ದುನಿಯಾ ಚಿತ್ರದಿಂದ ಛಾಯಾಗ್ರಾಹಕರಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿಕೊಂಡಿರುವ ಸತ್ಯ ಹೆಗಡೆ ಅದಕ್ಕೆ ಯಾವ ಶಾರ್ಟ್ ಕಟ್ ಅನ್ನೂ ಬಳಿಸಿಕೊಂಡಿರಲಿಲ್ಲ. ಅವರದ್ದು ಶುದ್ಧ ಶ್ರಮ ಮತ್ತು ಪ್ರತಿಭೆ. ಈಗ ಸತ್ಯ ಹೆಗಡೆ ಶಾರ್ಟ್ ಕಟ್ ಹಾದಿ ತುಳಿದಿದ್ದಾರೆ ಎಂದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ. ಚಿತ್ರರಂಗದಲ್ಲಿ ಇಷ್ಟು ವರ್ಷಗಳ ಅನುಭವದ ನಂತರ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ ಸತ್ಯ ಹೆಗಡೆ. ಅದಕ್ಕೆ ಆವರು ಆಯ್ದುಕೊಂಡಿರುವುದು ಶಾರ್ಟ್ ಸಿನಿಮಾಗಳನ್ನು.
ಮಂಸೋರೆ ನಿರ್ದೇಶನದ “ದಿ ಕ್ರಿಟಿಕ್” ಮತ್ತು ಅಭಿಷೇಕ್ ಕಾಸರಗೋಡು ನಿರ್ದೇಶನದ “ಪಪ್ಪೆಟ್ಸ್” ಎಂಬ ಎರಡು ಕಿರುಚಿತ್ರಗಳ ಮೂಲಕ ತಮ್ಮ ನಿರ್ಮಾಣ ಕಾಯಕ ಶುರು ಮಾಡಿರುವ ಸತ್ಯ ಇತ್ತೀಚೆಗೆ ಈ ಎರಡು ಚಿತ್ರಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಕಳೆದ ಇಪ್ಪತ್ತಾರು ವರ್ಷಗಳಿಂದ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸತ್ಯ ಹೆಗಡೆ ಈ ಕಿರುಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿದ್ದಾರೆ.
1978 ಚಿತ್ರದ ಖ್ಯಾತಿಯ ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ನಿರ್ದೇಶಕ ಮತ್ತು ನಟ ಟಿ.ಎಸ್ ನಾಗಾಭರಣ ಹಾಗೂ ವೈ.ಜಿ.ಉಮ ನಟಿಸಿರುವ “ದಿ ಕ್ರಿಟಿಕ್” ಸತ್ಯ ಹೆಗಡೆ ಅವರ ನಿರ್ಮಾಣದ ಮೊಟ್ಟ ಮೊದಲ ಕೊಡುಗೆ. ಇದರ ಜೊತೆಗೆ, ಅಭಿಷೇಕ್ ಕಾಸರಗೋಡು ನಿರ್ದೇಶನದಲ್ಲಿ “ಪಪ್ಪೆಟ್ಸ್” ಕಿರುಚಿತ್ರದ ನಿರ್ಮಾಣವೂ ಆಗಿದೆ. ಗೌತಮಿ ಜಾಧವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿಯೊಬ್ಬಳು ಸೇಲ್ಸ್ ಗರ್ಲ್ ಒಬ್ಬಳಿಂದ ಪ್ರಭಾವಿತಳಾಗುವ ಪಾತ್ರ ಗೌತಮಿ ಅಭಿನಯಿಸಿದ್ದಾರೆ.
ಕಳೆದ ಲಾಕ್ ಡೌನ್ ಸಮಯದಲ್ಲಿ ಮಾಡಿದ ಕಿರುಚಿತ್ರವಿದು. ಸಂಚಾರಿ ವಿಜಯ್ ಸಾವಿನಿಂದ ಡಿಪ್ರೆಶನ್ ಗೆ ಹೋಗಿದ್ದ ನನಗೆ, ಸತ್ಯ ಹೆಗಡೆ ಕಿರುಚಿತ್ರ ಮಾಡಲು ಪ್ರೇರೇಪಿಸಿದರು. ಬಶೀರ್ ಅವರ ಕಥೆಯಿದು. ನಂತರ ಚಿತ್ರೀಕರಣಕ್ಕೆ ಮುಂದಾದೆ. ಬಕೇಶ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣ ಮಾಡಿದ್ದಾರೆ. ವೀರೇಂದ್ರ ಮಲ್ಲಣ್ಣ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ಶ್ರೀನಿವಾಸ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಕಿರುಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎನ್ನುತ್ತಾರೆ ನಿರ್ದೇಶಕ ಮಂಸೋರೆ.
ಸಿನಿಮಾವನ್ನೇ ಉಸಿರೆಂದು ಜೀವಿಸುತ್ತಿರುವ ಎಷ್ಟೋ ಮನಸ್ಸುಗಳನ್ನು ಕರೋನಾ ಕಾಲದಲ್ಲಿ ಮತ್ತೆ ನೋಡುವ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಮೊದಲು ಧನ್ಯವಾದ. ಕಡಿಮೆ ಅವಧಿಯಲ್ಲಿ ದೊಡ್ಡ ವಿಷಯ ಹೇಳುವ ಪ್ರಯತ್ನ ಯುವ ನಿರ್ದೇಶಕರು ಮಾಡಿದ್ದಾರೆ. ಮಂಸೋರೆ ನನ್ನನ್ನು ಭೇಟಿಯಾಗಲು ಬಂದಾಗ ನಿಮ್ಮ ಆಫೀಸ್ ನಲ್ಲಿ ಚಿತ್ರೀಕರಣ ಎಂದರು. ಆ ನಂತರ ಮಂಡ್ಯದ ಬಳಿಯ ಅಂಕೇಗೌಡರ ಜ್ಞಾನ ಪ್ರತಿಷ್ಠಾನದಲ್ಲಿ ಎಂದಾಗ ಸಂತೋಷವಾಯಿತು ಎನ್ನುತ್ತಾರೆ ನಾಗಾಭರಣ.
ಸ್ಮಾಲ್ ಇಸ್ ಬ್ಯೂಟಿ ಫುಲ್ ಎಂಬ ಮಾತಿದೆ. ಅಂದರೆ ಚಿಕ್ಕದು ತುಂಬಾ ಸುಂದರವಾಗಿರುತ್ತದೆ ಅಂತ. ಆ ದೃಷ್ಟಿಯಲ್ಲಿ ಈ ಎರಡು ಚಿತ್ರಗಳು ಸುಂದರವಾಗೂ ಇದೆ. ಅರ್ಥಪೂರ್ಣವಾಗಿಯೂ ಇದೆ. ಎರಡು ತಂಡಕ್ಕೂ ಶುಭವಾಗಲಿ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹಾರೈಸಿದ್ದಾರೆ.
ಪ್ರತಿಭಾವಂತರ ಹೊಸ ತಂಡಗಳಿಗೆ ನಮ್ಮ ಸತ್ಯ ಸ್ಟುಡಿಯೋಸ್ ಮೂಲಕ ವೇದಿಕೆ ಕಲ್ಪಿಸಿಕೊಡುತ್ತೇವೆ. ಆಸಕ್ತಿಯಿರುವವರು ನಮ್ಮನ್ನು ಸಂಪರ್ಕಿಸಬಹುದು. ಪ್ರತಿ ತಿಂಗಳ ಎರಡನೇ ಭಾನುವಾರ ಒಂದು ಕಿರುಚಿತ್ರ ಪ್ರದರ್ಶನ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ ನಿರಮಾಪಕ ಸತ್ಯ ಹೆಗಡೆ ಚಿತ್ರರಂಗದಲ್ಲಿ ಹೊಸದೊಂದು ಛಾಪನ್ನು ಮೂಡಿಸಿದ್ದಾರೆ ಎಂದೇ ಹೇಳಬಹುದು.