ಕಳೆದ ಎರಡು ವರ್ಷಗಳಿಂದ ಕೋವಿಡ್ ಹೆಸರಿನಲ್ಲಿ ಲೆಕ್ಕವೂ ಇಲ್ಲದೆ, ಪತ್ರವೂ ಇಲ್ಲದೆ ಮುಂದುವರಿದಿರುವ ಸಾರ್ವಜನಿಕ ತೆರಿಗೆ ಹಣದ ಅವ್ಯಾಹತ ಲೂಟಿಗೆ ಒಮಿಕ್ರೋನ್ ಅಲೆ ಇನ್ನಷ್ಟು ವೇಗ ನೀಡಿದೆ.
ಮೂಲಭೂತವಾಗಿ ಈ ಹಿಂದಿನ ಡೆಲ್ಟಾ ಮತ್ತು ಬೀಟಾ ಅಲೆಗಳಿಗಿಂತ ಒಮಿಕ್ರೋನ್ ತೀರಾ ದುರ್ಬಲ. ಹಾಗಾಗಿ ಈ ರೂಪಾಂತರಿ ತಳಿ ಮೊದಲು ಪತ್ತೆಯಾದ ಆಫ್ರಿಕಾದಲ್ಲಿ ಅಲ್ಲಿನ ಜನಸಂಖ್ಯೆಯ ಶೇ.೮೦ರಷ್ಟು ಮಂದಿಗೆ(ಸುಮಾರು ಐದು ಕೋಟಿ ಜನಸಂಖ್ಯೆ) ಸೋಂಕು ತಗುಲಿದರೂ ಸೋಂಕಿಗೆ ಯಾವುದೇ ವ್ಯಕ್ತಿ ಬಲಿಯಾಗಿಲ್ಲ. ಹಾಗೇ ಇಸ್ರೇಲ್, ಬ್ರಿಟನ್, ಅಮೆರಿಕ ಮತ್ತಿತರ ಕೆಲವೇ ಕೆಲವು ದೇಶಗಳಲ್ಲಿ ಬೆರಳೆಣಿಕೆಯಷ್ಟು ಸಾವುಗಳು ಸಂಭವಿಸಿದ್ದರೂ, ಆ ಎಲ್ಲವೂ ಕೋವಿಡ್ ಜೊತೆಗೆ ಮಾರಣಾಂತಿಕ ಇತರೆ ರೋಗಪೀಡಿತರು ಮತ್ತು ಈವರೆಗೆ ಯಾವುದೇ ಲಸಿಕೆ ಪಡೆಯದವರ ಪ್ರಕರಣಗಳು ಎಂಬುದು ಗಮನಾರ್ಹ. ಹಾಗಾಗಿ ಒಮಿಕ್ರೋನ್ ಸೋಂಕಿತರ ಬೆರಳೆಣಿಕೆ ಸಾವುಗಳಿಗೂ ನಿರ್ದಿಷ್ಟವಾಗಿ ಒಮಿಕ್ರೋನ್ ಕಾರಣವೆಂದು ಇನ್ನೂ ದೃಢಪಟ್ಟಿಲ್ಲ.
ಒಮಿಕ್ರೋನ್ ನ ಇಂತಹ ದುರ್ಬಲ ಗುಣಲಕ್ಷಣಗಳ ಹಿನ್ನೆಲೆಯಲ್ಲೇ ದಕ್ಷಿಣ ಆಫ್ರಿಕಾ, ಕೆನಡಾ, ಜರ್ಮನಿ ಮುಂತಾದ ದೇಶಗಳಲ್ಲಿ ಕೋವಿಡ್ ಟೆಸ್ಟ್, ಟ್ರ್ಯಾಕ್ ಮತ್ತು ಕ್ವಾರಂಟೈನ್ ನಿಯಮಗಳನ್ನು ಸಡಿಲಿಸಲಾಗುತ್ತಿದೆ. ಅದರಲ್ಲೂ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.೪೦ರಷ್ಟು ಮಂದಿಗೆ ಮಾತ್ರ ಸಂಪೂರ್ಣ ಲಸಿಕೆ ಪಡೆದಿರುವ ಜರ್ಮನಿಯಲ್ಲಿ ಕೂಡ ಒಮಿಕ್ರೋನ್ ಕ್ವಾರಂಟೈನ್ ಅವಧಿಯನ್ನು ೧೫ ದಿನಗಳಿಂದ ಏಳು ದಿನಕ್ಕೆ ಕಡಿತ ಮಾಡಲು ಸರ್ಕಾರ ಮುಂದಾಗಿದೆ.
ಹೀಗೆ ಸೋಂಕಿನ ಹರಡುವಿಕೆ ವಿಷಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದರೂ ರೋಗ ತೀವ್ರತೆಯ ವಿಷಯದಲ್ಲಿ ಮಾತ್ರ ತೀರಾ ದುರ್ಬಲವಾಗಿರುವ ಒಮಿಕ್ರೋನ್ ವಿಷಯಲ್ಲಿ ಇಡೀ ಜಗತ್ತು ಒಂದು ರೀತಿ ಯೋಚಿಸುತ್ತಿದ್ದರೆ, ಭಾರತ ಮಾತ್ರ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ.
ಅದು ಕೋವಿಡ್ ಪರೀಕ್ಷೆ ಇರಬಹುದು, ಸಂಪರ್ಕ ಪತ್ತೆ ಅಥವಾ ಟ್ರ್ಯಾಕಿಂಗ್ ವಿಷಯವಿರಬಹುದು, ಕ್ವಾರಂಟೈನ್, ಐಸೋಲೇಷನ್, ಕ್ಲಸ್ಟರ್ ಘೋಷಣೆ, ಕರ್ಫ್ಯೂ ವಿಷಯದಲ್ಲಿರಬಹುದು; ಭಾರತದಲ್ಲಿ ದಿನದಿಂದ ದಿನಕ್ಕೆ ನಿಯಮಗಳು ಇನ್ನಷ್ಟು ಬಿಗಿಯಾಗತೊಡಗಿವೆ. ಒಮಿಕ್ರೋನ್ ನಿಂದಾಗಿ ಒಂದೇ ಒಂದು ಸಾವು ಸಂಭವಿಸದೇ ಇದ್ದರೂ ಕರ್ನಾಟಕದಲ್ಲಂತೂ ಲಾಕ್ ಡೌನ್ ಹೇರುವ ಮಾತುಗಳು ಆಡಳಿತ ಪಕ್ಷದ ಕಡೆಯಿಂದಲೇ ಜೋರಾಗಿ ಕೇಳಿಬರತೊಡಗಿವೆ. ಈಗಾಗಲೇ ಬೆಂಗಳೂರು ನಗರ, ಬೆಳಗಾವಿ ಸೇರಿದಂತೆ ಹಲವೆಡೆ ಶಾಲಾ ಕಾಲೇಜುಗಳನ್ನು ಕೂಡ ಬಂದ್ ಮಾಡಲಾಗಿದೆ.
ಒಂದು ಕಡೆ ಪ್ರತಿಪಕ್ಷ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ನಡೆಸುತ್ತಿದ್ದರೆ, ಅದು ಆಡಳಿತ ಪಕ್ಷ ಬಿಜೆಪಿಗೆ ಇನ್ನಿಲ್ಲದ ಮುಜುಗರ ತಂದಿದೆ. ಜನರ ಕುಡಿಯುವ ನೀರಿನ ಯೋಜನೆಗಾಗಿ ತಾವು ಬೀದಿಗಿಳಿದಿರುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೆ, ಅನಗತ್ಯವಾಗಿ ಕೋವಿಡ್ ಸಂದರ್ಭದಲ್ಲಿ ನಿಯಮಾವಳಿ ಗಾಳಿಗೆ ತೂರಿ ಕಾಂಗ್ರೆಸ್ ನಾಯಕರು ಸೋಂಕು ಹರಡುತ್ತಿದ್ದಾರೆ ಎಂದು ಆಡಳಿತ ಪಕ್ಷ ಆರೋಪಿಸಿದೆ ಮತ್ತು ನಿಯಮ ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಸರ್ಕಾರ ಪ್ರಕರಣವನ್ನೂ ದಾಖಲಿಸಿದೆ. ಪಾದಯಾತ್ರೆಯ ಮೂಲಕ ಪ್ರತಿಪಕ್ಷ ಜನರ ಅನುಕಂಪ ಗಳಿಸುತ್ತಿದ್ದು, ನೀರಿಗಾಗಿನ ಆ ಹೋರಾಟ ಆ ಪಕ್ಷಕ್ಕೆ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಚುನಾವಣಾ ಲಾಭ ತಂದುಕೊಡುವ ಸಾಧ್ಯತೆ ಹೆಚ್ಚಿದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಆ ಹೋರಾಟವನ್ನು ಹತ್ತಿಕ್ಕುವ ಯತ್ನವಾಗಿ ಕೋವಿಡ್ ನಿರ್ಬಂಧ ಕ್ರಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ವಾದವೂ ಇದೆ.
ಈ ನಡುವೆ ಕೋವಿಡ್ ನಿರ್ಬಂಧಗಳನ್ನು ಬಿಗಿಗೊಳಿಸುತ್ತಿರುವ ಸರ್ಕಾರದ ಕ್ರಮದ ವಿರುದ್ಧ ರಾಜ್ಯದ ಅಲ್ಲಲ್ಲಿ ಸಾರ್ವಜನಿಕರು ಕೂಡ ತಿರುಗಿಬೀಳುತ್ತಿದ್ದಾರೆ. ಟೆಸ್ಟ್, ಟ್ರ್ಯಾಕ್, ಕ್ವಾರಂಟೈನ್ಗಿಂತ ಗಂಭೀರ ಆರೋಗ್ಯ ಪರಿಸ್ಥಿತಿ ಎದುರಿಸುವ ಸೋಂಕಿತರಿಗೆ ತತಕ್ಷಣವೇ ವೈದ್ಯಕೀಯ ಸೇವೆ ಸಕಾಲದಲ್ಲಿ ಮತ್ತು ಕ್ಷಿಪ್ರವಾಗಿ ಒದಗುವಂತೆ ವ್ಯವಸ್ಥೆ ಮಾಡಬೇಕಾದ ಸರ್ಕಾರ, ಆ ವಿಷಯದಲ್ಲಿ ಮೈಮರೆತು ಕರ್ಫ್ಯೂ, ಲಾಕ್ ಡೌನ್ ಹೇರಿ ಜನರ ಬದುಕನ್ನ ನರಕ ಮಾಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ನಡುವೆ, ಜನರಲ್ಲಿ ಒಮಿಕ್ರೋನ್ ಭೀತಿ ಹುಟ್ಟಿಸಿ, ಸಾಂಕ್ರಾಮಿಕವನ್ನೇ ಲಾಭದ ಅವಕಾಶ ಮಾಡಿಕೊಂಡು ದಂಧೆ ಮಾಡುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ಕೋವಿಡ್ ಟೆಸ್ಟ್ ವಿಷಯದಲ್ಲಿ ಒಮಿಕ್ರೋನ್ ಗಾಗಿಯೇ ಪ್ರತ್ಯೇಕ ಟೆಸ್ಟ್ ಕಿಟ್ ಖರೀದಿಗೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಟಾಟಾ ಮೆಡಿಕಲ್ಸ್ ಅಂಡ್ ಡಯಾಗ್ನೋಸ್ಟಿಕ್ಸ್ ಅಭಿವೃದ್ಧಿಪಡಿಸಿರುವ ಮತ್ತು ಈಗಾಗಲೇ ಬಳಕೆಗೆ ಐಸಿಎಂಆರ್ ಅನುಮೋದನೆ ಪಡೆದಿರುವ ಒಮಿಶ್ಯೂರ್ ಎಂಬ ಟೆಸ್ಟ್ ಕಿಟ್ ಖರೀದಿಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ಬರೋಬ್ಬರಿ ೭೦೦ ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಒಮಿಕ್ರೋನ್ ಪತ್ತೆಗಾಗಿ ಜಿನೋಮ್ ಸೀಕ್ವೆನ್ಸಿಂಗ್ ಮಾದರಿ ಅನುಸರಿಸಲಾಗುತ್ತಿದ್ದು, ಅದರ ಫಲಿತಾಂಶ ಪಡೆಯಲು ನಾಲ್ಕೈದು ದಿನಗಳ ಬೇಕಾಗುತ್ತವೆ. ಆದರೆ, ಟಾಟಾ ಅಭಿವೃದ್ಧಿಪಡಿಸಿರುವ ಹೊಸ ಒಮಿಶ್ಯೂರ್ ಟೆಸ್ಟ್ ಕಿಟ್ ಬಳಸಿದ್ದಲ್ಲಿ ಆರ್ ಟಿಪಿಸಿಆರ್ ರೀತಿಯಲ್ಲೀ ಕೆಲವೇ ತಾಸಲ್ಲಿ ಫಲಿತಾಂಶ ಪಡೆಯಬಹುದು. ಸದ್ಯ ಟಾಟಾ ಒಂದು ಒಮಿಶ್ಯೂರ್ ಟೆಸ್ಟ್ ಕಿಟ್ ಗೆ ೨೫೦ ರೂ. ದರ ನಿಗದಿ ಮಾಡಿದೆ. ಆ ಲೆಕ್ಕದ ಪ್ರಕಾರವೇ ಹೋದರೂ, ಕರ್ನಾಟಕ ಸರ್ಕಾರ ಸುಮಾರು ೨.೮೦ ಕೋಟಿ ಟೆಸ್ಟ್ ಕಿಟ್ ಖರೀದಿಗೆ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.
ವಾಸ್ತವವಾಗಿ ತೀರಾ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಉಂಟುಮಾಡವುದೇ ವಿರಳ ಎನ್ನಲಾಗುತ್ತಿರುವ ಒಮಿಕ್ರೋನ್ ಪತ್ತೆಗಾಗಿ ಇಷ್ಟೊಂದು ಹರಸಾಹಸ ಪಡುವುದೇ ಬೇಕಿಲ್ಲ. ಅದಕ್ಕೆ ಬದಲಾಗಿ ಯಾರಿಗೆ ಕೋವಿಡ್ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಆಸ್ಪತ್ರೆಗೆ ದಾಖಲಿಸಬೇಕಾದ ಗಂಭೀರ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಅವರಿಗೆ ಕೂಡಲೇ ಚಿಕಿತ್ಸೆ ಕೊಡುವ ವ್ಯವಸ್ಥೆಯನ್ನು ಖಾತರಿಪಡಿಸಲು ಅದೇ ೭೦೦ ಕೋಟಿಯನ್ನು ವ್ಯಯ ಮಾಡಿದರೆ, ಕೇವಲ ಒಮಿಕ್ರೋನ್ ಮಾತ್ರವಲ್ಲದೆ, ಇತರೆ ರೂಪಾಂತರಿಗಳಿಂದಲೂ ಸಂಭವಿಸಬಹುದಾದ ಕೋವಿಡ್ ಸಾವುಗಳನ್ನು ತಡೆಯಬಹುದು ಅಲ್ಲವೆ?
ಹಾಗಿದ್ದರೂ ಸರ್ಕಾರ ವಿವೇಚನೆಗೆ ಮಂಕು ಕವಿಸಿ ಕೋಟ್ಯಂತರ ರೂಪಾಯಿ ಜನರ ತೆರಿಗೆ ಹಣ ವ್ಯಯ ಮಾಡಿಸುತ್ತಿರುವುದು ಯಾವ ಹಿತಾಸಕ್ತಿ?