ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ಆರ್ಎಸ್ಎಸ್, ಬಿಜೆಪಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಗ್ವಾದ ತೀವ್ರಗೊಂಡಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಮಗೆ ಜೀವ ಬೆದರಿಕೆ ಬಂದಿರುವುದನ್ನು ಉಲ್ಲೇಖಿಸಿ, “ಆರ್ಎಸ್ಎಸ್ ಬಳಸಿಕೊಂಡು ನನಗೆ ಬೆದರಿಕೆ ಹಾಕಲಾಗುತ್ತಿದೆ. ನಿಮ್ಮ ರಾಜಕೀಯ ಮೇಲಾಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆಗಳನ್ನು ಸಿದ್ಧವಾಗಿಡಿ” ಎಂದು ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಸುಧೀರ್ ಬಂಗೇರ ಎಂಬಾತ ‘ಎಕ್ಸ್’ನಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕದ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ನಾನು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡು 48 ಗಂಟೆಗಳೂ ಕಳೆದಿಲ್ಲ. ಆದರೆ ನಿಮ್ಮ ಭಯ, ಆತಂಕ ಮತ್ತು ಅಸಹನೆ ಈಗಲೇ ಹೊರಹೊಮ್ಮುತ್ತಿದೆ. ಆರ್ಎಸ್ಎಸ್ ಹೆಸರಿನಲ್ಲಿ ನನ್ನನ್ನು ನಿಂದಿಸುವ ಹಾಗೂ ಬೆದರಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.
ಇದಲ್ಲದೆ, “ನಿಮ್ಮ ರಾಜಕೀಯ ಮೇಲಾಧಿಕಾರಿಗಳಿಗೆ ನನ್ನ ನಮಸ್ಕಾರ ತಿಳಿಸಿ. ಅವರ ಸಂಘಟನೆಯ ನೋಂದಣಿಗೆ ಬೇಕಾದ ದಾಖಲೆಗಳನ್ನು ಸಿದ್ಧವಾಗಿಡಲು ಹೇಳಿ” ಎಂದು ವ್ಯಂಗ್ಯವಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ನಿಮ್ಮ ಪಕ್ಷದ ಮುಖ್ಯಸ್ಥರ ಸೂಚನೆಯ ಮೇರೆಗೆ ನೀವು ಆರ್ಎಸ್ಎಸ್ ವಿರುದ್ಧ ಮಾತನಾಡುತ್ತಿದ್ದೀರಿ. ಹಲವು ಸರ್ಕಾರಗಳು ಆರ್ಎಸ್ಎಸ್ ಅನ್ನು ನಿಷೇಧಿಸಲು ಪ್ರಯತ್ನಿಸಿದ್ದವು. ಆದರೆ ಜನತೆ ಆ ಪ್ರಯತ್ನಗಳನ್ನು ತಿರಸ್ಕರಿಸಿದ್ದಾರೆ” ಎಂದು ಹೇಳಿದ್ದಾರೆ.
“ಹಿಂದೂ ಸಮಾಜದ ಸಂಘಟನೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಆರ್ಎಸ್ಎಸ್ ಸಂವಿಧಾನದ ಚೌಕಟ್ಟಿನೊಳಗೇ ಕೆಲಸ ಮಾಡುತ್ತಿದೆ. ಸಂಘಕ್ಕೆ 100 ವರ್ಷ ಪೂರೈಸಿರುವುದು ನಿಮ್ಮ ಹತಾಶೆಗೆ ಕಾರಣವಾಗಿದೆ” ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಕೂಡ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಆರ್ಎಸ್ಎಸ್ಗೆ ನಿಮ್ಮ ತಂದೆಯವರಿಂದಲೂ ಏನೂ ಮಾಡಲು ಸಾಧ್ಯವಾಗಿಲ್ಲ. ಅದು ಯಾವುದೇ ವ್ಯಾವಹಾರಿಕ ಸಂಸ್ಥೆಯಲ್ಲ, ನೋಂದಣಿ ಮಾಡಿಕೊಳ್ಳಬೇಕಾದ ಅಗತ್ಯವೂ ಇಲ್ಲ” ಎಂದು ಹೇಳಿದ್ದಾರೆ.“ಗೃಹ ಸಚಿವರಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುವ ಬದಲು ವಿವಾದ ಸೃಷ್ಟಿಸುವ ಕೆಲಸ ಮಾಡಬೇಡಿ. ನೀವು ಹಚ್ಚುವ ಬೆಂಕಿಯೇ ನಿಮ್ಮನ್ನು ಸುಡುವ ಪರಿಸ್ಥಿತಿ ಬರಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ನಿಂದ ಆರಂಭವಾದ ಈ ವಿವಾದ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ದೊಡ್ಡ ರಾಜಕೀಯ ವಾಕ್ಸಮರವಾಗಿ ಮಾರ್ಪಟ್ಟಿದೆ. ಆರ್ಎಸ್ಎಸ್ ಕುರಿತು ಪ್ರಿಯಾಂಕ್ ಖರ್ಗೆ ಮಾಡಿರುವ ಟೀಕೆ ಮತ್ತು ಅದಕ್ಕೆ ಬಿಜೆಪಿ ನಾಯಕರ ಪ್ರತಿಕ್ರಿಯೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ. ಮುಂದಿನ ದಿನಗಳಲ್ಲಿ ಈ ವಿವಾದ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.






