ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ರೈತರ ಹಾಗೂ ಕಾರ್ಮಿಕರ ಪ್ರತಿಭಟನೆಯ ಬಿಸಿ ಸಿಕ್ಕಿದೆ. ಸಿಎಂ ಮಾನ್ ಅವರ ಸಂಗ್ರೂರ್ ಮನೆಯ ಹೊರಗೆ ಬೃಹತ್ ಪ್ರತಿಭಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಪ್ರತಿಭಟನಾಕಾರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ರೈತ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳು ಪೊಲೀಸರೊಂದಿಗೆ ಘರ್ಷಣೆಯಲ್ಲಿ ತೊಡಗಿದ್ದು, ಗುಂಪನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳದಿಂದ ಹೊರಬಂಧಿರುವ ದೃಶ್ಯಗಳಲ್ಲಿ, ಘೋಷಣೆ ಕೂಗುವ ಪ್ರತಿಭಟನಾಕಾರರನ್ನು ಪೊಲೀಸರು ಥಳಿಸುತ್ತಿರುವುದು ಕಂಡು ಬಂದಿದೆ.
MNREGA (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಅಡಿಯಲ್ಲಿ ರಾಜ್ಯ ಸರ್ಕಾರವು ತಮ್ಮ ಕನಿಷ್ಟ ದಿನಗೂಲಿಯನ್ನು ₹ 700 ಕ್ಕೆ ಹೆಚ್ಚಿಸಬೇಕು ಮತ್ತು 5 ಮಾರ್ಲಾ ಭೂಮಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಗ್ರಾಮದ ಸಹಕಾರಿ ಸಂಘಗಳಲ್ಲಿ ದಲಿತರಿಗೆ ಶೇ.33 ರಷ್ಟು ಪ್ರಾತಿನಿಧ್ಯ ನೀಡಬೇಕು, ಭೂಸ್ವಾಧೀನಕ್ಕೆ ಪರಿಹಾರ ಹೆಚ್ಚಳ, ಗಂಟು ಚರ್ಮ ರೋಗದಿಂದ ಜಾನುವಾರು ಸಾವನ್ನಪ್ಪಿ ನಷ್ಟವಾದ ರೈತರಿಗೆ ಪರಿಹಾರ ಹಾಗೂ ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮೊದಲೇ ಘೋಷಿಸಿದ್ದ ಪ್ರತಿಭಟನೆ ಬೆಳಗ್ಗೆಯಿಂದಲೇ ಆರಂಭವಾಗಿತ್ತು. ಪಟಿಯಾಲ ಬೈಪಾಸ್ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಮನೆ ಕಡೆಗೆ ಪಾದಯಾತ್ರೆ ಆರಂಭಿಸಿದ್ದರು. ಮುಖ್ಯಮಂತ್ರಿಗಳು ಬಾಡಿಗೆ ವಾಸವಿರುವ ರೆಸಿಡೆನ್ಶಿಯಲ್ ಸೊಸೈಟಿ ಬಳಿ ತಲುಪಿದಾಗ ಅವರನ್ನು ಪೊಲೀಸರು ತಡೆದರು.
ಅಕ್ಟೋಬರ್ನಲ್ಲಿ 19 ದಿನಗಳ ಪ್ರತಿಭಟನೆ ನಡೆಸಿದ ರೈತರು, ಸರ್ಕಾರವು ತಮ್ಮ ಬೇಡಿಕೆಗಳನ್ನು ಲಿಖಿತವಾಗಿ ಒಪ್ಪಿಕೊಂಡ ನಂತರ ಅದನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದ್ದರು.
ಪ್ರಸ್ತುತ ಮಾನ್ ಗುಜರಾತ್ನಲ್ಲಿದ್ದು, ಡಿಸೆಂಬರ್ 1 ರಂದು ಪ್ರಾರಂಭವಾಗುವ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿದ್ದಾರೆ.
ಪ್ರತಿಭಟನೆಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ಅವರ ಆಮ್ ಆದ್ಮಿ ಪಕ್ಷ ಹೇಳಿಕೊಂಡಿದೆ. ಗುಜರಾತ್ನಲ್ಲಿ ಆಡಳಿತಾರೂಢ ಪಕ್ಷ, ಎಎಪಿ ಪ್ರಚಾರದಿಂದ ಒತ್ತಡಕ್ಕೆ ಒಳಗಾಗಿದೆ ಎಂದು ಎಎಪಿ ನಾಯಕರು ಹೇಳಿದ್ದಾರೆ.
ಎಎಪಿ ವಿರುದ್ಧ ದಲಿತರನ್ನು ಎತ್ತಿ ಕಟ್ಟುವ ಮೂಲಕ ಬಿಜೆಪಿಗೆ ಲಾಭ ಗಳಿಸುವ ನಿರೀಕ್ಷೆಯಿದೆ, ಬಿಜೆಪಿಗೆ ದಲಿತ ಸಮುದಾಯ ಮತ್ತು ಬುಡಕಟ್ಟು ಜನಸಂಖ್ಯೆಯ ಮತಗಳು ಸ್ಥಿರವಾಗಿ ಕುಗ್ಗುತ್ತಿದೆ ಎಂದು ವರದಿಗಳು ಹೇಳಿವೆ.
ಸರ್ಕಾರಿ ಇಲಾಖೆಗಳಲ್ಲಿ ದಲಿತರಿಗೆ ಮೀಸಲಾತಿಯನ್ನು ಜಾರಿಗೊಳಿಸದ ಎಎಪಿ ಸರ್ಕಾರದ ವಿರುದ್ಧ ಈ ಹಿಂದೆ ಟೀಕೆ ವ್ಯಕ್ತವಾಗಿತ್ತು.