ಕೇಂದ್ರ ಸರ್ಕಾರದ ಮಂತ್ರಿಗಳು ಜನಾಶೀರ್ವಾದ ಹೆಸರಲ್ಲಿ ಎಲ್ಲ ಕಡೆ ಪ್ರವಾಸ ಮಾಡುತ್ತಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ರಾಜಕೀಯ ಸಭೆ ಬೇಡ ಎಂದು ಹೇಳಿದ್ದಾರೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ ಬಿಜೆಪಿಯವರಿಗೊಂದು ಹಾಗೂ ಬೇರೆ ಪಕ್ಷಗಳಿಗೊಂದು ಕಾನೂನು ಇದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಈಗ ಆಗಿರುವ ಸಮಾರಂಭಗಳಲ್ಲಿ ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮಂತ್ರಿಗಳು ಹೋದಾಗ ಬಂದೂಕಿನಲ್ಲಿ ಗುಂಡು ಹಾರಿಸಿ ಸ್ವಾಗತಿಸಿದ್ದು, ಆ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು ಇದ್ದರು. ಆದರೆ ಕೇವಲ ಕಾನ್ಸಟೇಬಲ್ಅನ್ನು ಮಾತ್ರ ಅಮಾನತು ಮಾಡಲಾಗಿದೆ. ಮುಖ್ಯಮಂತ್ರಿಗಳ ಈ ಪಾರದರ್ಶಕ ಆಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಕಾರ್ಯಕ್ಷಮತೆಗೆ ಎಲ್ಲರೂ ಚಪ್ಪಾಳೆ ಹೊಡೆಯಬೇಕು. ಗೃಹ ಸಚಿವರಾಗಿದ್ದವರು ಮುಖ್ಯಮಂತ್ರಿ ಆದಾಗ ಏನಾದರೂ ಬದಲಾವಣೆ ಮಾಡುತ್ತಾರೆ ಎಂದು ನಿರೀಕ್ಷೆ ಇದೇ ರೀತಿ ಮುಂದುವರಿದರೆ ಅರಾಜಕತೆ ಸೃಷ್ಟಿ ಆಗುತ್ತದೆ. ಇದು ಬಿಜೆಪಿ ಆಡಳಿತದ ವೈಖರಿ. ಇಲ್ಲಿ ಬಿಜೆಪಿ ಸ್ವರ್ಗ ತೋರಿಸುತ್ತಿಲ್ಲ, ಬದಲಿಗೆ ನರಕ ತೋರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನಾವೆಲ್ಲರೂ ರಾಜೀವ್ ಗಾಂಧಿ ಅವರ ಚಿಂತನೆ ಮತ್ತು ದೂರದೃಷ್ಟಿಯ ಫಲಾನುಭವಿಗಳು. ರಾಜೀವ್ ಗಾಂಧಿ ಅವರು ಪ್ರಧಾನಿಯಾದ ಮೇಲೆ ರಾಮಲಿಂಗಾರೆಡ್ಡಿ, ನಜೀರ್, ನಾಡಗೌಡರು ಸೇರಿದಂತೆ 63 ಮಂದಿ ಯುವಕರಿಗೆ ಟಿಕೆಟ್ ನೀಡಿದ್ದಾರೆ. ಪ್ರತಿ ಸನ್ನಿವೇಶದಲ್ಲೂ ಯುವಕರ ಪಾಲುದಾರಿಕೆ ಇದೆ ಎಂದು ತೋರಿಸಿಕೊಟ್ಟದ್ದೇ ರಾಜೀವ್ ಗಾಂಧಿ ಅವರು. ಮತದಾನದ ವಯಸ್ಸು 18ಕ್ಕೆ ಇಳಿಸುವ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಯುವಾಗ ಗಲಾಟೆ ಆಯಿತು. ಬಿಜೆಪಿ, ಜನಸಂಘ ಸೇರಿದಂತೆ ಅನೇಕ ಪಕ್ಷಗಳು ಇದನ್ನು ವಿರೋಧಿಸಿದ್ದವು. 16 ವರ್ಷದವರನ್ನು ಸೇನೆಗೆ ಸೇರಿಸಿಕೊಂಡು ಬಂದೂಕು ಕೊಟ್ಟು ದೇಶ ಕಾಯಲು ನಿಲ್ಲಿಸುತ್ತೇವೆ. ಹೀಗಾಗಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಮತದಾನ ಹಕ್ಕು ನೀಡುವುದು ಬೇಡ ಎಂದು ಹೇಳಲು ಹೇಗೆ ಸಾಧ್ಯ? ಈ ದೇಶದ ಯುವಕರ ಮೇಲೆ ನಂಬಿಕೆ ಇದೆ ಎಂದು ರಾಜೀವ್ ಗಾಂಧಿ ಅವರು ಹೇಳಿದರು ಎಂದು ಈ ವೇಳೆ ಅವರು ಸ್ಮರಿಸಿದ್ದಾರೆ.
ಈ ದೇಶದಲ್ಲಿ ಕಾಲೇಜು ಚುನಾವಣೆ ಮೂಲಕ ವಿದ್ಯಾರ್ಥಿ ನಾಯಕರನ್ನು ಬೆಳೆಸಲಾಗುತ್ತಿತ್ತು. ಈಗ ಅದು ಇಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿ ಕಾಪಾಡಬೇಕಾದರೆ ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ನಾಯಕರನ್ನು ತಯಾರು ಮಾಡಬೇಕು. ಅದಕ್ಕಾಗಿ ಈ ತಿದ್ದುಪಡಿ ತರಲಾಗುತ್ತಿದೆ ಎಂದು ರಾಜೀವ್ ಗಾಂಧಿ ಅವರು ಹೇಳಿದ್ದರು.
ಬಂಗಾರಪ್ಪ ಅವರು ಮುಖ್ಯಮಂತ್ರಿ ಆದಾಗ ಎಲ್ಲ ವರ್ಗದ ಯುವಕರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂದು ಸೂಚಿಸಿದರು. ನಾನು, ನಜೀರ್ ಸೇರಿದಂತೆ ಎಲ್ಲ ವರ್ಗದವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ದೇಶದುದ್ದಗಲಕ್ಕೂ ಯುವಕರಿಗೆ ಆದ್ಯತೆ ನೀಡಿದರು. Controversial leaders are beneficial, controversial leaders are successful ಎಂದಿದ್ದರು. ವಿವಾದಾತ್ಮಕರಾಗಿದ್ದಾರೆ ಎಂದು ಅವರನ್ನು ನಿರ್ಲಕ್ಷಿಸಬೇಡಿ. ಪಕ್ಷ ಸಂಘಟಿಸುವ ಶಕ್ತಿ ಶಿವಕುಮಾರ್ ಅವರಲ್ಲಿದೆ, ಆತನಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದರು.
ಈ ರಾಜ್ಯಕ್ಕೆ ದೇವರಾಜ ಅರಸು ಅವರು ಕೊಟ್ಟಿರುವ ಕೊಡುಗೆಗಳು, ಕಾರ್ಯಕ್ರಮ, ಭೂಸುಧಾರಣೆ ಕಾನೂನು. ಬಡವರಿಗಾಗಿ ಕಾರ್ಯಕ್ರಮ ರೂಪಿಸಿದ್ದರೆ ಅದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಕಳೆದ ಎರಡು ವರ್ಷಗಳಿಂದ ಬಿಜೆಪಿ ಸರ್ಕಾರ ಯಾವುದಾದರೂ ಒಂದು ಕಾರ್ಯಕ್ರಮ ಕೊಟ್ಟಿದ್ದೆಯಾ ಹೇಳಲಿ. ಬಿಜೆಪಿ ಸರ್ಕಾರ ಜನರಿಗೆ ಕೊಟ್ಟಿದ್ದು ಏನೆಂದರೇ ಬೂದಿ. ನರಕ ಸೃಷ್ಟಿಸಿರುವುದೇ ಅವರ ಸಾಧನೆ. ಅವರ ಕೈಯಲ್ಲಿ ಆಕ್ಸಿಜನ್, ಔಷಧಿ, ಹಾಸಿಗೆ ವ್ಯವಸ್ಥೆ ಕೊಡಲು ಆಗಲಿಲ್ಲ. ಈ ಸರ್ಕಾರ ಕಿತ್ತೊಗೆಯುವಂತೆ ಮಾಡೋಣ ಎಂದು ಅವರು ಹೇಳಿದ್ದಾರೆ.