ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ತನ್ನ ಒಡೆಯನ ತಪ್ಪನ್ನು ಮುಚ್ಚಿಹಾಕಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದೆ.
TRP ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಬಹಿರಂಗಗೊಳಿಸಿದ ಅರ್ನಾಬ್ ಗೋಸ್ವಾಮಿಯ ವಾಟ್ಸಾಪ್ ಚಾಟ್ ಅಲ್ಲಿ ಪುಲ್ವಾಮ ದಾಳಿಯನ್ನು ಸಂಭ್ರಮಿಸಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ದೇಶದೆಲ್ಲೆಡೆ ಅರ್ನಾಬ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದವು. ತನ್ನ TRPಗಾಗಿ ಭಾರತೀಯ ಸೈನಿಕರ ಮರಣವನ್ನು ಸಂಭ್ರಮಿಸಿರುವುದು ಸಾಕಷ್ಟು ಟೀಕೆಗೊಳಗಾಗಿತ್ತು. ಅಲ್ಲದೆ, ಈ ದಾಳಿಯ ಹಿಂದೆ ನರೇಂದ್ರ ಮೋದಿ ಸರ್ಕಾರಕ್ಕೆ ಲಾಭ ಇದೆಯೆನ್ನುವ ಆರೋಪಕ್ಕೆ ಪೂರಕವೆನಿಸುವಂತೆ ಅರ್ನಾಬ್ ಸಂದೇಶಗಳಿತ್ತು. ಇದು ವ್ಯಾಪಕ ಚರ್ಚೆಗೊಳಗಾಗಿದ್ದವು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದರ ಬೆನ್ನಿಗೆ, ಪಾಕಿಸ್ತಾನ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದನ್ನು ಹೊರಡಿಸಿದ್ದು, ಪುಲ್ವಾಮ ದಾಳಿ ಭಾರತೀಯ ಜನತಾ ಪಕ್ಷವು ಚುನಾವಣೆ ಗೆಲ್ಲಲು ನಡೆಸಿದ ಪೂರ್ವ ನಿಯೋಜಿತ ದಾಳಿ ಎನ್ನುವುದಕ್ಕೆ ಅರ್ನಾಬ್ ಸಂದೇಶಗಳೇ ಸಾಕ್ಷಿ, ಇದರಲ್ಲಿ ಪಾಕಿಸ್ತಾನದ ಪಾತ್ರವಿಲ್ಲ ಎಂದು ಆರೋಪಿಸಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಿಪಬ್ಲಿಕ್ ಟಿವಿ, ಪಾಕಿಸ್ತಾನ ಆರೋಪವನ್ನು ನಿರಾಕರಿಸಿದೆ. ಅರ್ನಾಬ್ ಗೋಸ್ವಾಮಿಯು ಪಾಕಿಸ್ತಾನದ ಷಡ್ಯಂತ್ರಗಳನ್ನು, ವೈಫಲ್ಯಗಳನ್ನು ಬಹಿರಂಗಗೊಳಿಸಿ ಪಾಕಿಸ್ತಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡಿತು. ಆ ಹತಾಶೆಯಲ್ಲಿ ಇಂದು ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ಮೇಲೆ ಪಾಕಿಸ್ತಾನ ಆರೋಪ ಮಾಡಿದೆ. ಇದು ಪಾಕಿಸ್ತಾನದ ಹತಾಶೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದೆ.
ಮಾತ್ರವಲ್ಲ, ಪಾಕಿಸ್ತಾನದ ಆರೋಪವು, ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಭಾರತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಪಡೆಗಳ ಆಳವಾದ ಪಿತೂರಿಗೆ ಪುರಾವೆಯಾಗಿದೆ. ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಹಿಂದಿನ ಪಿತೂರಿಯಲ್ಲಿ ಭಾರತ ವಿರೋಧಿ ಪಡೆಗಳ ಪಾಲ್ಗೊಳ್ಳುವಿಕೆಯನ್ನು ತೋರಿಸುತ್ತದೆ. ಕೆಲವೇ ದಿನಗಳಲ್ಲಿ, ಈ ಪಿತೂರಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ಜನರ ಒಳಗೊಳ್ಳುವಿಕೆಯನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಹೇಳಿದೆ.
ಇದೇ ವೇಳೆ ವಿನಾಕಾರಣ ಕಾಂಗ್ರೆಸ್ ಅನ್ನು ಎಳೆದು ತಂದ ರಿಪಬ್ಲಿಕ್ ನೆಟ್ವರ್ಕ್, ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಸುಳ್ಳುಗಳನ್ನು ಹರಡಲು ಪ್ರಜ್ಞಾಪೂರ್ವಕವಾಗಿ ಅಥವಾ ಅರಿವಿಲ್ಲದೆ ಪಾಕಿಸ್ತಾನ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ನಾವು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತೇವೆ ಎಂದಿದೆ.
ಪುಲ್ವಾಮ ದಾಳಿಯನ್ನು ಸಂಭ್ರಮಿಸಿರುವುದು ಅರ್ನಾಬ್ ಗೋಸ್ವಾಮಿ, ಚುನಾವಣೆ ಗೆಲ್ಲಲು ಸಹಕಾರಿಯಾಯಿತು ಎನ್ನುವ ಆರೋಪವಿರುವುದು ಬಿಜೆಪಿ ಹಾಗೂ ನರೇಂದ್ರ ಮೋದಿಯ ಮೇಲೆ. ಈ ನಡುವೆ ಕಾಂಗ್ರೆಸ್ ಎಲ್ಲಿಂದ ಬಂತು ಅನ್ನುವುದು ಯಕ್ಷ ಪ್ರಶ್ನೆ!