ಸೆಪ್ಟೆಂಬರ್ 8 ಗುರುವಾರದಂದು ತನ್ನ 96 ನೇ ವಯಸ್ಸಿನಲ್ಲಿ ಎಲಿಜಬೆತ್ II ನಿಧನ ಹೊಂದುತ್ತಿದ್ದಂತೆ ಹೇಳಿಕೆ ಬಿಡುಗಡೆ ಮಾಡಿರುವ ಬಕಿಂಗ್ಹ್ಯಾಮ್ ಅರಮನೆಯು “ರಾಣಿ ಇಂದು ಮಧ್ಯಾಹ್ನ ಬಾಲ್ಮೋರಲ್ನಲ್ಲಿ ಶಾಂತಿಯುತವಾಗಿ ನಿಧನರಾದರು” ಎಂದಿದೆ. ರಾಣಿಯ ಮರಣವು ಬ್ರಿಟನ್ನ ರಾಜಮನೆತನದ ವಲಯಗಳಲ್ಲಿ ‘ಆಪರೇಷನ್ ಲಂಡನ್ ಬ್ರಿಡ್ಜ್’ ಎಂದು ಗುರುತಿಸಲ್ಪಡುತ್ತದೆ. ಇದರ ಜೊತೆಗೆ ಉತ್ತರಾಧಿಕಾರಿಗೆ ಅಧಿಕಾರವನ್ನು ನೀಡುವ ಔಪಚಾರಿಕ ಸಿದ್ಧತೆಗಳೂ ಆರಂಭವಾಗುತ್ತದೆ. ಸ್ಕಾಟ್ಲೆಂಡ್ನ ಬಾಲ್ಮೋರಲ್ ಕ್ಯಾಸಲ್ನಲ್ಲಿ ರಾಣಿ ಸಾವನ್ನಪ್ಪುತ್ತಿದ್ದಂತೆ, ಆಕೆಯ ದೇಹವನ್ನು ರೈಲಿನಲ್ಲಿ ಲಂಡನ್ಗೆ ಸಾಗಿಸುವುದನ್ನು ಒಳಗೊಂಡ ‘ಆಪರೇಷನ್ ಯೂನಿಕಾರ್ನ್’ ಅನ್ನು ಸಹ ಈಗಾಗಲೇ ಪ್ರಾರಂಭಿಸಲಾಗಿದೆ.
ರಾಣಿ ಎಲಿಜಬೆತ್ II ಅವರು ಭಾರತದೊಂದಿಗೆ ಒಂದು ವಿಶೇಷ ಸಂಬಂಧ ಹೊಂದಿದ್ದರು. 1952 ರಲ್ಲಿ ಇಂಗ್ಲೆಡಿನ ರಾಣಿಯಾಗಿ ಅಧಿಕಾರ ವಹಿಸಿಕೊಂಡ ಅವರು ಸ್ವಾತಂತ್ರ್ಯೋತ್ತರ ಭಾರತಕ್ಕೆ ಭೇಟಿ ನೀಡಿದ ಮೊದಲ ಬ್ರಿಟಿಷ್ ದೊರೆ ಎಂದೇ ಇತಿಹಾಸದಲ್ಲಿ ಕರೆಯಲ್ಪಡುತ್ತಾರೆ. 1952ರಿಂದ 1972ರವರೆಗೆ ಸುಮಾರು ಎಪ್ಪತ್ತು ವರ್ಷಗಳ ಕಾಲ ಇಂಗ್ಲೆಂಡಿನ ಮಹಾರಾಣಿಯಾಗಿದ್ದ ಅವರು 1961,1983 ಮತ್ತು 1997ಕ್ಕೆ ಭಾರತಕ್ಕೆ ಭೇಟಿ ಕೊಟ್ಟಿದ್ದರು. ಇಲ್ಲಿನ ಜನರ ಆತಿಥ್ಯದ ಬಗ್ಗೆ ವಿಶೇಷ ಒಲವಿದ್ದ ಅವರು ಭಾರತದ ‘ಶ್ರೀಮಂತಿಕೆಯನ್ನು ಮತ್ತು ವೈವಿಧ್ಯತೆ’ಯನ್ನು ಬಹುವಾಗಿ ಮೆಚ್ಚಿ ಕೊಂಡಿದ್ದರು. “ಭಾರತೀಯರ ಆತ್ಮೀಯತೆ, ಆತಿಥ್ಯ ಮತ್ತು ಭಾರತದ ಶ್ರೀಮಂತಿಕೆ ಹಾಗೂ ವೈವಿಧ್ಯತೆಯು ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ” ಎಂದು ಅವರು ತಮ್ಮ ಭಾಷಣವೊಂದರಲ್ಲಿ ಹೇಳಿದ್ದರು.
1961 ರ ಪ್ರವಾಸದಲ್ಲಿ ರಾಣಿ ಮತ್ತು ಅವರ ಪತಿ, ಎಡಿನ್ಬರ್ಗ್ನ ದಿವಂಗತ ಪ್ರಿನ್ಸ್ ಫಿಲಿಪ್ ಡ್ಯೂಕ್ ಅವರು ಮುಂಬೈ (ಆಗಿನ ಬಾಂಬೆ), ಚೆನ್ನೈ (ಮದ್ರಾಸ್) ಮತ್ತು ಕೋಲ್ಕತ್ತಾ (ಕಲ್ಕತ್ತಾ)ಗೆ ಭೇಟಿ ನೀಡಿದ್ದರು. ಆಗ್ರಾದ ತಾಜ್ ಮಹಲ್ಗೆ ಮತ್ತು ದೆಹಲಿಯ ರಾಜ್ ಘಾಟ್ಗೂ ಭೇಟಿ ನೀಡಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದ್ದರು.
ಅವರು ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಆಹ್ವಾನದ ಮೇರೆಗೆ ಆ ವರ್ಷದ ಗಣರಾಜ್ಯೋತ್ಸವದ ಪರೇಡ್ನ ಅತಿಥಿಗಳಾಗಿದ್ದರು. ಆ ಪ್ರವಾಸದಲ್ಲಿ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಅವರು ಮಾಡಿದ್ದ ಭಾಷಣದ ಚಿತ್ರವು ಇವತ್ತಿಗೂ ಓಡಾಡುತ್ತಿರುತ್ತದೆ.
1983 ರಲ್ಲಿ ‘ಕಾಮನ್ವೆಲ್ತ್ ಹೆಡ್ಸ್ ಆಫ್ ಗವರ್ನಮೆಂಟ್ ಮೀಟಿಂಗ್’ (CHOGM) ನಲ್ಲಿ ಭಾಗವಹಿಸುವುದಕ್ಕೆ ಅವರು ಭಾರತಕ್ಕೆ ಬಂದಿದ್ದರು. ಅದೇ ಪ್ರವಾಸದಲ್ಲಿ ಅವರು ಮದರ್ ತೆರೇಸಾ ಅವರಿಗೆ ಗೌರವಾನ್ವಿತ ಆರ್ಡರ್ ಆಫ್ ಮೆರಿಟ್ ಅನ್ನು ನೀಡಿ ಗೌರವಿಸಿದರು.
ಭಾರತವು ತನ್ನ ಸ್ವಾತಂತ್ರ್ಯದ ಐವತ್ತನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಅವರು ಮೂರನೇ ಬಾರಿ ಈ ದೇಶಕ್ಕೆ ಭೇಟಿ ಕೊಟ್ಟಿದ್ದರು. ಬ್ರಿಟಿಷ್ ಆಳ್ವಿಕೆಯ ಕೆಲ ಕಹಿ ಘಟನೆಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಅವರು ” ಇತಿಹಾಸದಲ್ಲಿ ಎರಡೂ ದೇಶಗಳ ಮಧ್ಯೆ ಕೆಲವು ಕಹಿ ಘಟನೆಗಳು ನಡೆದಿವೆ ಎಬುವುದು ರಹಸ್ಯವಲ್ಲ. ಜಲಿಯನ್ ವಾಲಾಬಾಗ್ ದುರಂತ ಅತ್ಯಂತ ದುಃಖದ ದುರ್ಘಟನೆಗಳಿಗೆ ಒಂದು ಉದಾಹರಣೆ ” ಎಂದಿದ್ದರು. ಬ್ರಿಟಿಷ್ ಆಳ್ವಿಕೆಯಲ್ಲಿ ಅನೇಕ ಸಾವುಗಳಿಗೆ ಕಾರಣವಾಗಿದ್ದ ಜಲಿಯನ್ ವಾಲಾಬಾಗ್ ದುರಂತದ ಬಗ್ಗೆ ಬ್ರಿಟಿಷ್ ರಾಜ ಮನೆತನ ಕ್ಷಮೆ ಯಾಚಿಸಬೇಕು ಎಂಬ ಒತ್ತಾಯಗಳೂ ಆಗ ಬಲವಾಗಿ ಕೇಳಿ ಬಂದಿತ್ತು. ರಾಣಿ ಮತ್ತವರ ಪತಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಥಳಕ್ಕೆ ಭೇಟಿ ನೀಡಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ್ದರು.
ಇದಲ್ಲದೆ ರಾಣಿ ಎಲಿಜಬೆತ್ II ಮೂವರು ಭಾರತೀಯ ರಾಷ್ಟ್ರಪತಿಗಳಿಗೆ ಆತಿಥ್ಯ ವಹಿಸಿದ್ದಾರೆ. 1963 ರಲ್ಲಿ ರಾಧಾಕೃಷ್ಣನ್, 1990 ರಲ್ಲಿ ಆರ್. ವೆಂಕಟರಾಮನ್ ಮತ್ತು 2009 ರಲ್ಲಿ ಪ್ರತಿಭಾ ಪಾಟೀಲ್.
“ಬ್ರಿಟನ್ ಮತ್ತು ಭಾರತದ ನಡುವೆ ಒಂದು ಸುದೀರ್ಘ ಇತಿಹಾಸವಿದೆ. ಈ ಹೊಸ ಶತಮಾನಕ್ಕೆ ಸೂಕ್ತವಾದ ಹೊಸ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಈ ಇತಿಹಾಸ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ” ಎಂದು ರಾಣಿ ತಮ್ಮ ಬಕಿಂಗ್ಹ್ಯಾಮ್ ಅರಮನೆಯಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಔತಣಕೂಟದಲ್ಲಿ ಹೇಳಿದ್ದರು.
“ನಮ್ಮ ನಾಗರಿಕರಲ್ಲಿ ಸುಮಾರು 2 ಮಿಲಿಯನ್ ಜನರು ಭಾರತ ಮೂಲದವರು ಅಥವಾ ಭಾರತದಲ್ಲಿರುವ ಕುಟುಂಬದೊಂದಿಗೆ ಸಂಪರ್ಕ ಹೊಂದಿರುವವರು. ಅವರು ಯುನೈಟೆಡ್ ಕಿಂಗ್ಡಮ್ನ ಅತ್ಯಂತ ಕ್ರಿಯಾತ್ಮಕ ಮತ್ತು ಯಶಸ್ವಿ ಸಮುದಾಯಗಳಲ್ಲಿ ಒಂದನ್ನು ಪ್ರತಿನಿಧಿಸುತ್ತಾರೆ. ನಮ್ಮ ಎರಡು ದೇಶಗಳ ನಡುವಿನ ಸಂಬಂಧಗಳು ಬಲವಾದ ಮತ್ತು ಆಳವಾದ ತಳಹದಿಯ ಮೇಲೆ ನಿರ್ಮಿಸಲ್ಪಟ್ಟಿವೆ ಮತ್ತು 21 ನೇ ಶತಮಾನಕ್ಕೂ ಈ ಸಂಬಂಧ ಮುಂದುವರಿಯಬಲ್ಲುದಾಗಿದೆ ”ಎಂದು ಅವರು ಹೇಳಿದ್ದರು.