ಸಮಾಜದಲ್ಲಿ ಜಾಗೃತಿ ಮೂಡಿಸಲು ಹಾಗೂ ಏಕತೆಯ ಭಾವನೆ ಜಾಗೃತಗೊಳಿಸಲು ಆರ್ಎಸ್ಎಸ್ ದುಡಿಯುತ್ತಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದಿಲ್ಲಿ ಘಟಕ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜಾಗೃತಿ ಮೂಡಿಸಲು ಹಾಗೂ ಏಕತೆಯ ಭಾವನೆ ಜಾಗೃತಗೊಳಿಸಲು ಆರ್ಎಸ್ಎಸ್ ದುಡಿಯುತ್ತಿದೆ. ಸಮಾಜವನ್ನು ಇನ್ನಷ್ಟು ಸಂಘಟಿತಗೊಳಿಸಿ ಏಕೀಕರಣಗೊಳಿಸುವ ಮೂಲಕ ಭಾರತ ದೇಶವನ್ನು ಇಡೀ ವಿಶ್ವದಲ್ಲೇ ಮಾದರಿ ಸಮಾಜವನ್ನಾಗಿ ನಿರ್ಮಿಸುವ ಗುರಿ ಆರ್ಎಸ್ಎಸ್ಗೆ ಇದೆ ಎಂದು ಭಾಗವತ್ ಹೇಳಿದ್ದಾರೆ.
ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ದೇಶದ ಹಲವು ಸಮುದಾಯಗಳ, ವಿಭಾಗಗಳ ಜನರು ತ್ಯಾಗ ಹಾಗೂ ಬಲಿದಾನ ಮಾಡಿದ್ದಾರೆ. ಹೀಗಾಗಿ, ನಾವೆಲ್ಲರೂ ಒಂದಾಗಿ ಒಂದೇ ಸಮಾಜವಾಗಿ ಬೆಳೆಯಲು ಕೆಲ ಕಾಲ ಬೇಕಾಗುತ್ತದೆ. ನಾವು ವೈಯಕ್ತಿಕ ನೆಲೆಗಟ್ಟಿನಲ್ಲಿ ಅಲ್ಲದೆ, ಒಂದು ಸಮಾಜವಾಗಿ ಯೋಚನೆ ಮಾಡುವ ಮನೋಭಾವ ನಮ್ಮ ಡಿಎನ್ಎನಲ್ಲೇ ಇದೆ. ನಮ್ಮ ವಂಶವಾಹಿಯಲ್ಲೇ ಇರುವ ಈ ಮನೋಭಾವನ್ನು ಇನ್ನಷ್ಟು ಬೆಳೆಸಲು ಸಂಘವು ಪ್ರೋತ್ಸಾಹಿಸುತ್ತದೆ ಎಂದು ಮೋಹನ್ ಭಾಗವತ್ ಹೇಳಿದರು.
ಆರ್ಎಸ್ಎಸ್ನ ಸದಸ್ಯರು ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಸಮಾಜದ ಕಲ್ಯಾಣಕ್ಕಾಗಿ ದುಡಿಯಬೇಕು. ನಾವು ಸಮಾಜವಾಗಿ ಅಭಿವೃದ್ಧಿ ಹೊಂದಬೇಕಿದೆ. ಇದಕ್ಕಾಗಿ ನಾನು, ನನ್ನದು ಅನ್ನೋದನ್ನು ಬಿಟ್ಟು ಸಮಾಜದ ಕಲ್ಯಾಣಕ್ಕಾಗಿ ದುಡಿಯಬೇಕಿದೆ ಎಂದು ಮೋಹನ್ ಭಾಗವತ್ ಕರೆ ನೀಡಿದರು.