ಮಾಧ್ಯಮಗಳು ನಿತ್ಯ ಸ್ಥಾಯಿ ವಿರೋಧ ಪಕ್ಷಗಳು ಎಂಬ ಮಾತಿದೆ. ಸರ್ಕಾರ ಯಾವುದೇ ಪಕ್ಷದ್ದಿರಲಿ, ಸಮಾಜದ ಹುಳುಕುಗಳನ್ನು ಮುಚ್ಚು ಮರೆಯಿಲ್ಲದೆ ಸರ್ಕಾರದ ಹಾಗೂ ಜನರ ಮುಂದಿಡುವ ಕರ್ತವ್ಯ ಮಾಧ್ಯಮಗಳದ್ದಾಗಿದೆ. ಆದರೆ, ಇಂದಿನ ಬಹುತೇಕ ವಿದ್ಯನ್ಮಾನ ಮಾಧ್ಯಮಗಳು, ಸಮಸ್ಯೆಗಳನ್ನು ಮರೆಮಾಚಿ ಜನರಲ್ಲಿ ಪ್ರಭುತ್ವದ ಪರ ಅಭಿಪ್ರಾಯವನ್ನು ಮೂಡಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ.
ಅದರಲ್ಲೂ ‘ಪ್ರೈಮ್ ಟೈಮ್ ಡಿಬೇಟ್’ ಎಂಬ ಶೀರ್ಷಿಕೆಯಡಿ ಜನರನ್ನು ಮೂರ್ಖರಾಗಿಸುವ ತಂತ್ರ ಹೊಸತಲ್ಲ. ನಮ್ಮ ಮನೆಗೆ ಬೆಂಕಿ ಬಿದ್ದಿದ್ದರೂ, ಪಕ್ಕದ ಮನೆಯವರ ಒಲೆಯನ್ನೇ ವೈಭವೀಕರಿಸುವುದನ್ನು ಪ್ರೈಮ್ ಟೈಮ್ ಡಿಬೇಟ್ ಎಂಬ ರೂಪದಲ್ಲಿ ಕಾಣಬಹುದು. ಇದು ಕೇವಲ ಊಹೆಯಲ್ಲ ಅಥವಾ ವಿದ್ಯುನ್ಮಾನ ಚಾನೆಲ್ ಗಳ ಮೇಲೆ ಮಾಡುತ್ತಿರುವ ಒಣ ಆರೋಪವಲ್ಲ. ಈ ಆರೋಪವನ್ನು ಒಂದು ಅಧ್ಯಯನ ವರದಿ ಪುರಸ್ಕರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ದೇಶದ ಬಡವರನ್ನು ಕಿತ್ತು ತಿನ್ನುತ್ತಿದೆ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದುಬಾರಿಯಾಗಿರುವ ಸಂದರ್ಭದಲ್ಲಿ ಈ ಕುರಿತಾಗಿ ಎಷ್ಟು ಚರ್ಚೆಗಳು ನಡೆದಿವೆ ಎಂಬುದನ್ನು Institute of Perception Studies ಎಂಬ ಸಂಸ್ಥೆಯು Rate The Debate (RTD) ಎಂಬ ಅಧ್ಯಯನ ನಡೆಸಿದೆ. ಸುಮಾರು ಎರಡು ಲಕ್ಷ ಸೆಕೆಂಡ್’ಗಳ ಚರ್ಚಾ ಕಾರ್ಯಕ್ರಮಗಳನ್ನು ಈ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಅಧ್ಯಯನವು ಪ್ರೈಮ್ ಟೈಮ್ ಡಿಬೇಟ್ ಕಾರ್ಯಕ್ರಮಗಳ ಅಸಲಿಯತ್ತನ್ನು ಬಿಚ್ಚಿಟ್ಟಿದೆ.
2022 ವರ್ಷಾರಂಭದಲ್ಲಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗಿತ್ತು. ಈ ಸಂದರ್ಭ ಭಾರತದಲ್ಲಿ ಪಂಚರಾಜ್ಯ ಚುನಾವಣೆಗೆ ರಣಕಹಳೆ ಮೊಳಗಿತ್ತು. ಚುನಾವಣೆ ಸಮಯದಲ್ಲಿ ತೈಲ ದರ ಏರಿಸಿದರೆ, ಎಲ್ಲಿ ಓಟುಗಳಿಗೆ ಏಟು ಬೀಳುತ್ತದೆಯೋ ಭಯದಿಂದ ಸರ್ಕಾರ ಸುಮ್ಮನೆ ಕುಳಿತಿತ್ತು. ಚುನಾವಣೆ ಬಳಿಕ, ತೈಲ ಬೆಲೆ ಖಂಡಿರವಾಗಿ ಏರುತ್ತದೆ ಎಂದು ಜನರ ಅರಿವಿಗೆ ಬಂದಿತ್ತು. ಚುನಾವಣೆಯ ಸಂದರ್ಭದಲ್ಲಿ ತೈಲ ದರ ಏರಿಕೆಯಾಗುವ ಕುರಿತು ಮಾಧ್ಯಮಗಳಲ್ಲಿ ಎಷ್ಟು ಚರ್ಚೆಗಳು ನಡೆದಿವೆ ಎಂಬುದನ್ನು RTD ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಾರ್ಚ್ 10ರಂದು ಚುನಾವಣೆಗಳ ಫಲಿತಾಂಶ ಹೊರಬಿದ್ದು ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಮಾರ್ಚ್ 22ರ ಬಳಿಕ ತೈಲ ಬೆಲೆ ಏರಿಕೆ ಆರಂಭವಾಗಿತ್ತು. ಆ ಬಳಿಕ ಒಟ್ಟು 14 ಬಾರಿ ತೈಲ ಬೆಲೆ ಏರಿಕೆಯಾಗಿ, ಒಟ್ಟು ಲೀಟರ್ ಗೆ ರೂ. 10ರಷ್ಟು ಏರಿಕೆ ಕಂಡಿತ್ತು. ಇದರೊಂದಿಗೆ ಭಾರತದಲ್ಲಿ ಹಣದುಬ್ಬರವೂ ತೀವ್ರವಾಗಿ ಏರಿಕೆ ಕಂಡು ಬಡವರ ಪರಿಸ್ಥಿತಿ ಹೇಳತೀರದಾಗಿತ್ತು.
ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮಾಧ್ಯಮಗಳಿಗೆ ಜನಪರವಾದ ವಿಷಯಾಧಾರಿತ ಚರ್ಚೆ ನಡೆಸಲು ಹಲವು ವಿಚಾರಗಳಿದ್ದವು. ಉದಾಹರಣೆಗೆ, ತೈಲ ಬೆಲೆ ಏರಿಕೆ, ಹಣದುಬ್ಬರದ ಹಿಂದೆ ಇರುವಂತಹ ಸರ್ಕಾರದ ವೈಫಲ್ಯ, ಅಂತಾರಾಷ್ಟ್ರೀಯ ವಿಚಾರಗಳಿಗೆ ಸ್ಪಂದಿಸದೆ ಭಾರತೀಯ ಪೌರರ ಜೀವಕ್ಕೆ ಕುತ್ತು ಬಂದಿರುವ ಸಂದರ್ಭಗಳ ವಿಶ್ಲೇಷಣೆ, ಹಣದುಬ್ಬರವನ್ನು ಹತೋಟಿಗೆ ತರಲು ಸರ್ಕಾರಕ್ಕೆ ನೀಡಬಹುದಾದ ಸಲಹೆಗಳು ಹಾಗೂ ಹಣದುಬ್ಬರದಿಂದಾಗಿ ಮೌನವಾಗಿ ಸಾವನ್ನಪ್ಪುತ್ತಿರುವ ಬಡವರ ಕುರಿತು ಅದೆಷ್ಟೋ ಚರ್ಚೆಗಳನ್ನು ನಡೆಸಬಹುದಾಗಿತ್ತು. ಆದರೆ, ಪ್ರೈಮ್ ಟೈಮ್ ಡಿಬೇಟ್ ಎಂಬ ನಾಟಕರಂಗ ಜನರ ಹಾದಿ ತಪ್ಪಿಸುವಲ್ಲಿಯೇ ಮಗ್ನವಾಗಿತ್ತು.
RTD ಅಧ್ಯಯನವು ಏಪ್ರಿಲ್ 6,2022ರಂದು ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 25,786 ಸೆಕೆಂಡುಗಳ ಕಾರ್ಯಕ್ರಮವನ್ನು ವಿಶ್ಲೇಷಿಸಿದೆ. ಇದರಲ್ಲಿ ಅತಿ ಹೆಚ್ಚು ಸಮಯವನ್ನುಉಕ್ರೇನ್ ರಷ್ಯಾ ಯುದ್ಧಕ್ಕೆ ಮೀಸಲಿರಿಸಿದೆ (40%). ಎರಡನೇಯ ಸ್ಥಾನ ಮತೀಯ ಗಲಭೆಗಳ ಕುರಿತ ಚರ್ಚೆಗೆ ಮೀಸಲಾಗಿದೆ. ಹಿಜಾಬ್ ನಿಷೇಧ, ದ ಕಾಶ್ಮೀರಿ ಫೈಲ್ಸ್ ಸೇರಿದಂತೆ ಇತರ ವಿಚಾರಗಳ ಕುರಿತು ಒಟ್ಟು 24% ಕಾರ್ಯಕ್ರಮ ನಡೆದಿದೆ.
ಪ್ರಧಾನಿ ಮೋದಿಗೆ ಸಂಬಂಧಿಸಿದಂತೆ ಒಟ್ಟು 21% ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ ಕಾರ್ಯಕ್ರಮಗಳು, ವಿರೋಧ ಪಕ್ಷಗಳಿಗೆ ಮೋದಿಯ ಉತ್ತರ ಪ್ರತ್ಯುತ್ತರ, ಉಕ್ರೇನ್ ಯುದ್ದಕ್ಕೆ ಮೋದಿ ಸ್ಪಂದನೆ ಕುರಿತಾದ ವಿಚಾರಗಳನ್ನು ಉಲ್ಲೇಖಿಸಲಾಗಿದೆ.
ಕೊನೆಯಲ್ಲಿ ಕೇವಲ 7%ದಷ್ಟು ಕಾರ್ಯಕ್ರಮಗಳು ಹಣದುಬ್ಬರ, ತೈಲ ಬೆಲೆ ಏರಿಕೆ ಕುರಿತಾಗಿ ಪ್ರಸಾರವಾಗಿದೆ. ಈ ಅಂಕಿ ಅಂಶಗಳು ಐದು ಹಿಂದಿ ಮತ್ತು ಐದು ಇಂಗ್ಲಿಷ್ ಸುದ್ದಿ ವಾಹಿನಿಗಳ ಕಾರ್ಯಕ್ರಮದಿಂದ ಪಡೆದುಕೊಂಡ ಅಂಕಿ ಅಂಶಗಳಷ್ಟೇ. ದೇಶದಲ್ಲಿ ಅತಿ ಹೆಚ್ಚು ವೀಕ್ಷಕರಿರುವ ಹಿಂದಿ ಮತ್ತು ಇಂಗ್ಲಿಷ್ ಸುದ್ದಿ ವಾಹಿನಿಗಳು, ಜನರನ್ನು ಯಾವ ರೀತಿ ಹಾದಿ ತಪ್ಪಿಸಿವೆ ಎಂಬುದಕ್ಕೆ ಈ ಅಂಕಿಅಂಶಗಳೇ ತಾಜಾ ಉದಾಹರಣೆ. ಚುನಾವಣೆ ಮುಗಿದ ಬಳಿಕ ಅಂದರೆ ಮಾರ್ಚ್ 19ರಿಂದ 24ರವರೆಗೆ ಸುಮಾರು 57,429 ಸೆಕೆಂಡುಗಳಷ್ಟು ಕಾರ್ಯಕ್ರಮವನ್ನು ವಿಶ್ಲೇಷಿಸಲಾಗಿದೆ. ಇದರಲ್ಲಿ ಕೇವಲ 8%ದಷ್ಟು ಪ್ರೈಮ್ ಟೈಮ್ ಚರ್ಚೆಗಳು ಮಾತ್ರ ಹಣದುಬ್ಬರ ಹಾಗೂ ತೈಲ ಬೆಲೆ ಏರಿಕೆ ಕುರಿತಾಗಿವೆ. ಉಳಿದಂತೆ, 19.63%ದಷ್ಟು ಸಮಯ ಉಕ್ರೇನ್-ರಷ್ಯಾ ಯುದ್ದಕ್ಕೆ ಮೀಸಲಾಗಿದೆ. ಇನ್ನು ದ ಕಾಶ್ಮೀರಿ ಫೈಲ್ಸ್ ಸಿನಿಮಾ, ಉತ್ತರ ಪ್ರದೇಶ ರಾಜಕೀಯದ ಕುರಿತು ಹೆಚ್ಚಿನ ಚರ್ಚೆಗಳು ನಡೆದಿವೆ.
ಈ ಅವಧೀಯಲ್ಲಿ ನಿರುದ್ಯೋಗ, ಕೃಷಿ, ಗ್ರಾಮೀಣಾಭಿವೃದ್ಧಿ, ಸರ್ಕಾರದ ಎದುರು ವಿಪಕ್ಷಗಳ ಪ್ರತಿಭಟನೆಗೆ ಅತ್ಯಂತ ಕನಿಷ್ಟ ಸಮಯ ಮೀಸಲಾಗಿಡಲಾಗಿತ್ತು.
ಈ ರೀತಿ ಲಕ್ಷಾಂತರ ಸೆಕೆಂಡುಗಳ ಅಧ್ಯಯನ ಭಾರತೀಯ ಮಾಧ್ಯಮ ರಂಗದ ಹುಳುಕನ್ನು ತೆರೆದಿಟ್ಟಿದೆ. ಜನರ ಕಣ್ಣು ತೆರೆಸಬೇಕಾಗಿದ್ದ ಮಾಧ್ಯಮಗಳು, ಉದ್ದೇಶಪೂರ್ವಕವಾಗಿ ಸರ್ಕಾರದ ವೈಫಲ್ಯಗಳನ್ನು ಮರೆಮಾಚಿ ಜನರ ಕಣ್ಣುಮುಚ್ಚಿಸುವ ಕೆಲಸವನ್ನು ಮಾಡುತ್ತಿರುವುದು ದುರಂತವೇ ಸರಿ. ಸರ್ಕಾರವೇ ಮಾಧ್ಯಮಗಳನ್ನು ನಿಯಂತ್ರಿಸುತ್ತಿರುವಾಗ ಇವುಗಳನ್ನು ಸ್ವತಂತ್ರ ಮಾಧ್ಯಮ ಎಂದು ಕರೆಯುವುದು ಅಸಾಧ್ಯ ಮತ್ತು ಆ ರೀತಿ ಕರೆಯುವುದು ಅಸಂಬದ್ಧ. ಮಾಧ್ಯಮಗಳನ್ನು ನಿಯಂತ್ರಿಸಲು ಕೈಯಲ್ಲಿ ಹಂಟರ್ ಹಿಡಿದಿರುವ ಸರ್ಕಸ್ ಮಾಸ್ಟರ್ ಇರಬಾರದು. ಪ್ರೈಮ್ ಟೈಮ್ ಡಿಬೇಟ್ ಎನ್ನುವುದು ಕೇವಲ ಜನರ ಕಣ್ಣು ಮುಚ್ಚಿಸುವ, ಅವರ ಹಾದಿ ತಪ್ಪಿಸುವ ತಂತ್ರವಾಗಿರದೆ ಸರ್ಕರದ ವಿರುದ್ಧ ಸಾರಿರುವ ಯುದ್ದದಂತೆ ಪ್ರತಿದಿನವೂ ಗೆಲ್ಲಬೇಕೆಂಬ ಹಂಬಲ ಮಾಧ್ಯಮಗಳಿಗೆ ಇರಬೇಕು. ಇದು ಪ್ರೈಮ್ ಟೈಮ್ ಡಿಬೇಟ್’ಗಳ ಆಶಯವಾಗಿರಬೇಕೇ ಹೊರತು ಪ್ರಭುತ್ವದ ಹಂಗಿನಲ್ಲಿ ಬದುಕುವಂತಹ ಪರಿಸ್ಥಿತಿಯನ್ನು ನಿರ್ಮಿಸಿಕೊಳ್ಳಬಾರದು.