ತಮಿಳುನಾಡಿನ ಚನ್ನೈನಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪಿಸುವಂತೆ ಮತ್ತೆ ಒತ್ತಾಯಿಸಿದ ಸಿಎಂ ಎಂಕೆ ಸ್ಟಾಲಿನ್, ಮದ್ರಾಸ್ ಹೈಕೋರ್ಟ್ನಲ್ಲಿ ತಮಿಳು ಭಾಷೆ ಬಳಕೆಗೆ ಅವಕಾಶ ನೀಡುವಂತೆ ಶನಿವಾರ ಮನವಿ ಮಾಡಿದ್ದಾರೆ.
ರಾಜ್ಯ ಮಾನವ ಹಕ್ಕುಗಳ ಆಯೋಗದ 25ನೇ ವರ್ಷದ ಸಮಾರಂಭದಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ” ತಮಿಳುನಾಡಿನಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಭಾಗವಹಿಸಿದ್ದ ಸಮಾರಂಭದಲ್ಲಿ ನಾನು ಬೇಡಿಕೆಗಳನ್ನು ಮೊದಲು ಇರಿಸಿದ್ದೆ. ನ್ಯಾಯಮೂರ್ತಿಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸಿರುವ ಈ ಕಾರ್ಯಕ್ರಮದಲ್ಲಿ ಇದೇ ಬೇಡಿಕೆಗಳನ್ನು ಮತ್ತೆ ಮಾಡುತ್ತಿದ್ದೇನೆ. ಪೀಠ ಸ್ಥಾಪನೆಯಿಂದ ಇಲ್ಲಿನ ಜನರು ಮತ್ತು ವಕೀಲರಿಗೆ ಇದರಿಂದ ಹೆಚ್ಚು ಪ್ರಯೋಜನವಾಗಲಿದೆ ಎಂದು ನೆನಪಿಸುತ್ತೇನೆ” ಎಂದು ಹೇಳಿದ್ಧಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ಹೈಕೋರ್ಟ್ ಸಿಜೆ ಮುನೀಶ್ವರ್ ನಾಥ್ ಭಂಡಾರಿ ಅವರ ಸಮ್ಮುಖದಲ್ಲಿ ಈ ಬೇಡಿಕೆ ಇರಿಸಿ ಜೊತೆಗೆ ಮದ್ರಾಸ್ ಹೈಕೋರ್ಟ್ನಲ್ಲಿ ತಮಿಳು ಭಾಷೆ ಬಳಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
“1993ರಿಂದ ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ಬೇಡಿಕೆ ಇದ್ದರೂ ಸ್ಥಾಪನೆಯಾಗಿದ್ದು ಮಾತ್ರ 1997ರಲ್ಲಿ. 1996ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದು ಕರುಣಾನಿಧಿ ಅವರು ಇದನ್ನು ವಿಧಾನಸಭೆಯಲ್ಲಿ ಘೋಷಿಸಿದ್ದರು. ಸಂವಿಧಾನದ ಅತಿ ಮುಖ್ಯವಾದ ಆಶಯ ಮಾನವ ಹಕ್ಕುಗಳು- ಅದು ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ ಇರಬಹುದು, ಸಮಾನತೆಯ ಹಕ್ಕು ಇರಬಹುದು, ಆಸ್ತಿ ಹಕ್ಕುಗಳು ಮತ್ತು ನ್ಯಾಯದ ಹಕ್ಕು ಇರಬಹುದು. ಮಾನವ ಹಕ್ಕುಗಳ ವಿಚಾರಕ್ಕೆ ಬಂದಾಗ ನಾವು ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ಈ ಹಕ್ಕುಗಳನ್ನು ಕಾಪಾಡುವಂತೆ ನೋಡಿಕೊಳ್ಳುವುದು ಸರ್ಕಾರಗಳ ಕರ್ತವ್ಯ. ಈ ವಿಚಾರಗಳಲ್ಲಿ ನಾವು ಎಂದಿಗೂ ಸೋಲುವುದಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.