ಮಕ್ಕಳನ್ನ ಬೆಳಗ್ಗೆ ಸಮಯ ವಾಕಿಂಗ್ ಕಳುಹಿಸೋಕು ಈಗ ನಗರ ನಿವಾಸಿಗಳು ಯೋಚಿಸುವಂತಾಗಿದೆ. ಬೆಳಗ್ಗೆ ವಾಕಿಂಗ್ ಹೋಗಿ ಬರ್ತಿವಿ ಎಂದು ಮನೆಯಿಂದ ಹೊರಟಿದ್ದ 7 ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಬೆಂಗಳೂರಿನ ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 7 ಜನ ಮಕ್ಕಳು ನಾಪತ್ತೆಯಾಗಿದ್ದು ಇಡೀ ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿಬೀಳುವಂತಾಗಿದೆ. ಸೋಲದೇವನಹಳ್ಳಿ ಠಾಣ ವ್ಯಾಪ್ತಿಯ ಎಜಿಬಿ ಲೇಔಟ್ನಲ್ಲಿನ ಕ್ರಿಟನ್ ಕುಶಾಲ್ ಅಪಾರ್ಟ್ಮೆಂಟ್ ನಿವಾಸಿಗಳಾದ 12 ವರ್ಷದ ರಾಯನ್, 12 ವರ್ಷದ ಭೂಮಿ, 14 ವರ್ಷದ ಚಿಂತನ್ ಹಾಗೂ 21 ವರ್ಷದ ವರ್ಷಿಣಿ ಇಂದು ಮುಂಜಾನೆ ನಾಪತ್ತೆಯಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳಾದ 15 ವರ್ಷದ ಪರೀಕ್ಷೀತ್, ಕಿರಣ್, ನಂದನ್ನಿನ್ನೆ ಮುಂಜಾನೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಕ್ರಿಟನ್ ಕುಶಾಲ್ ಅಪಾರ್ಟ್ಮೆಂಟ್ ನಿವಾಸಿಗಳಾದ ನಾಲ್ಕು ಜನರು ಸದಾ ಕಾಲ ಜೊತೆಯಲ್ಲಿಯೇ ಇರುತ್ತಿದ್ದು, ವರ್ಷಿಣಿ ಪಿಯು ವ್ಯಾಸಂಗ ಮಾಡುತ್ತಿದ್ದರೆ ಉಳಿದ ಮೂರು ಮಕ್ಕಳು ಪ್ರಾಥಮಿಕ ಶಾಲಾ ಹಂತದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸದಾ ಕಾಲ ಒಟ್ಟಿಗೆ ಕಾಲ ಕಳೆಯುತ್ತಿದ್ದ ನಾಲ್ಕು ಜನ ಜೊತೆಯಲ್ಲಿಯೇ ಆಡಿ ನಲಿಯುತ್ತಿದ್ದರು. ಇಂದು ಮುಂಜಾನೆ ವಾಕಿಂಗ್ ಹೋಗಿದ್ದ ಈ ಮೂವರು ಮತ್ತೆ ವಾಪಸ್ ಮನೆಗೆ ಬಂದೆ ಇಲ್ಲ. ನಾಲ್ಕು ಜನರ ನಾಪತ್ತೆ ಕುರಿತಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಹಚ್ಚಲು ಮುಂದಾಗಿದ್ದಾರೆ.
ತನಿಖೆ ವೇಳೆ ಎಲ್ಲರ ಮನೆಯಲ್ಲೂ ಒಂದೇ ರೀತಿಯ ಚೀಟಿ ಪತ್ತೆಯಾಗಿದ್ದು, ಚೀಟಿಯಲ್ಲಿ ವಾಟರ್ ಬಾಟಲ್, ಚಪ್ಪಲಿ, ಟೂತ್ ಬ್ರಷ್, ಪೇಸ್ಟ್ ಹಾಗೂ ಹಣ ಎಂದು ಬರೆದಿರುವುದು ಪತ್ತೆಯಾಗಿದೆ.ಇತ್ತ ಅಪಾರ್ಟ್ಮೆಂಟ್ನ ಇತರೆ ನಿವಾಸಿಗಳು ಮಕ್ಕಳ ನಾಪತ್ತೆ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣ ವ್ಯಾಪ್ತಿಯ ಸೌಂದರ್ಯ ಲೇಔಟ್ ನಿವಾಸಿಗಳಾದ ನಾಪತ್ತೆಯಾಗಿರುವ 15 ವರ್ಷ ವಯಸ್ಸಿನ ಪರೀಕ್ಷಿತ್, ಕಿರಣ್ ಹಾಗೂ ನಂದನ್ ಸೌಂದರ್ಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಎಲ್ಲರೂ ಸಹ ಸಭ್ಯ ವಿಧ್ಯಾರ್ಥಿಗಳೇ ಎಂದು ಹೇಳಲಾಗುತ್ತಿದೆ. ಅಲ್ಲದೆ ನಾಲ್ಕು ಜನ ಪಾಠದ ಜೊತೆಗೆ ಆಟದಲ್ಲೂ ಸಹ ಮೊದಲ ಸಾಲಿನವರಂತೆ. ಎಲ್ಲರೂ ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎಂದು ಛಲ ಇಟ್ಟಿಕೊಂಡಿದ್ದರು ಎಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ.
ʻʻನಾವು ಸಾಧಿಸಿ ಹಣಗಳಿಸಿ ಬರುತ್ತೇವೆ, ನಮ್ಮನ್ನು ಹುಡುಕ ಬೇಡಿʼʼ.!!
ನಿನ್ನೆ ಮುಂಜಾನೆ ವಾಕಿಂಗ್ ಹೋಗಿದ್ದವರು ಮತ್ತೆ ಮನೆಗೆ ವಾಪಸ್ ಬಂದೇ ಇಲ್ಲ. ವಾಕಿಂಗ್ ಹೋಗೋ ಮೊದಲು ನಮ್ಮನ್ನ ಹುಡುಕಬೇಡಿ, ನಾವು ಏನಾದರೊಂದು ಸಾಧಿಸಿ ಹಣ ಗಳಿಸಿ ವಾಪಸ್ ಬರುತ್ತೇವೆ ಎಂದು ಬರೆದಿಟ್ಟಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಈ ಏಳು ಜನರ ನಾಪತ್ತೆ ಪ್ರಕರಣ ಸ್ಥಳೀಯರನ್ನ ಬೆಚ್ಚಿ ಬೀಳಿಸಿದೆ. ಮಕ್ಕಳನ್ನ ಮುಂಜಾನೆ ವಾಕಿಂಗ್ ಕಳುಹಿಸೋದು ಹೇಗೆ ಎಂದು ಯೋಚಿಸುವಂತಾಗಿದೆ. ಇತ್ತ ಏಳು ಜನರ ನಾಪತ್ತೆ ಹಿಂದೆ ಯಾರದ್ದಾದರೂ ಕೈವಾಡ ಇದೆಯೇ.? ಯಾರಾದರೂ ಹೇಳಿಕೊಟ್ಟು ಇವರನ್ನೆಲ್ಲ ಕರೆದುಕೊಂಡು ಹೋದರಾ.? ಹೋಗಿದ್ದರೆ ಯಾರು ಆ ಕಿರಾತಕ.? ಅವರೇ ನಾಪತ್ತೆಯಾದವರ ಕೈಯಲ್ಲಿ ನೋಟ್ಗಳನ್ನ ಬರೆಸಿಟ್ಟಿದ್ದರಾ.? ಅನ್ನೋ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಮುಂದಾಗಿದ್ದಾರೆ. ಇತ್ತ ಪೊಲೀಸರು ಪ್ರತ್ಯೇಖ ತಂಡಗಳನ್ನ ರಚಿಸಿ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಪರಿಶೀಲನೆಗೆ ಮುಂದಾಗಿದ್ದಾರೆ. ಒಟ್ಟಾರೆ ಏಕಾಏಕಿ ಏಳು ಜನ ಮಕ್ಕಳ ನಾಪತ್ತೆ ಪ್ರಕರಣ ಬೆಂಗಳೂರಿಗರಲ್ಲಿ ಆತಂಕ ಹುಟ್ಟಿಸಿದ್ದು, ಪೊಲೀಸರ ತನಿಖೆಯ ನಂತರವೇ ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.