ಈಗಾಗಲೇ ಟೈಟಲ್ ಹಾಗೂ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪುನರ್ಜನ್ಮ ಪ್ರೇಮಕಥೆ ಒಳಗೊಂಡ ರುಧೀರ ಕಣಿವೆ ಚಿತ್ರವು ಡಿಸಂಬರ್ 30ರಂದು ಪಂಚ ಭಾಷೆಗಳಲ್ಲಿ ತೆರೆಕಾಣುತ್ತಿದೆ.
ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಮಾತನಾಡಿ ಹಾಡುಗಳು ಚೆನ್ನಾಗಿದೆ. ಛಾಯಾಗ್ರಹಣ, ಮ್ಯೂಸಿಕ್ ಕೂಡ ಅದ್ಭುತವಾಗಿದೆ. ಒಳ್ಳೆ ತಂಡ ಇದಾಗಿದ್ದು, ಒಳ್ಳೆ ಸಿನಿಮಾ ಮಾಡಿರುವ ಭರವಸೆಯಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಟ ಧರ್ಮ ಕೀರ್ತಿರಾಜ್ ಮಾತನಾಡಿ ಚಿತ್ರದ ತುಣುಕುಗಳನ್ನು ನೋಡಿದರೆ ಇದು ವಿಶೇಷವಾದ ಸಿನಿಮಾ ಎನಿಸುತ್ತದೆ ಎಂದು ಚಿತ್ರದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ಸಮರ್ಥ ಮಾತನಾಡಿ ಈ ಮೊದಲು ನಾನು ‘ನವ ಇತಿಹಾಸ’ ಸಿನಿಮಾ ನಿರ್ದೇಶನ ಮಾಡಿದ್ದು ಇದು ೨ನೇ ಪ್ರಯತ್ನ. ಪ್ರಾರಂಭದಿಂದಲೂ ಚಿತ್ರಕ್ಕೆ ತುಂಬಾ ತೊಂದರೆ ಬಂದಿದ್ದರೂ ನಿರ್ಮಾಪಕರು ಹಾಗೂ ಕಲಾವಿದರು ಒಳ್ಳೆ ಸಪೋರ್ಟ್ ಮಾಡಿದ್ದಾರೆ. ಬೆಂಗಳೂರು, ರಾಮನಗರ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಸದ್ಯ ೫ ಭಾಷೆಗಳಲ್ಲಿ ಸಿನಿಮಾ ಸಿದ್ದವಾಗಿದ್ದು, ಡಿಸೆಂಬರ್ ೩೦ ರಂದು ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
ನಿರ್ಮಾಪಕ ವಿಜಯ್ ಕುಮಾರ್ ಮಾತನಾಡಿ ನಿರ್ದೇಶಕರು ಕಥೆ ಹೇಳಿದಾಗ ಸಿನಿಮಾ ಮಾಡುವ ಆಸೆ ಬಂತು. ಈ ಚಿತ್ರದ ನಾಯಕ ಕಾರ್ತಿಕ್ ನಮ್ಮ ಅಣ್ಣನ ಮಗ. ಶ್ರೀ ಲಕ್ಷ್ಮಿ ನರಸಿಂಹ ಮೂವೀಸ್ ಬ್ಯಾನರ್ ನಲ್ಲಿ ಮೊದಲಬಾರಿಗೆ ನಿರ್ಮಾಣ ಮಾಡಲಾಗಿದೆ. ಈ ಚಿತ್ರವನ್ನು ಮೊದಲು ಕನ್ನಡದಲ್ಲಿ ರಿಲೀಸ್ ಮಾಡಿ, ನಂತರದ ದಿನಗಳಲ್ಲಿ ಬೇರೆ ಭಾಷೆಯಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದ್ದು, ಇದರಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿ ಕೊಡಲಾಗಿದೆ. ಪ್ರಾರಂಭದಲ್ಲಿ ನಾವು ಕನ್ನಡ ಅಷ್ಟೇ ಪ್ಲ್ಯಾನ್ ಮಾಡಿದ್ವಿ ನಂತರ ಬೇರೆ ಭಾಷೆಗೆ ಪ್ಲ್ಯಾನ್ ಮಾಡಿದ್ವಿ. ಈಗ ಸಿನಿಮಾ ಕನ್ನಡ, ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗಿದೆ. ಕಥೆಯಲ್ಲಿ ಕಾಮಿಡಿ, ಹಾರರ್, ಆ್ಯಕ್ಷನ್ ಸೇರಿದಂತೆ ಎಲ್ಲಾ ಅಂಶಗಳಿದ್ದು, ಸಿನಿಮಾ ಜನರಿಗೆ ಇಷ್ಟ ಆಗುತ್ತದೆ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಾರ್ತಿಕ್, ದಿಶಾ ಪೂವಯ್ಯ ಹಾಗೂ ಅಮೃತ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ರವೀಶ್ ಸಂಗೀತ ಸಂಯೋಜಿಸಿದ್ದು ಲಕ್ಕಿ ಗೌಡ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ, ಚಂದ್ರು ಬಂಡೆ ಮತ್ತು ಅಶೋಕ್ ಸಾಹಸ ಚಿತ್ರಕ್ಕಿದೆ.