ಕೆಲಸ ಖಾಯಂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮ ಪೌರಕಾರ್ಮಿಕರು ಇಲ್ಲದೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಬಣಗೊಂಡಿದ್ದು, ರಾಜಧಾನಿ ರಸ್ತೆ ಸ್ವಚ್ಛತೆಗೆ ಸ್ವೀಪಿಂಗ್ ಯಂತ್ರಗಳನ್ನು ಬಳಕೆ ಮಾಡುತ್ತಿದೆ. ರಾಜ್ಯ ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಮುಷ್ಕರ ರ ಕೈಬಿಡುವುದಿಲ್ಲವೆಂದು ಪೌರಕಾರ್ಮಿಕರು ಪಟ್ಟು ಹಿಡಿದಿದ್ದಾರೆ.
ಶೇ.70 ರಷ್ಟು ಕಾರ್ಮಿಕರಿಂದ ಪ್ರತಿಭಟನೆ !
ಕಳೆದ ಶುಕ್ರವಾರದಿಂದ ಬೆಂಗಳೂರಿನಲ್ಲಿ ಕಸ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಪ್ರಮುಖವಾಗಿ ನಗರದ ಪೌರಕಾರ್ಮಿಕರಲ್ಲಿ ಶೇ.70
ರಷ್ಟು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರದಿಂದ ಲಿಖಿತ ಭರವಸೆಗೆ ಪೌರಕಾರ್ಮಿಕರ ಪಟ್ಟುಹಿಡಿದಿದ್ದಾರೆ. ರಾಜ್ಯದಲ್ಲಿ ಸುಮಾರು 54,512 ಗುತ್ತಿಗೆ ಪೌರ ಕಾರ್ಮಿಕರಿದ್ದು, ಈ ಪೈಕಿ 10,775 ಕಾರ್ಮಿಕರನ್ನು ಆ ಮಾತ್ರ ಖಾಯಂ ಮಾಡಲಾಗಿದೆ. ಉಳಿದ ಕಾರ್ಮಿಕರನ್ನು ಖಾಯಂ ಮಾಡುವಂತೆ ಈ ಮುಷ್ಕರ ಆರಂಭಿಸಲಾಗಿದೆ ಎಂದು ಪ್ರತಿಭಟನಕಾರರು ಹೇಳಿದ್ದಾರೆ. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ. ಕಾರ್ಮಿಕರಿಗೆ ತಿಂಗಳಿಗೆ ಕೇವಲ 14 ಸಾವಿರ ವೇತನ ಬರುತ್ತಿದೆ. ಈ ವೇತನ ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ, ಕನಿಷ್ಠ ವೇತನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ. ಕಸ ಸಾಗಣೆ ವಾಹನದ ಚಾಲಕ ಹಾಗೂ ಲೋಡರ್ಗಳ ಸೇವೆಯನ್ನೂ ಖಾಯಂಗೊಳಿಸಬೇಕು. ಪೌರಕಾರ್ಮಿಕರ ಕಲ್ಯಾಣಕ್ಕೆ ಸಮಗ್ರ ನೀತಿರೂಪಿಸಬೇಕು. ಪೌರಕಾರ್ಮಿಕರು ಹಾಗೂ ಅವಲಂಬಿತರ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪೌರ ಕಾರ್ಮಿಕರ ಪ್ರತಿಭಟನೆಯಿಂದ ನಗರದಲ್ಲಿ ರಸ್ತೆ ಸ್ವಚ್ಚತೆಯ ಸಮಸ್ಯೆ !
ಕಳೆದ ಕೆಲ ದಿನಗಳಿಂದ ಪೌರ ಕಾರ್ಮಿಕರ ಪ್ರತಿಭಟನೆಯ ನಡೆಯುತ್ತಿದೆ. ಪ್ರತಿಭಟನೆಯಿಂದ ನಗರದಲ್ಲಿ ರಸ್ತೆ ಸ್ವಚ್ಚತೆ ಸಮಸ್ಯೆ ಎದುರಾಗಿದೆ ಎಂದು ಪಾಲಿಕೆ ಘನತ್ಯಾಜ್ಯ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಡಾ ಹರೀಶ್ ಕುಮಾರ್ ಒಪ್ಪಿಕೊಂಡರು. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹರೀಶ್ ಕುಮಾರ್ ಸದ್ಯ ಕಸದ ಸಮಸ್ಯೆ ಬಗೆಹರಿಸಲು ಸ್ವೀಪಿಂಗ್ ಯಂತ್ರಗಳು 2 ಹೊತ್ತು ಉಪಯೋಗಿಸಲಾಗುತ್ತಿದೆ. ಮೊದಲು ಟ್ರಾಫಿಕ್ ಸಮಸ್ಯೆ ಆಗುತ್ತದೆ ಎಂದು 1 ಬಾರಿ ಉಪಯೋಗಿಸಲಾಗುತಿತ್ತು. ಇಂದು ಖಾಸಗಿ ಯಂತ್ರಗಳನ್ನು ಶಾರ್ಟ್ ಟರ್ಮ್ ಟೆಂಡರ್ ಮೂಲಕ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಎಲ್ಲ ರಸ್ತೆಗಳಿಗೆ ಯಂತ್ರ ಬಳಕೆ ಮಾಡಲು ಆಗುವುದಿಲ್ಲ ಬೀದಿ ಸ್ವಚ್ಛತೆ ವ್ಯತ್ಯಯ ಆಗಿದ್ದು ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಮುಷ್ಕರದಿಂದ ಜನರಿಗೆ ಕೊಂಚ ಪ್ರಮಾಣದಲ್ಲಿ ತೊಂದರೆ ಆಗಿದೆ ಎಂದರು.
ಟ್ರಕ್ ಮೌಂಟೆಡ್ ಯಂತ್ರಗಳಿಂದ ಎಲ್ಲ ರಸ್ತೆಗಳು ಕ್ಲೀನ್ ಮಾಡಲು ಸಾದ್ಯವಿಲ್ಲ !
ಬಿಬಿಎಂಪಿಯಲ್ಲಿ 16000 ಪೌರ ಕಾರ್ಮಿಕರು ಇದ್ದಾರೆ. ಸರ್ಕಾರಿ ಪೌರ ಕಾರ್ಮಿಕರು 1600 ಇದ್ದಾರೆ. 27 ಸ್ವಚ್ಛತಾ ಯಂತ್ರಗಳು ಸದ್ಯಕ್ಕೆ ನಮ್ಮಲ್ಲಿ ಇದೆ. 3 ದಿನಗಳಿಗಾಗಿ ಶಾರ್ಟ್ ಟರ್ಮ್ ಟೆಂಡರ್ ಇಂದು ಕರೆಯುತ್ತೇವೆ ಟ್ರಕ್ ಮೌಂಟೆಡ್ ಯಂತ್ರಗಳು ಆಗಿರುವುದರಿಂದ ಎಲ್ಲ ರಸ್ತೆಗಳಲ್ಲಿ ಕ್ಲೀನ್ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.
ತಾತ್ಕಾಲಿಕ ಕೆಲಸಕ್ಕೆ 4000 ಜನರನ್ನು ತೆಗೆದುಕೊಳ್ಳುತ್ತಿದ್ದೆವೆ. 15 ದಿನಗಳವರೆಗೆ ಅವರು ಸೇವೆ ಸಲ್ಲಿಸಲಿದ್ದಾರೆ. ಕಾರ್ಮಿಕ ಇಲಾಖೆಯ ನಿಯಮದ ಅನ್ವಯ ಅವರಿಗೆ 15 ದಿನಗಳಿಗೆ ಸಂಬಳ ನೀಡಲಾಗುತ್ತದೆ ಎಂದು ಘನತ್ಯಾಜ್ಯ ನಿರ್ವಹಣಾ ವಿಭಾಗದ ಬಿಬಿಎಂಪಿ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಹೇಳಿದರು.