2002ರ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನು ಎಂಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಮತ್ತು ಆ ಕುಟುಂಬದ ಏಳು ಮಂದಿಯನ್ನು ಕೊಂದಿದ್ದ 11 ಆರೋಪಿಗಳನ್ನು ಸನ್ನಡತೆ ಆಧರಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದು, ವಿವಾದಕ್ಕೆ ಗುರಿಯಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಆರೋಪಿಯನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಬಾರದು ಎಂಬ ಕೇಂದ್ರದ ನಿಯಮ ಇದ್ದರೂ, ಗುಜರಾತ್ ಸರಕಾರ ಮಾತ್ರ 11 ಹಂತಕರನ್ನು ಬಿಡುಗಡೆ ಮಾಡಿದೆ ಎಂದು ಸಂತ್ರಸ್ತರು ಆರೋಪ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳಿಗೆ ಕೇಂದ್ರದ ನಿಯಮ ಅನ್ವಯವಾಗುವುದಿಲ್ಲ. ಸುಪ್ರೀಂಕೋರ್ಟ್ ನಿಯಮಾವಳಿ ಅನುಸರಿಸಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ಧಾರೆ.
ಬಿಲ್ಕಿಸ್ ಬಾನು ಎಂಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಮತ್ತು ಆ ಕುಟುಂಬದ ಏಳು ಮಂದಿಯನ್ನು ಕೊಂದಿದ್ದ ಪ್ರಕರಣಕ್ಕೆ ಸಂಬಂಧಿ 2008ರಲ್ಲಿ ಪ್ರಕರಣದ ತೀರ್ಪು ನೀಡಿದ್ದ ಮುಂಬಯಿ ಕೋರ್ಟ್, 11 ಜನರನ್ನು ದೋಷಿಗಳೆಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರಕರಣದ ದೋಷಿಯೊಬ್ಬ ಕೋರ್ಟ್ ಮೆಟ್ಟಿಲೇರಿ, 15 ವರ್ಷ ಶಿಕ್ಷೆ ಪೂರೈಸಿದ ತಮ್ಮನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದ. ಸರಕಾರ ತಾವು ರೂಪಿಸಿಕೊಂಡಿದ್ದ ನಿಯಮಾವಳಿ ಅಡಿಯಲ್ಲಿ ಕೈದಿಗಳ ಬಿಡುಗಡೆಯ ನಿರ್ಧಾರ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. 1992ರ ಜೈಲು ನಿಯಮ ಆಧರಿಸಿ ಗುಜರಾತ್ ಸರಕಾರ, 11 ಜನರನ್ನು ಬಿಡುಗಡೆ ಮಾಡಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಗುಜರಾತ್ ಸರ್ಕಾರ ನಮ್ಮ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ನೀಡಿದೆ. ಆದರೆ ಉದ್ಯೋಗ ಅಥವಾ ಮನೆ ನೀಡಬೇಕು ಎಂಬ ಆದೇಶವನ್ನು ಇದುವರೆಗೂ ಪಾಲಿಸಿಲ್ಲ. ನಾವು ಹೆಚ್ಚೂಕಡಿಮೆ ಅಡಗಿಕೊಂಡು ಜೀವನ ಸಾಗಿಸುತ್ತಿದ್ದೇವೆ ನಾವು ಮಾತಿಲ್ಲದಂತಾಗಿದ್ದೇವೆ. ಆಘಾತ ಮತ್ತು ನಡುಕದಿಂದ ತತ್ತರಿಸಿದ್ದೇವೆ. ನಾವು ಅನೇಕ ವರ್ಷಗಳ ಕಾಲ ನಡೆಸಿದ ಹೋರಾಟ ಒಂದು ಗಳಿಗೆಯಲ್ಲಿ ಮಣ್ಣುಪಾಲಾಗಿದೆ. ನ್ಯಾಯಾಲಯವೊಂದು ನೀಡಿದ ಜೀವಾವಧಿ ಶಿಕ್ಷೆಯನ್ನು ಯಾವ ರೀತಿಯಲ್ಲಿ ತಳ್ಳಿಹಾಕಲಾಗಿದೆ ನೋಡಿ ಎಂದು ನೋವು ವ್ಯಕ್ತಪಡಿಸಿದ್ದಾರೆ.