ಬೆಂಗಳೂರು: ಮಾ.18: ರಾಜ್ಯ ರಾಜಕಾರಣದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ರೌಡಿ ಶೀಟರ್ ಗಳ ರಾಜಕೀಯ ಶರುವಾಗಿದೆ. ಹೌದು, ಬಿಜೆಪಿ ನಾಯಕರು ನಮ್ಮದು ಶಿಸ್ತಿನ ಪಕ್ಷ ನಮ್ಮಲ್ಲಿ ರೌಡಿಗಳಿಗೆ ಸ್ಥಾನಕೊಡುವುಡಿಲ್ಲ ಎಂದು ಬಡಾಯಿಕೊಚ್ಚಿಕೊಳ್ಳುತ್ತಿದ್ದರು. ಆದ್ರೆ ಅದೆನಾಯ್ತು ಗೊತ್ತಿಲ್ಲ ಇದೀಗ ಬಿಜೆಪಿ ನಾಯಕರು ಸೈಲೆಂಟ್ ಆಗಿ ಸುನೀಲ ನನ್ನ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈ ಮೂಲಕ ಸೈಲೆಂಟ್ ಸುನೀಲನ ರಾಜಕೀಯ ಪ್ರವೇಶದ ಬಗ್ಗೆ ರಾಜ್ಯದ ಜನರಲ್ಲಿದ್ದ ಕೂತುಹಲಕ್ಕೆ ತೆರೆಬಿದ್ದಿದೆ. ಸದ್ಯ ರೌಡಿ ಶೀಟರ್ ಸೈಲೆಂಟ್ ಸುನೀಲನಿಗೆ ಬಿಜೆಪಿ ಅಧಿಕೃತವಾಗಿ ಸದಸ್ಯತ್ವ ಸಂಖ್ಯೆ ಇರುವ ʼಮೆಂಬರ್ ಶಿಪ್ ಕಾರ್ಡ್ʼ ಕೊಟ್ಟು ಪಕ್ಷ ಸಂಘಟನೆ ಮಾಡುವಂತೆ ಹೇಳಿದೆ. ಇನ್ನು ಬಿಜೆಪಿ ʼಮೆಂಬರ್ ಶಿಪ್ ಕಾರ್ಡ್ʼ ಪಡೆದ ಬಳಿಕ ಸೈಲೆಂಟ್ ಸುನೀಲ ತಮ್ಮ ಬೆಂಬಲಿಗರಿಗೆ ಸ್ವೀಟ್ ನೀಡಿ ಸಂಭ್ರಮಿಸಿದ್ದಾರೆ. ಇನ್ನು ಬಿಜೆಪಿ ಸದಸ್ಯತ್ವ ಪಡೆಯುವ ಮೊದಲೇ ರಾಜಕೀಯ ಪ್ರವೇಶದ ಸುಳಿವು ನೀಡಿದ್ದ ಸೈಲೆಂಟ್ ಸುನೀಲ, ಬೆಂಗಳೂರಿನ ಚಾಮರಾಜಪೇಟೆಯಿಂದ ಚುನಾವಣಾ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಈಗಾಗಲೇ ಸಮಾಜ ಸೇವಕ ಅಂತಾ ಹಲವು ಕಾರ್ಯಾಕ್ರಮ ನಡೆಸಿ ಮತದಾರರ ಓಲೈಕೆ ಕೂಡ ಆರಂಭವಾಗಿದೆ.
ಈ ಹಿಂದೆ ರೌಡಿ ಫೈಟರ್ ರವಿ ಬಿಜೆಪಿ ಸೇರಿದ್ದ..!
ಫೈಟರ್ ರವಿ ಎಂಬ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ. ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ರವಿ ಬಿಜೆಪಿಗೆ ಎಂಟ್ರಿ ಕೊಟ್ಟಿದ್ದಾರೆ… ಈತನ ಮೇಲೇನೂ ಕೊಲೆ, ಸುಲಿಗೆ ದರೋಡೆ ಕೇಸ್ ಗಳು ಇಲ್ಲ, ಆದ್ರೆ ಕ್ರಿಕೆಟ್ ಬುಕ್ಕಿಂಗ್ನಲ್ಲಿ ಕುಖ್ಯಾತಿ ಪಡೆದಿದ್ದ. 2010 ರಿಂದಲೂ ಕ್ರಿಕೆಟ್ ಬುಕ್ಕಿಯಾಗಿದ್ದ ರವಿ, ಹಲವು ಬಾರಿ ಕ್ರಿಕೆಟ್ ಬುಕ್ಕಿ ಕೇಸಲ್ಲಿ ಅರೆಸ್ಟ್ ಆಗಿ, ಜಾಮೀನು ಪಡೆದು ಹೊರಗಡೆ ಬಂದಿದ್ದ.
ಸೈಲೆಂಟ್ ಸುನೀಲನ ಇತಿಹಾಸ…
ಬೆಂಗಳೂರು ಮಹಾನಗರಿ ಅದೆಷ್ಟೋ ರೌಡಿಗಳಿಗೆ, ಭೂಗತ ಪಾತಕಿಗಳಿಗೆ, ಅಪರಾಧಿಗಳಿಗೆ ಆಶ್ರಯ ಕೊಟ್ಟಿದೆ.. ಈ ಪೈಕಿ ಸುನೀಲ ಅಲಿಯಾಸ್ ಸೈಲೆಂಟ್ ಸುನೀಲ ಕೂಡ ಒಬ್ಬ. ಸದ್ಯ ಬೆಂಗಳೂರಿನ ಪ್ರಕಾಶ ನಗರದ ನಿವಾಸಿಯಾಗಿರುವ ಸೈಲೆಂಟ್ ಸುನೀಲ ಮೂಲತಃ ಕೇರಳದವನು. ಹತ್ತನೇ ತರಗತಿ ಓದುವಾಗಲೇ ‘ಬಾಲಾಪರಾಧಿ’ಯಾಗಿ ಜೈಲುವಾಸ ಅನುಭವಿಸಿದಾತ ಈ ಸೈಲೆಂಟ್ ಸುನೀಲ. ಈತನ ಮೂಲ ಹೆಸರು ಸುನೀಲ್ ಕುಮಾರ್. ರೌಡಿಸಂಗೆ ಬರುತ್ತಿದ್ದಂತೆ ಸೈಲೆಂಟ್ ಸುನೀಲ ಅಂತಾನೆ ಕುಖ್ಯಾತಿ ಪಡೆದ. ಈತ ಬಾಲಾಪರಾಧಿ ಆದ ಮೇಲೆ ಕೇವಲ 20 ವರ್ಷದ ಆಸುಪಾಸಲ್ಲೇ ಈತನ ಮೇಲೆ ರೌಡಿಶೀಟ್ ತೆರೆಯಲಾಗಿತ್ತು!
ಕುಖ್ಯಾತ ರೌಡಿಗಳ ಬಲಗೈ ಬಂಟ
ಜೈಲುವಾಸ ಅನುಭವಿಸಿದ ಬಳಿಕ ಪ್ರಕಾಶ್ ನಗರದ ಕುಖ್ಯಾತ ರೌಡಿ ಶೀಟರ್ ಗಳಾದ ನಾಗರಾಜ, ಒಂಟೆ ಮತ್ತು ಪ್ರಸಾದಿ ಎಂಬುವರ ಗುಂಪಿಗೆ ಸುನೀಲ ಸೇರಿಕೊಳ್ಳುತ್ತಾನೆ. ʼಪೊಲೀಸ್ ಪದೇ ಹತ್ಯೆ ಪ್ರಕರಣದಲ್ಲಿ ಮತ್ತೆ ಅಂದರ್ ಆಗುತ್ತಾನೆ. ಅಲ್ಲಿಂದ ಒಂದೊಂದೇ ಪ್ರಕರಣದಲ್ಲಿ ಈತನ ಹೆಸರು ಕೇಳುತ್ತಾ ಬರುತ್ತದೆ.
ರೌಡಿಸಂ ತೊರೆದು ಸಮಾಜಸೇವೆ
ಇನ್ನು ಬಹುತೇಕ ಎಲ್ಲಾ ರೌಡಿಗಳಂತೆ ಸುನೀಲ ರೌಡಿಸಂ ತೊರೆದಿದ್ದ ಎನ್ನಲಾಗುತ್ತಿದೆ. ಸಮಾಜಸೇವೆ, ಅದು ಇದು ಅಂತ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದ. ಇದೀಗ ಸುನೀಲನ ಎಲ್ಲಾ ಕೇಸ್ ಗಳು ಕ್ಲಿಯರ್ ಆಗಿದೆ ಎನ್ನಲಾಗುತ್ತಿದೆ. ಆತನ ಮೇಲೆ ಸದ್ಯ ಒಂದೇ ಕೇಸ್ ಇದ್ದು ಅದು ಕೂಡಾ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಹೀಗಾಗಿಯೇ ಅಧಿಕೃತವಾಗಿ ರಾಜಕೀಯ ಪ್ರವೇಶಮಾಡಿದ್ದಾರೆ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ…