
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರಾಜೀನಾಮೆ ಬಳಿಕ ನೈನಾರ್ ನಾಗೇಂದ್ರನ್ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ತಿರುನಲ್ವೇಲಿ ಕ್ಷೇತ್ರದ ಶಾಸಕ ಎನ್.ನಾಗೇಂದ್ರನ್ ಮಾತ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ರಿಂದ ಅವಿರೋಧ ಆಯ್ಕೆ ಮಾಡಲಾಗಿದೆ. ಈ ಮೊದಲು AIDMK ಪಕ್ಷದಲ್ಲೇ ಗುರ್ತಿಸಿಕೊಂಡಿದ್ದ ಎನ್. ನಾಗೇಂದ್ರನ್, ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ತಮಿಳುನಾಡಲ್ಲಿ ಎಐಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡ ಕಾರಣಕ್ಕೆ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಎನ್ ನಾಗೇಂದ್ರನ್ ಅವರನ್ನು ಆಯ್ಕೆ ಮಾಡಿದೆ.

BJP ರಾಜ್ಯಾಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಆಯ್ಕೆಯಾದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗು ಪಳನಿಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ AIDMK ಹಾಗೂ BJP ಮೈತ್ರಿ ಘೋಷಣೆ ಮಾಡಿದ್ದಾರೆ. DMK ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. 2026ಕ್ಕೆ ಬಿಜೆಪಿ-ಎಐಡಿಎಂಕೆ ಮೈತ್ರಿಕೂಟ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ, ಶೀಘ್ರದಲ್ಲೇ ಎರಡೂ ಪಕ್ಷದವರು ಸಭೆ ಮಾಡಿ ಕ್ಷೇತ್ರಗಳನ್ನು ಹಂಚಿಕೆ ಮಾಡ್ತೇವೆ ಎಂದಿದ್ದಾರೆ.
ತಮಿಳುನಾಡು ಬಳಿಕ ರಾಜ್ಯ ಬಿಜೆಪಿಯತ್ತ BJP ವರಿಷ್ಠರು ಚಿತ್ತ ಹರಿಸಿದ್ದಾರೆ. ಏಪ್ರಿಲ್ 20ರೊಳಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಗೊಂದಲಕ್ಕೆ ತೆರೆ ಎಳೆಯಲಿದ್ದಾರೆ ಎನ್ನಲಾಗಿದೆ. ಏಪ್ರಿಲ್ 17ರಂದು ಶಿವರಾಜ್ ಸಿಂಗ್ ಚೌಹ್ವಾಣ್ ರಾಜ್ಯಕ್ಕೆ ಬರ್ತಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಯ ಚುನಾವಣಾ ಉಸ್ತುವಾರಿ ಆಗಿರುವ ಶಿವರಾಜ ಸಿಂಗ್ ಚೌಹ್ವಾಣ್, ಹಲವು ದಿನಗಳ ಬಳಿಕ ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದು, ಅಧ್ಯಕ್ಷರ ಆಯ್ಕೆ ಕುರಿತು ಚುನಾವಣಾ ಪ್ರಕ್ರಿಯೆ ನಡೆಸಲಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ನಾಯಕರುಗಳೊಂದಿಗೆ ಸಭೆ ನಡೆಸಿ, ಅಧ್ಯಕ್ಷರ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಹಾಲಿ ಇರುವ ಅಧ್ಯಕ್ಷರ ಪರ ವಿರೋಧದ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದು, ವಿಜಯೇಂದ್ರ ಬದಲಾಗಿ ಬೇರೆ ಯಾರು ರೆಡಿ ಇದ್ದಾರೆ..? ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ಸೂಚನೆ ಬಗ್ಗೆ ಸಮಾಲೋಚನೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿ ವರದಿಯನ್ನು ವರಿಷ್ಠರಿಗೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಆ ಬಳಿಕ ಅಧ್ಯಕ್ಷರ ಆಯ್ಕೆ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಸಿದ್ದತೆ ನಡೆಯುತ್ತಿದೆ. ಬೆಲೆ ಏರಿಕೆ ಹೋರಾಟದ ಮೂಲಕ ಒಗ್ಗಟ್ಟಿನ ಬಗ್ಗೆಯೂ ವರಿಷ್ಠರಿಂದ ಮಾಹಿತಿ ಅವಲೋಕನ ಮಾಡಲಾಗುತ್ತದೆ.