ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಕರ್ನಾಟಕ ಪ್ರವೇಶಿಸಿರುವ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್ ಕೇರಳದಿಂದ ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಬಂದಿದೆ. ತಮಿಳುನಾಡು, ಕೇರಳ ಮುಗಿಸಿ ಬಂದಿದೆ. ಯಾವ ಮುಖ ಇಟ್ಟುಕೊಂಡು ಯಾತ್ರೆ ಮಾಡ್ತಿದ್ದಾರೆ ಗೊತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.
ಯಾಕೆಂದರೆ ಚರ್ಚ್ ಫಾದರ್ ಒಬ್ಬರು ಭಾರತ ನೆಲ ತುಳಿಯಲ್ಲ, ಇದು ಅಪವಿತ್ರ ಭೂಮಿ ಅದಕ್ಕೆ ಚಪ್ಪಲಿ ಹಾಕ್ತೀನಿ ಅಂತ ಹೇಳಿದ್ದಾರೆ. ಅವರಿಂದ ಆಶಿರ್ವಾದ ಪಡೆದು ಬಂದಿದ್ದಾರೆ. ಭಾರತ ಮಾತೆಯೇ ಇವರಿಗೆಲ್ಲ ಬುದ್ಧಿಕಲಿಸುತ್ತಾಳೆ. ಅದು ಬಿಟ್ಟು ಭಾರತ ನೆಲದ ಬಗ್ಗೆ ಕೀಳು ಹೇಳಿಕೆ ನೀಡಿದವರ ಬಳಿ ಹೋಗಿ ಆಶೀರ್ವಾದ ಪಡೆದಿದ್ದಾರೆ. ಇಂಥವರಿಂದ ಈ ನೆಲಕ್ಕೇ ಅಪಚಾರವಾಗುತ್ತಿದೆ. ಇಂಥ ಯಾತ್ರೆಗೆ ಜನ ಬೆಲೆ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ 21 ದಿನ ಕಡಿಮೆ ಆಯ್ತು, 30-40ದಿನ ಮಾಡಿದ್ರೆ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚುತ್ತಿತ್ತು. ಕನಿಷ್ಠ 40-50 ದಿನ ಯಾತ್ರೆ ಕರ್ನಾಟಕದಲ್ಲಿ ಮಾಡಿ ಎನ್ನುವುದಾಗಿ ರಾಹುಲ್ ಗಾಂಧಿಯವರಿಗೆ ವಿನಂತಿ ಮಾಡುತ್ತೇನೆ. ರಾಹುಲ್ ಗಾಂಧಿ ಹೋದ ಕಡೆ 99% ಭಾಗ ಕಾಂಗ್ರೆಸ್ ನೆಲ ಕಚ್ಚಿದೆ. ಮೋದಿ ಹೋದ ಕಡೆ ಬಿಜೆಪಿ 99% ಸಕ್ಸಸ್ ಕಂಡಿದೆ. ಇನ್ನಷ್ಟು ಕಡೆ ಕಾಂಗ್ರೆಸ್ ಪಾದಯಾತ್ರೆ ಮಾಡಲಿ ಎಂದು ಲೇವಡಿಯಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನೆಲ ಕಚ್ಚುವುದು ಶತಃಸಿದ್ಧ ಸಿದ್ದರಾಮಯ್ಯ ಆರು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬರಲಿದೆ ಎಂದಿದ್ದಾರೆ. ಅದು ಕಾಂಗ್ರೆಸ್ ನ ಹಗಲು ಕನಸು. ಆರು ತಿಂಗಳಲ್ಲ 60 ವರ್ಷ ಆದ್ರೂ ಕಾಂಗ್ರೆಸ್ ರಾಜ್ಯದಲ್ಲಿ ಬರಲ್ಲ ಎಂದು ಭವಿಷ್ಯ ನುಡಿದಿದ್ದಾರೆ.