ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ ವಿತರಕರ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಧರಣಿ ನಡೆಸುತ್ತಿದ್ದಾರೆ.
ಅಕ್ಕಿ, ಗೋಧಿ, ಸಕ್ಕರೆ ಮತ್ತಿತರ ಆಹಾರ ಧಾನ್ಯಗಳ ನಷ್ಟಕ್ಕೆ ಪರಿಹಾರ ನೀಡಬೇಕು, ಅಡುಗೆ ಎಣ್ಣೆ ಮತ್ತು ಬೇಳೆಯನ್ನು ನ್ಯಾಯುಯತ ಅಂಗಡಿಗಳ ಮೂಲಕ ಪೂರೈಕೆ ಮಾಡುವುದು ಸೇರಿದಂತೆ ಒಂಬತ್ತು ಬೇಡಿಕೆಗಳಿವೆ. ಪಶ್ಚಿಮ ಬಂಗಾಳ ರೀತಿಯಲ್ಲಿ ಉಚಿತ ಪಡಿತರ ವಿತರಣೆ ಕಾರ್ಯಕ್ರಮವನ್ನು ದೇಶಾದ್ಯಂತ ಅನುಷ್ಟಾನ ಮಾಡುವಂತೆಯೂ ಒಕ್ಕೂಟ ಆಗ್ರಹಿಸಿ ಜಂತರ್ ಮಂತರ್ ಬಳಿ ಸಂಘಟನೆಯ ಸದಸ್ಯರು ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗಿ ಧರಣಿ ನಡೆಸಿದ್ದಾರೆ.
“ನಾವು ಬುಧವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಲು ಯೋಜಿಸಿದ್ದೇವೆ” ಎಂದು ಪ್ರಹ್ಲಾದ್ ಮೋದಿ ಹೇಳಿದರು.
ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟವು, ಪಶ್ಚಿಮ ಬಂಗಾಳ ರೀತಿಯಲ್ಲಿ ಉಚಿತ ಪಡಿತರ ವಿತರಣೆ ಕಾರ್ಯಕ್ರಮವನ್ನು ದೇಶಾದ್ಯಂತ ಅನುಷ್ಟಾನಕ್ಕೆ ತರಲು ಬಯಸುತ್ತದೆ. ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಬಾಕಿ ಇರುವ ಎಲ್ಲಾ ಮಾರ್ಜಿನ್ಗಳನ್ನು ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಖಾದ್ಯ ತೈಲ, ಬೇಳೆಕಾಳುಗಳು ಮತ್ತು ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಬಸು ಹೇಳಿದರು. ”ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿ ವಿತರಕರು ಅಕ್ಕಿ ಮತ್ತು ಗೋಧಿಯ ನೇರ ಖರೀದಿ ಏಜೆಂಟ್ಗಳಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ನಮ್ಮ ಬೇಡಿಕೆಗಳನ್ನು ಟಿಎಂಸಿ ಸಂಸದ ಸೌಗತ ರಾಯ್ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದ್ದಾರೆ.