ವಿಶ್ವವಿಖ್ಯಾತ ಮೈಸೂರು ದಸರಾಗೆ (mysuru dasara) ರಾಷ್ಟ್ರಪತಿ ದ್ರೌಪದಿ ಮರ್ಮು ಉದ್ಘಾಟಿಸಿದರು. ಈ ಮೂಲಕ ೪೧೩ನೇ ದಸರಾ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ವೃಶ್ಚಿಕ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಸೋಮವಾರ ಬೆಳಿಗ್ಗೆ ದ್ರೌಪದಿ ಮರ್ಮು ದಸರಾಗೆ ಅಧಿಕೃತವಾಗಿ ಚಾಲನೆ ನೀಡಿದರು.
ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸರ್ಕಾರದ ವತಿಯಿಂದ ಮೈಸೂರು ಪೇಟಾ, ಮೈಸೂರು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಜೊತೆಗೆ ಚಾಮುಂಡಿ ದೇವಿಯ ಬೆಳ್ಳಿಯ ಮೂರ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot), ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಎಲ್ಲಾ ಸಹೋದರ – ಸಹೋದರಿಯರಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ರಾಷ್ಟ್ರಪತಿ ಮುರ್ಮು, ರಾಷ್ಟ್ರಪತಿ ಆದ ಮೇಲೆ ನಾನು ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಅದರಲ್ಲೂ ದೇವಿಯ ಪೂಜಾ ಕಾರ್ಯವಾದ ಕಾರಣ ಬಂದೇ ಬರುತ್ತೇನೆ. ಚಾಮುಂಡಿ ದೇವಿಯ ಶಕ್ತಿ ಇಡೀ ನಾಡಿಗೆ ದಕ್ಕಿದೆ. ಕಾಲ ಕಾಲಕ್ಕೆ ಮಳೆ ಬೆಳೆ ನೀಡಿ ಇಡೀ ರಾಜ್ಯವನ್ನು ದೇವಿ ಕಾಪಾಡುತ್ತಿದ್ದಾಳೆ ಎಂದು ನುಡಿದರು.
ಮಹಿಷಾಸುರರ ಕಾಲ ಇಲ್ಲ. ಆದರೆ ಆ ಕೆಟ್ಟ ಗುಣ ನಮ್ಮ ಒಳಗಿದೆ. ನಾವು ಅದನ್ನು ಬಿಡಬೇಕು. ದುಷ್ಟ ವಿಚಾರವನ್ನು ದೂರವಿಟ್ಟು, ಒಳ್ಳೆಯ ವಿಚಾರವನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ನಾಡನ್ನು ಎಲ್ಲಾ ರಂಗದಲ್ಲೂ ಸರ್ವ ಶ್ರೇಷ್ಠವಾಗಿ ಕಟ್ಟುವ ಸಂಕಲ್ಪ ಮಾಡಬೇಕಿದೆ. ಸರ್ವರಿಗೂ ಒಳಿತು ಬಯಸುವ ಸದ್ಭುದ್ದಿ ಆ ದೇವತೆ ಎಲ್ಲರಿಗೂ ಕೊಡಲಿ ಎಂದು ಹಾರೈಸಿದರು.
ಸಿಎಂ ಬಸವರಾಜ ಬೊಮ್ಮಾಯಿಯವರು ರಾಜ್ಯದ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮೈಸೂರು ದಸರಾಗೆ ಚಾಲನೆ ನೀಡಿದ ಮುರ್ಮು ಅವರಿಗೆ ಹಾಗೂ ರಾಜ್ಯಪಾಲರಿಗೂ ಧನ್ಯವಾದವನ್ನೂ ತಿಳಿಸಿದರು.
ಬಳಿಕ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕನ್ನಡದಲ್ಲಿಯೇ ಭಾಷಣವನ್ನು ಫ್ರಾರಂಭ ಮಾಡಿ ರಾಜ್ಯದ ಜನತೆಗೆ ಶುಭ ಕೋರಿದರು. ನಾನು ದೂರದರ್ಶನದಲ್ಲಿ ದಸರಾವನ್ನು ನೋಡಿದ್ದೆ. ಆದರೆ ಈ ಬಾರಿ ಖುದ್ದಾಗಿ ಹಾಜರಾಗಿ ಈ ಕ್ಷಣಗಳನ್ನು ನೋಡುತ್ತಿರುವು ನನಗೆ ಸಂತೋಷ ತಂದಿದೆ ಎಂದರು.