ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ದೇಶದಲ್ಲಿ ‘ನಿರುದ್ಯೋಗ ದರ’ ಏರಿಕೆ ಆಗುತ್ತಿದೆ. ಆಗಸ್ಟ್ ತಿಂಗಳೊಂದರಲ್ಲೇ ದೇಶದಲ್ಲಿ 15 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಗ್ರಹಿಸಿದ ಡೇಟಾವನ್ನು ಉಲ್ಲೇಖಿಸಿದ ಮಾಧ್ಯಮ ವರದಿಯ ಸ್ಕ್ರೀನ್ಶಾಟ್ ಅನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಿರಂತರವಾಗಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿರುವ, ನಿರುದ್ಯೋಗ ಹೆಚ್ಚುತ್ತಿರುವ ಬಗ್ಗೆ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಅವರು ಶುಕ್ರವಾರ ಟ್ವೀಟ್ ಮೂಲಕ ‘ನರೇಂದ್ರ ಮೋದಿ ಸರ್ಕಾರವು ಉದ್ಯೋಗಕ್ಕೆ ಹಾನಿಕಾರಕವಾಗಿದೆ. ಇದು ಯಾವುದೇ ರೀತಿಯ ವ್ಯಾಪಾರ ಅಥವಾ ಉದ್ಯೋಗವನ್ನು ಬೆಂಬಲಿಸುತ್ತಿಲ್ಲ. ಬದಲಿಗೆ ಇರುವ ಉದ್ಯೋಗವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿದೇಶದ ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ನಾಯಕರು ಸದ್ಯ ದೇಶಾದ್ಯಂತ ಸುದ್ದಿಗೋಷ್ಠಿ ನಡೆಸಿ ‘ಮೋದಿ ಸರ್ಕಾರದ ಆರ್ಥಿಕ ನೀತಿಗಳು ದೇಶಕ್ಕೆ ಎಷ್ಟು ಮಾರಕವಾಗಿವೆ?’ ಎಂಬುದನ್ನು ವಿವರಿಸುತ್ತಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರದ ಕಳಪೆ ನಿರ್ವಹಣೆಯಿಂದ ನಿರುದ್ಯೋಗ ಹೆಚ್ಚುತ್ತಿರುವ ಬಗೆಗೂ ಬೆಳಕು ಚೆಲ್ಲಲಾಗುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಅವರು ಛತ್ತೀಸ್ಗಢದಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿದ ರಾಷ್ಟ್ರೀಯ ಹಣಗಳಿಕೆಯ ಪೈಪ್ಲೈನ್ (NMP) ಮತ್ತು 2016ರ ನೋಟು ರದ್ದತಿ ಕ್ರಮಗಳು ದೇಶದ ಜನರನ್ನು ಲೂಟಿ ಮಾಡುವ ಗುರಿಯನ್ನು ಹೊಂದಿರುವ ‘ಅವಳಿ ಶಿಶುಗಳು’ ಎಂದು ಹೇಳಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ಮೋದಿ ಸರ್ಕಾರ ಈ ಅವಳಿ ಶಿಶುಗಳಿಗೆ ಜನ್ಮ ನೀಡಿತು. ಒಂದು ಡಿಮಾನಿಟೈಸೇಶನ್ ಮತ್ತು ಇನ್ನೊಂದು ಹಣಗಳಿಕೆ. ಎರಡರ ಸ್ವಭಾವ ಒಂದೇ. ನೋಟು ನಿಷೇಧವು ಬಡ ಮತ್ತು ಸಣ್ಣ ಉದ್ಯಮಿಗಳನ್ನು ಲೂಟಿ ಮಾಡಿತು. ದೇಶದ ಪರಂಪರೆಯನ್ನು ಈಗ ಹಣಗಳಿಕೆಯ ಮೂಲಕ ಲೂಟಿ ಮಾಡಲಾಗುತ್ತಿದೆ. ಎರಡೂ ಕೆಲವು ಬಂಡವಾಳಶಾಹಿಗಳಿಗೆ ಲಾಭ ಮಾಡುವ ಗುರಿಯನ್ನು ಹೊಂದಿವೆ. ಅತ್ಯಂತ ಆಘಾತಕಾರಿ ಮತ್ತು ಸಂಶಯಾಸ್ಪದ ಭಾಗವೆಂದರೆ ಇವುಗಳನ್ನು ರಹಸ್ಯವಾಗಿ ನಿರ್ಧರಿಸಲಾಯಿತು. ಮತ್ತು ಇದ್ದಕ್ಕಿದ್ದಂತೆ ಘೋಷಿಸಲಾಯಿತು. ಇದು ಸರ್ಕಾರದ ಉದ್ದೇಶದ ಮೇಲೆ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ವಿವರಿಸಿದರು.
ರಾಷ್ಟ್ರೀಯ ಹಣಗಳಿಕೆಯ ಪೈಪ್ಲೈನ್ ಮುಖ್ಯ ಉದ್ದೇಶ ಏನೆಂದರೆ ಕೆಲವು “ಆಯ್ದ ಕೈಗಾರಿಕೋದ್ಯಮಿ ಸ್ನೇಹಿತರ” ಏಕಸ್ವಾಮ್ಯವನ್ನು ಸೃಷ್ಟಿಸುವುದು. ರೈಲ್ವೆಗಳು, ರಸ್ತೆಗಳು, ವಿಮಾನಯಾನ ಸಂಸ್ಥೆಗಳು ಯುದ್ಧದ ಸಮಯದಲ್ಲಿ ರಕ್ಷಣಾ ಪಡೆಗಳ ಚಲನೆಗೆ ಅನುಕೂಲವಾಗುವಂತಹ ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿವೆ. ಅವುಗಳನ್ನು ಕೂಡ ಮಾರುವುದು. ಕಾರ್ಯತಂತ್ರದ ಪ್ರಾಮುಖ್ಯತೆ ಹೊಂದಿರುವ ವಲಯಗಳನ್ನು ಖಾಸಗೀಕರಣಗೊಳಿಸುವುದು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಸ್ತುಗಳನ್ನು ವಿದೇಶಿ ಪಡೆಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಮಾರಾಟ ಮಾಡುವುದು ಎಂದು ಆರೋಪಿಸಿದ ಅವರು ಇದೇ ಬಿಜೆಪಿಯವರ “ರಾಷ್ಟ್ರೀಯತೆ” ಎಂದು ಹೇಳಿದ್ದಾರೆ.
ಎನ್ಎಂಪಿ ಅಡಿಯಲ್ಲಿ ಸ್ವತ್ತುಗಳ ಮಾಲೀಕತ್ವ ಸರ್ಕಾರದೊಂದಿಗೆ ಉಳಿಯುತ್ತದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವು ಸುಳ್ಳು ಹೇಳುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 23 ರಂದು ಘೋಷಿಸಿದ ರಾಷ್ಟ್ರೀಯ ಹಣಗಳಿಕೆಯ ಪೈಪ್ಲೈನ್, 2025 ರ ಹಣಕಾಸಿನವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ರಸ್ತೆಗಳಿಂದ ರೈಲ್ವೇವರೆಗೆ ಬ್ರೌನ್ ಫೀಲ್ಡ್ ಸ್ವತ್ತುಗಳಲ್ಲಿನ ಹಣಕಾಸಿನ ಮೌಲ್ಯವನ್ನು ತೆರೆಯುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಕಾರ್ಯತಂತ್ರದ ಪ್ರಾಮುಖ್ಯತೆ ಹೊಂದಿರುವ ಆಸ್ತಿಯನ್ನು ಎಂದಿಗೂ ಖಾಸಗೀಕರಣಗೊಳಿಸಲ್ಲ ಅಥವಾ ವಿದೇಶಿ ಶಕ್ತಿಗಳ ಕೈಗೆ ಯಾವುದೇ ರೀತಿಯ ಅವಕಾಶ ನೀಡಲ್ಲ ಎಂದು ನಿರ್ಧರಿಸಿದೆ. ವಿವಿಧ ರಾಜ್ಯ ಸರ್ಕಾರಗಳು PSUಗಳಿಗೆ ರಿಯಾಯಿತಿ ದರದಲ್ಲಿ ಭೂಮಿಯನ್ನು ನೀಡಿವೆ ಅಷ್ಟೇ ಎಂದು ಕಾಂಗ್ರೆಸ್ ನಾಯಕ ಹೇಳಿದರು. “ಭೂಮಿ ರಾಜ್ಯ ಸರ್ಕಾರಗಳ ವಿಷಯವಾಗಿರುವುದರಿಂದ ಎನ್ಎಂಪಿಯನ್ನು ಘೋಷಿಸುವ ಮೊದಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.