ವಿನಾಯಕ ದಾಮೋದರ್ ಸಾವರ್ಕರ್… ಸದ್ಯಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತ್ಯಂತ ವಿವಾದಿತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೋಮು ಸಂಘರ್ಷ, ಉಡುಪಿ ಮತ್ತು ತುಮಕೂರಿನಲ್ಲಿ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿರುವ ಸಾವರ್ಕರ್ ಹಿನ್ನೆಲೆ ಕೂಡಾ ಅಷ್ಟೇ ವಿವಾದಿತ. ಬಲ ಪಂಥೀಯ ಸಂಘಟನೆಗಳು ಬಿಟ್ಟರೆ ಬೇರೆ ಯಾರೂ ಇವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಒಪ್ಪಲು ಸಿದ್ದರಿಲ್ಲ. ಆದರೂ, ಹೇರಿಕೆ ಎಂಬ ವಿಷಯದಲ್ಲಿ ಪರಿಣಿತಿ ಹೊಂದಿರುವ ಬಲ ಪಂಥೀಯರು ಜನರಿಗೆ ಇಷ್ಟವಿಲ್ಲದಿದ್ದರೂ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುತ್ತಲೇ ಬಂದಿದೆ.
ಇದರೊಂದಿಗೆ, ಕಾಂಗ್ರೆಸ್’ನಲ್ಲಿದ್ದ ದೇಶದ ಪ್ರಥಮ ಗೃಹ ಮಂತ್ರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುರಿತಾಗಿಯೂ ಅಪಾರ ಆತ್ಮಾಭಿಮಾನವನ್ನು ಬಿಜೆಪಿ ಪ್ರದರ್ಶಿಸುತ್ತಾ ಬಂದಿದೆ. ಭಾರತದ ಇತಿಹಾಸದಲ್ಲಿ ಬಲಪಂಥೀಯ ಸಂಘಟನೆಗಳ ವಿರುದ್ಧ ನಿರಂತರ ಹೋರಾಟ ನಡೆಸಿದ್ದ ಸರ್ದಾರ್ ಪಟೇಲ್, ಇಂದು ಅದೇ ಬಲಪಂಥೀಯರ ಗುರುವಾಗಿದ್ದಾರೆ.
ಇಂದಿಗೂ ವಿವಾದಿತ ವ್ಯಕ್ತಿಯಾಗಿಯೇ ಉಳಿದುಕೊಂಡಿರುವ ಸಾವರ್ಕರ್ ಕುರಿತು ಸರ್ದಾರ್ ವಲ್ಲಭಭಾಯಿ ಪಟೇಲ್ ಯಾವ ರೀತಿಯ ಭಾವನೆಯನ್ನು ಹೊಂದಿದ್ದರು ಎಂಬುದು ಪ್ರಮುಖವಾಗಿ ಗಮನಿಸಬೇಕಾದ ಸಂಗತಿ. ಈ ಕುರಿತಾದ ಐತಿಹಾಸಿಕ ಘಟನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.
1946ರಲ್ಲಿ ಭಾರತದ ಹಲವೆಡೆ ಉಂಟಾದ ಕೋಮು ಸಂಘರ್ಷಗಳನ್ನು ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿತು. ಹಿಂದೂಗಳ ಪಾಲಿನ ರಕ್ಷಕರಾಗಿ ನಾವಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುವ ಹುನ್ನಾರದಲ್ಲಿ ಇವೆರಡೂ ಸಂಘಟನೆಗಳು ತೊಡಗಿಕೊಂಡಿದ್ದವು. ಅದಕ್ಕಾಗಿ ಸರ್ಕಾರ ವಿರೋಧಿ ಹಾಗೂ ಗಾಂಧೀ ವಿರೋಧಿ ಭಾಷಣ, ಲೇಖನಗಳನ್ನು ಬರೆದು ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿದ್ದವು.
“Organiser” ಎಂಬ ಬಲಪಂಥೀಯ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದ ಹಿಂದೂ ಮಹಾಸಭಾ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ, ತ್ರಿವರ್ಣ ಧ್ವಜ ನಮ್ಮ ರಾಷ್ಟ್ರಧ್ವಜವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೇಸರಿ ಭಗವಾ ಧ್ವಜ ಒಂದೇ ನಿಜವಾದ ಧ್ವಜ. ಮೂರು ಎಂಬ ಸಂಖ್ಯೆಯೇ ಹಿಂದೂ ಸಂಪ್ರದಾಯದ ಪ್ರಕಾರ ಕೆಡುಕನ್ನು ತರುತ್ತದೆ. ಇದು ಭಾರತದ ಪಾಳಿಗೆ ಮುಳುವಾಗಲಿದೆ ಎಂದು ಹೇಳಿದ್ದರು.
1947ರಲ್ಲಿ ಭಾರತಪಾಕಿಸ್ತಾನ ವಿಭಜನೆಯ ಬಳಿಕ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆದ ದಂಗೆ, ಕೋಮು ಘರ್ಷವನ್ನು ಮುಂದಿಟ್ಟುಕೊಂಡು ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ಮತ್ತೆ ಗಾಂಧಿ ವೀರೋಧಿ ನೀತಿಯನ್ನು ಮುಂದುವರೆಸಿತು. ಡಿಸೆಂಬರ್ 18,1947ರಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಅಂದಿನ ಆರ್ ಎಸ್ ಎಸ್ ಮುಖ್ಯಸ್ಥ ಎಂ ಎಸ್ ಗೋಲ್ವೋಲ್ಕರ್, ಭಾರತ ಸರ್ಕಾರವನ್ನು ‘ಸೈತಾನ ಮತ್ತು ಭಾರತೀಯೇತರ’ ಸರ್ಕಾರ ಎಂದು ಕರೆದಿದ್ದರು. ಆರ್ ಎಸ್ ಎಸ್ ವಿರೋಧಿಗಳನ್ನು ಕೂಡಲೇ ‘ಮೌನವಾಗಿಸಬೇಕು’ ಎಂದು ಕರೆ ನೀಡಿದ್ದರು.
ಈ ಬೆದರಿಕೆಯು 1848ರ ಜನವರಿ 30ರಂದು ಕಾರ್ಯರೂಪಕ್ಕೆ ಬಂದಿತ್ತು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ನಾಥೂರಾಮ್ ಗೋಡ್ಸೆ ಎಂಬ ವ್ಯಕ್ತಿಯಿಂದ ಹುತಾತ್ಮರಾದರು. ಈ ಸಂದರ್ಭದಲ್ಲಿ ಭಾರತದ ಉಪಪ್ರಧಾನಿ ಹಾಗೂ ಗೃಹಮಂತ್ರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 25,000 ಆರ್ ಎಸ್ ಎಸ್ ಕಾರ್ಯಕರ್ತರನ್ನು ಬಂಧಿಸಿ ಆರ್ ಎಸ್ ಎಸ್ ಸಂಘಟನೆಯನ್ನೇ ನಿಷೇಧಿಸಿದರು. ನಿಷೇಧದ ಭಯದಿಂದ ಹಿಂದೂ ಮಹಾಸಭಾ ತನ್ನನ್ನು ತಾನೇ ವಿಸರ್ಜಿಸಿಕೊಂಡಿತು.
ಗಾಂಧಿ ಹತ್ಯೆಯ ಷಡ್ಯಂತ್ರದಲ್ಲಿ ಸಾವರ್ಕರ್ ಪಾತ್ರ ಇರುವುದನ್ನೂ ಮನಗಂಡಿದ್ದ ಸರ್ದಾರ್ ಪಟೇಲ್, ಸಾವರ್ಕರ್ ಅನ್ನೂ ಬಂಧಿಸಿದ್ದರು. ಖುದ್ದು ವಕೀಲರಾಗಿದ್ದ ಪಟೇಲ್, ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪತ್ರದ ಕುರಿತು ಎಷ್ಟು ಖಚಿತವಾಗಿದ್ದರೆಂದರೆ, ಆರೋಪಿಗಳ ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಿದ್ದರು.
ಈ ಕುರಿತಾಗಿ ಜವಹರ್ ಲಾಲ್ ನೆಹರೂ ಬಳಿ ಮಾತನಾಡಿದ ಪಟೇಲ್ “ಸಾವರ್ಕರ್ ನಾಯಕತ್ವದಲ್ಲಿ ಹಿಂದೂ ಮಹಾಸಭಾದ ಹುಚ್ಚು ತಂಡ ನಡೆಸಿದ ಷಡ್ಯಂತ್ರ ಮತ್ತು ಹತ್ಯೆ,” ಎಂದು ಹೇಳಿದ್ದರು. [Durga Das, Sardar Patel Correspondence, 1945–50, Vol. VI, p. 56]
ಮೇ 6, 1948ರಲ್ಲಿ ಹಿಂದೂ ಮಹಾಸಭಾ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಸರ್ದಾರ್ ಪಟೇಲ್ ಪತ್ರ ಬರೆದಿದ್ದರು. ಆ ಪತ್ರದ ಸಾರಾಂಶ ಹೀಗಿದೆ,
“ಗಾಂಧಿ ಹತ್ಯೆಯ ಬಳಿಕ ತುಂಬಾ ಜನ ಹಿಂದೂ ಸಭಾ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಿದ್ದಾರೆ. ಗಾಂಧಿ ಹತ್ಯೆಯ ಕೆಲವೇ ತಿಂಗುಳಗಳ ಹಿಂದೆ ಹಿಂದೂ ಮಹಾಸಭಾ ವಕ್ತಾರರಾದ ಮಹಾಂತ ದಿಗ್ವಿಜಯ್ ನಾಥ್, ರಾಮ್ ಸಿಂಗ್ ಮತ್ತು ದೇಶಪಾಂಡೆ ಅವರು ಮಾಡಿರುವಂತಹ ಕೋಮು ಪ್ರಚೋದಿತ ಭಾಷಣಗಳು ದೇಶದ ಭದ್ರತೆಗೆ ಮಾರಕ. ಇದೇ ನಿಯಮ ಆರ್ ಎಸ್ ಎಸ್’ಗೂ ಅನ್ವಯಿಸುತ್ತದೆ. ಆರ್ ಎಸ್ಎಸ್ ಜೊತೆ ಇರುವ ಹೆಚ್ಚುವರಿ ಅಪರಾಯ ಏನೆಂದರೆ, ಅದೊಂದು ಮಿಲಿಟರಿ ಅಥವಾ ಅರೆ ಮಿಲಿಟರಿ ಗುಂಪಾಗಿ ಕಾರ್ಯನಿರ್ವಹಿಸುತ್ತದೆ.” [Sardar Patel Correspondence, Vol. VI, p. 66]
ಈ ರೀತಿ ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ದೇಶದ ಭದ್ರತೆಗೇ ಅಪಾಯ ಉಂಟುಮಾಡುವ ಸಂಘಟನೆಗಳು ಎಂದು ಸರ್ದಾರ್ ಪಟೇಲ್ ಹೇಳಿರುವಾಗ, ಅವರನ್ನೇ ತಮ್ಮ ಮಡಿಲಿಗೆ ಹಾಕಿಕೊಂಡು ಅಪ್ರತಿಮ ದೇಶಭಕ್ತರಂತೆ ಬೃಹನ್ನಾಟಕವಾಡುತ್ತಿರುವ ಸಂಘಪರಿವಾದರ ನಾಯಕರು ಈಗ ಗಾಂಧಿ ಹತ್ಯೆ ಆರೋಪಿ ಸಾವರ್ಕರ್’ನಿಗೆ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂಬ ಬಿರುದನ್ನು ನೀಡಲು ಹೊರಟಿದೆ.
ಒಂದು ವೇಳೆ ಈ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಬದುಕಿದ್ದರೆ ಏನನ್ನುತ್ತಿದ್ದರೋ ಏನೋ…