ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜನ ಸೇರಿ ಪ್ರತಿಭಟನೆ ಆಗ್ತಿದೆ ಅಂದ್ರೆ ಸರ್ಕಾರಕ್ಕೆ ಟೆನ್ಷನ್ ಶುರುವಾಗುತ್ತೆ. ನಗರದೆಲ್ಲಡೆ ಚೆಲ್ಲಾಪಿಲ್ಲಿಯಾಗಿ ನಡೀತಿದ್ದ ಪ್ರತಿಭಟನೆಯನ್ನು ತಂದು ಸರ್ಕಾರ ಫ್ರೀಡಂ ಪಾರ್ಕ್ ನಲ್ಲಿ ಹಾಕಿತ್ತು. ಇದು ಈಗ ಮತ್ತೊಂದು ಬಹುದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಫ್ರೀಡಂ ಪಾರ್ಕ್ ಈಗ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಡುತ್ತಿದೆ.
ಫ್ರೀಡಂ ಪಾರ್ಕ್ ನಲ್ಲೂ ಪ್ರತಿಭಟನೆ, ಮೆರವಣಿಗೆ ಬ್ರೇಕ್ ಬೀಳುತ್ತಾ.!
ನಗರದ ಫ್ರೀಡಂ ಪಾರ್ಕ್ ಪ್ರತಿಭಟನೆಗಳ ಅಡ್ಡೆ. ಯಾವುದೇ ಪ್ರತಿಭಟನೆಗಳಿದ್ದರೂ ಅದನ್ನು ಫ್ರೀಡಂ ಪಾರ್ಕ್ ನಲ್ಲೇ ಮಾಡಬೇಕು. ಅದರ ಹೊರತಾಗಿ ಎಲ್ಲಿಯೂ ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡುವಹಾಗಿಲ್ಲ. ಹೀಗಾಗಿ ತಿಂಗಳಿಗೆ ಸರಾಸರಿ 15 ರಿಂದ 20 ಪ್ರತಿಭಟನೆಗಳು ನಡೆಯುತ್ತದೆ ಇಲ್ಲಿ. ಇದೀಗ ಸಾಲು ಸಾಲು ಪ್ರತಿಭಟನೆಗಳು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕೊಳ್ಳಿ ಇಡುತ್ತಿದೆ. ಹೆಗ್ಗಿಲ್ಲದೆ ನಡೆಯುವ ಪ್ರತಿಭಟನೆಗಳಿಂದ ಅಕ್ಕಪಕ್ಕದಲ್ಲೇ ಇರುವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸೂಕ್ತವಾಗಿ ತರಗತಿಗಳು ನಡೆಯುತ್ತಿಲ್ಲ.

ಸರ್ಕಾರಕ್ಕೆ ಮನವಿ ಮಾಡಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ ಕಾಲೇಜಿನ ಆಡಳಿತ ಮಂಡಳಿ.!
ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಪ್ರತಿಭಟನೆ, ಮೆರವಣಿಗೆ ವಿರುದ್ಧ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಆಕ್ಷೇಪವನ್ನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗಳಿಂದ ದೊಡ್ಡ ಪ್ರಮಾಣದಲ್ಲಿ ಶಬ್ದವಾಗುತ್ತಿದ್ದು ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಕೇಳೋದಕ್ಕೆ ಆಗುತ್ತಿಲ್ಲ ಅನ್ನೋ ಆರೋಪವನ್ನು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವಿಸಿ ಗೋಮತಿದೇವಿ ಹಾಗೂ ಪ್ರಾಧ್ಯಾಪಕ ಮಂಜುನಾಥ್ ಆರೋಪಿಸಿದ್ದಾರೆ.
ಮಹಾರಾಣಿ ವಿಶ್ವವಿದ್ಯಾಲಯದ 4 ಸಾವಿರ ಮಕ್ಕಳಿಗೆ ಇದರಿಂದ ಸಮಸ್ಯೆ.!
ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ಮಾಡಬಾರದು, ಫ್ರೀಡಂ ಪಾರ್ಕಿನಲ್ಲಿ ಮಾತ್ರ ಅವಕಾಶ ಕೊಡಬೇಕು ಎಂದು ಹೈಕೋರ್ಟ್ ಆದೇಶವಿದೆ. ಅದನ್ನ ಸರ್ಕಾರವೂ ಪಾಲಿಸುತ್ತಾ ಬರುತ್ತಿದೆ. ಅದರೆ ಇದರಿಂದ ಫ್ರೀಡಂ ಪಾರ್ಕಿಗೆ ಹತ್ತಿರವೇ ಇರುವ ಮಹಾರಾಣಿ ವಿವಿಯ ಸುಮಾರು 4 ಸಾವಿರ ವಿದ್ಯಾರ್ಥಿನಿಯರಿಗೆ ಹಲವು ರೀತಿಯ ಸಮಸ್ಯೆಗಳಾಗುತ್ತಿವೆ. ಪ್ರತಿಭಟನೆಗೆ ಫ್ರೀಡಂ ಪಾರ್ಕಿನ ಪಾರ್ಕಿಂಗ್ ಜಾಗದಲ್ಲೂ ಅವಕಾಶ ಕೊಡುತ್ತಿರೋದ್ರಿಂದ ಮೈಕ್, ಸ್ಪೀಕರ್ ನಿಂದಾಗಿ ದೊಡ್ಡ ಪ್ರಮಾಣದಲ್ಲಿ ಶಬ್ದ ಮಾಲಿನ್ಯವಾಗುತ್ತಿದೆ. ಇದು ಅಕ್ಕಪಕ್ಕದಲೇ ಇರುವ ಕಾಲೇಜುಗಳ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕೊಳ್ಳಿ ಇಡುತ್ತಿದೆ. ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಲ್ಪಿಸುವಂತೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಮಂಜುನಾಥ್ ಮನವಿ ಮಾಡಿದ್ದಾರೆ.
ಒಟ್ಟಾರೆ ಪ್ರತಿಭಟಿಸೋದು, ನ್ಯಾಯ ಕೇಳೋದು ಒಂದು ಕಡೆಯಾದ್ರೆ, ದಯವಿಟ್ಟು ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಬೇಡಿ ಅನ್ನೋ ವಿದ್ಯಾರ್ಥಿಗಳು ಇನ್ನೊಂದು ಕಡೆ. ಸರ್ಕಾರ ಪ್ರತಿಭಟನೆ ಸ್ಥಳವನ್ನ ಸ್ಥಳಾಂತರ ಮಾಡುತ್ತಾ..!? ಅಥವಾ ಮೈಕ್, ಸ್ಪೀಕರ್ ರಹಿತ ಪ್ರತಿಭಟನೆಗೆ ಅವಕಾಶ ಮಾಡಿಕೊಡುವುದೊಂದೇ ಈಗಿರುವ ದಾರಿ. ಆದರೆ ಅಂತಿಮವಾಗಿ ಈ ಪ್ರಕರಣ ಏನಾಗುತ್ತೆ ಎಂಬುವುದನ್ನು ಕಾದುನೋಡಬೇಕಿದೆ.