ತಡವನ್ನು ನಿಭಾಯಿಸಲಾಗದವರಿಗೆಂದೇ ದೇಶದ ಹದಿಮೂರು ಭಾಷೆಗಳಲ್ಲಿ KIRAN ಎಂಬ ಹೆಲ್ಪ್ಲೈನ್ ತೆರೆಯಲಾಗಿತ್ತು.
ಈ ಹೆಲ್ಪ್ಲೈನ್ ಅನ್ನು ಸಪ್ಟೆಂಬರ್ 16ರಂದು ತೆರೆಯಲಾಗಿದ್ದು, ಸೆಪ್ಟೆಂಬರ್ ಮತ್ತು ಮೇ 31 ರ ನಡುವೆ ಸಹಾಯವಾಣಿಗೆ ಒಟ್ಟು 29,975 ಕರೆಗಳು ಬಂದಿದ್ದವು ಎಂದು ಅಧ್ಯಯನವೊಂದು ತಿಳಿಸಿದೆ. ಈ ಪೈಕಿ 69.9 ರಷ್ಟು ಕರೆಗಳು ಪುರುಷರಿಂದ ಬಂದಿದ್ದರೆ, ಉಳಿದ 30.1 ಶೇಕಡಾ ಮಹಿಳೆಯರಿಂದ ಬಂದಿದೆ ಎಂದು ಸರ್ಕಾರ ಹೇಳಿದೆ. ಅಲ್ಲದೆ ಶೇಕಡಾ 76.8ರಷ್ಟು ಮಂದಿ 15-40 ವರ್ಷ ವಯಸ್ಸಿನವರಾಗಿದ್ದರೆ, 16.8 ಶೇಕಡಾ ಜನ 41 ರಿಂದ 60 ವರ್ಷದೊಳಗಿನವರು ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.
ಕರೆ ಮಾಡಿದವರಲ್ಲಿ ಅತಿ ಹೆಚ್ಚು ಶೇಕಡಾವಾರು ವಿದ್ಯಾರ್ಥಿಗಳು (ಶೇಕಡಾ 32.6), ನಂತರದ ಸ್ಥಾನದಲ್ಲಿ ವೃತ್ತಿಪರರು (ಶೇ 25.5) ಇದ್ದರು. ಶೇ 20.4 ನಿರುದ್ಯೋಗಿಗಳು , ಶೇ 14.2 ಸ್ವಯಂ ಉದ್ಯೋಗಿಗಳು ಮತ್ತು ಶೇ 4.4 ಗೃಹಿಣಿಯರೂ ಕರೆ ಮಾಡಿದ್ದಾರೆ . ಸರ್ಕಾರದ ದಾಖಲೆಯ ಪ್ರಕಾರ, ಶೇಕಡಾ 2.9 ರಷ್ಟು ಕರೆ ಮಾಡಿದವರು ತಮ್ಮ ಬಗ್ಗೆ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿಲ್ಲ.
ಈ ಅವಧಿಯಲ್ಲಿ ಪ್ರತಿ ತಿಂಗಳು ಸರಾಸರಿ 3,700 ಕ್ಕೂ ಹೆಚ್ಚು ಕರೆಗಳನ್ನು ಸಹಾಯವಾಣಿ ಸ್ವೀಕರಿಸುತ್ತಿತ್ತು. ಇವುಗಳಲ್ಲಿ, ಶೇಕಡಾ 50 ಕ್ಕಿಂತ ಸ್ವಲ್ಪ ಹೆಚ್ಚು ಖಿನ್ನತೆ ಮತ್ತು ಆತಂಕದ ಸಮಸ್ಯೆಗಳಿಗೆ ಸಂಬಂಧಿಸಿದ್ದವುಗಳಾಗಿದ್ದವು.
“ಜನರು ತಮ್ಮ ಕುಟುಂಬ ಸದಸ್ಯರು ,ಅವರ ಆರೋಗ್ಯ ಮತ್ತು ಅವರ ಭವಿಷ್ಯದ ಬಗ್ಗೆ ಭಯಭೀತರಾಗಿದ್ದರು” ಎಂದು ನೊಯ್ಡಾದ ಬೌದ್ಧಿಕ ವಿಕಲಾಂಗರ ಸಬಲೀಕರಣ ಸಂಸ್ಥೆ (NIEPID)ಯ ಸಹಾಯವಾಣಿಯನ್ನು ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.
“ಸಾಂಕ್ರಾಮಿಕದ ಕಾರಣದಿಂದಾಗಿ ಸಾಮಾಜಿಕ ಕಾರ್ಯಚಟುವಟಿಕೆಯಲ್ಲಾದ ವ್ಯತ್ಯಯದಿಂದಾಗಿ ಖಂಡಿತವಾಗಿಯೂ ಖಿನ್ನತೆ ಮತ್ತು ಆತಂಕದ ವಿಚಾರದಲ್ಲೇ ಹೆಚ್ಚಿನ ಕರೆಗಳು ಬಂದಿವೆ” ಎಂದೂ ಅವರು ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ವಿಕಲಾಂಗರ ಸಬಲೀಕರಣಕ್ಕಾಗಿ (ಡಿಇಪಿಡಬ್ಲ್ಯುಡಿ) ಅಭಿವೃದ್ಧಿಪಡಿಸಿದ ಕಿರಣ್ ಸಹಾಯವಾಣಿ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವವರಿಗೆ ಮೊದಲ ಹಂತದ ಆಪ್ತ ಸಮಾಲೋಚನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ
ಸಹಾಯವಾಣಿ ಸೇವೆ (1800-599-0019)ಯು 13 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. 25 ಸಹಾಯವಾಣಿ ಕೇಂದ್ರಗಳಿವೆ. ಈ ಪೈಕಿ ಎಂಟು ರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, 14 ಸಂಯೋಜಿತ ಪ್ರಾದೇಶಿಕ ಮಾನಸಿಕ ಆರೋಗ್ಯ ಕೇಂದ್ರಗಳು ಮತ್ತು ಮೂರು ಪ್ರಾದೇಶಿಕ ಕೇಂದ್ರಗಳಾಗಿವೆ. ಸಹಾಯವಾಣಿಯು 660 ಕ್ಲಿನಿಕಲ್ ಮತ್ತು ಪುನರ್ವಸತಿ ಮನಶ್ಶಾಸ್ತ್ರಜ್ಞರ ಮತ್ತು 668 ಮನೋವೈದ್ಯರ ಸೇವೆಯನ್ನು ತೊಡಗಿಸಿಕೊಂಡಿದೆ.
ಒಟ್ಟು ಕರೆಗಳಲ್ಲಿ ಶೇ. 30.1ಕರೆಗಳಿಗೆ ಆತಂಕದ ಸಮಸ್ಯೆಗಳಿಗೆ ಸಹಾಯದ ಅಗತ್ಯವಿದ್ದರೆ, 24.1 ಶೇಕಡಾ ಮಂದಿ ಖಿನ್ನತೆಯಿಂದ ಬಳಲುತ್ತಿದ್ದವರಾಗಿದ್ದಾರೆ.
ಉಳಿದ ಕರೆಗಳಲ್ಲಿ, 35.2 ಶೇಕಡಾ ಇತರ ಕಾರಣಗಳಿಗಾಗಿ, 5.6 ಶೇಕಡಾ ಇತರ ಕೋಬೊಡ್ ಸೃಷ್ಟಿಸಿದ ಇತರ ಸಮಸ್ಯೆಗಳಿಗೆ (ಉದ್ಯೋಗ ನಷ್ಟದಂತಹವು), 2.7 ಶೇಕಡಾ ಆತ್ಮಹತ್ಯಾ ಪ್ರವೃತ್ತಿಯಿಂದ ಬಂದವುಗಳು ಮತ್ತು 2.3 ಶೇಕಡಾ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದೆ.
“ಆತಂಕ ಮತ್ತು ಖಿನ್ನತೆಯು ಸಾಂಕ್ರಾಮಿಕ ರೋಗದಆರೋಗ್ಯದ ಬಗೆಗಿನ ಚಿಂತೆಗಳಂತಹ ತಕ್ಷಣದ ಕಾರಣಗಳಿಂದಾಗಿ ಮಾತ್ರವಲ್ಲ, ಉದ್ಯೋಗ ನಷ್ಟ ಅಥವಾ ಅನಿಶ್ಚಿತತೆಯಂತಹ ಕಾರಣಗಳಿಂದಲೂ ಉಂಟಾಗಿವೆ” ಎಂದು ದೃಷ್ಟಿ ವಿಕಲಾಂಗತೆ ಹೊಂದಿರುವ ವ್ಯಕ್ತಿಗಳ ಸಬಲೀಕರಣದ ರಾಷ್ಟ್ರೀಯ ಸಂಸ್ಥೆಯ (ಎನ್ಐಇಪಿವಿಡಿ )ಯ ಡೆಹ್ರಾಡೂನಿನ ಹೆಲ್ಪ್ಲೈನಿನ ಡಾ.ಸುರೇಂದ್ರ ಧಲ್ವಾಲ್ ವಿವರಿಸಿದ್ದಾರೆ. “ಆಪ್ತ ಸಮಾಲೋಚನೆಯ ಮೂಲಕ ಪರಿಹರಿಸಬಹುದಾದ ಹಲವು ವಿಷಯಗಳಿವೆ. ಚಿಕಿತ್ಸೆಯು ದುಬಾರಿಯಾಗಿದೆ, ಆದರೆ ಈ ಸಹಾಯವಾಣಿ ಮಾನಸಿಕ ಆರೋಗ್ಯ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ ”ಎಂದು ಅವರು ಹೇಳಿದ್ದಾರೆ.
ಹೆಲ್ಪ್ಲೈನ್ನಲ್ಲಿ ಸ್ವೀಕರಿಸಿದ ಕರೆಗಳಿಗೆ ಮೂರು ಹಂತಗಳಲ್ಲಿ ಸ್ಪಂದಿಸಲಾಗುತ್ತದೆ ಎಂದು ಸರ್ಕಾರದ ದಾಖಲೆ ತಿಳಿಸಿದೆ.ಮೊದಲ ಹಂತದಲ್ಲಿ, ‘ಸೌಮ್ಯ ಕಾಳಜಿ’ ಗಳನ್ನು ವೃತ್ತಿಪರ ಸಲಹೆಗಾರರು ನಿರ್ವಹಿಸುತ್ತಾರೆ. ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ, ಎರಡನೇ ಹಂತದಲ್ಲಿ, ಈ ಕೇಂದ್ರಗಳಲ್ಲಿ ಕೆಲಸ ಮಾಡುವ ಮನಶ್ಶಾಸ್ತ್ರಜ್ಞರಿಗೆ ಕರೆಗಳನ್ನು ರವಾನಿಸಲಾಗುತ್ತದೆ. ಮನಶ್ಶಾಸ್ತ್ರಜ್ಞನಿಗೆ ಅಗತ್ಯವೆಂದು ತೋರಿದರೆ ಕರೆ ಮಾಡಿದವರನ್ನು ನಂತರ ಬಾಹ್ಯ ಮಾನಸಿಕ ತಜ್ಞರೊಂದಿಗೆ ಸಂಪರ್ಕಿಸಲಾಗುತ್ತದೆ.
“ನಿಜವಾದ ಸವಾಲು ಕುಟುಂಬ ಸದಸ್ಯರದ್ದು. ವಿಶೇಷವಾಗಿ ಉದಾಹರಣೆಗೆ, ಹೆಂಡತಿಗೆ ಸಮಸ್ಯೆಗಳಿದ್ದು, ಗಂಡ ಅದನ್ನು ಗುರುತಿಸದಿದ್ದರೆ ಮತ್ತು ನಿರಾಕರಿಸುತ್ತಿದ್ದರೆ ಸಮಸ್ಯೆ ಹೊಂದಿರುವವರಿಗೆ ಸಹಾಯ ಮಾಡಲು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುವುದು ತುಂಬಾ ಕಷ್ಟಕರವಾಗುತ್ತದೆ. ಆಗ ಕುಟುಂಬ ಸದಸ್ಯರನ್ನು ಮನವೊಲಿಸಲು ಮಾರ್ಗಗಳನ್ನು ಮೊದಲು ರೂಪಿಸಬೇಕಾಗುತ್ತದೆ. ಆದ್ದರಿಂದ, ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ದೊಡ್ಡ ಸವಾಲಾಗಿ ಮುಂದುವರೆದಿದೆ ”ಎಂದು ನೋಯ್ಡಾದ ಎನ್ಐಇಪಿಐಡಿಯ ಹಿರಿಯ ಅಧಿಕಾರಿ ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.
ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಒಪ್ಪಿಕೊಳ್ಳುವುದರಲ್ಲಿ ಅವಮಾನದ ಭಾವನೆ ಇರುತ್ತದೆ. ಇದು ಸಮಸ್ಯೆಯನ್ನು ಪರಿಹರಿಸಲು ಕಷ್ಟವಾಗುತ್ತದೆ. “ನಾವು ದೈಹಿಕ ಕಾಯಿಲೆಗಳಿಗೆ ಸುಲಭವಾಗಿ ಸಹಾಯವನ್ನು ಪಡೆಯುತ್ತೇವೆ, ಆದರೆ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಇನ್ನೂ ಒಂದು ರೀತಿಯ ಜಿಂಜರಿಕೆ ಇದೆ” ಎಂದು ಎನ್ಐಇಪಿವಿಡಿ ಡೆಹ್ರಾಡೂನ್ನ ಡಾ.ಸುರೇಂದ್ರ ಧಲ್ವಾಲ್ ಹೇಳುತ್ತಾರೆ.