ಒಮಿಕ್ರಾನ್ ನಿಂದ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ನಿನ್ನೆ ಸಭೆ ನಡೆಸಿ ಸಿಎಂ ಬೊಮ್ಮಾಯಿ ಸರ್ಕಾರ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಪೈಕಿ ವ್ಯಾಪಕವಾಗಿ ಕೊರೋನಾ ಪರೀಕ್ಷೆ ನಡೆಸಲು ಸೂಚಿಲಾಗಿದೆ. ಈ ಬಗ್ಗೆ ನಿನ್ನೆ ರಾತ್ರಿ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಪಾಲಿಸುವಂತೆ ವಿವಿಧ ಇಲಾಖೆಗೆ ಸೂಚನೆ ಕೊಡಲಾಗಿದೆ.
ಕೊರೋನಾ ಪರೀಕ್ಷೆ ನಡೆಸುವ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ, ಪ್ರತಿದಿನ 1 ಲಕ್ಷ ಕೊರೋನಾ ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ಈ ಪೈಕಿ 70% RTPCR ಹಾಗೂ 30% RAT ಪರೀಕ್ಷೆ ಕಡ್ಡಾಯವಾಗಿ ನಡೆಸುಂತೆ ಸೂಚಿಸಿದೆ. ಶಾಲೆಗಳಲ್ಲಿ ಅಸ್ವಸ್ಥತೆ ಕಂಡು ಬರುವ ಮಕ್ಕಳನ್ನು ತತ್ತಕ್ಷಣವೇ ಪ್ರತ್ಯೇಕಿಸಲು ತಾಕೀತು ಮಾಡಿದೆ. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ಇರುವ ಮಕ್ಕಳಿಗೆ ಮೊದಲು RAT ಟೆಸ್ಟ್ ಮಾಡಿಸಿ ನೆಗೆಟಿವ್ ಬಂದರೆ ನಂತರ ICMR ವಿಧಿಸಿದ ಮಾನದಂಡದ ಪ್ರಕಾರ RTPCR ಪರೀಕ್ಷೆ ನಡೆಸಬೇಕು. ಜೊತೆಗೆ ಪ್ರತಿವಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನಿಷ್ಠ 5% ಮಕ್ಕಳಿಗೆ RTPCR ಟೆಸ್ಟ್ ಮಾಡಿಸಬೇಕು. ಕೇರಳ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಆಧ್ಯತೆ ಮೇರೆಗೆ ಪರೀಕ್ಷೆ ಹೆಚ್ಚಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಹದಿನೈದು ದಿನಕ್ಕೊಮ್ಮೆ ಈ ಕೆಳಗಿನ ಗುಂಪುಗಳಿಗೆ ರ್ಯಾಡಂಮ್ ಪರೀಕ್ಷೆ ನಡೆಸಲು ಸರ್ಕಾರದಿಂದ ಆದೇಶ :
- ಕಾಲೇಜು & ಪ್ರೌಢ ಶಾಲೆಗಳ ವಿದ್ಯಾರ್ಥಿಗಳು & ಶಿಕ್ಷಕರು
- ಹೋಟೆಲ್ ಗಳು & ರೆಸ್ಟೋರೆಂಟ್ ಸಿಬ್ಬಂದಿಗಳು
- ಮಾಲ್ ಗಳಲ್ಲಿನ ಶಾಪ್ ಕೀಪರ್ ಗಳು
- ಮಾರುಕಟ್ಟೆಗಳಲ್ಲಿನ ಶಾಪ್ ಕೀಪರ್ ಗಳು
- ಅಡುಗೆ ಸಿಬ್ಬಂದಿ & ಡೋರ್ ಡೆಲಿವರಿ ಸಿಬ್ಬಂದಿ
- ಕಾರ್ಖಾನೆಗಳ ಸಿಬ್ಬಂದಿಗಳು
- ಎಲ್ಲಾ ಮಾದರಿಯ ಕಚೇರಿಗಳಿಗೆ ಹೋಗುವವರು
- ಪಬ್ ಮತ್ತು ಬಾರ್ ಗಳಲ್ಲಿ ಕೆಲಸ ಮಾಡುವವರು
- ಚಿತ್ರಮಂದಿರ ಹಾಗೂ ಮಲ್ಟಿಪ್ಲೆಲ್ಸ್ ನ ಸಿಬ್ಬಂದಿಗಳು
- ವೃತ್ತಿಯಿಂದ ಪ್ರತಿ ದಿನ ಹೆಚ್ಚೆಚ್ಚು ಜನ ಸೇರುವಕಡೆಗಳಲ್ಲಿ ಕೆಲಸ ಮಾಡುವವರು
- ಅಂಗನವಾಡಿ ಮೇಲ್ವಿಚಾರಕಿ ಹಾಗೂ ಸಿಬ್ಬಂದಿಗಳು
ಒಟ್ಟಾರೆ ಕೊರೋನಾದ ಹೊಸ ರೂಪಾಂತರಿ ಒಮಿಕ್ರಾನ್ ಇದೀಗ ಮೂರನೇ ಅಲೆಯ ಆತಂಕ ಮೂಡಿಸಿದೆ. ಹೀಗಾಗಿ ಎರಡು ಕೇಸ್ ಪತ್ತೆಯಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರ, ಬಿಬಿಎಂಪಿ ಹಾಗೂ ಇತರೆ ಸ್ಥಳೀಯ ಆಡಳಿತ ಇಲಾಖೆಗಳಿಗೆ ಹೆಚ್ಚೆಚ್ಚು ಕೊರೋನಾ ಪರೀಕ್ಷೆ ನಡೆಸಿ ಸೂಚಿಸಲಾಗಿದೆ.